ವಿಶ್ವಕ್ಕೆ ಕರ್ನಾಟಕದ 'ಹಸಿರು' ಭಾಗ್ಯ

Upayuktha
0


ಪರಿಸರದ ಪಸರುವಿಕೆಗೆ ಕರ್ನಾಟಕ ಸರ್ಕಾರ ಪ್ರಸಕ್ತ ಬಜೆಟ್ ನಲ್ಲಿ 500 ಕೋಟಿ ರೂಗಳಷ್ಟು ಮೀಸಲಿಟ್ಟಿರುವುದು ಖಂಡಿತ ಒಳ್ಳೆಯ ಬೆಳವಣಿಗೆ. ದೇಶ ವಿದೇಶಗಳ ಸಂಸತ್ತುಗಳಲ್ಲಿ, ಅಂತರರಾಷ್ಟ್ರೀಯ ಸಭೆಗಳಲ್ಲಿ ಸದಾ ಕೇಳಿ ಬರುವ ಕೂಗು ಡೀಕಾರ್ಬನೈಸೇಷನ್ ಮತ್ತು ಹಸಿರೀಕರಣ. ಇಂಧನ ಬಳಕೆ, ತಂತ್ರಜ್ಞಾನ ಅಭಿವೃದ್ಧಿಗಳಿಂದ ಆಗುತ್ತಿರುವ ಹಸಿರ ನಾಶ ಮತ್ತು ಪರಿಸರ ನಷ್ಟಕ್ಕೆ ಸದ್ಯ ಹೆಚ್ಚು ಮುನ್ನೆಲೆಗೆ ಬರುತ್ತಿರುವಂತಹ ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರಿತ್ಯಗಳು ಜ್ವಲಂತ ಉದಾಹರಣೆಗಳು. ಹೆಸರಿಗಾಗಿ ಸದಾ ಹಸಿರು ಜಪವಿದ್ದರೂ ಅಭಿವೃದ್ಧಿ, ಆರ್ಥಿಕತೆಯ ಪೈಪೋಟಿಯಿಂದ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯಾಗಿ ಹಸಿರೀಕರಣದಂತಹ ಜಗತ್ತಿನ ಅನಿವಾರ್ಯ ಬೇಡಿಕೆಯನ್ನು ಪೂರೈಸಲು ಕರ್ನಾಟಕಕ್ಕಿದು ಸಕಾಲ. 500 ಕೋಟಿಯಷ್ಟು ಮೊತ್ತದಲ್ಲೇ ಹಸಿರಿನ ರೂವಾರಿಯಾಗಿ ಇಡೀ ಜಗತ್ತಿಗೆ ಮಾದರಿಯಾಗುವ ಅವಕಾಶ ಈಗ ಕರ್ನಾಟಕದ ಒಡಲಲ್ಲಿದೆ.


ರಾಜ್ಯದ 17 ಜಿಲ್ಲೆಗಳಲ್ಲಿ ಶೇ 10 ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಇದ್ದು ಅದನ್ನು ಶೇಕಡ 33ಕ್ಕೆ ಕೊಂಡೊಯ್ಯುವ ಸವಾಲು ನಮ್ಮ ಮುಂದಿದೆ. ಇದಕ್ಕೆ ಉತ್ತರವಾಗಿ ವನಮಹೋತ್ಸವದ ಹೆಸರಿನಲ್ಲಿ ನೆಡುವ ಸಾಲು ಗಿಡಗಳು, ಪೋಷಣೆ ಇಲ್ಲದೆ ಅವು ಬಾಡುವ ದುಸ್ಥಿತಿ ಎಂದಿಗೂ ಸಮಂಜಸವಾಗಿ ಕಾಣಲಾರದು. ನಮ್ಮೆಲ್ಲರ ತಪ್ಪು ಕಲ್ಪನೆ ಏನೆಂದರೆ ಮರ ನೆಡುವುದರಿಂದ ಅರಣ್ಯ ವೃದ್ಧಿಯಾಗುತ್ತದೆ ಎಂಬುದು. ಆದರೆ ಅರಣ್ಯ ಎಂಬುದು ನೈಸರ್ಗಿಕವಾಗಿ ರೂಪಿತವಾದಂತಹ ಒಂದು ವ್ಯವಸ್ಥೆ, ಅದನ್ನು ಆದಷ್ಟು ನೈಸರ್ಗಿಕ ಸೂತ್ರಗಳಡಿಯಲ್ಲೇ ನಿರ್ಮಿಸಬೇಕೇ ಹೊರತು ಮನುಷ್ಯನ ಲಾಭಕ್ಕೆ ತಕ್ಕನಾಗಿ ನಿರ್ಮಿಸಲಾಗದು. ಹಾಗಾದರೆ ಆ ಪ್ರಯತ್ನದತ್ತ ಏನೆಲ್ಲಾ ಸಾಧ್ಯತೆಗಳಿವೆ ಎಂಬುದರತ್ತ ಇಣುಕು ನೋಟ ಹರಿಸೋಣ.


1. ಕೆರೆ -ಕೊಳಗಳ ನಿರ್ಮಾಣ:

ಒಂದು ಸೀಮಿತ ಪ್ರದೇಶದಲ್ಲಿ ಅರಣ್ಯ ಬೆಳೆಯಬೇಕಾದರೆ ಅಲ್ಲಿ ಕೆರೆ ಅಥವಾ ಕೊಳಗಳ ನಿರ್ಮಾಣ ಪ್ರಮುಖ ಪಾತ್ರ ವಹಿಸುತ್ತದೆ . ಯಾವುದೇ ಹಸಿರಿನ ಹುಟ್ಟು ಆರಂಭವಾಗುವುದು ನೀರಿಂದ, ಈ ಕೆರೆಗಳಿಗೆ ಶಾಶ್ವತ ಜಲಮೂಲ ಸಿಕ್ಕರೆ ಇನ್ನೂ ಉತ್ತಮ. ಪರಿಸರ ಅನುಕ್ರಮಣದ ಗತಿಯ ಪ್ರಕಾರ ಪಾಚಿಯಿಂದ ಹುಲ್ಲು,ಹುಲ್ಲಿನಿಂದ ಗಿಡ, ಗಿಡದಿಂದ ಮರ ನೀರಿನ ಸುತ್ತ ರೂಪುಗೊಳ್ಳುತ್ತದೆ. ನೀರು, ವಸತಿಗಾಗಿ ಬರುವ ಪ್ರಾಣಿಗಳು ಪಕ್ಷಿಗಳು ಸಸ್ಯ ಪ್ರಭೇದಗಳ ಪಸರುವಿಕೆಯಲ್ಲಿ ಕೊಡುಗೆ ನೀಡುತ್ತವೆ. ಕ್ರಮೇಣವಾಗಿ ಅಲ್ಲೊಂದು ನೈಸರ್ಗಿಕ ಅರಣ್ಯ ನಿರ್ಮಾಣವಾಗುತ್ತದೆ.


ಈ ಕೆರೆ ಕೊಳಗಳಿಂದ ಸುತ್ತಮುತ್ತಲ ಜಾಗಗಳಿಗೆ ನೀರಿನ ಇಂಗುವಿಕೆಯು ಹೆಚ್ಚುತ್ತದೆ. ಕಾಲುವೆ ನೀರಿನ ಸಂಪರ್ಕ ಹೊಂದಿರುವ ಅರೆ ಮಲೆನಾಡು, ಬಯಲು ಸೀಮೆ ಪ್ರದೇಶಗಳಿಗೆ ಈ ಪ್ರಯತ್ನ ಉತ್ತಮವಾಗಿ ತೋರುತ್ತದೆ. ಇದರಿಂದ ಆ ಪ್ರದೇಶಕ್ಕೆ ಸೂಕ್ತವಾದಂತಹ ಗಿಡ ಮರಗಳು ಬೆಳೆದು ಜೇನುದುಂಬಿಳ ಸಂಖ್ಯೆಯೂ ಹೆಚ್ಚಾಗುವುದರಿಂದ ಬೆಳೆಗಳ ಫಸಲು ಕೂಡ ಹೆಚ್ಚಾಗುವುದು.


2. ಸೂಕ್ಷ್ಮಜೀವಿಗಳ ಸಹಾಯ:

ಪ್ರಕೃತಿಯಲ್ಲಿನ ಇಂಗಾಲದ ಡೈಯಾಕ್ಸೈಡನ್ನು ಆಮ್ಲಜನಕವಾಗಿ ಮಾರ್ಪಾಡಿಸುವುದರಲ್ಲಿ ದ್ಯುತಿ ಸಂಶ್ಲೇಷಣೆಯಲ್ಲಿ ಶಕ್ತವಾಗಿರುವಂತಹ ಪಾಚಿ ಪ್ರಭೇದಗಳು (Algae) ಮತ್ತು ಕೆಲವು ಬ್ಯಾಕ್ಟೀರಿಯಾ ಗಳ (Cyanobacteria) ಪಾತ್ರವೂ ಅತ್ಯಗತ್ಯ. ಕಾಡನ್ನು ಬೆಳೆಸಲು ಅವಶ್ಯವಾದಂತಹ ಜಾಗದ ಕೊರತೆ ಇರುವ ನಗರ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಇಂತಹ ಸೂಕ್ಷ್ಮಜೀವಿಗಳನ್ನು ಬೆಳೆದು ಅವುಗಳಿಂದ ಶುದ್ಧೀಕರಿತವಾದ ಗಾಳಿಯ ವಿಶ್ಲೇಷಣೆಯಿಂದ, ದೊಡ್ಡ ಪ್ರಮಾಣದಲ್ಲಿ ಇದರ ಆರಂಭಕ್ಕೆ ದಿಕ್ಸೂಚಿ ದೊರೆಯುತ್ತದೆ. ಕಲುಷಿತ ಪ್ರದೇಶಗಳಲ್ಲೂ ಇಂತಹ ಸೂಕ್ಷ್ಮಜೀವಿಗಳು ಬೆಳೆದು ಅಲ್ಲಿನ ಪ್ರದೂಷಣೆಯ ಬಳಕೆಯ ಮೂಲಕ ಆಹಾರ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಇವುಗಳು, ಮಾಲಿನ್ಯ ನಿಯಂತ್ರಣದಲ್ಲೂ ಸಹಕಾರಿಯಾಗುತ್ತವೆ.


ಇತ್ತೀಚಿನ ಹೊಸ ಆವಿಷ್ಕಾರಗಳಲ್ಲಿ ಇಂತಹ ಪಾಚಿಗಳಿಂದ ಹಸಿರು ಇಂಧನವನ್ನು ತಯಾರಿಸುವ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಹಸಿರಿನ ಜೊತೆಗೆ 'ಕಸದಿಂದ ರಸ' ಎಂಬ ಎರಡು ಗುರಿ ಒಂದೇ ಪ್ರಯತ್ನಕ್ಕೆ ದಕ್ಕುತ್ತದೆ.


3. ಕಲುಷಿತ ನೀರ ಹರಿವು ಯೋಜನೆ:

ವಸತಿ ಪ್ರದೇಶಗಳಿಂದ ಹೊರಹಾಕಲ್ಪಟ್ಟ ನೀರನ್ನು ಅರಣ್ಯ ನಿರ್ಮಾಣದ ಗುರಿಹೊಂದಿದ ಪ್ರದೇಶಗಳಿಗೆ ಚಿಕ್ಕ ಕಾಲುವೆಯಂತೆ ಮಾಡಿ, ಕಲುಷಿತ ನೀರನ್ನು ಉದ್ದಕ್ಕೂ ಹರಿಸುವುದರಿಂದ ಅದರಲ್ಲಿನ ಪ್ರದೂಷಣಗಳು ತಮ್ಮ ಗಾತ್ರ, ತೂಕದ ಪ್ರಭಾವದಿಂದ ನೀರಿನಿಂದ ಬೇರ್ಪಡುತ್ತವೆ. ಅರಣ್ಯ ನಿರ್ಮಾಣಕ್ಕೆ ಬೇಕಾದಂತಹ ನೀರು ಸಿಗುತ್ತದೆ. ಆ ಪ್ರದೂಷಣಗಳು ಕೇವಲ ವಸತಿ ಪ್ರದೇಶದಾದ್ದರಿಂದ ವಿಷಕಾರಿ ರಾಸಾಯನಿಕಗಳು ಇರುವುದಿಲ್ಲ. ಅವುಗಳ ಮೇಲೆ ಶಿಲೀಂದ್ರಗಳು ಬೆಳೆಯುವುದರಿಂದ ಬೇರೆ ಸಸ್ಯವರ್ಗಗಳಿಗೆ ಅವು ಗೊಬ್ಬರವಾಗಿ ಪರಿಣಮಿಸುತ್ತವೆ. ಇದರಿಂದ ನೀರಿನ ಸದ್ಬಳಕೆ ಹಾಗೂ ಹಸಿರ ಕ್ರಾಂತಿ ಸಾಧ್ಯವಾಗುತ್ತದೆ



ಇಲ್ಲಿ ನಮೂದಿಸಿರುವ ವಿಧಾನಗಳು ಕೆಲವು ಉದಾಹರಣೆಗಳಷ್ಟೇ, ಈ ರೀತಿಯ ಹಲವು ತಂತ್ರಗಾರಿಕೆಯಿಂದ ನಮ್ಮ ಗುರಿ ಸಾಧಿಸಬಹುದು.ಈ ಎಲ್ಲಾ ಪ್ರಯತ್ನಗಳಿಗೂ ಫಲ ಸಿಗುವುದು ಪ್ರಾಯೋಗಿಕ ಮನಸ್ಥಿತಿ ಮತ್ತು ಪ್ರಾಕೃತಿಕ ಸೂತ್ರಗಳಿಂದ ಮಾತ್ರ.ಹಸಿರೀಕರಣದ ಹೆಸರಿನಲ್ಲಿ ತಮಗೆ ಬೇಕಾದ ಮರಗಳನ್ನು ಬೆಳೆಯುವ ಮನುಷ್ಯ ಪ್ರಯತ್ನ ಮತ್ತು ಸ್ವಾರ್ಥ, ಸೃಷ್ಟಿಸುವುದು ಕಾಡನ್ನಲ್ಲ ಹೊರತಾಗಿ ಕೇವಲ 'ಪ್ಲಾಂಟೇಶನ್'ಗಳನ್ನು ಮಾತ್ರ. ತಮಗೆ ಎಷ್ಟು ಲಾಭವಾಗುತ್ತದೆ? ಎಂಬ ಲೆಕ್ಕಾಚಾರಗಳನ್ನು ಬದಿಗಿಟ್ಟು ಈ ಹೊಸತನಗಳಿಗೆ ಅನುವಾಗಬೇಕು. ಅಷ್ಟಕ್ಕೂ ಕಾಡುಗಳಿಂದ ಉತ್ಪಾದಿಸಲ್ಪಡುವ ಆಮ್ಲಜನಕ, ಅಲ್ಲಿನ ಜೀವಿಗಳಿಂದ ಪರಾಗಸ್ಪರ್ಶ ಹೊಂದಿ ಬರುವ ಪೈರು, ಕಾಡು ಹೆಚ್ಚು ಮಾಡುವ ಜಲಮೂಲಗಳ ಬೆಲೆ ಕಟ್ಟಲು ಹೋದರೆ ಅದು ಸಹಸ್ರಕೋಟಿಗಳನ್ನು ಮೀರಬಹುದು. ನಮ್ಮ ಹಸಿರಿನ ಉಳಿವಿಗೆ ಮೀಸಲಾದಂತಹ ಹಣವನ್ನು ಈ ರೀತಿಯ ಹೊಸ ಮಾರ್ಗಗಳಲ್ಲಿ ತೊಡಗಿಸಿ, ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಖಂಡಿತ ಸರ್ವ ಜಗಕ್ಕೆ ಜನಕ್ಕೆ ಕರ್ನಾಟಕ ಹಸಿರ ಭಾಗ್ಯ ಕರುಣಿಸಬಹುದು.


- ಹೇಮಂತ ಲೋಂಢೆ

ಕನ್ನಾಪುರ, ಮೂಡಿಗೆರೆ (ತಾ)

(ಆಳ್ವಾಸ್ ಜೈವಿಕ ತಂತ್ರಜ್ಞಾನ ಸ್ನಾತಕೋತ್ತರ ಪದವಿ ವಿದ್ಯಾರ್ಥಿ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top