ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಕಳಂಜ ಗ್ರಾಮದ ಕೋಟೆ ವಸಂತ ಕುಮಾರ್ ಹಾಗೂ ಪಾರ್ವತಿ ವಸಂತ ಕುಮಾರ್ ಇವರ ಮಗನಾಗಿ 21.08.1965ರಂದು ಶಶಿಧರ ಕೋಟೆ ಅವರ ಜನನ. MA ಇಂಗ್ಲಿಷ್ ಪದವಿ ಪಡೆದು, 4 ವರ್ಷ ಉಪನ್ಯಾಸ ಸೇವೆಯನ್ನು ಸಲ್ಲಿಸಿ ಸಂಗೀತದ ಮೇಲಿನ ಪ್ರೀತಿಯಿಂದ ಉಪನ್ಯಾಸಕ ಸೇವೆಯನ್ನು ಬಿಟ್ಟು 1992ರಲ್ಲಿ ಬೆಂಗಳೂರಿಗೆ ಹೆಚ್ಚಿನ ಸಂಗೀತ ಕ್ಷೇತ್ರದ ಸಾಧನೆಗೆ ಆಗಮನ.
ಶಶಿಧರ್ ಕೋಟೆಯವರು ಹೇಳುವ ಹಾಗೆ ಬಾಲಮುರಳಿ ಹಾಗೂ ಜೇಸುದಾಸ್ ಅವರ ಹಾಡುಗಳೆಂದರೆ ತುಂಬಾ ಅಚ್ಚುಮೆಚ್ಚು, ಇವರಿಬ್ಬರ ಅಭಿಮಾನಿ ಮಾತ್ರ ಅಲ್ಲದೇ ಇಬ್ಬರನ್ನೂ ಆರಾಧನೆ ಮಾಡುತ್ತೇನೆ ಎಂದು ಬಹಳ ಹೆಮ್ಮೆಯಿಂದ ಹೇಳುತ್ತಾರೆ ಮತ್ತು ಬಾಲಮುರಳಿ ಹಾಗೂ ಜೇಸುದಾಸ್ ಇಬ್ಬರು ನನಗೆ ಮಾನಸ ಗುರುಗಳು ಇದ್ದ ಹಾಗೆ ಎಂದು ಹೇಳುತ್ತಾರೆ. ಸಂಗೀತ ಕ್ಷೇತ್ರದಲ್ಲಿ 30 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಕೋಟೆಯವರು.
ಪೂರ್ಣಾವಧಿ ಗಾಯಕರಾಗಿ 5000ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಬರವಣಿಗೆ, ಕಿರುತೆರೆ ನಿರೂಪಕನಾಗಿ, ನಟರಾಗಿ, ಚಲನಚಿತ್ರಗಳಲ್ಲಿ ಅಭಿನಯ. ದೂರದರ್ಶನ, ಆಕಾಶವಾಣಿ ಹಾಗೂ ಅನೇಕ ಧ್ವನಿ ಸುರಳಿಗಳಲ್ಲಿ ಗಾಯನ. ಬಾಲ್ಯದಿಂದಲೂ ಸಂಗೀತ, ಯಕ್ಷಗಾನ, ಸಾಹಿತ್ಯ, ಚದುರಂಗ ಇತ್ಯಾದಿ ಚಟುವಟಿಕೆಯಲ್ಲಿ ಬಹುಮುಖ ಪ್ರತಿಭೆ ಹಾಗೂ ಅನೇಕ ಪ್ರಶಸ್ತಿ ವಿಜೇತರು.
ಆನಂದ ಭೈರವಿ, ಹಿಂದೋಳ, ಮೋಹನ, ಕಲ್ಯಾಣಿ, ರೇವತಿ, ಕಲ್ಯಾಣ ವಸಂತ, ಕಾನಡ, ಮಧ್ಯಮಾವತಿ, ಸಿಂಹೇಂದ್ರ ಮಧ್ಯಮ, ಹಂಸಧ್ವನಿ, ಹಂಸಾನಂದಿ, ಶಿವರಂಜಿನಿ, ಕರ್ಣ ರಂಜಿನಿ, ಚಂದ್ರಕೌನ್ಸ್, ಖರಹರಪ್ರಿಯ, ವಾಸಂತಿ, ಹಂಸಾನಂದಿ, ವಾಗಧೀಶ್ವರಿ, ನಾಸಿಕ ಭೂಷಿಣಿ, ದುರ್ಗಾ ರಾಗ, ದೇಶ್ ರಾಗ, ವೃಂದಾವನ ಸಾರಂಗ ಇತ್ಯಾದಿ ನೆಚ್ಚಿನ ರಾಗಗಳು.
ಯಾವ ರೀತಿಯ ಹಾಡು ಹಾಡುವುದೆಂದರೆ ನಿಮಗೆ ಇಷ್ಟ:-
ನನಗೆ ಮೂಲತಃ ಸಂಗೀತ ಸಪ್ತ ಸ್ವರಗಳ ಲೋಕ. ಅದು ಸಪ್ತಸ್ವರ ಇದ್ದದ್ದು 12 ಸ್ವರಗಳಾಗುತ್ತವೆ. ಶಾಸ್ತ್ರೀಯ, ಸುಗಮ ಸಂಗೀತ, ಚಿತ್ರಗೀತೆಗಳು, ಯಕ್ಷಗಾನದ ಹಾಡುಗಳು, ಜಾನಪದ ಹಾಡುಗಳು ಎಲ್ಲವೂ ಇಷ್ಟ. ಶ್ರುತಿ, ರಾಗ, ಭಾವ ಎಲ್ಲವೂ ಇರುವ ಹಾಡು ಇಷ್ಟ. ಒಳ್ಳೆಯ ಸಾಹಿತ್ಯ, ಸಂಗೀತ, ಗಾಯನ ಮೂರು ಸೇರಿದರೆ ತ್ರಿವೇಣಿ ಸಂಗಮ ಆಗುತ್ತದೆ. ಅಂತಹ ಹಾಡುಗಳು ನೆನಪಿನಲ್ಲಿ ಇರುತ್ತವೆ. ಇಂತಹ ಎಲ್ಲಾ ಪ್ರಕಾರಗಳು ನನಗೆ ಇಷ್ಟ. ಜೊತೆಗೆ ಭಕ್ತಿ ಸಂಗೀತದ ಕಡೆಗೆ ಹೆಚ್ಚು ಒಲವು. ಅದು ಕೊಡುವ ಸಂತೋಷ ಬೇರೆ ಯಾವ ಪ್ರಕಾರಗಳೂ ಕೊಡುವುದಿಲ್ಲ. ದಾಸವಾಣಿ, ವಚನ, ಭಕ್ತಿಗೀತೆಗಳಲ್ಲಿ ದೇವರ ಜೊತೆ ಮಾತನಾಡುವ ಹಾಗೆ ಅನಿಸುತ್ತದೆ..
ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತಕ್ಕೆ ಇರುವ ವ್ಯತ್ಯಾಸ:-
ಮೂಲ ಎರಡೂ ನಾದೋಪಾಸನೆಯೇ. ಯಾವುದೇ ಸಂಗೀತವನ್ನು ಭಕ್ತಿಯಿಂದ ಸಮರ್ಪಣೆ ಮಾಡಿದಾಗ “Music is always Divine”. ಅದು ಉಪಾಸನೆ. ಶಾಸ್ತ್ರೀಯ ಸಂಗೀತ, ಸುಗಮಸಂಗೀತ ಇರಬಹುದು ಅಥವಾ ಬೇರೆ ಯಾವುದೇ ಪ್ರಕಾರಗಳಿರಬಹುದು ಅದು ಉಪಾಸನೆ.. ಪೂಜೆ...
ಶಾಸ್ತ್ರೀಯ ಸಂಗೀತದಲ್ಲಿ ರಾಗಕ್ಕೆ ಹೆಚ್ಚು ಪ್ರಾಶಸ್ತ್ಯತೆ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯ ಕೂಡಾ ತುಂಬ ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ ರಾಗ ತುಂಬಾ ಮುಖ್ಯವಾಗಿರುತ್ತದೆ. ರಾಗ ವೈಭವೀಕರಿಸುತ್ತದೆ. ರಾಗದ ಸಂಪೂರ್ಣ ಚಿತ್ರಣ ಸಿಗುವುದು ಶಾಸ್ತ್ರೀಯ ಸಂಗೀತದಲ್ಲಿ, ಅಂದರೆ ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯ ಪೂರಕ, ರಾಗ ಪ್ರಾಧಾನ್ಯ..
ಸುಗಮ ಸಂಗೀತಕ್ಕೆ ಬಂದಾಗ ಸಂಗೀತ ಅಥವಾ ರಾಗ ಪೂರಕವಾಗಿದ್ದುಕೊಂಡು ಸಾಹಿತ್ಯ ಪ್ರಾಧಾನ್ಯ. ಉದಾಹರಣೆಗೆ ಭಾವಗೀತೆಯಲ್ಲಿ ಅಥವಾ ಭಕ್ತಿಗೀತೆಯಲ್ಲಿ ತುಂಬ ಸಂಗತಿಗಳನ್ನು ತೆಗೆದುಕೊಂಡು ರಾಗವನ್ನೇ ಹೈಲೈಟ್ ಮಾಡಲು ಸಾಧ್ಯವಿಲ್ಲ, ಸುಗಮ ಸಂಗೀತದಲ್ಲಿ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯತೆ.
ಸಂಗೀತ ಕ್ಷೇತ್ರದ ಈಗಿನ ಸ್ಥಿತಿಗತಿ:-
ಈಗ ಅಧ್ಭುತವಾಗಿದೆ. ಸಂಗೀತ ಕ್ಷೇತ್ರ ತುಂಬಾ ಚೆನ್ನಾಗಿ ಬೆಳೆಯುತ್ತಾ ಇದೆ. ಎಷ್ಟೋ ಪ್ರತಿಭಾನ್ವಿತ ಗಾಯಕರು ಬರುತ್ತಿದ್ದಾರೆ. ಎಲ್ಲಾ ಪ್ರಕಾರಗಳಲ್ಲಿಯೂ ಅಧ್ಭುತ ಪ್ರತಿಭೆಗಳನ್ನು ನೋಡುತ್ತಿದ್ದೇವೆ. ಸಾಧಕರನ್ನು ನೋಡುತ್ತಿದ್ದೇವೆ. ಅದರ ಜೊತೆಗೆ ಸುಲಭವಾಗಿ ಸಂಗೀತವನ್ನು ಸಿದ್ಧಿ ಮಾಡಿಕೊಳ್ಳಲು ತುಂಬಾ ಜನ ಹೋಗುತ್ತಾರೆ. ಎಲ್ಲರಿಗೂ ಹಾಡುವ ಆಸೆ ತುಂಬಾ ಇರುತ್ತದೆ. ಆದ್ರೆ ಸಾಧನೆ ಸ್ವಲ್ಪ ಮಟ್ಟಿಗೆ ಕೆಲವರಲ್ಲಿ ಕಡಿಮೆ ಕಾಣುತ್ತದೆ. ತಾಂತ್ರಿಕತೆಯನ್ನು ನಂಬಿಕೊಂಡು ಹಾಡುವುದು ಅಲ್ಲ. ನಾವು ಒಳ್ಳೆಯ ಗುರುಗಳಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಕೇಳಿದ್ದನ್ನೆ ಕೇಳಿ ಕೇಳಿ ಅನುಸರಿಸುವುದು ಬೇರೆ. ಒಳ್ಳೆಯ ಗುರುಗಳಿಂದ ಕೇಳಿ ಪಡೆದರೆ ಅದರ ಸಂತೋಷವೇ ಬೇರೆ.
ಸಂಗೀತ ಯಾವತ್ತೂ ಕೂಡಾ ನಿಂತ ನೀರಲ್ಲ. ಅದು ಹರಿಯುವ ನದಿ. ಆದರೆ ಆ ಸಾಧನೆ ಮಾಡುವಾಗ ತಪಸ್ಸು ತರಹ ಮಾಡಬೇಕು. ಯಾವುದೇ ಕಲೆಯಲ್ಲಿ ಸಾಧನೆ ಮಾಡಲು ಸುಲಭವಾದ ಮಾರ್ಗ ಇಲ್ಲವೇ ಇಲ್ಲ. ನಿರಂತರವಾಗಿ ತಪಸ್ಸು ತರಹ ಸಾಧನೆ ಮಾಡಬೇಕು. ಹಾಗಿದ್ದಾಗ ಮಾತ್ರ ನೀವು ಒಂದು ಹಂತವನ್ನು ತಲುಪಲು ಸಾಧ್ಯ. ಇಲ್ಲದಿದ್ದರೆ ಸಂಗೀತವನ್ನು ಬರೀ ಕೇಳುವುದು, ಕೇಳಿ ಹಾಡುವುದು ಆ ಹಂತದಲ್ಲಿಯೇ ನಿಮ್ಮ ಸಾಧನೆ ಇರುತ್ತದೆ. ದೊಡ್ಡ ದೊಡ್ಡ ಕಲಾವಿದರ ಅನುಕರಣೆ ಮಾಡಿಯೇ ನಾವು ಮುಂದೆ ಹೋಗುತ್ತೇವೆ. ಅನುಕರಣೆ ದಾಟಿ ಅನುಸರಣೆಯ ಹಂತಕ್ಕೆ ಬರಬೇಕು. ಆಮೇಲೆ ನಮ್ಮದೇ ಆದ ಶೈಲಿಯಲ್ಲಿ ಹಾಡಬೇಕು. ನಮ್ಮದೇ ಆದ ಶೈಲಿಯಲ್ಲಿ ನಾವು ಜನರನ್ನು ತಲುಪಬೇಕು. ನಮ್ಮ ಸಹಜ ಧ್ವನಿಯಲ್ಲಿ ಹಾಡಬೇಕು.
ನೀವು ಶೋತ್ರುಗಳನ್ನಾಗಲೀ ಅಥವಾ ವೀಕ್ಷಕರನ್ನಾಗಲೀ ತಲುಪದಿದ್ದರೆ ನಿಮ್ಮ ಸಂಗೀತ ಸಾರ್ಥಕತೆಯನ್ನು ಕಾಣಲು ಸಾಧ್ಯವಿಲ್ಲ. ಜನರ ನಾಡಿಮಿಡಿತವನ್ನು ಅರಿತುಕೊಂಡು ಹಾಡಿ. ಜನರಿಗೆ ಖುಷಿ ಆಗಬೇಕು. ಕಿರಿಯರಿಗೆ ಹೇಳುವುದು ಏನೆಂದರೆ... ಸಂಗೀತ ಯಾವತ್ತಿಗೂ ದೊಡ್ಡದು. ನಾವು ಸಂಗೀತದಲ್ಲಿ ಕಲಿಯಲು ಅನೇಕ ಇದೆ ಅನ್ನುವಂತಹ ಭಾವನೆಯಲ್ಲಿ ಹಾಡು ಕಲಿಯಬೇಕು.
ನಾನು ಕಿರಿಯರಿಗೆ ಹೇಳುವ ಕಿವಿಮಾತು ಏನೆಂದರೆ,
Fusionನ ವಿರೋಧಿ ನಾನಲ್ಲ, Fusion ಬೇಕು ಆದರೆ Fusion ಹೆಸರಿನಲ್ಲಿ confusion ಬೇಡ. ನಿಮ್ಮ Creativity ಬೇಡ ಅಂತ ಹೇಳುವುದಿಲ್ಲ. ಆದರೆ ಹಳೆಯ ಸಂಗೀತ ಹಾಡುಗಳು ಅದ್ಭುತ, ಯಾಕಂದ್ರೆ ಅಷ್ಟು ಒಳ್ಳೆಯ ಸಾಹಿತ್ಯ ಸಂಗೀತ ಗಾಯನ. ಹಾಗಾಗಿ ಹಳೆಯ ಹಾಡುಗಳು ನೆನಪಿನಲ್ಲಿ ಇರುತ್ತವೆ. ಯಾವಾಗಲೂ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ನಮ್ಮ ಸಂಗೀತ ಇರಬೇಕು. ನ್ಯಾಯ, ನೀತಿ, ಸತ್ಯ ಧರ್ಮ ಮಾತೃ ದೇವೋಭವ, ಪಿತೃ ದೇವೋಭವ ಎಲ್ಲಾ ನಮ್ಮ ಮೂಲ ಸಂಸ್ಕೃತಿ ಆಧಾರ. ಪ್ರೀತಿ, ನೀತಿ, ಭಕ್ತಿ ಇದು ನಮ್ಮ ಭಾರತದ ಸಂಸ್ಕೃತಿ. ಅದನ್ನು ಎಲ್ಲದರಲ್ಲಿಯೂ ತರಬೇಕು. ಸಂಗೀತ ಒಂದು ವೃತ್ತಿ ಮಾತ್ರ ಅಲ್ಲ. ಜನರನ್ನು ಪ್ರೀತಿ ಮಾಡುವಂಥಹ ಮಾಧ್ಯಮ. ಜಾತಿ ಮತ ಎಲ್ಲವನ್ನು ಮೀರಿ ನಾವೆಲ್ಲರೂ ಒಂದೇ ಎಂಬ ಭಾವೈಕ್ಯ ವನ್ನು ಮೂಡಿಸುವ ಮಾರ್ಗವಾಗಿದೆ ಈ ಸಂಗೀತ. ಅಪ್ಪ ಅಮ್ಮ ಕೊಟ್ಟಂತಹ ಸಂಸ್ಕಾರದಂತೆ ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ನಾನು ಸಂಗೀತದಲ್ಲಿ ಅದನ್ನು ನೋಡುತ್ತೇನೆ, ಜೊತೆಗೆ ನಾವು
ಕಲೆಯಲ್ಲಿ ಮಾತ್ರವಲ್ಲ ವ್ಯಕ್ತಿಗಳಾಗಿ ಕೂಡಾ ರೋಲ್ ಮಾಡೆಲ್ ಆಗಿರಬೇಕು. ಕಲಾವಿದರಾಗಿ ಮತ್ತು ಒಳ್ಳೆಯ ವ್ಯಕ್ತಿಗಳಾಗಿ ಸಮಾಜಕ್ಕೆ ಆದರ್ಶವಾಗಿರಬೇಕು. ಎಲ್ಲರನ್ನೂ ಪ್ರೀತಿಯಿಂದ ನೋಡಿ. ನಾವು ಚಿಕ್ಕವರಿರುವಾಗ ಅವಕಾಶಗಳು ವಿಫುಲವಾಗಿತ್ತು. ಈಗಿನ ಮಕ್ಕಳಿಗೆ ಬೇಕಾದಷ್ಟು ಅವಕಾಶ ಇದೆ. ನಿಜವಾದ ಸಂಗೀತವನ್ನು ತೋರಿಸಿ.
ಸಂಗೀತದ ಈಗಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ನಾವು ಒಳ್ಳೆಯದನ್ನು ಕೊಟ್ರೆ ಅದನ್ನು ಸ್ವೀಕರಿಸುವ ಪ್ರೇಕ್ಷಕರು ಯಾವತ್ತೂ ಇದ್ದಾರೆ. ಎಲ್ಲಾ ವರ್ಗದ ಜನರು ನನ್ನ ಸಂಗೀತಕ್ಕೆ ಪ್ರೀತಿಯನ್ನು ತೋರಿಸುತ್ತಾರೆ ಎಂದು ವಿನಮ್ರನಾಗಿ ಮತ್ತು ಆತ್ಮವಿಶ್ವಾಸದಿಂದ ಕೋಟೆಯವರು ಹೇಳುತ್ತಾರೆ. ಅದು ಹಿರಿಯರಾಗಿರಲಿ, ಮಧ್ಯ ವಯಸ್ಕರಿರಬಹುದು ಅಥವಾ ಮಕ್ಕಳಾಗಿರಲಿ ಎಲ್ಲರೂ ಇಷ್ಟ ಪಡುತ್ತಾರೆ.
ನನ್ನನ್ನು ಇಷ್ಟ ಪಡುವ ನನ್ನ ಪ್ರೇಕ್ಷಕರಿಗೆ ದೊಡ್ಡ ನಮಸ್ಕಾರಗಳು. ಅದಕ್ಕೆ ಹಾಡಿನ ಮೂಲಕ ಹೇಳುವುದಾದರೆ, ‘ಎಲ್ಲೆಲ್ಲೂ ಸಂಗೀತವೇ ಎಲ್ಲೆಲ್ಲೂ ಸೌಂದರ್ಯವೇ.. ಕೇಳುವ ಕಿವಿಯಿರಲು ನೋಡುವ ಕಣ್ಣಿರಲು...’
ಕೇಳುವ ಕಿವಿಗಳು ಮತ್ತು ನೋಡುವ ಕಣ್ಣುಗಳು ಯಾವತ್ತೂ ಇರುತ್ತವೆ. ಪ್ರೇಕ್ಷಕರಿಗೆ ಮನ ಮುಟ್ಟುವ ಹಾಗೆ ನಾವು ಕಾರ್ಯಕ್ರಮವನ್ನು ನೀಡಬೇಕು.
ಸಂಗೀತ ಕ್ಷೇತ್ರದ ಮುಂದಿನ ಯೋಜನೆ:-
ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮಾಡಬೇಕು ಎಂಬ ಆಸೆ ಇದೆ. ನಮ್ಮದೇ ಆದಂಥಹ ಸಂಸ್ಥೆಯನ್ನು ಸ್ಥಾಪಿಸಬೇಕು ಅನ್ನುವ ಯೋಜನೆ ಇದೆ. "ಕೋಟೆ ಮ್ಯೂಸಿಕ್ ಫೌಂಡೇಶನ್" ಎಂಬ ನಮ್ಮದೇ ಸಂಸ್ಥೆ ಇದೆ. ಅದರ ಮೂಲಕ ಇನ್ನಷ್ಟು ಹೆಚ್ಚಿನ ತರಬೇತಿ ಕೊಡಬೇಕು ಅನ್ನುವಂತಹ ಯೋಜನೆ ಇದೆ.
ಮ್ಯೂಸಿಕ್ ಥೆರಪಿ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಮನೋ ರೋಗಿಗಳಿಗೆ ಡಾಕ್ಟರ್ ಗಳು ಸಂಗೀತದ ಮೂಲಕ ಚಿಕಿತ್ಸೆ ನೀಡುತ್ತಾರೆ. ಅದರ ಬಗ್ಗೆ ಕಲಿತು ನನ್ನದೇ ಆದಂಥಹ ಕಿರು ಕಾಣಿಕೆಯನ್ನು ನೀಡಬೇಕು ಎಂಬ ಬಯಕೆ ಇದೆ.
ಸಂಗೀತ ಕ್ಷೇತ್ರದ ಸಾಧನೆಗೆ ನಿಮ್ಮ ಕುಟುಂಬದವರ ಸಹಕಾರ ಹೇಗಿತ್ತು:-
ಮೊದಲಿಗೆ ನನ್ನ ತಂದೆ ತಾಯಿ ನನ್ನ ಸಾಧನೆಗೆ ತುಂಬಾ ಸಹಕಾರ ನೀಡಿದ್ದಾರೆ. ಅಕ್ಕ ಶಶಿಕಲಾ, ತಮ್ಮ ರಘುರಾಮ ಕೋಟೆ, ಜೊತೆಗೆ ಮಡದಿ ಸೀತಾ ಕೋಟೆ (ಭರತನಾಟ್ಯ ಕಲಾವಿದೆ, ರಂಗಭೂಮಿ ಕಲಾವಿದೆ ಹಾಗೂ ಚಲನಚಿತ್ರ, ಧಾರಾವಾಹಿ ನಟಿ), ಮಗ ಸಾಗರ್ ಕೋಟೆ... ಇವರೆಲ್ಲರ ಸಹಕಾರದಿಂದ ಇಂದು ನಾನು ಸಂಗೀತ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು.
ಸಂಗೀತ ಕ್ಷೇತ್ರದ ಸಾಧನೆಗೆ ಗಾನ ಗಂಧರ್ವ, ಗಾನ ಕೋಗಿಲೆ, ಸಿರಿ ಕಂಠದ ಗಾಯಕ, ಗಾನ ಗಾರುಡಿಗ, ಕರ್ನಾಟಕ ಚೇತನ, ಬೆಂಗಳೂರು ರತ್ನ, ವಿಶ್ವ ಮಾನವ, ಸ್ವರ ಮಂದಾರ ಇತ್ಯಾದಿ ಬಿರುದುಗಳು ಕೋಟೆಯವರಿಗೆ ದೊರೆತಿರುತ್ತದೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ