ಗೋಕರ್ಣ: ಸಮಸ್ತ ಶಿಷ್ಯಸ್ತೋಮದ ಬುದುಕು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂಬ ಸದುದ್ದೇಶದಿಂದ ಶ್ರೀಶಂಕರಾಚಾರ್ಯರು ಅಶೋಕೆಯಲ್ಲಿ ಆರಂಭಿಸಿದ ಶ್ರೀ ರಘೂತ್ತಮ ಮಠ (ಇಂದಿನ ರಾಮಚಂದ್ರಾಪುರ ಮಠ) ಇದೀಗ ಸಂಘಟನಾತ್ಮಕವಾಗಿ ಹೊಸ ಆಯಾಮ ಪಡೆದಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಬುಧವಾರ ಸಿದ್ದಾಪುರ, ಬಿದ್ರಕಾನ, ತಾಳಗುಪ್ಪ- ಇಡವಾಣಿ ಮತ್ತು ಬಾನ್ಕುಳಿ ವಲಯಗಳ ಸಮಸ್ತ ಶಿಷ್ಯರಿಂದ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. "ವೃತ್ತ ಆರಂಭದ ಬಿಂದುವಿನಲ್ಲೇ ಮತ್ತೆ ಅಂತ್ಯವಾಗುವಂತೆ 1300 ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ಆರಂಭಿಸಿದ ಮಠಕ್ಕೆ ಇಂದು ಇಡೀ ಶಿಷ್ಯಸಮೂಹ ಬಂದು ಸೇರುತ್ತಿದೆ. ಮಠವೂ ಮೂಲಕ್ಕೆ ಬಂದಿದೆ. ಶಿಷ್ಯರೂ ಬಂದಿದ್ದಾರೆ" ಎಂದು ಬಣ್ಣಿಸಿದರು.
ಈ ಅವಿಚ್ಛಿನ ಪರಂಪರೆಯ 36 ಪೀಠಾಧಿಪತಿಗಳು ಈ ಧರ್ಮಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಈ ಅವಧಿಯಲ್ಲಿ ಸಂಘಟನಾತ್ಮಕವಾಗಿ ಶ್ರೀಮಠ ಹೊಸ ಸ್ವರೂಪ ಪಡೆದಿದ್ದು, ಜೇನುಗೂಡಿನಂಥ ವ್ಯವಸ್ಥಿತ ಸಂಘಟನೆ ಶ್ರೀಮಠದ ಅಧೀನದಲ್ಲಿ ರೂಪುಗೊಂಡಿದೆ. ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಇದನ್ನು ಮುನ್ನಡೆಸುವುದು ಶಿಷ್ಯರ ಹೊಣೆ ಎಂದು ಸೂಚಿಸಿದರು.
ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು. ಸಮಾಜದಲ್ಲಿ ಜನಸಂಖ್ಯೆ ಕ್ಷೀಣವಾಗುತ್ತಿದ್ದು, ಸಾಂಪ್ರದಾಯಿಕ ಕೇಂದ್ರಗಳು ದುರ್ಬಲವಾಗುತ್ತಿವೆ. ಯುವಕರು ಉದ್ಯೋಗ ಅರಸಿ ಪಟ್ಟಣಗಳ ಹಾದಿ ಹಿಡಿಯುತ್ತಿದ್ದು, ಮತ್ತೆ ಕೆಲವೇ ವರ್ಷಗಳಲ್ಲಿ ಅವರು ಮರಳಿ ಹಳ್ಳಿಗಳಿಗೆ ಬರುವುದು ನಿಶ್ಚಿತ. ಅದುವರೆಗೂ ನಮ್ಮ ಸಂಸ್ಕೃತಿ ದೀಪ ಆರದಂತೆ ಕಾಪಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಇದಕ್ಕೆ ಸಂಘಟನೆ ಬಲಗೊಳ್ಳಬೇಕಾದ್ದು ಅನಿವಾರ್ಯ ಎಂದರು.
ಸಮಾಜದಲ್ಲಿ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ಜತೆಗೆ, ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಆಗಬೇಕು. ಎಲ್ಲ ವಲಯ ಮಟ್ಟದಲ್ಲಿ ನಿರ್ದಿಷ್ಟ ದಿನದಂದು ಶ್ರೀಮಠಕ್ಕೆ ಸೇವೆ ಸಲ್ಲಿಸಿ ಗತಿಸಿದ ಕಾರ್ಯಕರ್ತರನ್ನು ನೆನಪಿಸಿಕೊಳ್ಳುವ ಕಾರ್ಯ ಆಗಬೇಕು. ಮನೆಗೊಬ್ಬ ಕಾರ್ಯಕರ್ತ ನಿರ್ಮಾಣವಾಗಬೇಕು; ಪ್ರತಿ ಕಾರ್ಯಕರ್ತರನ್ನು ಒಂದು ಕಾರ್ಯಕ್ಕೆ ನಿಯೋಜಿಸಿ ಅವರು ಸಕ್ರಿಯರಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಶ್ರೀಸಂಸ್ಥಾನ ಹಾಗೂ ಶ್ರೀಮಠದ ಸ್ವರ್ಣಪಾದುಕೆ ಸಮಾಜದ ಮೂಲೆ ಮೂಲೆಗೂ ಸಂಚರಿಸುವ ಯೋಜನೆ ರೂಪಿಸಲಗಿದೆ. ಇದು ಪ್ರತಿಯೊಬ್ಬ ಶಿಷ್ಯಭಕ್ತರಿಗೆ ಪುಣ್ಯ ಸಂಪಾದನೆಗೆ ಮತ್ತು ಪುರುಷಾರ್ಥ ಸಾಧನೆ ಎರಡಕ್ಕೂ ಸುಲಭ ಮಾರ್ಗವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಿವಿವಿ ಸಮಿತಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿವಿವಿ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಸಿದ್ದಾಪುರ ಮಂಡಲಾಧ್ಯಕ್ಷ ಮಹೇಶ್ ಚಟ್ನಳ್ಳಿ, ಕಾರ್ಯದರ್ಶಿ ಚಂದನ ಶಾಸ್ತ್ರಿ, ಉಪಾಧ್ಯಕ್ಷ ಸತೀಶ್ ಹೆಗಡೆ ಆಲ್ಮನೆ, ಮೋಹನ ಭಟ್ ಹರಿಹರ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣಪತಿ ಕೃಷ್ಣಯ್ಯ ಹೆಗಡೆ ಗೋಳಗೋಡ, ಶ್ರೀಧರ ಆರ್.ಹೆಗಡೆ, ಶ್ರೀಧರ ತಿಮ್ಮಪ್ಪ ಭಟ್ಟ, ಶಂಕರ ವೆಂಕಟರಮಣ ಭಟ್ಟ, ಗಾಯತ್ರಿ ವೆಂಕಟರಮಣ ಭಟ್ಟ, ಮೋಹನ ರಾ.ಹೆಗಡೆ, ವಿಶ್ವೇಶ್ವರ ಹೆಗಡೆ ಮಗೇಗಾರ ಅವರನ್ನು ಸನ್ಮಾನಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ