
ಧರ್ಮಸ್ಥಳ: ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಜಯರಾಮ ಭಟ್ ನಿಧನದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅವರು, ಜಯರಾಮ್ ಭಟ್ ನಿಧನದ ಸುದ್ದಿ ತಿಳಿದು ವಿಷಾದವಾಯಿತು. ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಬ್ಯಾಂಕಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸದಾ ಹಸನ್ಮುಖಿಯಾಗಿದ್ದು ಕರ್ತವ್ಯ ನಿರ್ವಹಿಸಿ, ಕರ್ಣಾಟಕ ಬ್ಯಾಂಕ್ ವತಿಯಿಂದ ಎಲ್ಲರಿಗೂ ಸೂಕ್ತ ಸಹಾಯ, ಮಾರ್ಗದರ್ಶನ ನೀಡಿ ಉತ್ತಮ ಸೇವೆ ಮಾಡಿ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
ಪಿ. ಜಯರಾಮ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿಯವರು. 1951ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ಪಡೆದಿದ್ದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ ಸರ್ಟಿಫೈಡ್ ಅಸೋಸಿಯೇಟ್ (ಸಿಎಐಐಬಿ) ಆಗಿದ್ದರು. ತಮ್ಮ ನಾಲ್ಕೂವರೆ ದಶಕಗಳಿಗೂ ಮೀರಿದ ಸುದೀರ್ಘ ಬ್ಯಾಂಕಿಂಗ್ ವೃತ್ತಿ ಜೀವನವನ್ನು 1973ರಲ್ಲಿ ಖಾಸಗಿ ರಂಗದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ನಲ್ಲಿ ಅಧಿಕಾರಿಯಾಗಿ ಆರಂಭಿಸಿ ಕ್ರಮೇಣ ಬ್ಯಾಂಕ್ನ ವಿವಿಧ ಹುದ್ದೆಗಳಿಗೆ ಭಡ್ತಿ ಹೊಂದಿದರು. 2009ರ ಜುಲೈಯಿಂದ 2017ರ ಎಪ್ರಿಲ್ ವರೆಗೆ ಬ್ಯಾಂಕ್ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ, ಅನಂತರ ಬ್ಯಾಂಕ್ನ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದರು. ತಮ್ಮ ಅವ ಧಿಯಲ್ಲಿ ಇ-ಲಾಬಿ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್, ಆನ್ಲೈನ್ ಟ್ರೇಡಿಂಗ್ ಅಕೌಂಟ್, ಟ್ರಾವೆಲ್ ಕಾರ್ಡ್, ಗಿಫ್ಟ್ ಕಾರ್ಡ್ ಮೊದಲಾದ ಯಶಸ್ವಿ ಯೋಜನೆಗಳನ್ನು ಪರಿಚಯಿಸಿದ್ದರು. ಬ್ಯಾಂಕ್ನ ಸರ್ವಾಂಗೀಣ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದರು.
ಭಾರತೀಯ ಬ್ಯಾಂಕ್ಗಳ ಒಕ್ಕೂಟ (ಐಬಿಎ) ಆಡಳಿತ ಸಮಿತಿಯ ಸದಸ್ಯರಾಗಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದರು. ಬೆಂಗಳೂರಿನ ಸದರ್ನ್ ಇಂಡಿಯಾ ಬ್ಯಾಂಕ್ಸ್ ಸ್ಟಾಫ್ ಟ್ರೈನಿಂಗ್ ಕಾಲೇಜು (ಎಸ್ಐಬಿಎಸ್ಟಿಸಿ) ಆಡಳಿತ ಮಂಡಳಿಯ ಚೇರ್ಮನ್ ಆಗಿಯೂ 2019ರ ಆ. 31ರಿಂದ 2021ರ ಅ. 8ರ ವರೆಗೆ ಕಾರ್ಯನಿರ್ವಹಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ