ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಕಾಂಗ್ರೆಸ್ ಸರಕಾರದ ಬಜೆಟ್ ನಲ್ಲಿ ಯಾವುದೇ ಹೊಸ ಘೋಷಣೆ ಮಾಡದೆ ತೀರಾ ನಿರಾಶಾದಾಯಕವಾಗಿದ್ದು, ಇದೊಂದು ಪೊಳ್ಳು ಬಜೆಟ್ ಆಗಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಟೀಕಿಸಿದರು.
ಬಜೆಟ್ ಮೂಲಕ ಕೇಂದ್ರ ಸರಕಾರವನ್ನು ದೂಷಿಸುವ ಕೆಲಸ ಮಾಡಲಾಗಿದ್ದು ಕೇಂದ್ರ ಸರಕಾರ ಏನು ಮಾಡಿಲ್ಲ ಮತ್ತು ಈ ಹಿಂದಿನ ಬಿಜೆಪಿ ಸರಕಾರ ಈ ರಾಜ್ಯಕ್ಕೆ ಏನೂ ಯೋಜನೆಗಳನ್ನು ಕೊಟ್ಟಿಲ್ಲ ಎಂದು ಬಿಂಬಿಸಲು ಹೊರಟಂತಿದೆ. ಅಲ್ಲದೆ ಮುಂದೆ ನಮ್ಮ ಸರಕಾರಕ್ಕೂ ಏನು ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಈ ಬಜೆಟ್ ಮೂಲಕ ಸರಕಾರ ಒಪ್ಪಿಕೊಂಡಂತಿದೆ.
ಇನ್ನು ಕರಾವಳಿಯ ಪಾಲಿಗೆ ಅತ್ಯಂತ ನಿರಾಶದಾಯಕ ಬಜೆಟ್ ಇದಾಗಿದೆ. ಕಾಂಗ್ರೆಸ್ ನವರು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕರಾವಳಿಗೆ ಪ್ರತ್ಯೇಕ ಬಜೆಟ್ ನೀಡದೆ ಜನರನ್ನು ವಂಚಿಸಲಾಗಿದೆ. ಯಾವುದೇ ಒಂದು ಹೊಸ ಯೋಜನೆಗಳನ್ನು ಘೋಷಿಸಲಾಗಿಲ್ಲ.
ಇಡೀ ಬಜೆಟ್ ನಲ್ಲಿ ಯಾವುದೇ ಹೊಸ ಘೋಷಣೆಗಳಿಲ್ಲದೆ ಹಿಂದಿನ ಬಿಜೆಪಿ ಸರಕಾರದ ಯೋಜನೆಯನ್ನೇ ಮುಂದುವರಿಸಿ ನಮ್ಮದು ಎಂಬಂತೆ ಬಿಂಬಿಸುವ ಕೆಲಸವನ್ನು ಈ ಬಜೆಟ್ ಮೂಲಕ ಮಾಡಲಾಗಿದೆ. ಅಲ್ಲದೆ ಗ್ಯಾರೆಂಟಿ ಯೋಜನೆಗಳ ವೈಭವೀಕರಣವನ್ನು ಮಾಡಲಾಗಿದ್ದು, ರಾಜ್ಯಕ್ಕೆ ಈ ಬಜೆಟ್ ನಿಂದ ನಯಾ ಪೈಸೆ ಉಪಯೋಗ ಇಲ್ಲದಂತಾಗಿದೆ ಎಂದು ಶಾಸಕ ಕಾಮತ್ ಹೇಳಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ