|| ಮಿತ್ರಾಂತರ್ಗತ ಶ್ರೀ ಜನಾರ್ದನಾಯ ನಮಃ ||
ಮಹಾಭಾರತಕ್ಕೆ ಹೆಚ್ಚಿನ ಮಹತ್ವ ಬಂದಿರುವುದೇ ''ಗೀತೆ''ಯ ಬಲದಿಂದ. ಮಹಾಭಾರತ ರಂಜಕವಾದ ಕಾಲಘಟ್ಟದ ಚರಿತೆಯಾದರೆ, `ಗೀತೆ'ಯು ಶ್ರೀಕೃಷ್ಣನ ನುಡಿಮುತ್ತುಗಳು. ಇದು ಸಕಲ ಶಾಸ್ತ್ರಗಳ ಸಾರವನ್ನೇ ಒಳಗೊಂಡಿದೆ. ಒಂದು ''ಗೀತೆ''ಯನ್ನು ತಿಳಿದರೆ ಎಲ್ಲ ಶಾಸ್ತ್ರಗಳನ್ನು ಅರಿತಂತೆ. ಇದು ಸಾಧನೆಗೆ ಬೇಕಾಗುವ ಲಿಖಿತ `ಸಂವಿಧಾನ'ದಂತೆ.
ಗೀತೆಯನ್ನು ಪ್ರತಿಬಾರಿ ಅಭ್ಯಾಸ ಮಾಡಿದಾಗಲೂ ಹೊಸದೊಂದು ವಿಚಾರ ಮಿಂಚುತ್ತದೆ. ಗೀತೆಯ ಅರ್ಥ ಇಷ್ಟೇ ಎಂದು ಯಾರಿಂದಲೂ ಹೇಳಲಾಗದು. ಒಬ್ಬ ವ್ಯಕ್ತಿಯ ಜ್ಞಾನಕ್ಕೆ ಮಿತಿ ಇರಬಹುದು. ಆದರೆ ಗೀತೆಯು ಒಳಗೊಂಡಿರುವ ಸುವಿಚಾರಗಳು ಬತ್ತದ, ಬೆಳೆಯುವ, ಮಿತಿಯಿಲ್ಲದ ಸೂರ್ಯ ರಶ್ಮಿಗಳಂತೆ. ಗೀತೆಯಿಂದ ನಮಗೆ ಇಷ್ಟು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಬಹುದು. ಆದರೆ ಗೀತೆಯ ಅರ್ಥವಿಷ್ಟೇ ಎಂದು ಒಂದು ಗೆರೆ ಎಳೆದು ನಿರ್ಧರಿಸಲು ಸಾಧ್ಯವಿಲ್ಲ.
ಒಂದು ಕಡೆ ಮನಃಶಾಸ್ತ್ರದ ವಿಷಯ ಕಂಡರೆ, ಇನ್ನೊಂದೆಡೆ ಆಧ್ಯಾತ್ಮದ ಭಂಡಾರ ಕಾಣುತ್ತದೆ. ಕರ್ಮ ಮತ್ತು ಕರ್ತವ್ಯಗಳೆಂಬ ಎರಡು ಗಾಲಿಗಳು ಈ ಬದುಕಿಗೆ. ಗೀತೆಯಲ್ಲಿ ಶ್ರೀಕೃಷ್ಣ ನುಡಿದ ಒಂದೊಂದು ಮಾತೂ ಸಾರ್ವಕಾಲಿಕವಾಗಿ ಸರ್ವಜೀವರಿಗೂ ಅನ್ವಯಿಸುತ್ತದೆ. ಮಾನವ ಧರ್ಮವೇ ಇದರಲ್ಲಿ ಅಡಕವಾಗಿದೆ. ಸಂಸಾರದಲ್ಲಿ ಸುಖವನ್ನು ಅನುಭವಿಸಲೂ ಗೀತೆಯ ಮಾರ್ಗದರ್ಶನ ಬೇಕು. ಸಂಸಾರದಿಂದ ಮುಕ್ತರಾಗಲೂ ಗೀತೆಯ ಜ್ಞಾನಬೇಕು.
ಒಬ್ಬ ಅರ್ಚಕನಿಗೆ ಅರ್ಚನೆಯೇ ಅವನಿಗೆ ಪೂಜೆಯೆನಿಸಿದರೆ, ಮತ್ತೊಬ್ಬನಿಗೆ ಅವನ ಕರ್ತವ್ಯವೂ ಪೂಜೆಯೆನಿಸುತ್ತದೆ. ಪೂಜೆಯು ಒಬ್ಬೊಬ್ಬರಿಗೆ ಒಂದೊಂದು ವಿಧವಾಗಿದೆ. ಧರ್ಮ ಇರುವುದೇ ಮಾನವನ ಒಳಿತಿಗಾಗಿ. ಇದನ್ನು ಬಿಟ್ಟು ಉಳಿದದ್ದು ಅಪ್ರಸ್ತುತ. ಅದು ಸವಕಲು ನಾಣ್ಯದಂತೆ. ನೋಡಲು ಇಟ್ಟುಕೊಳ್ಳಬಹುದು. ವ್ಯವಹರಿಸಲು ಸಾಧ್ಯವಿಲ್ಲ. ಯುದ್ಧ ಸಮಯದಲ್ಲೇ ಏಕೆ ಗೀತೆಯು ಪ್ರಸ್ತುತವೆನಿಸಿತು? ಜೀವನದ ಗುರಿಯೇ ಯುದ್ಧ. ಆ ಯುದ್ಧವನ್ನು ಎಲ್ಲರೂ ಗೆಲ್ಲಬೇಕೆನ್ನುವುದೇ ಧರ್ಮ. ಧರ್ಮದಲ್ಲಿ ಯಾರೂ ಸೋಲುವುದಿಲ್ಲ. ಯಾರೂ ಗೆಲ್ಲುವುದಿಲ್ಲ. ಎಲ್ಲರಿಗೂ ಸಾಧಿಸುವ ಗುರಿ ಇದೆ. ಗುರಿ ತಲುಪ ಬೇಕಷ್ಟೇ. ಅದೇ ಜಯ! ಅದೇ ಜೀವನ ಮುಕ್ತಿ!! ಮುಕ್ತಿಯ ದಾರಿಯನ್ನು ಎಲ್ಲರಿಗೂ ತೋರಿಸುವುದೇ ಈ ಗೀತೆ. ಅದೇ ''ಭಗವದ್ಗೀತೆ''.
ಮಾರ್ಗಶಿರ ಶುದ್ಧ ಏಕಾದಶಿ ನಮಗೆ ಪರಮ ಪವಿತ್ರವಾದ ದಿನ. ಜಗದ್ಗುರುವೆನಿಸಿದ ಶ್ರೀಕೃಷ್ಣನು ಅರ್ಜುನನ್ನು ನಿಮಿತ್ತವಾಗಿಟ್ಟುಕೊಂಡು ಅಂದು ಮಾನವ ಜೀವಿಗಳಿಗೆ ''ಗೀತೆ''ಯ ಸವಿಯನ್ನು ಉಣಬಡಿಸಿದ. ಈ ಕಾರಣಕ್ಕಾಗಿ ಪ್ರತಿವರ್ಷವೂ ಅಂದು ನಾವು ಗೀತಾಜಯಂತಿಯನ್ನು ಆಚರಿಸುತ್ತೇವೆ.
ಎಲ್ಲ ಪ್ರಕಾರದ ಭಿನ್ನತೆಯನ್ನು ಹೊಂದಿದ ಮನುಕುಲದ ಜೀವಿಗಳಿಗಾಗಿ ಇದು ಅಮೃತವಿದ್ದಂತೆ. ಸುಲಭವಾದ ಮುಕ್ತಿಯ ಮಾರ್ಗವನ್ನು ತೋರುವ ದಾರಿದೀಪ ಇದಾಗಿದೆ. ಅವರವರ ಯೋಗ್ಯತೆ, ಸಾಧನೆಗಳಿನುಗುಣವಾಗಿ ಗ್ರಂಥದವಿಸ್ತಾರವೂ ತೆರೆದುಕೊಳ್ಳುತ್ತದೆ. ಕಲಿಯುಗದ ಜನರಿಗೆ ಮುಕ್ತಿಯನ್ನು ಪಡೆಯಲು ಇದು ''ಕಾಮಧೇನು'' ಎಂದರೆ ತಪ್ಪಾಗಲಾರದು. ಜೀವ - ಪರಮಾತ್ಮನ ಸಂಬಂಧ, ಸಂಸಾರ ಮತ್ತು ಅದರಿಂದ ಮುಕ್ತರಾಗುವ ದಾರಿಯು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅನೇಕ ಜಾತಿ, ಮತ, ಪಂಥಗಳ ಗೊಂದಲದಲ್ಲೂ ಸುಜ್ಞಾನದ ಬೆಳಕನ್ನು ಈ ಗ್ರಂಥ ಚೆಲ್ಲುತ್ತದೆ.
ಆ ದೇವರ ಸೃಷ್ಟಿಯಲ್ಲಿ ಕೇವಲ ಎರಡೇ ಧರ್ಮಗಳು. ೧) ಪ್ರವೃತ್ತಿ ಧರ್ಮ ೨) ನಿವೃತ್ತಿ ಧರ್ಮ., ಜೀವನದಲ್ಲಿ ಸುಖವನ್ನು ಕೊಡುವ ಕರ್ಮಗಳನ್ನು ಮಾಡುವುದು, ಜೀವನಾಂತರದಲ್ಲಿ ಸ್ವರ್ಗಾದಿ ಸುಖಗಳನ್ನು ಪಡೆಯುವುದೇ ಪ್ರವೃತ್ತಿ ಧರ್ಮದ ಮೂಲ ಧ್ಯೇಯವಾಗಿದೆ. ಇದಕ್ಕಾಗಿ ಕಾಮ್ಯಕರ್ಮಗಳ ಉಪಾಸನೆ ಮತ್ತು ಅನುಷ್ಠಾನಗಳನ್ನು ನಾವು ಮಾಡಬೇಕಾಗುತ್ತದೆ. ಲೌಕಿಕ ಬಂಧನವನ್ನು ಕಳಚಲು ಸಹಾಯವಾಗುವ ಆತ್ಮಜ್ಞಾನನಿಷ್ಠೆಯನ್ನು ಪಡೆದು ಸಂಸಾರದ ದುಃಖಗಳಿಗೆ ಕಾರಣವಾಗುವ ಅರಿಷಡ್ವರ್ಗಗಳಿಂದ ಮುಕ್ತರಾಗುವುದೇ ನಿವೃತ್ತಿಮಾರ್ಗ. ಪ್ರವೃತ್ತಿ ಮಾರ್ಗದಿಂದ ಸಂಸಾರದಲ್ಲಿ ಪುನರ್ಜನ್ಮ ತಪ್ಪಿದ್ದಲ್ಲ. ಆದರೆ ನಿವೃತ್ತಿಮಾರ್ಗದಲ್ಲಿ ಯಶಸ್ವಿಯಾದರೆ ಪುನರ್ಜನ್ಮದ ಭೀತಿ ನಮಗಿಲ್ಲ. ಶ್ರೀಕೃಷ್ಣನ ಉಪದೇಶವು ಅನುಭವದಿಂದ ಕೂಡಿದ್ದು ಎಲ್ಲರ ಮನಸ್ಸಿಗೆ ನಾಟುವಂತಿದೆ. ಮುಕ್ತಿಗಾಗಿ ಇದಕ್ಕಿಂತಲೂ ಸುಲಭದಾರಿ ಬೇರೆ ಇಲ್ಲ. ಭಗವಂತನ ಈ ಉಪದೇಶಾಮೃತವನ್ನು ಕೇಳಿ ತಿಳಿದು, ಕೃತಿಯಲ್ಲಿ ತಂದು ಮುಕ್ತನಾಗುವ ಜೀವಿಯೇ ಧನ್ಯ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ