ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ
ಕುಪ್ಪಂ (ಆಂಧ್ರಪ್ರದೇಶ): ವಚನಗಳು ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡ ಅಮೂಲ್ಯ ಸಂಪತ್ತಾಗಿದ್ದು ಕೇವಲ ಸಾಹಿತ್ಯ ಮಾತ್ರವಲ್ಲದೆ ಭೂಗೋಳ, ಜೀವಶಾಸ್ತ್ರ, ಸಸ್ಯಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ ಹೀಗೆ ಇಂದಿನ ವಿವಿಧ ಜ್ಞಾನಶಿಸ್ತುಗಳೊಂದಿಗೆ ಸಂಬಂಧ ಹೊಂದಿದೆ. ವಚನಗಳನ್ನು ಇಂದು ಧಾರ್ಮಿಕ ಚೌಕಟ್ಟಿನಿಂದಾಚೆಗೆ ನೋಡಬೇಕಾಗಿದೆ, ಅವುಗಳ ಮರು ಓದು ಇಂದಿನ ಅಗತ್ಯ” ಎಂದು ಬೆಂಗಳೂರಿನ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ರುದ್ರೇಶ್ ಅದರಂಗಿ ಅಭಿಪ್ರಾಯಪಟ್ಟರು.
ಅವರು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗವು ಆಯೋಜಿಸಿದ್ದ ‘ವಚನಗಳ ಮರು ಓದು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು ವಚನಗಳ ವಿಚಾರಗಳು ನಿತ್ಯವೂ ಹೊಸದಾಗಿದ್ದು ಸಾರ್ವತ್ರಿಕವಾಗಿ ತಲುಪುವಂತಹುದು, ಇಂದಿನ ವಿವಿಧ ಶಿಸ್ತಿನ ಸಂಶೋಧಕರು ಅವುಗಳನ್ನು ಸೂಕ್ಷ್ಮವಾಗಿ ಮರು ಓದಿಗೆ ಒಳಪಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾಷಾ ನಿಕಾಯದ ಡೀನ್ ಡಾ.ಬಿ.ಎಸ್. ಶಿವಕುಮಾರ್ ಅವರು “ಕನ್ನಡ ವಿಭಾಗವು ಆಯೋಜಿಸುತ್ತಿರುವ ಈ ಸರಣಿ ಕಾರ್ಯಕ್ರಮವು ತೌಲನಿಕ ಒಳನೋಟಗಳನ್ನು ಪಡೆಯಲು ಸಹಾಯಕವಾಗಿದೆ, ಹೊರನಾಡಿನ ಈ ಕನ್ನಡ ವಿಭಾಗವು ಸೀಮಿತ ಸಂಪನ್ಮೂಲಗಳಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ನುಡಿದರು.
ಕಾರ್ಯಕ್ರಮದ ಆಯೋಜಕರಾದ ವಿಭಾಗದ ಮುಖ್ಯಸ್ಥೆ ಡಾ.ಜಯಲಲಿತ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಈ ಉಪನ್ಯಾಸ ಕಾರ್ಯಕ್ರಮಗಳ ಧ್ಯೇಯೋದ್ದೇಶಗಳನ್ನು ವಿವರಿಸುತ್ತಾ “ವಿಭಾಗವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಈ ಮಹತ್ವದ ಸರಣಿಯು ಇತರೆಡೆಗಳಿಗೂ ತಲುಪುವಂತೆ ಆನ್ ಲೈನ್ ಮೂಲಕವೂ ವಿದ್ಯಾರ್ಥಿಗಳು, ಸಂಶೋಧಕರು ಪಾಲ್ಗೊಳ್ಳುವಂತೆ ರೂಪಿಸಲಾಗಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಎಸ್.ದುರ್ಗಾಪ್ರವೀಣ್, ಎಂ.ಎ., ಪಿಎಚ್.ಡಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಟರಾಜ್ ಅವರು ಪ್ರಾರ್ಥಿಸಿದರು, ರೂಪೇಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾತಿ ಧನ್ಯವಾದ ಸಮರ್ಪಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ