ನೈಋತ್ಯ ವಿಧಾನ ಪರಿಷತ್ತಿನ ಪದವಿಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮುಂದಿನ ಚುನಾವಣೆಗೆ ಸರಿ ಸುಮಾರು ಒಂದು ವರುಷದ ಮೊದಲೇ ರಣರಂಗ ಸಜ್ಜುಗೊಳಿಸಲು ರಾಜಕೀಯ ಪಕ್ಷಗಳು ಪೂರ್ವ ತಯಾರಿಕೆಯಲ್ಲಿ ಹೆಜ್ಜೆ ಇಡಲು ಮುಂದಾಗಿವೆ. ಅದರಲ್ಲೂ ಈ ಬಾರಿ ಕಾಂಗ್ರೆಸ್ ಪಕ್ಷ ಎಲ್ಲಾ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿದೆ ಅನ್ನುವುದು ಅನ್ನುವುದು ಅಷ್ಟೇ ನಿಜ. ಈ ಎರಡು ಕ್ಷೇತ್ರದಲ್ಲಿ ಸ್ಪಧಿ೯ಸುವ ಆಕಾಂಕ್ಷಿಗಳು ಎರಡು ಲಕ್ಷ ರೂಪಾಯಿಯೊಂದಿಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್ ದಿನಾಂಕವನ್ನು ಪ್ರಕಟಿಸಿಯಾಗಿದೆ. ವಿಧಾನ ಸಭಾ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿದ ಕಾಂಗ್ರೆಸ್ ಈ ಬಾರಿ ಬಹು ಪ್ರತಿಷ್ಠಿತ ನೈಋತ್ಯ ಕ್ಷೇತ್ರದ ಪದವಿಧರರ ಮತ್ತು ಶಿಕ್ಷಕರ ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಎಲ್ಲಾ ಲೆಕ್ಕಾಚಾರದಲ್ಲಿ ಬಿದ್ದಿದೆ. ಇದು ಸುಲಭ ಸಾಧ್ಯವಾ? ಹಾಗಾದರೆ ಈ ಬಾರಿ ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರವೇನು? ಒಂದು ರೀತಿಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಪಾರಂಪರಿಕವಾಗಿ ತನ್ನದಾಗಿಸಿಕೊಂಡ ಬಿಜೆಪಿಯ ಪರಿಸ್ಥಿತಿ ಏನಾಗಬಹುದು? ಹಿಂದಿನ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯನ್ನು ಮಣಿಸಿ ಜೆಡಿಎಸ್ ಗೆದ್ದ ಉದಾಹರಣೆ ನಮ್ಮ ಮುಂದಿದೆ. ಹಾಗಾದರೆ ಈ ಬಾರಿಯ ಚುನಾವಣೆಯ ಭವಿಷ್ಯ ಬರೆಯುವ ಮತದಾರರನ ಅಭಿಪ್ರಾಯ ಹೇಗಿರಬಹುದು? ಈ ಎಲ್ಲಾ ವಿಚಾರಗಳನ್ನು ವಿಶ್ಲೇಷಣೆ ಮಾಡುವ ಕಾಲ ಕೂಡಿ ಬಂದಿದೆ.
1. ಬಹುಕಾಲದಿಂದಲ್ಲೂ ನೈಋತ್ಯದ ಈ ಎರಡು ಕ್ಷೇತ್ರಗಳು ಬಿಜೆಪಿಗೆ ಸುಲಭವಾಗಿ ಜಯ ತಂದು ಕೊಡುವ ಕ್ಷೇತ್ರಗಳೆಂದೇ ಬಹು ಪ್ರಚಲಿತ. ಆದರೆ ನಿಧಾನವಾಗಿ ಇದು ತನ್ನ ಮಗ್ಗುಲನ್ನು ಬದಲಾಯಿಸಿಕೊಂಡು ಬರುತ್ತಿರುವ ರಾಜಕೀಯ ಸ್ಥಿತಿ ಗತಿಯನ್ನು ನಾವು ಗಮನಿಸಿದ್ದೇವೆ.
2. ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬಂದ ಅಭ್ಯರ್ಥಿಗಳ ಉದಾಸೀನ ಭಾವವೇ ಅವರ ಸೇೂಲಿಗೂ ಕಾರಣವಾಯಿತು ಅಂದರೂ ತಪ್ಪಾಗಲಾರದು. ಹಾಗಾಗಿ ಕಳೆದ ಬಾರಿ ಈ ಕ್ಷೇತ್ರ ಜೆಡಿಎಸ್ ಪಾಲಾಗಿದೆ ಅನ್ನುವುದು ಅಷ್ಟೇ ಸತ್ಯ.
3. ಪದವಿಧರ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಎಚ್. ಶಂಕರಮೂರ್ತಿ ಅವರು ಸೇೂಲನ್ನು ಕಾಣದ ಸರದಾರ ಅನ್ನಿಸಿಕೊಂಡಿದ್ದರು. ಮತ್ತೆ ಇದೇ ಕ್ಷೇತ್ರವನ್ನು ಅದೇ ಪಕ್ಷದ ಆಯನೂರು ಮಂಜುನಾಥರು ಪ್ರತಿನಿಧಿಸಿಕೊಂಡು ಬಂದರು. ಆದರೆ ಈಬಾರಿ ಅವರು ಈ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ನಿಂದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೇೂಲುಂಡರು. ಅವರು ಮತ್ತೆ ಇದೇ ಕ್ಷೇತ್ರಕ್ಕೆ ಜೆಡಿಎಸ್ನಿಂದ ಸ್ಪರ್ಧೆ ಮಾಡುತ್ತರಾ ಅನ್ನುವುದನ್ನು ಕಾದು ನೇೂಡಬೇಕು.
4. ಈ ಎರಡು ಕ್ಷೇತ್ರಗಳಲ್ಲಿ ಹಿಂದೆ ಜಯ ಯಾರಿಗೆ ಬರುತ್ತಿತ್ತು ಅಂದರೆ ಯಾವ ಪಕ್ಷದವರು ಹೆಚ್ಚು ಮತದಾರರನ್ನು ನೊಂದಾಯಿಸಿಕೊಳ್ಳುತ್ತಾರೊ ಅವರಿಗೆ ಸುಲಭ ಜಯ ಅನ್ನುವುದು ಸರಳ ಲೆಕ್ಕಾಚಾರ. ಆದರೆ ಅದೇ ಮತದಾರ ಇಂದು ಮನಸ್ಥಿತಿ ಬದಲಾಯಿಸಿಕೊಂಡಿದ್ದಾನೆ. ಬಹುಮುಖ್ಯವಾಗಿ ಈ ಪದವಿಧರರ ಕ್ಷೇತ್ರದಲ್ಲಿ ಬರುವ ಮತದಾರರು ಬಹು ಮುಖ್ಯವಾಗಿ ಅಸಂಘಟಿತ ವರ್ಗದ ಮತದಾರರು. ಶಾಸಕರು ಅನ್ನಿಸಿಕೊಂಡವರಿಗೆ ಗೆಲುವುದೊಂದೆ ಕೆಲಸ ಬಿಟ್ಟರೆ ಗೆದ್ದ ಮೇಲೆ ಕೆಲಸವೇ ಇಲ್ಲ. ಯಾಕೆಂದರೆ ಈ ವರ್ಗದಲ್ಲಿ ಬರುವ ಮತದಾರರೇ ಹಾಗೇ? ಆದರೆ ಛಾಯೆ ಬದಲಾಗಬೇಕು. ಪದವಿಧರರು ಗೆಲ್ಲಿಸಿದ ಅನಂತರ ತಮ್ಮ ನಿರುದ್ಯೋಗ ಸಮಸ್ಯೆ ಇರ ಬಹುದು; ತಮ್ಮ ಸಾಧನೆ ಪ್ರತಿಭೆಯ ಮೂಲಕ ಪದವೀ ಆಹ೯ತೆಯ ಮೇಲೆ ಸರಕಾರಿ ಅಥವಾ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ನಿವ೯ಹಿಸುವ ಮತದಾರರು ತಮ್ಮ ಸಂಧ್ಯಾ ಕಾಲದ ಪಿಂಚಣಿಗಾಗಿ VOTE FOR OPS.. ಪರವಾಗಿ ಧ್ವನಿ ಮೊಳಗಿಸುವುದರ ಮೂಲಕ ನಮ್ಮ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಘಂಟೆ ಬಾರಿಸಬೇಕು. ಈ ಎಲ್ಲಾ ಸಮಸ್ಯೆ ಪರಿಸ್ಥಿತಿ ಬದಲು ಮಾಡುವ ಹೊಸ ರಕ್ತದ ಯುವ ಶಾಸಕರು ಆಯ್ಕೆಯಾಗಿ ಬರಬೇಕು. ಈ ನಿಟ್ಟಿನಲ್ಲಿ ಪದವಿಗಳಿಸಿ ಮೂರು ವರುಷಗಳು ಮುಗಿಸಿರುವ ಹೊಸ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಅತ್ಯಂತ ಕಡಿಮೆ ಸಂಖ್ಯೆಯ ಮತದಾರರನ್ನು ಪ್ರತಿನಿಧಿಸಿಕೊಂಡು ಶಾಸಕರು ಆಗುವ ಅವಕಾಶವಿರುವುದು ಪದವಿಧರ ಕ್ಷೇತ್ರ ಅನ್ನುವ ಕಪ್ಪು ಚುಕ್ಕೆ ಹೇೂಗಲಾಡಿಸುವ ವಾತಾವರಣ ಸೃಷ್ಟಿಯಾಗಬೇಕು.
5. ಇನ್ನು ಶಿಕ್ಷಕರ ಕ್ಷೇತ್ರ ಇಲ್ಲಿ ಕೂಡಾ ಅಷ್ಟೇ ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರನ್ನು ಸರ್ಕಾರವನ್ನು ಬೆಂಬಲಿಸಲೇ ಬಾರದು. ಈ ಬಾರಿ ಅದೆಷ್ಟೊ ಸಂಖ್ಯೆಯಲ್ಲಿ ಪ್ರೌಢಶಾಲಾ ಪದವಿ ಪೂರ್ವ ಕಾಲೇಜು ಪ್ರಥಮ ದರ್ಜೆ ಕಾಲೇಜುಗಳಲ್ಲಿ 2006ರ ಅನಂತರ ನೇಮಕಾತಿ ಕೊಂಡ ಶಿಕ್ಷಕರಿದ್ದಾರೆ. ಅವರ ಮೂಲಭೂತ ಬೇಡಿಕೆಯೇ ಹಳೆ ಪಿಂಚಣಿ. ಇದನ್ನು ಯಾರು ಬೆಂಬಲಿಸುತ್ತಾರೊ ಅವರಿಗೆ ಮತ ಅನ್ನುವ "vote for ops" ಅನ್ನುವ ಸ್ಲೇೂಗನ್ ಮುಂದಿಡುವ ಎಲ್ಲಾ ವಾತಾವರಣ ಸೃಷ್ಟಿಯಾಗಿರು ವುದಂತೂ ಸತ್ಯ.
ಅಂತೂ ಈ ಬಾರಿಯ ನೈಋತ್ಯ ವಿಧಾನಪರಿಷತ್ ಚುನಾವಣೆ ಯಾವ ಪಕ್ಷಗಳಿಗೂ ಸುಲಭದ ಜಯ ಅಲ್ಲ. ಯಾಕೆಂದರೆ ಈ ಎರಡು ಕ್ಷೇತ್ರದಲ್ಲಿನ ಮತದಾರರು ತಮ್ಮ ಸುಖ ಕಷ್ಟಗಳಿಗೆ ಸ್ಪಂದಿಸುವ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವುದಂತೂ ಗ್ಯಾರಂಟಿ.
-ಪ್ರೊ. ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ