ಸಂಬಂಧ ಎನ್ನುವುದು ಮನುಷ್ಯರ ನಡುವೆ ಬಹಳ ಮುಖ್ಯ. ತಾಯಿ ಮತ್ತು ಮಕ್ಕಳ ನಡುವಿರುವ ಸಂಬಂಧ, ಅಜ್ಜ-ಅಜ್ಜಿ ಮೊಮ್ಮಕ್ಕಳ ನಡುವಿನ, ಅಣ್ಣ-ತಂಗಿ, ಅಕ್ಕ-ತಮ್ಮ, ಗೆಳೆಯ-ಗೆಳತಿ ಹೀಗೆ ಅನೇಕ ವಿಧದ ಸಂಬಂಧಗಳಿವೆ. ಒಂದು ಒಳ್ಳೆಯ ಸಂಬಂಧವಿರಬೇಕಾದರೆ ನಮ್ಮ ನಡುವೆ ಪೀತಿ-ಕಾಳಜಿ, ನಂಬಿಕೆಗಳಿರಬೇಕು. ಮಾತ್ರವಲ್ಲ ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುವ ತಾಳ್ಮೆ ನಮ್ಮಲ್ಲಿರಬೇಕು. ಒಬ್ಬರಲ್ಲಿ ನಾವು ಒಂದು ಒಳ್ಳೆಯ ಸಂಬಂಧವನ್ನು ಬೆಳೆಸಿಕೊಂಡರೆ ಅದನ್ನು ಕಾಪಾಡಿಕೊಳ್ಳುವಂತಹ ಮನಸ್ಸು ನಮ್ಮದಾಗಿರಬೇಕು. ನಮ್ಮ ಸಂಬಂಧಗಳು ಬಲವಾಗಿದ್ದರೆ ನಮಗೊಂದು ಹೊಸ ಲೋಕವನ್ನು ಸೃಷ್ಟಿಸಬಹುದು ಮಾತ್ರವಲ್ಲ ಸಂಬಂಧದ ಮಹತ್ವವನ್ನು ತಿಳಿದುಕೊಳ್ಳಬಹುದು. ನಮ್ಮೆಲ್ಲರ ಜೀವನದಲ್ಲಿ ಸಂಬಂಧ ಎನ್ನುವುದು ಮುಖ್ಯ.
ಹಾಲಿಗೆ ಹುಳಿ ಸೇರಿದಾಗ ಅದು ಹೇಗೆ ಹಾಳಾಗುತ್ತದೆಯೋ ನಮ್ಮ ಸಂಬಂಧದಲ್ಲಿ ಅಸೂಯೆ ಎಂಬ ಹುಳಿ ಸೇರಿದರೆ ನಮ್ಮ ಸಂಬಂಧಗಳು ಕೂಡ ಹಾಳಾಗುತ್ತದೆ. ಅದರಿಂದ ನಮ್ಮ ಸಂಬಂಧವನ್ನು ನಾವು ಎಷ್ಟು ಜೋಪಾನ ಮಾಡುತ್ತವೆಯೋ ಅಷ್ಟು ಒಳ್ಳೆಯದು. ಉದಾಹರಣೆಗೆ ನಾವು ಒಂದು ಸಣ್ಣ ಗಿಡಕ್ಕೆ ಅದಕ್ಕೆ ಬೇಕಾದಷ್ಟು ನೀರು, ಗೊಬ್ಬರವೆಲ್ಲಾ ಸೇರಿಸುತ್ತೆವೆಯೋ ಅದು ಚೆನ್ನಾಗಿ ಬೆಳೆದು ಹಣ್ಣು ಕೊಡುವವರೆಗೂ ಹೇಗೆ ಜೋಪಾನವಾಗಿ ಬೆಳೆಸುತ್ತೆವೆಯೋ ಹಾಗೆ ನಮ್ಮ ಸಂಬಂಧಗಳನ್ನು ಕೂಡ ಗಿಡದಂತೆ ಜೋಪಾನವಾಗಿ ಬೆಳೆಸಿ ಮಹತ್ತರವಾಗಿ ಎತ್ತರದ ಮರದಂತೆ ಬೆಳೆಸಬೇಕು. ಬದಲಾಗಿ ಬೆಳೆದ ಮರವನ್ನು ಕಡಿಯುವ ಕಟುಕರಂತೆ ಸಂಬಂಧ ಕೆಡಿಸುವ ಸ್ವಾರ್ಥಿಗಳಾಗಬಾರದು.
ಸಂಬಂಧವೆನ್ನುವುದು ನಮ್ಮೆಲ್ಲರ ಜೀವನಕ್ಕೆ ಒಂದು ಮಹತ್ತರವಾಗಿರುವ ಮೇಲುಗೈ. ಅದನ್ನು ನಾವು ಗಾಜಿನಂತೆ ಸೂಕ್ಷ್ಮದಿಂದ ನೋಡಿಕೊಳ್ಳಬೇಕು. ಒಂದು ಚೂರು ಯಾಮಾರಿದರು ಆ ಗಾಜು ಚೂರು ಚೂರಾಗಬಹುದು. ಹಾಗೆಯೇ ನಮ್ಮ ಸಂಬಂಧ ಕೂಡ ಅದನ್ನು ನಾವು ಎಷ್ಟು ಜೋಪಾನವಾಗಿ ಕಾಪಾಡುತ್ತೆವೆಯೋ ಅದು ಅಷ್ಟು ದಿನ ಉಳಿಯುತ್ತದೆ. ನಮ್ಮಿಂದ ಸಾಧ್ಯವಾದಷ್ಟು ಸಂಬಂಧಗಳನ್ನು ಉಳಿಸೋಣ ಮತ್ತು ಬೆಳೆಸೋಣ.
ಇದ್ದುದರಲ್ಲಿಯೇ ಸಂತೋಷ ಪಡುತ್ತಾ ಸಾಗಬೇಕೆ ಹೊರತು, ತನಗೊಲಿಯದಕ್ಕೆ ಮುನಿಸಿಕೊಂಡು ತನಗೆ ಇವರು ಕೊಡಿಸುವುದಿಲ್ಲ, ಇವರೊಂದಿಗೆ ಬಾಳಲು ಸಾಧ್ಯವಿಲ್ಲ ಎಂದು ನಿರ್ಧಾರ ತೆಗೆದುಕೊಳ್ಳುವುದರಿಂದ ಯಾವ ಪ್ರಯೋಜನವಿಲ್ಲ. ಜನರೆಂದ ಮೇಲೆ ಜಗಳ ಮನಸ್ತಾಪಗಳು ಸಹಜ. ಹಾಗಿರುವಾಗ ಪ್ರತಿಯೊಂದಕ್ಕೂ ಕೋಪಿಸಿಕೊಂಡು ದೂರವಾದರೇ ಎಲ್ಲಿ ಸಿಗುತ್ತದೆ ಸಂಬಂಧ ಒಲವು?
- ಆಶ್ರಿತ ಎಂ ಬಲ್ಲಾಳ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ