"ಸ್ವಾತಂತ್ರ್ಯ" ಈ ಪದವನ್ನು ಕೇಳಿದಾಗ ಅದೇನೋ ಪ್ರತಿ ಹೃದಯದ ಬಡಿತವು ಅದೆಷ್ಟೂ ಸಾವು - ನೋವುಗಳ ಚರಿತ್ರೆಯನ್ನು ಹೇಳುವಂತೆ ಭಾಸವಾಗುವುದು. ಅಂತಹ ರೋಮಾಂಚನಕಾರಿ ದಿನ 1947 ಆಗಸ್ಟ್ 14 ಮಧ್ಯರಾತ್ರಿ. ಅಂದು ಭಾರತೀಯರಿಗೆ ಇತಿಹಾಸದಲ್ಲೇ ಮರೆಯಲಾಗದ ಒಂದು ಅತ್ಯದ್ಭುತ ಕ್ಷಣವಾಗಿತ್ತು. ಸುಮಾರು 2 ದಶಕ ಕಾಲ ನಡೆದ ನಿರಂತರ ಹೋರಾಟದಲ್ಲಿ ಅದೆಷ್ಟೋ ವೀರರು ಪ್ರಾಣ ತ್ಯಾಗ ಮಾಡಿ ರಾಷ್ಟ್ರದ ಉಳಿಸಿವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿ ನಮಗೆ ಸ್ವಾತಂತ್ರ್ಯ ಎಂಬ ಸ್ವಯಂ ಹಕ್ಕನ್ನು ದೇಶಕ್ಕೆ ತಂದು ಕೊಟ್ಟರು. 75 ವರುಷ ದಾಟಿ ಅಮೃತ ಮಹೋತ್ಸವವನ್ನು ಪೂರೈಸಿ 76ನೇ ಸ್ವಾತಂತ್ರ್ಯ ದಿನಾಚರಣೆಯತ್ತ ದಾಪುಗಾಲು ಇಟ್ಟಿದ್ದೇವೆ. ಈ ದಿನ ಪ್ರತಿಯೊಬ್ಬ ಭಾರತೀಯನಿಗೂ ಇತಿಹಾಸದಲ್ಲೇ ಬಹುದೊಡ್ಡ ಸಾಧನೆ ಹಾಗೂ ಹೆಮ್ಮೆಯ ಸಂಗತಿಯಾಗಿದ್ದು. ಅಂದು ಬ್ರಿಟಿಷರ ಕ್ರೂರ ಆಡಳಿತ ಮತ್ತು ಅವರ ಬೂಟಿನೇಟಿನಿಂದ ಬಿಡುಗಡೆಗೊಂಡು ನಮ್ಮದು ಎಂಬ ಚೌಕಟ್ಟನ್ನು ಹಾಕಿಕೊಂಡು ಬ್ರಿಟಿಷರ ಕ್ರೂರ ಆಡಳಿತ ಕ್ಕೆ ಅಂತ್ಯ ಹಾಡಿದ ಇತಿಹಾಸ ಪ್ರಸಿದ್ಧ ದಿನ.
ದೇಶದ ಹಬ್ಬ ಸ್ವಾತಂತ್ರ್ಯೋತ್ಸವ:
ಸ್ವಾತಂತ್ರ್ಯ ಕಹಳೆಯು ಮೊಳಗುವ ಮೊದಲು ಅದರ ಹಿಂದೆ ನಡೆದ ಅದೆಷ್ಟೋ ಹೋರಾಟ, ಬಲಿದಾನಗಳನ್ನು ನಾವು ಸ್ಮರಿಸಿಕೊಳ್ಳಲೇಬೇಕು. ಶಾಂತಿ-ಕ್ರಾಂತಿ ಹೋರಾಟದ ಮೂಲಕ ಸ್ವಾತಂತ್ರ್ಯವನ್ನು ಪಡೆಯುವ ಹಾದಿಯು ತುಂಬಾ ಕಠಿಣವಾಗಿತ್ತು. ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಪ್ರತಿಯೊಬ್ಬ ಹೋರಾಟಗಾರನಲ್ಲಿ ಸ್ವಾರ್ಥದ ನಂಜು ಇರದೇ ನನ್ನ ದೇಶ ಎಂಬ ದೇಶ ಪ್ರೇಮದ ಕಿಚ್ಚು ಇತ್ತು. ಅದೇ ಕಿಚ್ಚು ಅನೇಕ ಕ್ರಾಂತಿಕಾರಿ ಹೋರಾಟಗಳ ಮೂಲಕ ಹೊತ್ತಿ ಉರಿದು ತಾಯಿ ಭಾರತ ಮಾತೆಗೆ ಸ್ವಾತಂತ್ರ್ಯ ದೊರಕುವುದರೊಂದಿಗೆ ಅವಳ ಮಡಿಲಲ್ಲಿ ಜ್ಯೋತಿಯಾಗಿ ಬೆಳಗಿತು. ಹೀಗೆ ನಮ್ಮ ಭಾರತ ದೇಶವು ದಂಡುಕೋರರಿಂದ ಸ್ವತಂತ್ರವಾಗಿ ಆಗಸ್ಟ್ 15,1947 ರಂದು ಸ್ವಾತಂತ್ರ್ಯೋವದ ದಿನವನ್ನು ದೇಶದ ಹಬ್ಬವೆಂದು ಆಚರಿಸುತ್ತಾ ಬಂದಿದ್ದೇವೆ.
ಸ್ವಾತಂತ್ರ್ಯ ಎಂಬುದು ಬಂಧನದಿಂದ ಮುಕ್ತಿ ಪಡೆದು ಸ್ವಇಚ್ಛೆಯಿಂದ ದೇಶ ನಿರ್ಮಾಣದತ್ತ ಸಾಗಲು ಅಥವಾ ನಮ್ಮದೇ ಆಡಳಿತದ ಮೂಲಕ ಸದೃಢ ಭಾರತ ನಿರ್ಮಾಣ ಮಾಡಲು ಒಂದು ಅವಕಾಶ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಸ್ವಾತಂತ್ರ್ಯದ ವಾಸ್ತವತೆ ಬದಲಾಗುತ್ತಿದೆ. ಪ್ರತಿ ವರುಷ ಬರುವ ಹಲವಾರು ಹಬ್ಬದಂತೆ ಇದು ಕಾಲ ಕ್ರಮೇಣ ತನ್ನ ಸ್ವಾಧೀನತೆಯನ್ನು ಕಳೆದುಕೊಳ್ಳುತ್ತಿದೆ. ದ್ವಜಾರೋಹಣ, ಭಾಷಣ, ಘೋಷಣೆ, ಸಿಹಿ ತಿಂಡಿ ಹಂಚಿಬಿಟ್ಟರೆ ರಾಷ್ಟ್ರೀಯ ಹಬ್ಬದ ಮುಕ್ತಾಯ ಎನ್ನುವ ರೀತಿಯಲ್ಲಿ ಬರೀ ಆಡಂಬರಕ್ಕೆ ಸೀಮಿತವಾಗುತ್ತಿದೆ.
ಯುವಜನತೆಗೆ ಪ್ರೋತ್ಸಾಹ:-
ಬದಲಾಗಬೇಕಿದೆ ಸ್ವಾತಂತ್ರ್ಯದ ಪರಿಕಲ್ಪನೆಯು,ಪ್ರತಿಯೊಬ್ಬ ವಿದ್ಯಾರ್ಥಿಯನ್ನು ರಾಷ್ಟ್ರ ನಿರ್ಮಾಣ ಮಾಡುವತ್ತ ನಡೆಯುವಂತೆ ಪ್ರೋತ್ಸಾಹಿಸುವುದು ಮುಖ್ಯ. ದೇಶದ ಹಿತಕ್ಕಾಗಿ ರೂಪುಗೊಂಡ ಕಾನೂನುಗಳು ಬಲವಾಗಿ ಬೇರೂರದೆ ತನ್ನ ಇರುವಿಕೆಯನ್ನು ನೆನಪಿಸುತ್ತಿದೆ ಹೊರತು ನ್ಯಾಯ ಎಂಬ ಪದವು ಕಾನೂನಿನ ಪುಸ್ತಕದಿಂದ ಅಳಿಸಿ ಹೋಗುತ್ತಿದೆಯೇ ಎಂಬ ನೋವು ಒಂದು ಕಡೆ. ಅದೇಷ್ಟೋ ಜನರ ನೋವುಗಳ ಧ್ವನಿಗಳು ಸದ್ದು ಮಾಡುವ ಮೊದಲೇ ಸಮಾಜದಲ್ಲಿ ಸೃಷ್ಟಿಸುವ ಕಾರಣವಿಲ್ಲದ ದಂಗೆಗಳಿಗೆ ಅಡಗಿಕೊಳ್ಳುತ್ತಿದೆ. ರಾಷ್ಟದ ನಿರ್ಮಾಣಕ್ಕೆ ಯುವ ಶಕ್ತಿಯ ಪೀಳಿಗೆಯನ್ನು ಈಗಿನ ಕಾಲದಲ್ಲಿ ಏತಕ್ಕಾಗಿ ಅಮೂಲ್ಯ ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ? ಈಗಿನ ಯುವಶಕ್ತಿಗಳು ಪ್ರಶ್ನಿಸಿಕೊಳ್ಳುವುದು ಮುಖ್ಯವಾಗಿದೆ. ಯುವಶಕ್ತಿಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು,ಸದ್ಯ ಬಿಸಿರಕ್ತಗಳ ಯುವಜನತೆಯನ್ನು ಬೇಕಾಗುವ ಹಾಗೆ ಬಳಸಿಕೊಳ್ಳುತ್ತಿದ್ದಿರಾ? ಎಂಬ ಪ್ರಶ್ನೆ ಉದ್ಭವವಾಗುತ್ತದೆ.
ಸ್ವತಂತ್ರ ಭಾರತ ದೇಶದ ಅಭಿವೃದ್ಧಿಗೆ ನಾವೇನು ಮಾಡುತ್ತಿದ್ದೇವೆ? ಎಂಬ ಪ್ರಶ್ನೆಯು ಭಾರತೀಯನಾದ ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡಬೇಕು. ಸಮಾಜದಲ್ಲಿ ನಾಗರೀಕ ಜವಾಬ್ದಾರಿಗಳ ಬಗ್ಗೆ ಅರಿವುಗೊಳ್ಳಬೇಕು. ಸ್ವಾತಂತ್ರ್ಯ ಪದವು ಅರ್ಥಗರ್ಭಿತವಾಗುವಂತೆ ದೇಶದ ಹಿತಕ್ಕಾಗಿ ದುಡಿಯಬೇಕು ಮತ್ತು ದೇಶ ಕೈಗೊಳ್ಳುವ ಪ್ರತಿಯೊಂದು ಹೆಜ್ಜೆ ಹೆಜ್ಜೆ ಅಭಿಯಾನದಲ್ಲೂ ಪಾಲ್ಗೊಂಡು ಸದೃಢ ಭಾರತದ ನಿರ್ಮಾಣದ ಬೃಹತ್ ಕಾರ್ಯಕ್ಕೆ ಕೈ ಜೋಡಿಸಿದಾಗ ಕನಸಿನ ಭಾರತವು ನನಸಾಗುವುದು.
- ವಿಜಯಲಕ್ಷ್ಮಿ. ಬಿ. ಕೆಯ್ಯೂರು.
ಪತ್ರಿಕೋದ್ಯಮ ವಿದ್ಯಾರ್ಥಿನಿ.
ವಿವೇಕಾನಂದ ಮಹಾವಿದ್ಯಾಲಯ ನಗರ ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ