|| ಮಹಾನಂತರ್ಗತ ಶ್ರೀ ವಾಮನಾಯ ನಮಃ ||
ಅಕ್ರೂರ ಕಂಸನ ಆಶ್ರಯದಲ್ಲಿನ, ಕೃಷ್ಣನ ಹಿರಿಯ ಬಂಧು. ಗೋಕುಲದಿಂದ ದೂರವಿದ್ದರೂ ಅವನಿಗೆ ಕೃಷ್ಣನ ಅತಿಮಾನುಷ. ವ್ಯಕ್ತಿತ್ವದ ಪರಿಚಯವಿತ್ತು. ಆ ಕೃಷ್ಣ ಭೇಟಿ ಎಂದು ಆದೀತೆಂದು ತುಡಿಯುತ್ತಿದ್ದ ಅವನಿಗೆ, ಕೃಷ್ಣನನ್ನು ಮಥುರೆಗೆ ಕರೆದೊಯ್ಯುವುದು ನೋವಿನ ಸಂಗತಿಯೂ ಹೌದು. ಕಾರಣ, ಕೃಷ್ಣನನ್ನು ಕಂಸನೇಕೆ ಕರೆಸಿಕೊಳ್ಳುತ್ತಿದ್ದಾನೆಂಬುದನ್ನು ಅವನು ಬಲ್ಲ.
ಕೃಷ್ಣನನ್ನು ಅಗಲಿರಲಾರದವರಾಗಿದ್ದ ಗೋಪಿಕೆಯರು, ಹೊರಟು ನಿಂತ ಕೃಷ್ಣನನ್ನು ಜರೆಯಲಿಲ್ಲ. ಅವರ ನಿಂದನೆಗೆ ಪಾತ್ರನದವನು ಅಕ್ರೂರ! ಕೃಷ್ಣ-ಬಲರಾಮರನ್ನು ಕುಳ್ಳಿರಿಸಿಕೊಂಡು ಹೊರಟ ಅಕ್ರೂರನಿಗೆ ಕೃಷ್ಣನ ದಿವ್ಯ ವ್ಯಕ್ತಿತ್ವದ ಪರಿಚಯವಾದುದು, ಹಾದಿಯಲ್ಲಿ ಸಿಕ್ಕಿದ ಯಮುನೆಯ ಅಲೆಗಳಲ್ಲಿ- ಎಂಬ ಸುಂದರವದೊಂದು ರೂಪಕ ಭಾಗವತದ ದಶಮ ಸ್ಕಂದದಲ್ಲಿ ಬರುತ್ತದೆ.
ಸ್ನೇಹಮಯಿ ಕೃಷ್ಣ ತನ್ನ ಭಕ್ತರನ್ನು ಗೌರವಿಸುತ್ತಿದ್ದ ರೀತಿಯನ್ನು ನೋಡಬೇಕಿದ್ದರೆ ಅಕ್ರೂರ ಹಾಗೂ ಕೃಷ್ಣರ ನಡುವಿನ ನಡೆವಳಿಕೆಯನ್ನು ನೋಡಬೇಕು. ಅವನು ಕೃಷ್ಣನ ಆರಾಧಕ. ಆದರೆ ಕೃಷ್ಣ ಅಕ್ರೂರನನ್ನು ಗುರುವೆಂದು ಮನ್ನಿಸಿದ. ಅವನನ್ನು ಪ್ರೀತಿಯಿಂದ 'ಚಿಕ್ಕಪ್ಪ' ಎಂದೇ ಸಂಬೋಧಿಸುತ್ತಿದ್ದ.
ಕೃಷ್ಣನನ್ನು ತನ್ನ ಆರಾಧ್ಯ ದೈವವೆಂದು ಸ್ವೀಕರಿಸಿಯೂ ಅಕ್ರೂರ ಅವನನ್ನು ಕರೆತರಲು ಗೋಕುಲಕ್ಕೆ ಹೋದುದು ಸರಿಯೆ? ಎಂದು ಅನೇಕರಿಗೆ ಅನ್ನಿಸಬಹುದು. ಆದರೆ ಈ ವಾದವನ್ನು ಒಪ್ಪಿಕೊಳ್ಳಲಾಗದು. ಅಕ್ರೂರ ತನ್ನ ಕರ್ತವ್ಯವನ್ನಷ್ಟೆ ಪೂರೈಸಿದ್ದ. ಕಂಸನ ಕ್ರೂರ ಕೃತ್ಯಗಳಿಂದ ರೋಸಿಹೋಗಿದ್ದ ಅವನ ಸಾತ್ತ್ವಿಕ ಮನಸ್ಸು ಒಂದು ಸಲವಾದರೂ-
ಕರೆದು ನೋಡೋಣವೇ ಆ ಕರಿಯ ಚೆಲುವನನು
ದುರುತ ದೂಷಿತ ದುಷ್ಟ ನಗರದೊಳಗೆ?
ಎಂದುಕೊಂಡಿದ್ದಿರಬಹುದು ಅಲ್ಲದೆ-
ಕಲಿಪುರುಷ ಸಂತತಿಯ ಕಳೆದೊಗೆದು ಹೊಸಬೆಳಕು ಹೊಳೆಸಿ ಪಸರಿಸಲಿ ಹೊಸ ಒಲವಿನೊಸಗೆ ಎಂಬ ಹಾರೈಕೆಯೂ ಅವನಲ್ಲಿದಿರಬಹುದು. ಅಕ್ರೂರ ನಿಜಕ್ಕೂ ಭಾಗ್ಯವಂತ. ಅವನು ಕೃಷ್ಣನ ಹಿರಿಯ ಬಂಧುವಾಗಿದ್ದರೂ ಅವನ ಭಕ್ತನಾಗಿ, ಗೆಳೆಯನಾಗಿ ಅವನನ್ನು ಕಾಣಲು ಬಂದ. ಅವನಿಗೆ ಕೃಷ್ಣನ ದರ್ಶನವೂ ಸಿಕ್ಕಿತು. ಜತೆಗೆ ಗೋಪಿಯರ ನಿರ್ಮಲ ಪ್ರೇಮದ ದರ್ಶನವೂ ಆಯಿತು. ಸಂಸಾರದೊಳಗಿದ್ದೂ ಬದುಕನ್ನು ಆರಾಧನೆಯನ್ನಾಗಿಸಿಕೊಳ್ಳುವ ಬಗೆ ಹೇಗೆಂಬುದನ್ನು ಆ ಸಾಧಕಶ್ರೇಷ್ಠನಿಗೆ ಗೋಕುಲ ಕಾಣಿಸಿಕೊಟ್ಟದ್ದು ಹೀಗೆ.
ಕರ್ಷಣ ಎಂದರೆ ವಶಪಡಿಸಿಕೊಳ್ಳುವುದು. ಹೊಲದಲ್ಲಿಯ ರೈತ ಹೇಗೆ ಎತ್ತುಗಳಿಗೆ ಮೂಗುದಾರ ಹಾಕಿ ತನ್ನ ವಶದಲ್ಲಿ ಇಟ್ಟುಕೊಂಡು ಹೇಗೆ ಬೇಕೋ ಹಾಗೆ ಅವುಗಳಿಂದ ಕೆಲಸ ಮಾಡಿಸಿಕೊಳ್ಳುತ್ತಾನೋ ಹಾಗೆ ಭಗವಂತ ಸಮಸ್ತ ಜಗತ್ತನ್ನು ತನ್ನ ವಶದಲ್ಲಿ ಇಟ್ಟುಕೊಂಡುತನ್ನ ಇಚ್ಚೆಗೆ ತಕ್ಕಂತೆ, ಪ್ರಚೋದನೆ ಮಾಡಿ ಕಾರ್ಯ ಪ್ರವೃತ್ತನಾಗಿ ಮಾಡುತ್ತಾನೆ ಆದ್ದರಿಂದ ಅವನ್ನು ಕೃಷ್ಣ ಎಂದು ಕರೆಯಲಾಯಿತು. ಅದರಂತೆ ಭಾಗವತದಲ್ಲಿ ಇನ್ನಷ್ಟು ಸ್ಪಷ್ಟವಾಗಿ ವೇದಗಳೆಂಬ ದಾರದಿಂದ ಮೂಗುದಾರ ಹಾಕಿ ಕರ್ತವ್ಯ ಮುಖರನ್ನಾಗಿ ಭಗವಂತ ಮಾಡಿದ್ದಾನೆ. ಆದ್ದರಿಂದ ಕರ್ಷಣದಿಂದ ಕೃಷ್ಣನಾದನು.
ನಮ್ಮ ನಿರಂತರದ ಎಲ್ಲ ಪುಣ್ಯ ಪಾಪಗಳನ್ನು ಕರ್ಷಣೆ ಮಾಡಿಕೊಂಡು ಅದಕ್ಕೆ ತಕ್ಕ ಫಲವನ್ನು ಹಂತ ಹಂತವಾಗಿ ಕೊಡುತ್ತಾನೆ ಅದು ಆತನ ವೈಶಿಷ್ಟ್ಯ. ಒಂದೇ ಸಲ ದುಃಖವನ್ನೋ ಸಂತೋಷವನ್ನೋ ಕೊಟ್ಟು ಬಿಟ್ಟಿದ್ದರೆ ಈ ಜೀವನ ನಡೆಯುವುದು ಕಷ್ಟವಾಗುತ್ತಿತ್ತು. ಒಮ್ಮೆ ಸುಖ ಮತ್ತೊಮ್ಮೆ ದುಃಖ ಅದರ ಬೆನ್ನ ಹಿಂದೆಯೇ ಮತ್ತೆ ಸಂತೋಷ ಹೀಗಿದೆ ಎಂದೇ ನಾವು ಬದುಕಲು ಜೀವನ ನಡೆಸಲು ಸಾಧ್ಯವಾಗಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಇದು ಆತನ ಕಾರುಣ್ಯ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ