ಯಶಸ್ಸಿನ ನಾಗಾಲೋಟದಲ್ಲಿನ ಅಡೆತಡೆಗಳು

Upayuktha
0

ಕೆಲ ಜನರು ಅಯ್ಯೋ, ನಾನ್ ತುಂಬಾ ಕಷ್ಟಪಟ್ಟೆ ಆದ್ರೂ ಫಲ ಸಿಗಲಿಲ್ಲ ಆದರೆ ಅವರನ್ನು ನೋಡಿ ಎಷ್ಟು ಬೇಗ ಅವರು ಯಶಸ್ವಿ ಆಗ್ಬಿಟ್ರು ... ಎಲ್ಲದಕ್ಕೂ ಅದೃಷ್ಟ ಇರಬೇಕು ಎಂದು ದೂರುತ್ತಾರೆ. ಎಷ್ಟೋ ಬಾರಿ ಅವರು ದೂರುವ ರೀತಿ ನೋಡಿದರೆ ಅವರು ತುಂಬಾ ಶ್ರಮಪಟ್ಟಿರಲೇಬೇಕು ಎಂದೆನಿಸುವುದು ಸಹಜ. ಶ್ರಮ ಪಟ್ಟಿರುತ್ತಾರೆ ಕೂಡ ಆದರೆ ಅವರು ಮರೆಯುವ ಒಂದು ವಿಷಯ ತಮಗಿಂತಲೂ ಹೆಚ್ಚು ಶ್ರಮ ಪಡುವ ಇನ್ನೊಬ್ಬರು ಮತ್ತೊಬ್ಬರು ಇರಬಹುದು ಎಂದು ಯೋಚಿಸುವುದನ್ನು.. ಯಶಸ್ಸಿಗೆ ಯಾವುದೇ ಶಾರ್ಟ್ ಕಟಗಳಿಲ್ಲ. ಯಶಸ್ಸಿನ ಪಯಣ ರಾಜಮಾರ್ಗದಲ್ಲಿಯೆ.


ಇದಕ್ಕೆ ಉದಾಹರಣೆಯಾಗಿ ಒಂದು ಕಥೆ.... ಒಂದು ಸಾಮಿಲ್ಲಿಗೆ ಇಬ್ಬರು ಕಟ್ಟಿಗೆ ಕಡಿಯುವ ಕಾಯಕ ಮಾಡುವ ಸ್ನೇಹಿತರು ಬಂದು ಕೆಲಸ ಕೇಳುತ್ತಾರೆ. ದೈಹಿಕವಾಗಿ ಗಟ್ಟಿಮುಟ್ಟಾಗಿದ್ದ ಆ ಇಬ್ಬರನ್ನು ನೋಡಿದ ಸಾಮಿಲ್ಲಿನ ಒಡೆಯ ಅವರಿಬ್ಬರಿಗೂ ಕೆಲಸ ಕೊಡುತ್ತಾನೆ. ಅವರವರ ಕೆಲಸದ ಪ್ರಗತಿಯನ್ನು ನೋಡಿಕೊಂಡು ಪ್ರತಿಯೊಂದು ಮರದ ದಿಮ್ಮಿಗೆ ಇಂತಿಷ್ಟು ಹಣ ಎಂದು ನಿಗದಿಪಡಿಸುತ್ತಾನೆ.


ಇಬ್ಬರು ತಮ್ಮ ಕೊಡಲಿಗಳನ್ನು ಮಸೆದು ಕೆಲಸ ಪ್ರಾರಂಭಿಸುತ್ತಾರೆ. ಇಳಿ ಸಂಜೆಯ ಹೊತ್ತಿಗೆ ತಮ್ಮ ಕೆಲಸ ಪೂರೈಸಿದ ಸ್ನೇಹಿತರಿಬ್ಬರು ಒಂದೇ ತೂಕದ ಕಟ್ಟಿಗೆಗಳನ್ನು ಕಡಿದಿರುತ್ತಾರೆ.


ಮರುದಿನ ಯಥಾ ಪ್ರಕಾರ ಇಬ್ಬರೂ ಕೆಲಸಕ್ಕೆ ಬಂದಾಗ ಮೊದಲ ವ್ಯಕ್ತಿ ತನ್ನ ಕೊಡಲಿಯನ್ನು ಹರಿತವಾಗಿ ಮಸೆದು ಕಾರ್ಯಾರಂಭ ಮಾಡಿದರೆ, ಮತ್ತೊಬ್ಬ ಹಾಗೆಯೇ ಕಡಿಯಲು ಆರಂಭಿಸುತ್ತಾನೆ. ಮತ್ತೆ ಸಾಯಂಕಾಲದ ಹೊತ್ತಿಗೆ ಅವರಿಬ್ಬರ ಕಟ್ಟಿಗೆಗಳ ತುಣುಕುಗಳ ರಾಶಿ ನೋಡಿದಾಗ ಮೊದಲನೆಯ ವ್ಯಕ್ತಿಯ ಕಟ್ಟಿಗೆ ರಾಶಿ ಎರಡನೇ ವ್ಯಕ್ತಿಗಿಂತ ತುಸು ಹೆಜ್ಜೆ ಇರುತ್ತದೆ.


ಹೀಗೆಯೇ ಒಂದು ವಾರದ ಕಾಲ ಪ್ರತಿದಿನವೂ ಅವರಿಬ್ಬರೂ ಒಂದೇ ಸಮಯಕ್ಕೆ ಕಟ್ಟಿಗೆ ಕಡಿಯಲು ಬರುವುದು ಮೊದಲನೆಯವನು ಕೊಡಲಿಯನ್ನು ಮಸದು ಹರಿತವಾಗಿಸಿಕೊಂಡು ಕಟ್ಟಿಗೆ ಕಡಿಯಲು ಆರಂಭಿಸುವುದು ಎರಡನೆಯವನು ಹಾಗೆಯೇ ಕಟ್ಟಿಗೆ ಕಡಿಯಲು ಆರಂಭಿಸುವುದು ನಡೆಯುತ್ತದೆ. ಮೊದಲನೆಯ ವ್ಯಕ್ತಿಯ ವ್ಯಕ್ತಿಯು ಕಡಿದ ಕಟ್ಟಿಗೆಯು ನಿರಂತರವಾಗಿ ಒಂದೇ ತೂಕವನ್ನು ಪ್ರತಿದಿನವೂ ಹೊಂದಿದ್ದರೆ, ಎರಡನೆಯ ವ್ಯಕ್ತಿಯ ಕಡಿದ ಕಟ್ಟಿಗೆಯು ನಿರಂತರವಾಗಿ ಇಳಿಕೆಯನ್ನು ಕಂಡಿದ್ದು ವಾರದ ಕೊನೆಯ ದಿನಕ್ಕೆ ಅತ್ಯಂತ ಕಡಿಮೆ ಪ್ರಮಾಣದ ಕಟ್ಟಿಗೆಯನ್ನು ಕಡಿದಿರುತ್ತಾನೆ.


ಇದನ್ನು ಗಮನಿಸಿದ ಮಾಲೀಕ ಮೊದಲನೆಯ ವ್ಯಕ್ತಿಗೆ ಶಭಾಷ್ ಎಂದು ಹೇಳಿದರೆ ಎರಡನೆಯ ವ್ಯಕ್ತಿಗೆ ಎಚ್ಚರಿಕೆ ನೀಡಿ ಇಬ್ಬರಿಗೂ ಅವರವರ ದುಡಿಮೆಯ ಹಣವನ್ನು ಕೊಟ್ಟು ಕಳುಹಿಸುತ್ತಾನೆ. ಇಬ್ಬರೂ ಮಾಡುತ್ತಿರುವುದು ಒಂದೇ ಕೆಲಸ, ತೆಗೆದುಕೊಳ್ಳುತ್ತಿರುವ ಸಮಯವೂ ಒಂದೇ, ಆದರೆ ಕಡಿದ ಕಟ್ಟಿಗೆಯ ಪ್ರಮಾಣದಲ್ಲಿ ವ್ಯತ್ಯಾಸ ಹೇಗೆ ಎಂದು ಎರಡನೆಯವನು ಚಿಂತಿಸುತ್ತಾನೆ. ಏನೋ ಮೋಸವಾಗಿದೆ ನನಗಿಂತ ಅವನು ಹೇಗೆ ಹೆಚ್ಚು ಕಡಿಯಬಲ್ಲ ಎಂದು ಎರಡನೆಯಾತ ಯೋಚಿಸುತ್ತಾನೆಯೇ ಹೊರತು ತಾನು ತಪ್ಪಿದ್ದೆಲ್ಲಿ ಎಂದು ಅವಲೋಕಿಸದೆ ಹೋಗುತ್ತಾನೆ.


ಪ್ರತಿದಿನ ತನ್ನ ಕೊಡಲಿಯನ್ನು ಹರಿತಗೊಳಿಸಿಕೊಳ್ಳುವ ವ್ಯಕ್ತಿ ತನಗಿಂತ ಹೆಚ್ಚು ಶ್ರಮ ಹಾಕದೆಯೂ ಸುಲಭವಾಗಿ ಮರದ ದಿಮ್ಮಿಗಳನ್ನು ಕಟ್ಟಿಗೆಯ ತುಂಡುಗಳನ್ನಾಗಿ ಪರಿವರ್ತಿಸಬಲ್ಲ. ತನ್ನ ಕೊಡಲಿಯನ್ನು ಹರಿತಗೊಳಿಸಿಕೊಳ್ಳಲು ಅಲಕ್ಷ ತೋರಿದ ಎರಡನೆಯ ವ್ಯಕ್ತಿ ಅದರ ಫಲವಾಗಿ ಅತ್ಯಂತ ಕಡಿಮೆ ಮರದ ದಿಮ್ಮಿಗಳನ್ನು ಕಟ್ಟಿಗೆಯ ತುಂಡುಗಳನ್ನಾಗಿಸುತ್ತಾನೆ.


ಮತ್ತೆ ಸಾಧನೆಯ ವಿಷಯಕ್ಕೆ ಬಂದರೆ ಇದೇ ಕಟ್ಟಿಗೆ ಕಡಿಯುವ ಕಥೆ ಅನ್ವಯಿಸುತ್ತದೆ ಪ್ರತಿದಿನ ನಿರಂತರವಾಗಿ ಜಾಣ್ಮೆಯಿಂದ ಕಾರ್ಯನಿರ್ವಹಿಸುವ, ಓದುವ ವ್ಯಕ್ತಿ ತನಗೆ ಗೊತ್ತಿಲ್ಲದೆಯೇ ಉತ್ಕೃಷ್ಟ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುತ್ತಾನೆ ಮತ್ತು ಹೆಚ್ಚಿನ ಪರಿಣತಿಯನ್ನು ಸಾಧಿಸುತ್ತಾನೆ. ತಾನು ಓದುವ ಕೆಲವೇ ಗಂಟೆಗಳ ಸಮಯವನ್ನು ಸಂಪೂರ್ಣ ತನಗೆ ಬೇಕಾದ ಓದಿಗೆ ವಿನಿಯೋಗಿಸುತ್ತಾನೆ. ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಾನೆ, ಚರ್ಚೆಗಳಲ್ಲಿ ಭಾಗವಹಿಸುತ್ತಾನೆಯೇ ಹೊರತು ಹಾಳು ಹರಟೆಯಲ್ಲಿ ತೊಡಗುವುದಿಲ್ಲ.

ಆದರೆ ಯಶಸ್ಸು ಸಿಗದ ವ್ಯಕ್ತಿ ಅದೇ ಹೆಚ್ಚಿನ ಗಂಟೆಗಳನ್ನು ಮೊಬೈಲ್ ನೋಡುತ್ತಾ, ಬೇರೊಬ್ಬರ ಬಗ್ಗೆ ಮಾತನಾಡುತ್ತಾ, ಅನವಶ್ಯಕ ವಿಷಯಗಳ ಬಗ್ಗೆ ಯೋಚಿಸುತ್ತಾ ಹಾಳು ಹರಟೆಗಳಲ್ಲಿ ತೊಡಗಿರುತ್ತಾನೆ. ಫಲಿತಾಂಶ ಬಂದಾಗ ನೊಂದುಕೊಂಡು ಪರಿತಪಿಸುತ್ತಾನೆ. ಇದು ಸ್ವಯಂಕೃತ ಅಪರಾಧವಲ್ಲದೆ ಮತ್ತಿನ್ನೇನು??


ರಾಜ್ಯದಲ್ಲಿ ಇರುವ ಕೆಲವೇ ಕೆಲವು ಹೃದಯ ರೋಗ (ಇಂಟ್ರವೆನಷನಲ್ ಕಾರ್ಡಿಯೊಲಾಜಿಸ್ಟ್) ತಜ್ಞರಲ್ಲಿ ಒಬ್ಬನಾಗಿರುವ ನನ್ನ ಅಕ್ಕನ ಮಗ ಒಂದು ಬಾರಿ ಓದಿನ ಕುರಿತು ಹೇಳಿದ ವಿಷಯ ಇನ್ನೂ ನನ್ನ ಮನಸ್ಸಿನಲ್ಲಿದೆ..... ನನಗೆ ಯಾವುದಾದರೂ ಚಲನಚಿತ್ರ ನೋಡಲು ಹೋಗಬೇಕೆಂದೆನಿಸಿದರೆ ನಾನು ಆ ಚಿತ್ರವನ್ನು ನೋಡಿ ಬಂದು ಮತ್ತೆ ಓದನ್ನು ಮುಂದುವರೆಸುತ್ತೇನೆ. ಆದರೆ ನನ್ನ ಕೆಲ ಸ್ನೇಹಿತರು ನಾನು ಚಲನಚಿತ್ರಕ್ಕೆ ಹೋಗುವಾಗ ಅಯ್ಯೋ ಇಷ್ಟು ದೊಡ್ಡ ಪರೀಕ್ಷೆಯ ಬೆಟ್ಟ ಕಣ್ಮುಂದೆ ಇರುವಾಗ ಪಿಚ್ಚರಿಗೆ ಹೋಗಿ ಕಾಲ ಹರಣ ಮಾಡಬೇಕೆ ಎಂದು ನನ್ನನ್ನು ಹೀಯಾಳಿಸಿ ಮಾತನಾಡುತ್ತಾರೆ. ನಾನು ಚಲನಚಿತ್ರ ವೀಕ್ಷಣೆ ಮಾಡುವಾಗಲೂ,, ಮತ್ತೆ ವಾಪಸು ಬಂದು ಓದಲು ಕುಳಿತಾಗಲು ಅವರು ನಾನು ಚಲನಚಿತ್ರಕ್ಕೆ ಹೋಗಿ ಬಂದುದರ ಕುರಿತೇ ಮಾತನಾಡುವ ಮೂಲಕ ಕಾಲಹರಣ ಮಾಡುತ್ತಾರೆ. ಯಥಾ ಪ್ರಕಾರ ಪಿಚ್ಚರ್ ನೋಡಿ ರಿಲಾಕ್ಸ್ ಆಗುವ ನಾನು ಇನ್ನಷ್ಟು ಮತ್ತಷ್ಟು ಆಸಕ್ತಿಯಿಂದ ಓದಿನೆಡೆ ಗಮನಹರಿಸುತ್ತೇನೆ.... ಅವರು ನನ್ನ ಚಟುವಟಿಕೆಗಳತ್ತ. ಸ್ನೇಹಿತರೆ ನೀವೇ ಹೇಳಿ ಇದರಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು??

ಯಶಸ್ಸಿಗೆ ಯಾವುದೇ ಒಳದಾರಿಗಳಿಲ್ಲ.... ಹೈವೇಗಳಲ್ಲಿ ಪ್ರಯಾಣಿಸುವಾಗ ನಮ್ಮ ಕಾರಿನ ಎಲ್ಲಾ ಭಾಗಗಳು ಸರಿಯಾಗಿ ಕೆಲಸ ಮಾಡುತ್ತವೆಯೇ ಎಂದು ಪರೀಕ್ಷಿಸುವ ನಾವು ಉನ್ನತ ಗುರಿಯನ್ನು ಮುಟ್ಟುವ ಧ್ಯೇಯವನ್ನು ಹೊಂದಿದಾಗ ನಮ್ಮದೇ ಚಟುವಟಿಕೆಗಳತ್ತ ಕೊಂಚ ನಿಗಾ ವಹಿಸಿ ತಪ್ಪು ಸರಿಗಳನ್ನು ಅವಲೋಕಿಸಬೇಕು... ತಪ್ಪಿದ್ದರೆ  ತಿದ್ದಿಕೊಂಡು ಮುನ್ನಡೆಯಬೇಕು. ಯಶಸ್ಸಿನ ಶಿಖರದ ತುತ್ತ ತುದಿಯಲ್ಲಿ ನಿಂತಾಗಲು ಕೂಡ ನಮಗೆ ನೆನಪಿನಲ್ಲಿ ಉಳಿಯುವುದು ನಾವು ಆ ಯಶಸ್ಸಿನ ಹಾದಿಯಲ್ಲಿ ಪಯಣಿಸಿದ ದಿನಗಳದೇ ಎಂಬುದನ್ನು ಮರೆಯದೆ ಹೆಜ್ಜೆ ಹಾಕಿ.

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top