ಮಂಗಳೂರು: ಭರತನಾಟ್ಯ ಕಲೆಯು ಪರಂಪರೆಯ ಕಲೆಯಾಗಿದ್ದು ಶಾಸ್ತ್ರೀಯ ಅಂಶಗಳನ್ನು ಒಳಗೊಂಡ ಕ್ರೀಡೆ. ಈ ಕಲೆಯ ಅಭ್ಯಾಸದಿಂದ ದೇಹದ ಎಲ್ಲಾ ಅಂಗಾಂಗಗಳನ್ನು ಸಕ್ರಿಯೆಗೊಳಿಸಿ ಬುದ್ಧಿಯನ್ನು ಚುರುಕುಗೊಳಿಸಬಲ್ಲದು ಎಂದು ಸುಬ್ರಮಣ್ಯ ಸಭಾ ಸದನ ಮಂಗಳೂರು ಇದರ ಅಧ್ಯಕ್ಷ ಹರ್ಷಕುಮಾರ್ ಕೇದಿಗೆ ಅಭಿಪ್ರಾಯಪಟ್ಟರು.
ಅವರು ನಾಟ್ಯಾಲಯ ಉರ್ವ (ರಿ) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕರಂಗಲ್ಪಾಡಿಯ ಸುಬ್ರಮಣ್ಯ ಸಭಾ ಇಲ್ಲಿ ಆಯೋಜಿಸಿರುವ ಕಿಂಕಿಣಿ ಉತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೃತ್ಯದ ಅಡವುಗಳ ಅಭ್ಯಾಸದಿಂದ ಉಸಿರಾಟದ ನಿಯಂತ್ರಣ ಶರೀರದ ಧೃಡತೆ ನಿಲುವು ಸರಿಪಡಿಸಲು ಸಾಧ್ಯವಾಗಿ ದೇಹಕ್ಕೆ ಒಂದು ಆಕರ್ಷಕ ರೂಪ ಬರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಮಂಗಳೂರು ಸೌಹಾರ್ದ ಸಹಕಾರಿ ಸಂಘ ಜಪ್ಪು ಇದರ ಅಧ್ಯಕ್ಷ ಭಾಸ್ಕರ್ ರಾವ್, ವಿದ್ಯಾವರ್ಧಕ ಸಂಘ ಅಶೋಕನಗರ ಇದರ ಅಧ್ಯಕ್ಷ ಪಿ ಸೀತಾರಾಮ್ ಭಟ್ ಮುಖ್ಯ ಅತಿಥಿಗಳಾಗಿದ್ದರು.
ನಾಟ್ಯಾಲಯದ ಗುರು ವಿದುಷಿ ಕಮಲ ಭಟ್ ಸ್ವಾಗತಿಸಿದರು ವಿ.ವಿನಯ ರಾವ್ ವಂದಿಸಿದರು. ವಿದ್ವಾನ್ ಎಂವಿ ಗಣೇಶ್ ರಾಜ್ ನಿರೂಪಿಸಿದರು ನೃತ್ಯ ಗುರುಗಳಾದ ವಿದುಷಿ ರಾಜಶ್ರೀ ಉಳ್ಳಾಲ್, ವಿದುಷಿ ಶಾರದಾಮಣಿ ಶೇಖರ್, ವಿದುಷಿ ಪ್ರತಿಮಾ ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರಿನ ಚಿಗುರು ನೃತ್ಯ ಸಂಸ್ಥೆಯ ವಿ. ಸರಿತಾ ಕೊಟ್ಟಾರಿ ಮತ್ತು ತಂಡ, ಕು. ಸಾಧನಾ ಮತ್ತು ಬಳಗ, ಕು.ಪ್ರಜ್ಞಾ ಮತ್ತು ಬಳಗ, ಕು. ಪ್ರಣವಿ ಪಿ ಕೆ ಮತ್ತು ಬಳಗ, ಕು ಯಶ್ಮಿತಾ ಮತ್ತು ಬಳಗದವರಿಂದ ಸಮೂಹ ನೃತ್ಯ ಕಾರ್ಯಕ್ರಮಗಳು ಹಾಗೂ ಏಕವ್ಯಕ್ತಿ ನೃತ್ಯ ಪ್ರಸ್ತುತಿಯನ್ನು ಶಿವಪ್ರಣಾಮ್ ಸಂಸ್ಥೆಯ ವಿ. ಅನ್ನಪೂರ್ಣ ರಿತೇಶ್, ಕು.ಅಮೃತಾ ವಿ. ಕು. ತೇಜಸ್ವಿನಿ ಎಲ್, ಮಾಸ್ಟರ್ ಪ್ರದ್ಯುಮ್ನ ತೇಜಸ್ವಿ, ಕುಮಾರಿ ಶ್ರದ್ಧಾ ಎಂ ಜೆ, ಮೊದಲಾದವರು ಪ್ರದರ್ಶಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ