ಹೆಚ್ಚೆಂದರೆ ಇದು 8ನೇ ತಿಂಗಳು ಪ್ರಾರಂಭವಾಗುತ್ತಾ ಬಂತು ಇದೊಂದು ನೆಪ ಅದರಲ್ಲೊಂದು ನೆನಪು. ನೆನಪಿನಲ್ಲೊಂದು ಕಾಡುವ ನೋವು. ಕಣ್ಣೆರಡಕ್ಕೂ ಕಾತುರ ಕಣ್ತುಂಬಿಕೊಳ್ಳಲು, ನಾ ನಾಡುವ ಪ್ರತಿ ಮಾತುಗಳು ನನ್ನಲ್ಲೇ ಭಯ ಹುಟ್ಟಿಸುತ್ತಿದೆ. ಇದೊಂದು ನನ್ನದೇ ಆಯ್ಕೆ, ನನ್ನ ಯಶಸ್ಸಿನ ಹಾದಿಗೆ ಇದೊಂದು ಹೆಜ್ಜೆ ಮಾತ್ರ. ಆಸೆಯೆಂದೇ ನನ್ನದೇ ನಿರ್ಧಾರದೊಂದಿಗೆ ದೂರದಲ್ಲೊಂದು ಊರಿಗೆ ಬಂದು ಓದುತ್ತಿರುವೆ. ಆದರೆ ಇದೆಲ್ಲವೂ ನನ್ನ ಹಸಿವನ್ನು ನೀಗಿಸಿ ಉಸಿರನ್ನು ನೀಡುತ್ತಿದೆ. ಇದೆಲ್ಲದರ ಮಧ್ಯೆ ಕಾಡುವ ನೆನಪೊಂದೇ ಅದು ಅವನು. ನನ್ನ ಬದುಕಿಗೆ ಉಸಿರಾದವನು, ನನ್ನ ಯಶಸ್ಸಿಗೆ ದಾರಿಯಾದವನು, ನನ್ನಲ್ಲಾ ನೋವಿಗೂ ಅವನದೊಂದು ನೆನಪು. ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು, ನನ್ನೆಲ್ಲಾ ಅಸ್ತಿತ್ವಕ್ಕೆ ಅವನೇ ರಾಯಭಾರಿ, ಅವನೇ ರೂವಾರಿ. ಮಾತಾಡುವ ಮಾತಿನಲ್ಲೂ ಪ್ರತಿದ್ವನಿಸುವ ಸ್ವರ ಅವನದು.
ಹೀಗೊಂದು ದಿನ ಕೋವಿಡ್ ಸಮಯ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವುದು ಒಂದು ಜವಾಬ್ದಾರಿ. ಆ ದಿನ ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ನಾನು ವ್ಯಾಕ್ಸಿನೇಷನ್ ಮಾಡಿಸಿಕೊಂಡು ಖುಷಿಯಲ್ಲಿ ಬಂದೆ. ಆ ದಿನ ರಾತ್ರಿ ಕಣ್ಮುಚ್ಚಿದರೂ ಕಣ್ತೆರೆದರೂ ಬಿಸಿ, ದೇಹದ ಸುತ್ತಮುತ್ತ ಅದೊಂದು ಕೆಂಡಾಮಂಡಲದ ಭಾವ. ಈ ನನ್ನ ಏರಿಳಿತದ ನಡುವೆ ಬಂದದ್ದು ಅವನು, ನನ್ನ ತಲೆಗೆ, ಅಂಗಾಲಿಗೆ ಎಣ್ಣೆ ಸವರಿ, ಮಸಾಜ್ ಮಾಡಿ ನನಗೊಂದು ಕಾಳಜಿಯ ನಗು ನೀಡಿ ಹೋದದ್ದು ಅವನು.
ತನ್ನ ಭುಜದ ಮೇಲೆ ಕೂರಿಸಿಕೊಂಡು ಜಗತ್ತಿನಲ್ಲಿರುವ ಪ್ರತಿಯೊಂದು ರೀತಿಯ ಬಾಗಿಲನ್ನು ತೋರಿಸಿ, ನನ್ನನ್ನು ಯಶಸ್ಸಿನ ಬಾಗಿಲೊಳಗೆ ಬಿಟ್ಟು ತನ್ನ ಯಶಸ್ಸನ್ನು ಕಾಣುವ ಜೀವಿಯದು.ದೂರದಲ್ಲಿರುವ ಜೀವದ ನಗುವನ್ನು ಕಣ್ಮುಚ್ಚಿಯೇ ನೆನೆದು ಕಣ್ತುಂಬಿಕೊಳ್ಳುತ್ತಿರುವೆ! ಬಾಡಿಗೆ ನಗುವೊಂದನ್ನು ಹೊತ್ತು ತಿರುಗುತ್ತಿರುವ ನನಗೆ ಅವನ ಸ್ವಂತಿಕೆಯ ನಗುವೊಂದು ಬೇಕಾಗಿದೆ.
ಮಿಸ್ ಯು ಅಪ್ಪಾ
ಅಮ್ಮ ನನ್ನ ಹಸಿವಾದರೆ ಅಪ್ಪ ನನ್ನ ಉಸಿರು ನನ್ನೆಲ್ಲಾ ಕನಸಿಗೂ ಉಸಿರು ತುಂಬಿಸಿ ಸ್ಫೂರ್ತಿ ನೀಡುವುದು ಅವನು...
ಅವನು ಅವನೇ ನನ್ನ ಅಪ್ಪಾ
-ಪ್ರಿಯದರ್ಶಿನಿ ಮುಜಗೊಂಡ
ಆಳ್ವಾಸ್ ಕಾಲೇಜು, ಮೂಡುಬಿದಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ