ಮಂಗಳೂರು: ತುಳು ಭಾಷೆಯನ್ನು ನಾವು ತುಳುವರೇ ಮರೆತರೆ ಭಾಷಾ ಬೆಳವಣಿಗೆ ನಡೆಯದು. ಬೇರೆ ಬೇರೆ ಭಾಷೆಗಳನ್ನು ಕಲಿತರೂ ಮಾತೃ ಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೆ ನಾವೇ ತಲಪಿಸಬೇಕು. ಹಾಗಾದಾಗ ಮಾತ್ರ ಭಾಷೆಗೊಂದು ಸ್ಥಿರತೆ ಬರುತ್ತದೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ವಾಸಿಸುವಾಗಲೂ ತುಳು ಪ್ರೀತಿ ತೌಳವ ಮಂದಿಗಳೂ ಆಡುವಂತಾಗುತ್ತದೆ. ಅದಕ್ಕೆ ಬೇಕಾಗುವ ತುಳು ಕೃಷಿಯನ್ನು ಬಂಗಾರ್ ಪರ್ಬದ ಸಂಭ್ರಮಾಚರಣೆಯನ್ನು ನಡೆಸುತ್ತಿರುವ ಕುಡ್ಲದ ಈ ತುಳು ಕೂಟ ಜನ ಜಾಗ್ರತಿಯನ್ನು ಮಾಡುತ್ತಾ ಬರುತ್ತಿದೆ ಎಂದು ಶರವು ಶ್ರೀ ಮಹಾಗಣಪತಿ ದೇವಸ್ಥಾನ ಆಡಳಿತ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರೀ ಹೇಳಿದರು.
ಅವರು ಶ್ರೀಕ್ಷೇತ್ರ ಶರವಿನ ಧ್ಯಾನಮಂದಿರದಲ್ಲಿ ನಡೆದ ತುಳುಕೂಟದ ಸರಣಿ ಕಾರ್ಯಕ್ರಮದ ದೀಪ ಬೆಳಗಿಸಿ ಮಾತನಾಡಿದರು. ಶ್ರೀಕ್ಷೇತ್ರದಲ್ಲೂ ತುಳುವಿಗೆ ಸಂಬಂಧಪಟ್ಟಂತೆ ಅನೇಕ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ತುಳುತೇರನ್ನು ಎಳೆಯೋಣ ಎ೦ದು ನುಡಿದರು.
ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಬ್ಯಾಂಕಿನ ಸಹಕಾರ ರತ್ನ ಬಿರುದಾಂಕಿತ ಚಿತ್ರರಂಜನ್ ಬೋಳಾರರವರು ತುಳು ಕಾರ್ಯಕ್ರಮ ಮತ್ತು ಸಂಘಟನೆಯ ಕಾರ್ಯಕ್ರಮಗಳಿಗೆ ನಮ್ಮ ಬ್ಯಾಂಕ್ ಪೂರ್ಣ ಸಹಕಾರ ನೀಡುತ್ತದೆ. ತುಳುಕೂಟದ ತುಳು ಬುಳೆಚ್ಚಿಲ್ನ ಕಾರ್ಯಕ್ರಮದ ಸರಣಿಗೆ ಶುಭ ಹಾರೈಸುತ್ತೇನೆ ಎಂದರು.
ಅಧ್ಯಕ್ಷ ದಾಮೋದರ ನಿಸರ್ಗರು ತುಳುಕೂಟದ ಧ್ಯೇಯೋದ್ದೇಶಗಳನ್ನು ಪ್ರಸ್ತಾವಿಸುತ್ತಾ ಸರ್ವ ತುಳುವರ ಸಹಕಾರವನ್ನು ಕೋರಿದರು. ಹಿರಿಯ ನ್ಯಾಯವಾದಿಗಳಾದ ಕೆ. ಮಹಾಬಲ ಶೆಟ್ಟಿಯವರು ಹರಿಕಥೆಯಲ್ಲಿ ತುಳು ಸಾಹಿತ್ಯ ಎಂಬ ಬಗ್ಗೆ ಉಪನ್ಯಾಸವಿತ್ತರು. ಯುಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ಯಕ್ಷಗಾನದಲ್ಲಿ ತುಳು ಪ್ರಸಂಗ ಹಾಗೂ ತುಳು ಭಾಷೆಯ ಬಗ್ಗೆ ವಿಷದವಾಗಿ ವಿವರಿಸಿದರು.
ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಹಾಗೂ ಹೇಮಾ ನಿಸರ್ಗ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಲ. ಜೆ.ವಿ.ಶೆಟ್ಟಿ ಸ್ವಾಗತಿಸಿದರು. ಖಚಾಂಚಿ ಚಂದ್ರಶೇಖರ ಸುವರ್ಣರು ಧನ್ಯವಾದವಿತ್ತರು. ಗೋಪಾಲಕೃಷ್ಣ ಪಿ.ರಮೇಶ ಕುಲಾಲ್ ಬಾಯಾರು ದಿನೇಶ್ ಕುಂಪಲ, ಡಾ. ರಾಕೇಶ್ ಕುಮಾರ್, ಬಿ. ಉಪಸ್ಥಿತರಿದ್ದರು.
ಬಳಿಕ ಪುಷ್ಕಳ ಕುಮಾರ್ ತೋನ್ಸೆಯವರಿಂದ ಸೀತೆನ ಮದ್ಮೆ ಎಂಬ ತುಳುಹರಿಕಥೆ ನಡೆಯಿತು. ಅಶೋಕ್ ಬೋಳೂರು, ಶಿವಪ್ರಸಾದ್ ಪ್ರಭು, ವಿಘ್ನೇಶ್ ಶೆಟ್ಟಿ ಬೋಳೂರು, ಧೀರಜ್ ಆಚಾರ್ಯ. ದಯಾನಂದ ಜಿ.ಕತ್ತಲ್ಸಾರ್, ಸದಾಶಿವ ಆಳ್ವ ತಲಪಾಡಿ, ಪುಷ್ಪರಾಜ್ ಕುಕ್ಕಾಜೆಯವರ ತಂಡದಿಂದ ಕಾರ್ನಿಕೊ ದ ಕೊರಗಜ್ಜೆ ಎಂಬ ತುಳು ಸಂವಾದ ತಾಳಮದ್ದಲೆ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ