ಅಕ್ಷರ ಆರಾಧನೆ- 25: ಸಾಧು ಪುರುಷರ ಪಾದಧೂಳಿ

Upayuktha
0

 || ಭಗಾಂತರ್ಗತ  ಶ್ರೀ ಸಂಕರ್ಷಣಾಯ ನಮಃ||



ದ್ವಾರಕಾ ಶ್ರೀಕೃಷ್ಣನ ರಾಜಧಾನಿಯಾಗಿತ್ತು. ಪ್ರಜೆಗಳು ಸಂತಸದಿಂದ ಇದ್ದರು. ಒಮ್ಮೆ ನಾರದರು ಅಲ್ಲಿಗೆ ಬರುತ್ತಾರೆ. ಕೃಷ್ಣ ಪೂಜೆಯನ್ನು ಮಾಡುತ್ತಿದ್ದಾನೆಂದೂ ಅದಕ್ಕಾಗಿ ಸ್ವಲ್ಪ ಸಮಯ ಕಾಯಬೇಕೆಂದೂ ಸೇವಕರು ನಾರದರಿಗೆ ತಿಳಿಸಿದರು. ನಾರದರಿಗೆ ಆಶ್ಚರ್ಯವಾಯಿತು. ದೇವರದೇವ ಶ್ರೀಕೃಷ್ಣನು ಯಾರ ಪೂಜೆಯಲ್ಲಿದ್ದಾನೆ? ನಾರದರ ಕುತೂಹಲ ಹೆಚ್ಚಾಯಿತು. ಶ್ರೀಕೃಷ್ಣನು ಪೂಜೆಯನ್ನು ಮುಗಿಸಿಕೊಂಡು ಬಂದನು. ನೀನು ಪೂಜಿಸುವ ''ವಸ್ತು''ವನ್ನು ನೋಡುವ ಆಸೆ ನನಗಾಗಿದೆ ಎಂದರು ನಾರದರು. ಶ್ರೀಕೃಷ್ಣನು ಮುಗುಳು ನಗೆ ಬೀರದನು. ನಾರದರನ್ನು ಕರೆದಕೊಂಡು ಪೂಜಾಗೃಹಕ್ಕೆ ಕೃಷ್ಣನು ಬಂದನು. ಪೂಜಾಗೃಹದಲ್ಲಿ ಒಂದು ದೊಡ್ಡದಾದ ಪೆಟ್ಟಿಗೆಯನ್ನು ನಾರದರು ನೋಡಿದರು. ಕೃಷ್ಣನು ಆ ಪೆಟ್ಟಿಗೆಯನ್ನು ತೆರೆದನು. ಅದರ ಒಳಗೆ ಇನ್ನೊಂದು ಪೆಟ್ಟಿಗೆಯು ಕಂಡಿತು. ಕೃಷ್ಣನು ಆ ಪೆಟ್ಟಿಗೆಯನ್ನು ತೆಗೆದನು. ಅದರ ಒಳಗೆ ಇನ್ನೊಂದು ಪೆಟ್ಟಿಗೆಯು ಕಂಡಿತು. ಕೃಷ್ಣನು ಆ ಪೆಟ್ಟಿಗೆಯನ್ನು ತೆಗೆದನು. ಅದರ ಒಳಗೆ ಇನ್ನೊಂದು ಪೆಟ್ಟಿಗೆಯಿತ್ತು. ನಾರದರಿಗೆ ಪರಮಾಶ್ಚರ್ಯವಾಯ್ತು. ಹೀಗೆ ಒಂದರ ಒಳಗೊಂದು ಏಳು ಪೆಟ್ಟಿಗೆಗಳು ಕಂಡವು. ಏಳನೇಯ ಪೆಟ್ಟಿಗೆಯನ್ನು ಶ್ರೀಕೃಷ್ಣನು ತೆರೆದನು. ಆಗ ಅದರಲ್ಲಿ ಒಂದು ಸುಂದರವಾದ ಬಂಗಾರದ ಪೆಟ್ಟಿಗೆಯಿತ್ತು. ಅದನ್ನೂ ಕೃಷ್ಣನು ತೆರೆದನು. ಆಗ ಅದರಲ್ಲಿ ಸ್ವಲ್ಪ ಮಣ್ಣು ಕಂಡಿತು. ನಾರದರು ಇದೇನೆಂದು ಆಶ್ಚರ್ಯದಿಂದ ಶ್ರೀಕೃಷ್ಣನಿಗೆ ಕೇಳಿದರು. ಕೃಷ್ಣನು ಮಂದಹಾಸದಿಂದ ಹೀಗೆ ನುಡಿದನು- ``ನನಗೆ ಅನುಗ್ರಹಿಸಿದ ಸಾಧುಸಂತರ ಪಾದಧೂಳಿ ಇದು. ಅವರ ಆಶೀರ್ವಾದದಿಂದ ನಾನು ರಾಜವೈಭೋಗವನ್ನು ಅನುಭವಿಸುತ್ತಿರುವೆ. ನಿತ್ಯ ತಪ್ಪದೇ ಈ ಪಾದಧೂಳಿಯನ್ನು ನಾನು ಪೂಜಿಸುತ್ತಿರುವೆ''. ನಾರದರು ಶ್ರೀಕೃಷ್ಣನಿಗೆ ಏನು ಹೇಳಬೇಕೆಂದು ತಿಳಿಯದೇ ಮೂಕ ವಿಸ್ಮಿತರಾದರು. ಶ್ರೀಕೃಷ್ಣನು ತಿಳಿಸಿದ ಸಾಧುಸಂತರ ಪಾದಧೂಳಿಯ ಮಹಿಮೆ ಮಾತ್ರ ವಿನೂತವಾಗಿತ್ತು ! 

ಶ್ರೀಕೃಷ್ಣನ ವೈವಾಹಿಕ ಜೀವನದ ಬಗ್ಗೆ ಅನೇಕರಿಗೆ ಸಂತೋಷವಾದರೆ, ಕೆಲವರಿಗೆ ಕುತೂಹಲ, ಇನ್ನೂ ಕೆಲವರಿಗೆ ಈ ಸಂಸಾರದ ಗುಟ್ಟು ರಟ್ಟು ಮಾಡುವ ದುಷ್ಟ ಯೋಚನೆ. ನಾರದರಿಗೆ ಈ ಎಲ್ಲ ವಿಷಯಗಳು ತಿಳಿಯದೇ ಇರಲಿಲ್ಲ. ಆಗಲಿ ಪರೀಕ್ಷಿಸಿಯೇ ಬಿಡೋಣವೆಂದು ನಿರ್ಧರಿಸಿ ದ್ವಾರಕೆಯತ್ತ ಪ್ರಯಾಣ ಬೆಳೆಸಿದರು ನಾರದ ಮಹರ್ಷಿಗಳು. ಲೋಕ ವಂದ್ಯನಾದ ಭಗವಂತನ ಲೀಲೆಯನ್ನು ಅರಿತು ಅನುಭವಿಸಿ ಸಂತೋಷಿಸುವುದೇ ಒಂದು ಸೌಭಾಗ್ಯವಲ್ಲವೇ?

ದ್ವಾರಕೆಗೆ ಬಂದ ನಾರದರು ಮೊದಲು ಬಂದದ್ದು ರುಕ್ಮಿಣಿಯ ಅರಮನೆಗೆ. ಬ್ರಾಹ್ಮೀಕಾಲ, ಪ್ರಶಾಂತ ವಾತಾವರಣ. ನಾರದರು ರುಕ್ಮಿಣಿಯ ಅರಮನೆ ಕದ ತಟ್ಟಿದರು ಗೋವಿಂದನ ಸ್ಮರಿಸುತ್ತ. ಬಾಗಿಲು ತೆರೆಯಿತು. ಲೋಕಮಾತೆ ರುಕ್ಮಿಣಿಯೇ ಎದುರು ಕಂಡಳು. ``ಸ್ವಾಮಿ ಏನು ಮಾಡುತ್ತಿದ್ದಾರೆ?'' ನಾರದರ ಪ್ರಶ್ನೆ. ``ಬನ್ನಿ ಒಳಗೆ ದೇವರ ಮನೆಯಲ್ಲಿ ಇದ್ದಾರೆ" ಎಂದಳು ತಾಯಿ ರುಕ್ಮಿಣಿ. `ಉತ್ತಿಷ್ಟೋತ್ತಿಷ್ಟ ಗೋವಿಂದ..' ಎಂಬ ಕೃಷ್ಣನ ವಾಣಿಯು ನಾರದ ಕಿವಿಗೆ ಬಿತ್ತು. ಆಯಿತು ಬರುತ್ತೇನೆಂದು ನಾರದರು ಮುಂದಿನ ಮನೆಗೆ ಹೊರಟರು. ಅಲ್ಲಿಗೆ ಬರುವಷ್ಟರಲ್ಲಿ ಸ್ವಲ್ಪ ಸಮಯ ಕಳೆದಿತ್ತು. ಸತ್ಯಭಾಮಂಳ ಅರಮನೆಗೆ ಬಂದು ನಾರದರು ಅದೇ ಪ್ರಶ್ನೆ ಮಾಡಿದರು. ದೇವರ ಪೂಜೆಯಲ್ಲಿದ್ದಾರೆ ಎಂದಳು ಸತ್ಯಭಾಮೆ. ನಾರದರು ದೇವರ ಮನೆಯಲ್ಲಿ ಇಣುಕಿಹಾಕಿ ನೋಡಿದರು. ಕೃಷ್ಣನು ಪೂಜೆ ಮಾಡುವುದು ಕಂಡಿತು. ಮಧ್ಯ ಮಧ್ಯೆ ಕೆಲವು ಮನೆಗಳನ್ನು ಬಿಟ್ಟು ಪರೀಕ್ಷಿಸಲು ನಾರದರು ನಿರ್ಧರಿಸಿದರು. ಒಂದು ಮನೆಗೆ ಬಂದಾಗ (ಅದೂ ಅರಮನೆಯೇ) ಅಲ್ಲಿ ಕೃಷ್ಣನು ತನ್ನ ಮಕ್ಕಳಿಗೆ ಪಾಠ ಹೇಳುತ್ತಿದ್ದ. ಇನ್ನೊಂದು ಮನೆಯಲ್ಲಿ ಫಲಹಾರವನ್ನು ಸ್ವೀಕರಿಸುತ್ತಿದ್ದ. ಮತ್ತೊಂದು ಮನೆಯಲ್ಲಿ ಮಕ್ಕಳಿಗೆ ಶಸ್ತ್ರಾಭ್ಯಾಸ ಹೇಳಿಕೊಡುತ್ತಿದ್ದ. ಇನ್ನೊಂದು ಮನೆಯಲ್ಲಿ ಊಟವನ್ನು ಮಾಡುತ್ತಿದ್ದ. ಮತ್ತೊಂದು ಮನೆಗೆ ಹೋದಾಗ ಅಲ್ಲಿ ಕೃಷ್ಣ ವಿಶ್ರಾಂತಿಯನ್ನು ಪಡೆಯುತ್ತಿರುವುದನ್ನು ನಾರದರು ಕಂಡರು. ಇನ್ನೊಂದು ಮನೆಯಲ್ಲಿ ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳಿಸಿಕೊಡುತ್ತ ಕಣ್ಣೀರು ಹಾಕುತ್ತಿದ್ದ ಕೃಷ್ಣ. ನಾರದರು ಅವನನ್ನು ಸಮಾಧಾನ ಪಡಿಸಿದರು! ಹೀಗೆ ಪ್ರತಿಯೊಂದು ಮನೆಯಲ್ಲೂ ಕೃಷ್ಣನ ವಿವಿಧ ಕಾರ್ಯಗಳನ್ನು ಕಂಡು ನಾರದರು ಸಂತಸ ಹೊಂದಿದರು. ಕೋಟ್ಯಾವಧಿ ಜೀವರಾಶಿಗಳಲ್ಲೂ ಒಂದೊಂದು ರೂಪದಲ್ಲಿ ಇರುವ ಭಗವಂತನಿಗೆ ಹದಿನಾರು ಸಾವಿರ ನೂರೆಂಟು ರೂಪ ತಾಳುವುದು ಅಸಾಧ್ಯವೇ? ಭಗವಂತನ ಲೀಲೆಯನ್ನು ಎಷ್ಟು ಕೊಂಡಾಡಿದರೂ ಅವನ ಭಕ್ತರಿಗೆ ತೃಪ್ತಿಯಿಲ್ಲ. ಅಂಥ ಭಕ್ತರ ಸಂಗ ನಿತ್ಯ ನಮಗೆ ದೊರೆಯಲಿ. 

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top