ಅವರ ಹೆಸರು ಮಾಧವ ನಾವಡ. ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನಲ್ಲಿರುವ ಬಾಕ್ರಬೈಲಿನ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ದಶಕಗಳ ಕಾಲ ಪಾಠಮಾಡಿ ನಿವೃತ್ತರಾಗಿ ಈಗ ಮಂಗಳೂರಿನ ರಾತ್ರಿ ಶಾಲೆಯಲ್ಲೂ ಪಾಠ ಮಾಡುತ್ತಿದ್ದಾರೆ. ಅನೇಕರು ಬದುಕಲು ನಾಲ್ಕು ಅಕ್ಷರ ಕಲಿಸುತ್ತಾರೆ. ಆದರೆ ಇವರು ಬದುಕನ್ನೇ ನಾಲ್ಕು ಅಕ್ಷರದಲ್ಲಿ ಕಲಿಸಿದವರು.
"ಯಕ್ಷಗಾನ." ಆಗೆಲ್ಲಾ ಅನುದಾನಿತ ಶಾಲೆಗಳಲ್ಲಿ ಶಾಲಾ ವಾರ್ಷಿಕೋತ್ಸವ ಎಂದಾಗ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ ಹೊಸ ರಾಜ್ ಕುಮಾರ್ ಸಿನೆಮಾ ಹಾಡುಗಳಿಗೆ ಕುಣಿಯುತ್ತಿದ್ದ ಮಕ್ಕಳನ್ನು ಯಕ್ಷಗಾನದ ತಾಳಕ್ಕೆ ಹೆಜ್ಜೆಹಾಕುವ ಹಾಗೆ ಮಾಡಿದ ಇವರು ಸಾಮಾನ್ಯ ವ್ಯಕ್ತಿ ಎಂದನಿಸಬಹುದು. ಆದರೆ 1988 ರಿಂದ 2016 ರ ವರೆಗೆ ಇಡಿಯ ಬಾಕ್ರಬೈಲು ಎಂಬ ಹಳ್ಳಿಯಲ್ಲಿ ಇವರು ಸೃಷ್ಟಿಸಿದ ಕಲಾವಿದರ ಸಂಖ್ಯೆ ನೂರಕ್ಕೂ ಅಧಿಕ. ಅದು ಯಾವುದೇ ಯಕ್ಷಗಾನದ ತರಬೇತಿಯನ್ನು ವರ್ಷಗಟ್ಟಲೆ ನಡೆಸಿ ಅಲ್ಲ ಕೇವಲ ವರ್ಷದಲ್ಲಿ ಒಂದು ತಿಂಗಳ ತಾಲೀಮಿನಲ್ಲಿ. ಯಕ್ಷರಂಗದಲ್ಲಿ ಹಿರಣ್ಯಾಕ್ಷ ಎಂದು ಕರೆಸಿಕೊಳ್ಳುವ ಇವರು ಒಂದನೇ ಕ್ಲಾಸಿನ ಮಗು ಸಹಿತ ಇವರ ಅದೇ ಒಂದು ತಿಂಗಳ ತರಬೇತಿಯಲ್ಲಿ ಯಕ್ಷಗಾನ ವೇಷ ಮಾಡಿದೆ ಎಂದರೆ ಅವರ ಸಾಮರ್ಥ್ಯ ಎಂತಹದ್ದಿರಬಹುದು.
ಸಾಮಾನ್ಯವಾಗಿ ಒಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಕ ಆ ಊರಿಗೆ ಏನು ಮಾಡಬಹುದು ಆದರೆ ಇವರು ಊರಿನಲ್ಲಿದ್ದ ಸೂರ್ಯೇಶ್ವರ ಕಲಾವೃಂದ ಎನ್ನುವ ಕಲಾ ಸಂಘಟನೆಗೆ ಪ್ರತೀ ವರ್ಷ ಹತ್ತಾರು ಕಲಾವಿದರನ್ನು ನೀಡಿದವರು. ಇವರಿಂದ ತರಬೇತಿ ಪಡೆದ ಅನೇಕರು ಇಂದು ಬೇರೆ ಬೇರೆ ಯಕ್ಷಗಾನ ಮೇಳಗಳಲ್ಲಿ ಪ್ರಸಿದ್ದ ಕಲಾವಿದರಾಗಿದ್ದಾರೆ. ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ನಿರ್ದೇಶಕರಾಗಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇವರು ಮಕ್ಕಳಿಗೆ ಕೇವಲ ಯಕ್ಷಗಾನ ಅಷ್ಟೇ ಅಲ್ಲ ಹರಿಕಥೆ, ನಾಟಕ, ಏಕಪಾತ್ರಾಭಿನಯ ಮುಂತಾದ ಸಾಂಸ್ಕೃತಿಕ ಜಗತ್ತಿನ ವಿಸ್ಮಯಗಳನ್ನು ಪರಿಚಯಿಸಿದವರು. ಸಮಾಜ ವಿಜ್ಞಾನವನ್ನೂ ರಸವತ್ತಾಗಿ ಹೇಳುತ್ತಿದ್ದ ಇವರು ಬಾಲಕಲೋತ್ಸವದಲ್ಲಿ ಶಾಲೆಗೆ ಮಕ್ಕಳ ಮೂಲಕ ತಂದು ಕೊಟ್ಟ ಪ್ರಶಸ್ತಿಗಳು ಅಗಣಿತ.
ಬಹುಶಃ ಇಂತಹ ಅಧ್ಯಾಪಕರು ಇಂದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಆದರೆ ಇವರು ಸೃಷ್ಟಿಸಿದ ಶಿಷ್ಯವರ್ಗ ಇವರ ಸೇವೆಯನ್ನು ಮುಂದುವರೆಸುತ್ತದೆ ಎನ್ನುವುದು ನೂರಕ್ಕೆ ನೂರು ಸತ್ಯ.
-ಲತೇಶ್ ಸಾಂತ
ಅಂತಿಮ ಬಿ.ಎ ಪತ್ರಿಕೋದ್ಯಮ
ವಿ.ವಿ. ಕಾಲೇಜು ಮಂಗಳೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ