ನಿನ್ನೆ ರಾತ್ರಿ (ಜು.29) ಬೆಂಗಳೂರಿಂದ ಪುತ್ತೂರಿನ ನನ್ನ ಮನೆಗಾಗಿ ಬಸ್ಸು ಹತ್ತಿದೆ. ಹವಾ ನಿಯಂತ್ರಣವಿಲ್ಲದ ಮಲಗುವ ಬಸ್ಸಿನ ಮೇಲಂತಸ್ತಿನಲ್ಲಿ ನಾನು ಕುಳಿತಿದ್ದೆ. ನನ್ನ ಬಳಿಗೆ ಬಂದು ವ್ಯಕ್ತಿಯೊಬ್ಬ ಹಣ ಸಿಗಬಹುದೇ ಎಂದು ಕೇಳಿದ? ಅಕಾಲದಲ್ಲಿ ಅಪರಿಚಿತರೊಡನೆ ಯಾವುದೇ ವ್ಯವಹಾರ ತಪ್ಪು ಎಂಬ ಕಾರಣದಿಂದ ಇಲ್ಲವೆಂದು ಮುಗುಳ್ನಕ್ಕು ಸಾಗ ಹಾಕಿದೆ. ಅದಾಗಿ ಸ್ವಲ್ಪ ಹೊತ್ತಿನಲ್ಲಿ ಹೆಣ್ಣುಮಗಳೊಬ್ಬಳು ನಾನಿರುವ ಸೀಟಿನ ಕೆಳಬದಿಯಲ್ಲಿ ಆಚೀಚೆ ಬದಿಯಲ್ಲಿ ತನ್ನ ಚೀಲಕ್ಕಾಗಿ ತಡಕಾಡುವುದನ್ನು ಕಂಡೆ. ಇನ್ನೊಂದು ವ್ಯಕ್ತಿಯೊಡನೆ ಇಲ್ಲೇ ಇಟ್ಟಿದ್ದೆ, ಕಾಣದಾಗಿದೆ ಎಂದು ಅಲವತ್ತು ಕೊಳ್ಳುವುದನ್ನು ನೋಡಿ ಏನೆಂದು ವಿಚಾರಿಸಿದೆ.
ತಾನು ಮುಂದಾಗಿ ಕಾಯ್ದಿರಿಸಿದ ಸೀಟಿನಲ್ಲಿ ಬ್ಯಾಗನ್ನಿರಿಸಿ ಶೌಚಾಲಯಕ್ಕೆ ಗಮನಿಸಿದ್ದರಂತೆ. ಬಸ್ಸಿನೊಳಗೆ ಇನ್ನಿತರರು ಯಾರೂ ಬರಲಾರರು ಎಂಬ ನಂಬಿಕೆಯಿಂದ ಬ್ಯಾಗನ್ನಿರಿಸಿ ಹೋಗಿ ಬರುವಾಗ ಬ್ಯಾಗು ಕಾಣೆಯಾಗಿತ್ತು. ಕೇವಲ ಆಕೆಯದ್ದು ಮಾತ್ರವಲ್ಲ ಮುಂದಿನ ಸೀಟಿನಲ್ಲಿ ಇನ್ನೊಬ್ಬರು ಮಹನೀಯರದ್ದು ಬ್ಯಾಗು ತಷ್ಕರಣವಾಗಿತ್ತು. ಅವರ ಬಟ್ಟೆ ಬರೆಗಳ ವಿನಹ ಬೇರಿನ್ನೇನು ಇರಲಿಲ್ಲವಂತೆ. ಆದರೆ ಹೆಣ್ಣು ಮಗಳು ಕಳಕೊಂಡದ್ದು ಆಕೆಯ ಐಫೋನ್ ಕ್ರೆಡಿಟ್ಟು ಡೆಬಿಟ್ ಕಾರ್ಡ್ಗಳು, ಡ್ರೈವಿಂಗ್ ಲೈಸೆನ್ಸ್ ಗಳು, ವೃತ್ತಿ ಸಂಬಂಧಿ ದಾಖಲೆಗಳು ಇತ್ಯಾದಿ ಇತ್ಯಾದಿ.ಆಕೆಯ ಮುಖದಲ್ಲಿ ಕಂಡ ಹತಾಶೆ ನೋವು ಯಾರಿಗಾದರೂ ವೇದನೆಯನ್ನು ನೀಡಲೇಬೇಕು. ನನ್ನಲ್ಲಿ ಸಹಾಯ ಯಾಚಿಸಿದ ವ್ಯಕ್ತಿ ಹಿಂಬದಿಯಲ್ಲೂ ಇನ್ನೊಬ್ಬರಡನೆ ಇದೇ ಪ್ರಶ್ನೆಯನ್ನು ಕೇಳಿದ್ದನಂತೆ. ಆನಂತರ ಆ ವ್ಯಕ್ತಿಯನ್ನು ಯಾರೂ ಕಂಡಿಲ್ಲ.
ಸಹ ಪ್ರಯಾಣಿಕರ ಸಂಚಾರ ವಾಣಿಯ ಮುಖಾಂತರ , ಬಸ್ಸು ನಿರ್ವಾಹಕರ ಸಹಾಯದ ಮುಖಾಂತರ ಮುಂದಿನ ಇನ್ನಷ್ಟು ಅಪಾಯಗಳನ್ನು ಕಡಿಮೆ ಮಾಡುವ (ಕಾರ್ಡು ಬ್ಲಾಕಿಂಗ್ ಸಿಮ್ ಬ್ಲಾಕಿಂಗ್ ಇತ್ಯಾದಿ ಇತ್ಯಾದಿ) ವ್ಯವಸ್ಥೆಯನ್ನು ಮಾಡಿಕೊಂಡು ಪ್ರಯಾಣವನ್ನು ಮುಂದುವರಿಸಿದರು.
ಯಾವುದೇ ವಾಹನದಲ್ಲಿ ಪ್ರಯಾಣಿಸುವವರು ತೆಗೆದುಕೊಳ್ಳಬೇಕಾದ ಅತ್ಯಂತ ಎಚ್ಚರಿಕೆ ಎಂದರೆ, ಅಪರಿಚಿತರನ್ನು ನಂಬಿದಂತೆ ಇದ್ದು ನಂಬದೇ ಇರ ಬೇಕಾದ್ದು. ಅಮೂಲ್ಯ ವಸ್ತುಗಳಿರುವ ಯಾವುದೇ ಚೀಲಗಳನ್ನು ಒಂಟಿಯಾಗಿ ಇರಿಸಿ ಹೋಗಬಾರದ್ದು. ದುಷ್ಟರು ನಮ್ಮ ಬೆನ್ನ ಹಿಂದೆಯೇ ಇದ್ದಾರೆ ಆದರೆ ನಮ್ಮ ಗಮನ ಅವರ ಮೇಲೆ ಹೋಗಿಲ್ಲ ಮಾತ್ರ ಎಂಬ ಸತ್ಯದ ಅರಿವು ಇರಬೇಕಾದದ್ದು.
-ಎ.ಪಿ. ಸದಾಶಿವ ಮರಿಕೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ