ಓಂ ಶ್ರೀರಾಮಾಯನಮ:
ಮಹರ್ಷಿ ವಾಲ್ಮೀಕಿಗಳು ಮಧ್ಯಾಹ್ನದ ಕ್ರಿಯೆಗಳಿಗಾಗಿ ತಮಸಾ ನದಿಗೆ ಹೋದರು.ಅಲ್ಲಿನ ಸ್ವಚ್ಛ ಸುಂದರ ಪರಿಸರದಲ್ಲಿ ಸಂತಸದಿಂದಿರುವಾಗ ಒಂದು ದುರ್ಘಟನೆ ನಡೆಯಿತು.ಎರಡು ಸುಂದರವಾದ ಗಂಡು ಹೆಣ್ಣು ಕ್ರೌಂಚ ಪಕ್ಷಿಗಳು ಅಲ್ಲಿ ಆನಂದದಿಂದ ವಿಹರಿಸುತ್ತಿದ್ದವು.ಕ್ರೂರನಾದ ಬೇಡನೊಬ್ಬ ನಿಷ್ಕರುಣೆಯಿಂದ ಗಂಡು ಹಕ್ಕಿಯನ್ನು ಬಾಣದಿಂದ ಹೊಡೆದುರುಳಿಸಿದನು.ಹೆಣ್ಣುಹಕ್ಕಿಯ ಅಳು ಮುಗಿಲು ಮುಟ್ಟಿತು.ಇದನ್ನು ಕಂಡು ಕರುಣೆಗೊಂಡ ವಾಲ್ಮೀಕಿ ಮಹರ್ಷಿಗಳು ಬೇಡನಿಗೆ- ವಿಹರಿಸುತ್ತಿದ್ದ ಕ್ರೌಂಚ ಪಕ್ಷಿಗಳಲ್ಲಿ ಗಂಡು ಹಕ್ಕಿಯನ್ನು ಹೊಡೆದುರುಳಿಸಿದ ನಿನಗೆ ಬಾಳಿನಲ್ಲಿ ಬಹುಕಾಲ ನೆಲೆ ಇಲ್ಲದಂತಾಗಲಿ -ಎಂದು ನೊಂದು ನುಡಿದರು.ಈ ಶೋಕವೇ ಶ್ಲೋಕ ರೂಪವಾಯಿತು-
ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀ ಸಮಾ:|
ಯತ್ಕ್ರೌಂಚಮಿಥುನಾದೇಕಮವಧೀ: ಕಾಮಮೋಹಿಮ್||
ಜೊತೆಯಲ್ಲಿದ್ದ ಶಿಷ್ಯ ಭಾರಧ್ವಾಜ ಇದನ್ನು ಕಂಠಪಾಠ ಮಾಡಿ ಗುರುಗಳಿಗೆ ಒಪ್ಪಿಸಿದನು.ನೋವಿನಿಂದಲೇ ಆಶ್ರಮಕ್ಕೆ ಬಂದ ಮಹರ್ಷಿಗಳು ಅದೇ ನೋವಿನ ಸ್ಥಿತಿಯಲ್ಲಿದ್ದರು.
ಆಗ ಬ್ರಹ್ಮನು ವಾಲ್ಮೀಕಿ ಮಹರ್ಷಿಗಳನ್ನು ಕಾಣಲು ಆಶ್ರಮಕ್ಕೆ ಬಂದನು.ಅಚ್ಚರಿಗೊಂಡ ಮಹರ್ಷಿಗಳು ಅವನನ್ನು ಪೂಜ್ಯ ಭಾವನೆಯಿಂದ ಪೂಜಿಸಿ ಸತ್ಕರಿಸಿದರು.ಮಹರ್ಷಿಗಳ ಅಂತರಂಗವನ್ನರಿತ ಬ್ರಹ್ಮನು ಅವರಿಗೆ ಈ ರೀತಿ ಹೇಳಿದನು- ಈ ಶ್ಲೋಕದ ಆಧಾರದಲ್ಲೇ ನೀನು ನಾರದನು ಹೇಳಿದ ರಾಮ ಚರಿತ್ರೆಯನ್ನು ವಿಸ್ತಾರವಾಗಿ ರಚಿಸು.ರಾಮ,ಲಕ್ಷ್ಮಣ,ಸೀತೆ,ರಾವಣ ಮುಂತಾದವರ ಎಲ್ಲಾ ವಿಚಾರಗಳು ನಿನಗೆ ತನ್ನಿಂದ ತಾನೇ ತಿಳಿಯುತ್ತದೆ.ನಿನ್ನಿಂದ ರಚಿಸಲ್ಪಟ್ಟ ಈ ರಾಮಾಯಣ ಕತೆಯು ಈ ಭೂಮಿ ಇರುವ ತನಕ ಇರುವುದು.ಲೋಕ ಪ್ರಿಯವಾಗುವುದು,ನೀನು ಸರ್ವಲೋಕಗಳಲ್ಲಿ ವಿಹರಿಸುವನಾಗುವೆ-ಎಂದು ಹೇಳಿ ಆಶೀರ್ವಾದ ಮಾಡಿ ಕಣ್ಮರೆಯಾದನು.
ವಾಲ್ಮೀಕಿ ಮಹರ್ಷಿಗಳು ಧ್ಯಾನಕ್ಕೆ ಕುಳಿತರು.ಧ್ಯಾನದಲ್ಲಿದ್ದಾಗ ಅವರಿಗೆ ಬ್ರಹ್ಮನ ಅನುಗ್ರಹದಿಂದಾಗಿ ಇಡೀ ರಾಮಾಯಣದ ಘಟನೆಗಳು ಕಣ್ಮುಂದೆ ಬಂದವು.ಅವುಗಳ ಆಧಾರದಲ್ಲಿ- ರಾಮನ ಹುಟ್ಟಿನಿಂದ ತೊಡಗಿ ವನವಾಸ, ರಾವಣ ವಧೆ, ಪಟ್ಟಾಭಿಷೇಕ ಸೀತಾಪರಿತ್ಯಾಗವೂ ಸೇರಿದಂತೆ ಎಲ್ಲವನ್ನೂ ಎಲ್ಲರೂ ಮೆಚ್ಚುವಂತೆ ಹಾಡಿ ಕುಣಿವಂತೆ ರಚಿಸಿದರು.
ನಾರದರು ಹೇಳಿದ ಕತೆ ಮೊದಲ ಮುನ್ನೋಟವಾದರೆ ಬ್ರಹ್ಮನು ಬಂದು ಹೋದ ಬಳಿಕ ವಾಲ್ಮೀಕಿ ಮಹರ್ಷಿಗಳಿಗೆ ಹೊಳೆದ ಕತೆ ಎರಡನೇ ಮುನ್ನೋಟ.ಇದರಲ್ಲಿ ಓದುಗರಿಗೆ ಇನ್ನೂ ಹೆಚ್ಚಿನ ಕಥಾವಿವರಣೆಯು ಸಿಗುತ್ತದೆ.ರಾಮಾಯಣ ಬಾಯಿಯಿಂದ ಬಾಯಿಗೆ ಹರಿದು ಬಂದ ಕತೆಯಾಗಿರಬೇಕು.ಆದುದರಿಂದ ಎಲ್ಲೂ ತಪ್ಪದಂತೆ ಕತೆಗಳು- ಘಟನೆಗಳು ಹಿಂದೆ ಮುಂದಾಗದಂತೆ ನಮ್ಮ ಈಗಿನ ಪುಸ್ತಕಗಳಲ್ಲಿ ಕಂಡು ಬರುವ ಪರಿವಿಡಿಯ ಸ್ಥಾನದಲ್ಲಿ ಇದು ನಿಂತಿದೆ ಎಂದು ಹೇಳಬಹುದು.
ಮುಂದೆ ವಾಲ್ಮೀಕಿ ಮಹರ್ಷಿಗಳು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿಂದ ಕೂಡಿದ,ಐನ್ನೂರು ಸರ್ಗಗಳಿಂದಲೂ, ಉತ್ತರ ಕಾಂಡವೂ ಸೇರಿದಂತೆ ಏಳುಕಾಂಡಗಳಲ್ಲಿ ಇರುವ ರಾಮಾಯಣವನ್ನು ರಚಿಸಿದರು.ಇದುವೇ ನಾವಿಂದು ಕೇಳುತ್ತಿರುವ ನೋಡುತ್ತಿರುವ ಎಲ್ಲಾ ರಾಮಾಯಣಗಳ ಮೂಲ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ