ರಾಜ್ಯದಲ್ಲಿ ಬಡವರ ಪ್ರಮಾಣ ಇಳಿಕೆ
ಪ್ರಜಾಪ್ರಭುತ್ವದ ರಾಜಕೀಯದಲ್ಲಿ, ಬೆಳವಣಿಗೆ ಮತ್ತು ಸಮೃದ್ಧಿಯು ಪ್ರಾದೇಶಿಕ ಸಮತೋಲನವನ್ನು ಪ್ರದರ್ಶಿಸಬೇಕು. ಸಮಾಜದ ಎಲ್ಲಾ ಸ್ತರದ ಹಾಗೂ ಪ್ರದೇಶದ ಜನರು ಭಾಗಿಗಳಾಗಿ ಲಾಭ ಪಡೆಯುವಂತಾದಾಗ ಮಾತ್ರ ಅಭಿವೃದ್ಧಿ ಪ್ರಯತ್ನವು ಅರ್ಥಪೂರ್ಣ ಪ್ರಕ್ರಿಯೆಯಾಗುತ್ತದೆ. ಬಡತನ ನಿರ್ಮೂಲನೆ ಹಾಗೂ ತಲಾ ಆದಾಯ ಹೆಚ್ಚಿಸುವುದರೊಂದಿಗೆ ಪ್ರಾದೇಶಿಕ ಸಮಾನತೆಯನ್ನು ಸಾಧಿಸುವತ್ತ ಗಮನ ಹರಿಸಬೇಕಾಗಿದೆ.
ಬಡತನ ನಿರ್ಮೂಲನೆಯಲ್ಲಿ ಗಮನಾರ್ಹ ಸಾಧನೆ:
ನೀತಿ ಆಯೋಗವು ಜು.17ರಂದು ಬಿಡುಗಡೆ ಮಾಡಿರುವ ಬಡತನ ಸೂಚ್ಯಂಕ ಪರಿಶೀಲನ ವರದಿಯಲ್ಲಿ2015-16 ಮತ್ತು 2019-21 ರ ನಡುವೆ 34.87 ಲಕ್ಷ ಮಂದಿ ಬಹು ಆಯಾಮದ ಬಡತನದಿಂದ ಮುಕ್ತರಾಗಿದ್ದಾರೆ ಎಂದು ಉಲ್ಲೇಖಿಸಿದೆ. ಈ ಅವಧಿಯಲ್ಲಿ ಕರ್ನಾಟಕದಲ್ಲಿ ಬಡತನದ ಪ್ರಮಾಣವು ಶೇ.12.77 ರಿಂದ ಶೇ.7.58ಕ್ಕೆ ಕಡಿಮೆಯಾಗಿರುವುದು ಸ್ವಾಗತಾರ್ಹ. ಶೇಕಡಾವಾರು ಪ್ರಮಾಣದಲ್ಲಿ ಬಿಹಾರ ಮೊದಲ ಸ್ಥಾನದಲ್ಲಿದ್ದು, ಕೇರಳ ಕೊನೆಯ ಸ್ಥಾನದಲ್ಲಿದೆ. ಕರ್ನಾಟಕವು 18 ನೇ ಸ್ಥಾನದಲ್ಲಿದೆ, ಅಂದರೆ 17 ರಾಜ್ಯಗಳಲ್ಲಿ ಬಡವರ ಪ್ರಮಾಣವು ಕರ್ನಾಟಕಕ್ಕಿಂತ ಜಾಸ್ತಿ ಇದೆ.
ಈ ಅವಧಿಯಲ್ಲಿ ಭಾರತದ ಬಹು ಆಯಾಮ ಬಡತನ ಸೂಚ್ಯಂಕ (MPI) ಮೌಲ್ಯವು ಸುಮಾರು 0.117 ರಿಂದ 0.066 ಕ್ಕೆ ಅರ್ಧದಷ್ಟು ಕಡಿಮೆಯಾಗಿದೆ ಹಾಗೂ ಸುಮಾರು 13.5 ಕೋಟಿ ಜನರು ಬಹು ಆಯಾಮದ ಬಡತನದಿಂದ ಪಾರಾಗಿದ್ದಾರೆ. ಬಹು ಆಯಾಮದ ಬಡತನದಲ್ಲಿ ವಾಸಿಸುವ ಭಾರತದ ಜನಸಂಖ್ಯೆಯು 2015-16 ರಲ್ಲಿ ಶೇ.24.85 ರಿಂದ 2019-21 ರಲ್ಲಿ ಶೇ.14.96 ಕ್ಕೆ ಕಡಿಮೆಯಾಗಿದೆ, ಇದು ಶೇ.9.89 ಅಂಕಗಳ ಕುಸಿತವನ್ನು ಪ್ರತಿಬಿಂಬಿಸುತ್ತದೆ.
ಕಳೆದ15 ವರ್ಷಗಳ ಅವಧಿಯಲ್ಲಿ (2005-2019) ಭಾರತದಲ್ಲಿ ಒಟ್ಟು 41.5ಕೋಟಿ ಜನರು ಕಡು ಬಡತನದಿಂದ ಹೊರಬಂದಿದ್ದಾರೆ ಎಂದು ಜುಲೈ ಎರಡನೇ ವಾರದಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಶ್ಲಾಘಿಸಿದೆ.
ಬಹು ಆಯಾಮ ಬಡತನ ಸೂಚ್ಯಂಕ (MPI):
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಇತ್ತೀಚೆಗೆ ಬಿಡುಗಡೆ ಮಾಡಿರುವ “ಜಾಗತಿಕ ಬಹು ಆಯಾಮ ಬಡತನ ಸೂಚ್ಯಂಕ (MPI)ದಲ್ಲಿ ಬಹುಆಯಾಮಗಳ ಬಡತನದಿಂದ (ಮನೆ, ವಿದ್ಯುತ್, ಶಿಕ್ಷಣ, ನೈರ್ಮಲ್ಯ, ಪೌಷ್ಟಿಕ ಆಹಾರ ಇತ್ಯಾದಿಗಳಿಂದ ವಂಚಿತ) ಹೊರಬಂದವರ ಮಾಹಿತಿ ಪ್ರಕಟಗೊಂಡಿದೆ. ನೀತಿ ಆಯೋಗ ಬಿಡುಗಡೆ ಮಾಡಿರುವ ವರದಿಯಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.29.97ರಷ್ಟು ಮಂದಿ ಪೌಷ್ಟಿಕಾಂಶದ ಕೊರತೆಯನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮತ್ತು ಹದಿಹರೆಯದವರ ಸಾವಿನ ಪ್ರಮಾಣ ಶೇ.1.29ರಷ್ಟಿದೆ. ಶೇ.7.89ರಷ್ಟು ಮಕ್ಕಳು ಸರಿಯಾದ ವಯಸ್ಸಿಗೆ ಶಾಲೆಗೆ ಸೇರುತ್ತಿಲ್ಲ. ಶೇ.2.5ರಷ್ಟು ಮಕ್ಕಳು ಶಾಲೆಗೆ ಹೆಚ್ಚು ಗೈರಾಗುತ್ತಿದ್ದಾರೆ. ಶೇ.21.47ರಷ್ಟು ಮಂದಿಗೆ ಅಡುಗೆ ಇಂಧನ ಕೊರತೆ ಇದೆ. ಶೇ.12.58ರಷ್ಟು ಮಂದಿ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇ.0.89ರಷ್ಟು ಮಂದಿ ವಿದ್ಯುತ್ ವಂಚಿತರಾಗಿದ್ದು, ಶೇ.7.06ರಷ್ಟು ಮಂದಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಶೇ.4.97 ಮಂದಿಗೆ ಬ್ಯಾಂಕ್ ಖಾತೆ ಇಲ್ಲ, ಶೇ.36.20 ಮಂದಿಗೆ ಸ್ವಂತ ಮನೆ ಇಲ್ಲ ಹಾಗೂ ಶೇ.7.31 ಮಂದಿಗೆ ಸ್ವಂತ ಆಸ್ತಿ ಇಲ್ಲ.
ವೇಗವಾಗಿ ಇಳಿಯುತ್ತಿರುವ ಗ್ರಾಮೀಣ ಬಡತನ:
2015-16 ಮತ್ತು 2019-21 ರ ನಡುವೆ ಬಡತನದ ದರವು 32.59% ರಿಂದ 19.28% ಕ್ಕೆ (ಶೇ. 41) ಇಳಿಯುವುದರೊಂದಿಗೆ ಭಾರತದ ಗ್ರಾಮೀಣ ಪ್ರದೇಶಗಳು ಬಡತನದಲ್ಲಿ ವೇಗವಾಗಿ ಕುಸಿತವನ್ನು ಅನುಭವಿಸಿವೆ. ನಗರ ಪ್ರದೇಶಗಳಲ್ಲಿ, ಅದೇ ಅವಧಿಯಲ್ಲಿ ಬಡತನದ ಪ್ರಮಾಣವು 8.65% ರಿಂದ 5.27% ಕ್ಕೆ(ಶೇ.39) ಕಡಿಮೆಯಾಗಿದೆ. ಇದೇ ಪ್ರವೃತ್ತಿಯನ್ನು ಕರ್ನಾಟಕದಲ್ಲೂ ಗಮನಿಸಬಹುದು. ಗ್ರಾಮೀಣ ಭಾಗದಲ್ಲಿ ಬಡತನವು ಶೇ. 18.45 ರಿಂದ ಶೇ. 10.33 ಕ್ಕೆ(ಶೇ.44) ಕುಸಿದರೆ, ನಗರ ಪ್ರದೇಶದಲ್ಲಿ ಶೇ.4.92 ರಿಂದ ಶೇ. 3.22 ಕ್ಕೆ (ಶೇ.34)ಇಳಿದಿದೆ. ರಾಜ್ಯದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲೇ ಬಡವರ ಸಂಖ್ಯೆ ಹೆಚ್ಚಿದೆ.
ರಾಮನಗರದಲ್ಲಿ ಕಡಿಮೆ, ಯಾದಗಿರಿಯಲ್ಲಿ ಹೆಚ್ಚು:
ನಮ್ಮ ರಾಜ್ಯದ 31 ಜಿಲ್ಲೆಗಳ ಪೈಕಿ ರಾಮನಗರ ಅತೀ ಕಡಿಮೆ ಬಡವರನ್ನು (ಶೇ.0.08) ಹೊಂದಿರುವ ಜಿಲ್ಲೆಯಾದರೆ ಯಾದಗಿರಿಯಲ್ಲಿ ಅತೀ ಹೆಚ್ಚಿನ ಪ್ರಮಾಣದ (ಶೇ.25.38)ಬಡವರಿದ್ದಾರೆ. ರಾಮನಗರದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಬಡವರ ಪ್ರಮಾಣ ಶೇ.7.84ರಷ್ಟು ಕಡಮೆಯಾದರೆ ಯಾದಗಿರಿಯಲ್ಲಿ ಶೇ.16.30ರಷ್ಟು ಕಡಿಮೆಯಾಗಿದೆ. ಆದರೂ ಬಡತನದ ಪ್ರಮಾಣದಲ್ಲಿ ಯಾದಗಿರಿ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡತನದ ಪ್ರಮಾಣವು ಶೇ.6.69 ರಿಂದ ಶೇ.1.7ಕ್ಕೆ ಇಳಿದು ಅತೀ ಕಡಿಮೆ ಪ್ರಮಾಣದ ಬಡವರನ್ನು ಹೊಂದಿರುವ 4 ನೇ ಜಿಲ್ಲೆಯಾಗಿದೆ. ಆದರೆ ನಮ್ಮ ರಾಜ್ಯದ 10 ಜಿಲ್ಲೆಗಳಲ್ಲಿ ಶೇ.10 ಕ್ಕಿಂತಲೂ ಹೆಚ್ಚು ಬಡವರಿರುವುದು ಆಘಾತಕಾರಿ ಅಂಶ.
ಜಿಲ್ಲೆಗಳ ನಡುವಿನ ಆದಾಯದ ಅಂತರ ಹೆಚ್ಚಳ:
ಇತ್ತೀಚೆಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ 2021-22 ನೇ ಸಾಲಿನಲ್ಲಿ ರಾಜ್ಯದ ನಿವ್ವಳ ತಲಾ ಆದಾಯವು ರೂ. 265623 ಆಗಿದ್ದು ಇದು 2023-24 ನೇ ಸಾಲಿನಲ್ಲಿ ಶೇ 13.6 ರಷ್ಟು ಹೆಚ್ಚಳದೊಂದಿಗೆ ರೂ.301673 ಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ತಲಾ ಆದಾಯವು ರಾಷ್ಟ್ರೀಯ ತಲಾ ಆದಾಯಕ್ಕಿಂತ ಹೆಚ್ಚಿದೆ. ತಲಾ ಆದಾಯದಲ್ಲಿ ಕರ್ನಾಟಕವು ದೆಹಲಿ, ತೆಲಂಗಾಣ ಮತ್ತು ಹರಿಯಾಣದ ನಂತರ ನಾಲ್ಕನೇ ಸ್ಥಾನದಲ್ಲಿದೆ.
ಬೆಂಗಳೂರು ನಗರ ರೂ.621131 ತಲಾ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ (ರೂ. 443057) ಹಾಗೂ ಉಡುಪಿ (ರೂ.370834) ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದೆ. ಕೊನೆಯ ಐದು ಸ್ಥಾನದಲ್ಲಿ ಯಾದಗಿರಿ(ರೂ.139838), ಕೊಪ್ಪಳ (ರೂ.139838), ಬೆಳಗಾವಿ (ರೂ.137644) ಬೀದರ್ (ರೂ.133935) ಹಾಗೂ ಕಲಬುರಗಿ (ರೂ.124998) ಜಿಲ್ಲೆಗಳಿವೆ. ನಮ್ಮ ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಬೆಂಗಳೂರಿನ ತಲಾ ಆದಾಯದ ಶೇ.25 ರಷ್ಟನ್ನೂ ಹೊಂದಿಲ್ಲದಿರುವುದು ಆಘಾತಕಾರಿ ಅಂಶ.
ಉತ್ತರ ಕರ್ನಾಟಕ ಪ್ರದೇಶದ ಬೆಳಗಾವಿ ಮತ್ತು ಬೀದರ್ ವಿಭಾಗದ ತಲಾ ಆದಾಯವು ಬೆಂಗಳೂರು ವಿಭಾಗದ ಅರ್ಧಕ್ಕಿಂತ ಕಡಿಮ ಇರುವುದು ಆಘಾತಕಾರಿ ಅಂಶ. ಕಲಬುರಗಿ ವಿಭಾಗದಲ್ಲಿ ಬರುವ ಜೆಲ್ಲೆಗಳಾದ ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯ ತಲಾ ಆದಾಯವು ಕೊನೆಯ ಸ್ಥಾನದಲ್ಲಿದೆ. ಈ ಜಿಲ್ಲೆಗಳಲ್ಲಿ ಬಡವರ ಪ್ರಮಾಣವೂ ಜಾಸ್ತಿ ಇದೆ.
ಅಭಿವೃದ್ಧಿ ಮತ್ತು ಸಮಾನತೆ:
ಒಟ್ಟಾರೆ ಉತ್ಪಾದನೆಯ ಮಟ್ಟದಲ್ಲಿ ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೆ ತಲಾ ಆದಾಯದ ವಿಷಯದಲ್ಲಿ, ಅಂತರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ ಭಾರತದ ಶ್ರೇಣಿಯು 197 ದೇಶಗಳ ಪಟ್ಟಿಯಲ್ಲಿ 142 ಆಗಿದೆ. ಭಾರತ ಜಿಡಿಪಿಯಲ್ಲಿ ಐದನೇ ಸ್ಥಾನ ಪಡೆದಿರುವುದು ಮಹತ್ಸಾಧನೆಯೆ. ಆದರೆ ತಲಾ ಆದಾಯದಲ್ಲಿ ಹಾಗೂ ಪ್ರಾದೇಶಿಕ ಸಮಾನತೆ ಸಾಧಿಸುವಲ್ಲಿ ಇನ್ನೂ ಹೆಚ್ಚಿನ ಪ್ರಯತ್ನಗಳಾಗಬೇಕು.
ಸಾಮರ್ಥ್ಯ ವಂಚಿತರು ಹಾಗೂ ಸೌಲಭ್ಯ ವಂಚಿತರನ್ನು ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ತರುವ ಪ್ರಯತ್ನ ನಿರಂತರವಾಗಿ ನಡೆಯಬೇಕು. ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಕನಿಷ್ಠ ಸ್ವೀಕಾರಾರ್ಹ ಮಟ್ಟದ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸ್ಥಳ ನಿರ್ದಿಷ್ಟ ಉದ್ದೇಶಿತ ಕ್ರಿಯೆಯ ಅಗತ್ಯವಿದೆ. ಅತೀ ದೊಡ್ಡ ಆರ್ಥಿಕತೆಯತ್ತ ಹೆಜ್ಜೆಯಿಡುವುದರೊಂದಿಗೆ ಪ್ರಾದೇಶಿಕ ಸಮಾನತೆಯನ್ನು ಸಾಧಿಸುವತ್ತ ನಮ್ಮ ಚಿತ್ತ ಇರಲಿ.
-ಡಾ.ಎ. ಜಯ ಕುಮಾರ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಶ್ರೀ.ಧ.ಮಂ. ಕಾಲೇಜು (ಸ್ವಾಯತ್ತ), ಉಜಿರೆ
9448154001
ajkshetty@sdmcujire.in
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ