ಭರತ ಶತ್ರುಘ್ನರು ತಮ್ಮ ಮಡದಿಯರೊಂದಿಗೆ ಭರತನ ಸೋದರಮಾವನಾದ ಯುಧಾಜಿತನಲ್ಲಿಗೆ ಹೋದರು.ಅಲ್ಲಿ ಅವರಿಗೆ ಯುಧಾಜಿತನ ಪುತ್ರರ ಸ್ಥಾನ ಮಾನ.ಇತ್ತ ಅಯೋಧ್ಯೆಯಲ್ಲಿ ರಾಮ ತಂದೆ ದಶರಥನಿಗೆ ರಾಜ್ಯಭಾರವನ್ನು ನಿಭಾಯಿಸುವಲ್ಲಿ ಬಲಗೈಯಂತೆ ಕೆಲಸ ಮಾಡುತ್ತಿದ್ದನು. ಲಕ್ಷ್ಮಣ ರಾಮನಿಗೆ ಬಲಗೈ.ಶ್ರೀರಾಮನಂತಹ ಶ್ರೀರಾಮನನ್ನು ಬ್ರಹ್ಮ ಸೃಷ್ಟಿಸಿದ್ದು ಒಬ್ಬನನ್ನೇ!
ಕ್ಷಮೆಯಲ್ಲಿ ಭೂದೇವಿಗೆ, ಬುದ್ಧಿಯಲ್ಲಿ ಬೃಹಸ್ಪತಿಗೆ, ಶೌರ್ಯ ಪರಾಕ್ರಮಗಳಲ್ಲಿ ಇಂದ್ರನಿಗೆ ಸಮಾನನಾದ ರಾಮ,ರವಿವಂಶದ ರಾಮ ರವಿಯಂತೆಯೇ ಬೆಳಗುತ್ತಿದ್ದ ನು.ಅವರಿವರೆನ್ನದೆ ಕೋಸಲದ ವಿಶೇಷವಾಗಿ ಅಯೋಧ್ಯೆಯ ಎಲ್ಲರ ಕಣ್ಮಣಿಯಾಗಿದ್ದನು.
ಸಹಜವಾಗಿಯೇ ದಶರಥನು ರಾಮನನ್ನು ಯುವರಾಜನನ್ನಾಗಿಸಲು ಬಯಸಿ ಸಚಿವರೊಂದಿಗೆ ಚರ್ಚಿಸಿ ಮಗನಿಗೆ ಯುವರಾಜ ಪಟ್ಟ ಕಟ್ಟಲು ನಿಶ್ಚಯಿಸಿದನು.ಪ್ರಜೆಗಳನ್ನು, ರಾಜರುಗಳನ್ನು,ಪ್ರಜಾಪ್ರಮುಖರನ್ನೆಲ್ಲಾ ಕರೆದು ತನ್ನ ನಿರ್ಧಾರವನ್ನು ಘೋಷಿಸಿದನು. ಎಲ್ಲರೂ ಸಂತಸದಿಂದ ಸಹಮತ ವ್ಯಕ್ತಪಡಿಸಿದರು.ದಶರಥನ ಹೆಜ್ಜೆಗಳನ್ನು ನೋಡುವಾಗ ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವವಿದೆಯೇ ಎಂಬ ಅಚ್ಚರಿಯುಂಟಾಗುತ್ತದೆ!
ಪ್ರಜೆಗಳ ಅಭಿಪ್ರಾಯ ಸಮ್ಮತಿ ಪಡೆದ ಬಳಿಕ ದಶರಥನು ವಸಿಷ್ಠ- ವಾಮದೇವರಲ್ಲಿ ಪಟ್ಟಾಭಿಷೇಕಕ್ಕೆ ಸಿದ್ಧತೆಗಳನ್ನು ಮಾಡುವಂತೆ ಪ್ರಾರ್ಥಿಸಿದನು.ಅವರಿಬ್ಬರೂ ಸಚಿವರುಗಳನ್ನು ಕರೆಯಿಸಿ ಪಟ್ಟಾಭಿಷೇಕಕ್ಕೆ ಮಾಡಬೇಕಾದ ರಾಜತಾಂತ್ರಿಕ, ಧಾರ್ಮಿಕ, ಸಾಂಸ್ಕೃತಿಕ... ಮುಂತಾದ ಎಲ್ಲಾ ತಯಾರಿಗಳನ್ನು ಶೀಘ್ರವಾಗಿ ಮಾಡಲು ಹೇಳಿದರು.ಸಚಿವರುಗಳು ಹೊಸ ಉತ್ಸಾಹದಿಂದ ಪಟ್ಟಾಭಿಷೇಕದ ಯಶಸ್ಸಿಗೆ ಸರ್ವ ತಯಾರಿಗಳನ್ನು ಮಾಡ ತೊಡಗಿದರು.ಒಂದೇ ಮಾತಿನಲ್ಲಿ ಹೇಳುವುದಾದರೆ ಅಯೋಧ್ಯೆಗೆ ಅಯೋಧ್ಯೆಯೇ ಸಿದ್ಧತೆಯಲ್ಲಿ ತೊಡಗಿಸಿಕೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ