ಗುರೋರಾಧೀತಾಖಿಲವೈದ್ಯವಿದ್ಯಃ ಪೀಯೂಷಪಾಣಿಃ ಕುಶಲಃ ಕ್ರಿಯಾಸು |
ಗತಸ್ಪೃಹೋ ಧೈರ್ಯಧರಃ ಕೃಪಾಲುಃ ಶುದ್ಧೋಧಿಕಾರೀ ಭಿಷಗೀದೃಶಃ ಸ್ಯಾತ್ ||
ವೈದ್ಯರ ಬಗ್ಗೆ ನಮ್ಮ ಪ್ರಾಚೀನರು ಹೀಗೆ ಹೇಳಿದ್ದಾರೆ. ವೈದ್ಯನಾದವನು ಗುರುಮುಖೇನ ಸಕಲ ವೈದ್ಯ ವಿದ್ಯೆಯನ್ನು ಅಧ್ಯಯನ ಮಾಡಿರಬೇಕು. ವಿದ್ಯೆ ಯಾವುದೇ ಇರಲಿ ಗುರುಮುಖೇನ ಕಲಿತರೆ ಮಾತ್ರ ಅದು ಪರಿಣಾಮಕಾರಿಯೆನಿಸುತ್ತದೆ. ಗುರುಗಳು ತಮ್ಮ ಜ್ಞಾನ ಹಾಗೂ ಅನುಭವ ಇವೆರಡನ್ನೂ ಎರಕಹೊಯ್ದು ವಿದ್ಯೆಯನ್ನು ಶಿಷ್ಯನಿಗೆ ಧಾರೆಯೆರೆಯುತ್ತಾರೆ. ಸ್ವಾಧ್ಯಾಯವು ಉತ್ತಮವಾದರೂ ಅದು ಸಾಧ್ಯವಾಗುವುದು ಗುರುವಿನ ಮೂಲಕ ಪಡೆಯಬೇಕಾದ ವಿದ್ಯೆಯನ್ನು ಪಡೆದ ಬಳಿಕ. ವೈದ್ಯವಿದ್ಯೆಯಂತೂ ಗುರುವಿನ ಮೂಲಕವೇ ಪಡೆಯಬೇಕಾಗುವ ವಿದ್ಯೆ.
ತಾನು ನೀಡುವ ಔಷಧಗಳ ಮೂಲಕ ಸಕಲರಿಗೂ ಜೀವದಾನವನ್ನು ಮಾಡುವವನು ವೈದ್ಯ, ಆದ್ದರಿಂದಲೇ ಆತನು ಪೀಯೂಷಪಾಣಿ ಎನಿಸಿಕೊಂಡಿದ್ದಾನೆ. ಅಂದರೆ ಅಮೃತವನ್ನು ಕೈಯಲ್ಲಿ ಧರಿಸಿದವನು ಎಂದರ್ಥ. ಕಹಿಯೋ ಸಿಹಿಯೋ ವೈದ್ಯರು ನೀಡುವ ಔಷಧವು ಪ್ರಾಣವುಳಿಸುವುದಂತೂ ಹೌದಷ್ಟೆ. ಹಾಗಾಗಿಯೇ ನಮಗೆ ಆರೋಗ್ಯವನ್ನು ಕರುಣಿಸುವ ಔಷಧಿಯು ಅಮೃತವೇ ಸರಿ.
ಅತ್ಯಂತ ಕುಶಲತೆಯಿಂದ ಕಾರ್ಯವನ್ನು ಸಾಧಿಸುವವನು ವೈದ್ಯ. ಅಧ್ಯಯನದ ಮೂಲಕ ಆರ್ಜಿಸಿದ ವೈದ್ಯವಿದ್ಯೆಯ ಪ್ರಯೋಗವು ಕುಶಲತೆಯನ್ನು ಆಧರಿಸಿರುತ್ತದೆ. ರೋಗಿಯ ಶಾರೀರಿಕ, ಮಾನಸಿಕ ಸ್ಥಿತಿಗತಿಯ ಸೂಕ್ಷ್ಮವಾದ ಪರೀಕ್ಷೆಯನ್ನು ನಡೆಸಿಯೇ ಚಿಕಿತ್ಸೆಯನ್ನು ವೈದ್ಯನು ನೀಡಬೇಕಾಗುತ್ತದೆ. ಯಾವುದೋ ಒಂದು ಕಾಯಿಲೆಗೆ ಎಲ್ಲಾ ರೋಗಿಗಳಿಗೂ ಒಂದೇ ಔಷಧ ಪಥ್ಯವಾಗುವುದಿಲ್ಲ. ರೋಗಿಯ ಶರೀರಪ್ರಕೃತಿಯನ್ನು ಸರಿಯಾಗಿ ಅವಲೋಕಿಸಿ ಚಿಕಿತ್ಸೆಯನ್ನು ನೀಡುವ ಕೌಶಲ ವೈದ್ಯನಿಗಿರಬೇಕಾಗುತ್ತದೆ.
ತನ್ನ ಸುಖ ಸಂತೋಷಗಳ ಬಗ್ಗೆ ಆಸೆಯನ್ನು ಹೊಂದದೆ ಲೋಕ ಹಿತವನ್ನು ಬಯಸುವವನು ವೈದ್ಯ. ಕಾಯಿಲೆಗಳೇನೂ ದಿನ-ಕಾಲವನ್ನು ನೋಡಿ ಬರುವುದಿಲ್ಲ. ಹಗಲು ರಾತ್ರಿಗಳೆಂಬ, ಚಳಿಮಳೆಬಿಸಿಲೆಂಬ ಭೇದ ಕಾಯಿಲೆಗಿರುವುದಿಲ್ಲ. ರೋಗಿಯು ಯಾವುದೇ ಹೊತ್ತಲ್ಲಿ ಬಂದರೂ ತನ್ನ ಹಸಿವು ನಿದ್ದೆಗಳೆಂಬ ಬೇಕುಗಳನ್ನು ಪರಿಗಣಿಸದೆ ಸೇವೆ ನೀಡುವವನು ವೈದ್ಯ. ಕೋವಿಡ್ ಎಂಬ ಮಹಾಮಾರಿ ಲೋಕಕ್ಕೆ ಅಡರಿಕೊಂಡಾಗ ವೈದ್ಯರ ಸೇವೆಯ ಮಹತ್ತ್ವವನ್ನು ನಾವರಿತಿದ್ದೇವೆ. ಎಷ್ಟೋ ದಿನಗಳ ಕಾಲ ಮನೆಗೂ ಹೋಗದೆ ರೋಗಿಗಳ ಶುಶ್ರೂಷೆಯಲ್ಲಿದ್ದ ವೈದ್ಯರನ್ನೂ ನಾವು ನೋಡಿದ್ದೇವೆ.
ರೋಗಿಗಳಿಗೆ ಶರೀರಕ್ಕೆ ರೋಗ ಬಂದರೂ ಚೇತರಿಕೊಳ್ಳುವುದಕ್ಕೆ ಔಷಧದ ಜೊತೆಗೆ ಮೊದಲಿಗೆ ಬೇಕಾಗುವುದು ಮಾನಸಿಕ ಧೈರ್ಯ. ತನ್ನ ಸಾಂತ್ವನದ ಮೂಲಕ, ಮೃದು ಮಧುರ ಮಾತಿನ ಮೂಲಕ ರೋಗಿಗಳಗೆ ಧೈರ್ಯ ತುಂಬುವವನು ವೈದ್ಯ. ಎಷ್ಟೋ ಬಾರಿ ವೈದ್ಯರ ಔಷಧಿಗಿಂತಲೂ ಅವರ ಧೈರ್ಯದ ಮಾತೇ ರೋಗಿಯನ್ನು ಗುಣಪಡಿಸುತ್ತದೆ.
ವೈದ್ಯನು ಪರಮ ಕರುಣಾಳುವೂ ಪರಿಶುದ್ಧನೂ ಹೌದು. ಚಿಕಿತ್ಸೆಗೆಂದು ಬರುವ ರೋಗಿಗಳು ತಮ್ಮ ರೋಗವನ್ನಲ್ಲದೆ ತಮ್ಮ ವೈಯಕ್ತಿಕ, ಕೌಟುಂಬಿಕ ಸಮಸ್ಯೆಗಳನ್ನೂ ವೈದ್ಯರಲ್ಲಿ ಹೇಳಿಕೊಂಡು ಹಗುರಾಗುವುದಿದೆ. ಇದು ತಮಗೆ ಸಂಬಂಧಿಸಿದ ವಿಚಾರವಲ್ಲ ಎಂದು ವೈದ್ಯನು ಇದನ್ನು ನಿವಾರಿಸುವಂತಿಲ್ಲ. ಅವರ ಎಲ್ಲ ಮಾತುಗಳಿಗೂ ತಾಳ್ಮೆಯಿಂದ ಕಿವಿಯಾಗಬೇಕಾಗುತ್ತದೆ. ಪರಿಶುದ್ಧ ಹೃದಯ-ಮನಸ್ಸುಳ್ಳ ವೈದ್ಯನಿಗಷ್ಟೇ ಇದು ಸಾಧ್ಯವಾಗುತ್ತದೆ.
ಚಿಕಿತ್ಸಾ ಕರ್ಮದಲ್ಲಿ ಅಧಿಕಾರವುಳ್ಳವನು ವೈದ್ಯ. ತನ್ನ ಜ್ಞಾನ ಹಾಗೂ ಅನುಭವದ ಪರಿಪಾಕದಿಂದ ಯೋಗ್ಯ ಚಿಕಿತ್ಸೆಯನ್ನು ನೀಡಿ 'ಲೋಕಾಃ ಸಮಸ್ತಾಃ ಸುಖಿನೋ ಭವಂತು' ಎಂಬ ನುಡಿಗೆ ಮುನ್ನುಡಿಯನ್ನು ಆತನು ಬರೆಯುತ್ತಾನೆ.
ವೈದ್ಯವೃತ್ತಿಯ ಲಾಭವೇನೆಂಬುದನ್ನು ಅಷ್ಟಾಂಗಸಂಗ್ರಹಗ್ರಂಥದಲ್ಲಿ ಹೀಗೆ ಹೇಳಿದ್ದಾರೆ -
ಕ್ವಚಿದ್ಧರ್ಮಃ ಕ್ವಚಿನ್ಮೈತ್ರೀ ಕ್ವಚಿದರ್ಥಃ ಕ್ವಚಿದ್ಯಶಃ |
ಕರ್ಮಾಭ್ಯಾಸಃ ಕ್ವಚಿಚ್ಚೇತಿ ಚಿಕಿತ್ಸಾ ನಾಸ್ತಿ ನಿಷ್ಫಲಾ ||
ಚಿಕಿತ್ಸೆ ಎಂದೂ ನಿಷ್ಫಲವಾಗದು. ಹಾಗೆಂದು ಚಿಕಿತ್ಸೆ ಪಡೆದವರೆಲ್ಲರೂ ಗುಣಮುಖರಾಗಿ ಅಮರರಾಗಿದ್ದಾರೆಂದರ್ಥವಲ್ಲ. ಚಿಕಿತ್ಸೆ ನೀಡುವುದು ಆರೋಗ್ಯದಾನವೆಂಬ ಧರ್ಮಕಾರ್ಯ. ಎಲ್ಲ ದಾನಗಳಿಗಿಂತಲೂ ಆರೋಗ್ಯದಾನವೇ ಶ್ರೇಷ್ಠವಾದ ದಾನ. ಹೀಗೆ ಧರ್ಮ ಸಂಪಾದನೆಯ ದಾರಿಯಾಗಿದೆ ವೈದ್ಯವೃತ್ತಿ. ಇನ್ಬು ಬಹುಜನರ ಗೆಳೆತನವನ್ನೂ ಸಂಪಾದಿಸಿಕೊಡುತ್ತದೆ ಈ ವೃತ್ತಿ. ಹಣ ಸಂಪಾದನೆಯ ದಾರಿ ಇದೆಂಬುದನ್ನು ಯಾರೂ ಅಲ್ಲಗೆಳೆಯುವುದಿಲ್ಲ. ಒಳ್ಳೆಯ ವೈದ್ಯರು ಲೋಕದಲ್ಲಿ ಯಶಸ್ಸು ಕೀರ್ತಿಯನ್ನು ಹೊಂದುತ್ತಾರೆ. ಇವು ಯಾವುದೂ ದೊರೆಯದಿದ್ದರೂ ವೃತ್ತಿಯಲ್ಲಿ ಪರಿಣತಿಯಂತೂ ದೊರೆತೇ ದೊರೆಯುತ್ತದೆ. ಹೀಗೆ ವೈದ್ಯವೃತ್ತಿ ಎಂದೂ ನಿರರ್ಥಕವಲ್ಲ.
ನಮ್ಮ ಪ್ರಾಚೀನರು ವೈದ್ಯರನ್ನು 'ವೈದ್ಯೋ ನಾರಾಯಣೋ ಹರಿಃ' ಸಾಕ್ಷಾತ್ ನಾರಾಯಣನೇ ಎಂದು ಹೊಗಳಿದ್ದಾರೆ. ಹಾಗೆಂದು ಅವರು ಹಾಸ್ಯದ ಮಾತಿನ ಮೂಲಕ ವೈದ್ಯರ ಕಾಲೆಳೆದಿಲ್ಲ ಎಂದಲ್ಲ. ಇದೊಂದನ್ನು ನೋಡಿ -
ವೈದ್ಯರಾಜ ನಮಸ್ತುಭ್ಯಂ ಯಮರಾಜಸಹೋದರ |
ಯಮಸ್ತು ಹರತಿ ಪ್ರಾಣಾನ್ ವೈದ್ಯಃ ಪ್ರಾಣಾನ್ ಧನಾನಿ ಚ ||
ಯಮರಾಜನ ಸಹೋದರನಾದ ವೈದ್ಯರಾಜನೇ ನಿನಗೆ ವಂದನೆಗಳು. ಯಮನಾದರೋ ನಮ್ಮ ಪ್ರಾಣವನ್ನು ಮಾತ್ರ ಅಪಹರಿಸುತ್ತಾನೆ. ನೀನು ಪ್ರಾಣದ ಜೊತೆಗೆ ನಮ್ಮ ಹಣವನ್ನೂ ಅಪಹರಿಸುತ್ತೀಯೆ.
ಇದೊಂದು ಹಾಸ್ಯದ ಮಾತು ಅಷ್ಟೆ. ವೈದ್ಯರ ಸೇವೆಯನ್ನು ನಾವೆಂದೂ ಆಡಿಕೊಳ್ಳುವಂತಿಲ್ಲ. ಅಚ್ಚರಿಯೆಂದರೆ ನಮ್ಮ ಹುಟ್ಟು-ಸಾವು ಇವೆರಡನ್ನೂ ಘೋಷಿಸುವವನು ವೈದ್ಯ.
ಆರೋಗ್ಯವೇ ಭಾಗ್ಯ. ಇದನ್ನು ಅನುಗ್ರಹಿಸುವವನು ವೈದ್ಯ. ಈ ಭಾಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಹೊಣೆಗಾರಿಕೆ. ಈ ಲೋಕವಾದರೋ ಕಪ್ಪು-ಬಿಳುಪು, ಹಗಲು-ರಾತ್ರಿ, ಸುಖ-ದುಃಖಗಳೆಂಬ ಅನೇಕ ದ್ವಂದ್ವಗಳಿಂದ ಕೂಡಿದ್ದಾಗಿದೆ. ಹಾಗೆಯೇ ನಮ್ಮ ನಡುವೆ ಒಳ್ಳೆಯವರ ಜೊತೆ ಕೆಡುಕರೂ ಕೆಲವರು ಇರುವುದು ಸುಳ್ಳಲ್ಲ. ವೈದ್ಯಲೋಕವೂ ಇದಕ್ಕೆ ಹೊರತಲ್ಲ. ಆದರೂ ಒಬ್ಬ ಒಳ್ಳೆಯ ವೈದ್ಯ ಸದಾ ವಂದ್ಯನೇ ಹೌದು.
ಎಲ್ಲ ವೈದ್ಯರಿಗೂ ವಿಶ್ವವೈದ್ಯರ ದಿನದ ಶುಭಾಶಯಗಳು. ನಮಗೆ ಆರೋಗ್ಯಭಾಗ್ಯವನ್ನು ಕರುಣಿಸುವ ನಿಮಗೆ ಭಗವಂತನು ಸಕಲ ಸೌಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬುದು ನಮ್ಮ ಹಾರೈಕೆ.
- ಡಾ. ವಿಜಯಲಕ್ಷ್ಮಿ ಎಂ
ಸಹಾಯಕ ಪ್ರಾಧ್ಯಾಪಕರು
ಸಂಸ್ಕೃತ ವಿಭಾಗ
ಎಂ.ಜಿ.ಎಂ. ಕಾಲೇಜು, ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ