ದಶರಥನ ಕಣ್ಣಿಗೆ ಕಿನ್ನರಿಯಂತಿರುವ ಅವನ ಪಾಲಿಗೆ ನಾಗಕನ್ಯೆಯಾದ (ದ್ವೇಷ) ಕೈಕೇಯಿಯನ್ನು ಕಾಣಲೆಂದು ಅವನು ಆಕೆಯ ಸ್ವರ್ಗಸಮಾನವಾದ ಅಂತ:ಪುರಕ್ಕೆ ಬಂದನು. ಮೋಕ್ಷವಿಲ್ಲದ ರಾಹುಗ್ರಹಣಕ್ಕೆ ಒಳಗಾಗುವ ಚಂದ್ರನಂತೆ! ಪ್ರಿಯತಮೆಯು ಅಂತ:ಪುರವನ್ನು ತೊರೆದು ಕೋಪಗೃಹವನ್ನು ಪ್ರವೇಶಿಸಿದ್ದಾಳೆ ಎಂಬ ಸುದ್ದಿಯನ್ನು ಕೇಳಿ ಆತಂಕಗೊಂಡನು, ಕಂಡು ಕಂಗಾಲಾದನು.ಅವನಿಗರಿವಿಲ್ಲದಂತೆಯೇ ಆಕೆಯನ್ನು ಒಲಿಸಲು ಮತ್ತೆ ವಾಗ್ದಾನದ ಉರುಳು ಹಗ್ಗವನ್ನು ತನ್ನ ಕೊರಳಿಗೆ ಹಾಕಿ ಆಕೆಯ ಕೈಗೆ ನೀಡಿದನು. "ನಿನ್ನ ಪ್ರೀತಿಗಾಗಿ ಮಾಡಬಾರದ್ದನ್ನು ಮಾಡುವೆನು, ಕೊಲ್ಲಬಾರದವನನ್ನು ಕೊಲ್ಲುವೆನು... ರಾಮನಾಣೆ!" ಇದಕ್ಕಿಂತ ಹೆಚ್ಚಿನದು ಕೈಕೇಯಿಗೆ ಇನ್ನೇನು ಬೇಕು? ಅವನ್ನೇ ಗಟ್ಟಿ ಮಾಡಿಸಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂಬ ಪ್ರತಿಜ್ಞೆ ಮಾಡಿಸಿ ತನಗೆ ಅವನು ನೀಡಿದ ಎರಡು ವರಗಳನ್ನು ಪೂರೈಸುವಂತೆ ಕೇಳಿಯೇ ಬಿಟ್ಟಳು- ಕಾಮಮೋಹಿತ ವರದನಾದ ದಶರಥನಿಗೆ; ಅವನು ಮತ್ತೆ ಹಿಂದೆರಳದಂತೆ!-
.ರಾಮನ ಬದಲು ಭರತನಿಗೆ ಪಟ್ಟಾಭಿಷೇಕವಾಗಬೇಕು
. ಹದಿನಾಲ್ಕು ವರ್ಷಗಳ ಕಾಲ ರಾಮನು ಜಟಾಧಾರಿಯಾಗಿ, ನಾರುಮಡಿ ಕೃಷ್ಣಾಜಿನಗಳನ್ನುಟ್ಟು ದಂಡಕಾರಣ್ಯದಲ್ಲಿ ತಪಸ್ವಿಯಾಗಬೇಕು.
ದಶರಥನ ದು:ಸ್ವಪ್ನ- ಅಪಶಕುನ- ಆತಂಕಗಳೆಲ್ಲವೂ ಏಕಕಾಲಕ್ಕೆ ಪ್ರತ್ಯಕ್ಷವಾದವು. ಅವನ ಬಗೆಬಗೆಯ ಕೇಳಿಕೆ, ವಿನಂತಿ, ಪ್ರಾರ್ಥನೆಗಳಿಗೆ ಜಗ್ಗದ ಬಗ್ಗದ ಕರಗದ ಕೈಕೇಯಿಯು ಅವನು ಕೊಟ್ಟ ಉರುಳನ್ನು ಎಳೆದೆಳೆದೆಳೆದು ಬಿಗಿಯಾಗಿಸಿದಳು. ರಾಮನೊಂದಿಗೆ ತನ್ನ ಪ್ರಾಣವೂ ಹೋದೀತೆಂಬುದನ್ನು ಹೇಳಿದರೂ ಕೇಳದ ಕೈಕೇಯಿಯ ಹಟ, ಸವತಿ ಮಾತ್ಸರ್ಯಗಳೆದುರು ರಾಜನಿತ್ತ ಮಾತುಗಳನ್ನು ಈಡೇರಿಸಲು ಶ್ರೀರಾಮನೇ ಬರಬೇಕಾದಂತಹ ಪರಿಸ್ಥಿತಿಯುಂಟಾಯಿತು.
- ಸಂಕಲನ: ವಿಶ್ವ ಉಂಡೆಮನೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ