ಅಮೆರಿಕಾ ದೇಶದ ಉತ್ತರ ಭಾಗದ ಅಟ್ಲಾಂಟಿಕ್ ಮಹಾಸಾಗರದಲ್ಲಿ ಬರ್ಮುಡಾ ಟ್ರಯಾಂಗಲ್ ಎಂಬ ಜಲ ಪ್ರದೇಶವಿದೆ. ಈ ಪ್ರದೇಶದ ಆಸುಪಾಸಿನಲ್ಲಿ ಆಗಸದಲ್ಲಿ ಸುಳಿದಾಡಿದರೂ ಆಯಾ ವಸ್ತುಗಳು ವ್ಯಕ್ತಿಗಳು ಕಣ್ಮರೆಯಾಗುತ್ತವೆ. ಹಲವಾರು ವಸ್ತುಗಳು, ವಿಮಾನಗಳು ಹಡಗುಗಳು ಈ ಪ್ರದೇಶದಲ್ಲಿ ಕಣ್ಮರೆಯಾಗಿವೆ. ಅವುಗಳ ಹುಡುಕಾಟ ಕೂಡ ನಿಷ್ಪಲವಾಗಿದೆ. ಇಲ್ಲಿಯವರೆಗೂ ಕಣ್ಮರೆಯಾಗಿ ಹೋದ ಯಾವುದೇ ವಸ್ತುಗಳು ವ್ಯಕ್ತಿಗಳು, ಹಡಗುಗಳು ಪತ್ತೆಯಾಗಿಲ್ಲ. ಅವಶೇಷಗಳು ಕೂಡ ಸಿಕ್ಕಿಲ್ಲ. ಇದಕ್ಕೆ ಕಾರಣ ಬರ್ಮುಡಾ ಟ್ರಯಾಂಗಲ್ ಎಂಬ ವಿಜ್ಞಾನಿಗಳು ಗುರುತಿಸಿರುವ ಸ್ಥಳ.
ಯಾವ ರೀತಿ ಬರ್ಮುಡಾ ಟ್ರಯಾಂಗಲ್ ತನ್ನ ಸನಿಹಕ್ಕೆ ಬಂದ ಎಲ್ಲವನ್ನು ತನ್ನೊಳಗೆ ಹುದುಗಿಸಿಕೊಳ್ಳುತ್ತದೆಯೋ ಹಾಗೆಯೇ ಮೊಬೈಲ್ ಎಂಬ ಮಾಯಾವಿ ತನ್ನ ಸನಿಹಕ್ಕೆ ಬಂದ ಎಲ್ಲರನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿಡುತ್ತದೆ. ದಾಸರು ಹೇಳಿದ ಮಾಯೆಯು ನಿನ್ನೊಳಗೊ.. ನೀನೆ ಮಾಯೆಯೋ ಎಂಬಂತೆ ಮೊಬೈಲ್ನ ಮಾಯೆಯಲ್ಲಿ ನಾವು ಸಿಲುಕಿದ್ದೇವೆಯೋ ಅಥವಾ ಮೊಬೈಲೇ ಒಂದು ಮಾಯೆಯು ಎಂಬುದು ಅರಿಯದ್ದು. ಮೊಬೈಲ್ ಎಂಬ ಬರ್ಮುಡಾ ಟ್ರಯಾಂಗಲ್ ನಮ್ಮ ಜೀವನದಲ್ಲಿ ಏನೇನನ್ನು ನುಂಗಿದೆ ಎಂಬುದರ ಅರಿವಾದರೆ ಎದೆ ಒಡೆಯುತ್ತದೆ.
ಮೊಬೈಲ್ ಮೊಟ್ಟ ಮೊದಲನೆಯದಾಗಿ ನಮ್ಮ ಸಮಯವನ್ನು ನುಂಗಿದೆ: ಮುಂಜಾನೆ ಎದ್ದೊಡನೆ ನಮ್ಮ ಕೈಗೆ ಸಿಕ್ಕುವುದು ಮೊಬೈಲ್ ಎಂಬ ಮಾಯೆ. ನಮ್ಮ ಮುಖ ತೊಳೆಯುವುದಕ್ಕೂ ಮುಂಚೆಯೇ ಮೊಬೈಲ್ ನ ಮುಖವನ್ನು ಒರೆಸಿ ಮೃದುವಾಗಿ ಸವರಿ ಸಾಮಾಜಿಕ ಜಾಲತಾಣಗಳ ಒಳಹೊಕ್ಕು ಬೇಕಾದ ಬೇಡವಾದ ಎಲ್ಲ ವಿಷಯಗಳನ್ನು ಓದಿ ವಿಡಿಯೋಗಳನ್ನು, ಆಡಿಯೋಗಳನ್ನು, ಸ್ಟೋರಿಗಳನ್ನು ಸ್ಟೇಟಸ್ ಗಳನ್ನು ರೀಲ್ಗಳನ್ನು ನೋಡಿ ಬ್ರಷ್ ಮಾಡಲು ಏಳುವ ಹೊತ್ತಿಗೆ ಗಂಟೆಯೊಂದು ಕಳೆದೆ ಹೋಗಿರುತ್ತದೆ. ಮುಂದೆ ಗಡಿಬಿಡಿಯಿಂದ ನಿತ್ಯ ಕರ್ಮಗಳನ್ನು ಮುಗಿಸಿ ತಿಂಡಿ ತಿಂದು ಗಂಡಸರು, ಮಕ್ಕಳು, ಉದ್ಯೋಗಸ್ಥ ಮಹಿಳೆಯರು ಶಾಲೆ ಕಾಲೇಜುಗಳತ್ತ ಆಫೀಸುಗಳತ್ತ ಮುಖ ಮಾಡಿದರೆ, ಮನೆಯ ಹೆಣ್ಣು ಮಕ್ಕಳು ಅಳಿದುಳಿದ ಕೆಲಸಗಳನ್ನು ಮಾಡಿ ಮತ್ತೆ ಮೊಬೈಲ್ ನಲ್ಲಿ ಮುಳುಗುತ್ತಾರೆ. ಕಾಲೇಜಿಗೆ, ಕಚೇರಿಗಳಿಗೆ ಹೋಗುವವರು ಬಸ್ಸುಗಳಲ್ಲಿ ಹೋಗುತ್ತಿದ್ದರೆ ತಮಗೆ ಸೀಟು ದೊರೆತಾಕ್ಷಣ ಮೊಬೈಲನ್ನು ಕೈಯಲ್ಲಿ ಹಿಡಿದರೆ ತಮ್ಮ ನಿಲ್ದಾಣ ಬರುವವರೆಗೆ ಮೊಬೈಲ್ನಲ್ಲಿಯೇ ಮುಳುಗಿ ಏಳುತ್ತಾರೆ.
ಮೊಬೈಲ್ ನಮ್ಮ ಓದುವಿಕೆಯನ್ನು ನುಂಗಿದೆ: ಹಿಂದೆಲ್ಲ ಜನರು ವಿರಾಮ ಕಾಲದಲ್ಲಿ ಓದುತ್ತಿದ್ದರು. ಆದರೆ ಇಂದು ಕಪಾಟಿನ ಸಂದುಗಳಲ್ಲಿ ಅವಿತು ಹೋಗಿವೆ. ಮೊಬೈಲ್ ನ ಮಾಯಾ ಪ್ರಪಂಚದಲ್ಲಿ ಕ್ಷಣಕ್ಕೊಮ್ಮೆ ಬದಲಾಗುವ ಚಿತ್ರಣದಲ್ಲಿ ಕಳೆದು ಹೋಗಿರುವ ಮನುಷ್ಯ ಪುಸ್ತಕಗಳನ್ನು ಸಂಪೂರ್ಣವಾಗಿ ಮರೆತೆ ಬಿಟ್ಟಿದ್ದಾನೆ. ಶಾಲೆಯಲ್ಲಿ ಪಠ್ಯಪುಸ್ತಕಗಳನ್ನು ಓದಿದ್ದೊಂದೇ ಭಾಗ್ಯ... ಎಷ್ಟೋ ಜನ ನ್ಯೂಸ್ ಪೇಪರ್ಗಳನ್ನು ಕೂಡ ಓದುತ್ತಿಲ್ಲ. ದಿನಪತ್ರಿಕೆಗಳು, ವಾರಪತ್ರಿಕೆಗಳು ಮಾಸಪತ್ರಿಕೆಗಳು ತ್ರೈಮಾಸಿಕಗಳು ದೀಪಾವಳಿ ವಿಶೇಷಾಂಕಗಳು ಹೀಗೆ ಹತ್ತು ಹಲವು ವಿಧದ ಪತ್ರಿಕೆಗಳು ನಮಗೆ ಇಡೀ ಜಗತ್ತಿನ ವಿಷಯವನ್ನು ಸೂಕ್ತವಾಗಿ ಸಮಯೋಚಿತವಾಗಿ ಅರುಹುತ್ತಿದ್ದವು. ಕೇವಲ ಒಂದು ಬಟನ್ ಒತ್ತುವುದರ ಮೂಲಕ ಇಡೀ ಜಗತ್ತಿನ ಸುದ್ದಿಯನ್ನು ತನ್ನ ಅಂಗೈಯೊಳಗಿನ ರೇಖೆಗಳಂತೆ ಸ್ಪಷ್ಟವಾಗಿ ನೋಡಿ ಅರಿಯಬಲ್ಲ ಮನುಷ್ಯನಿಗೆ ಪತ್ರಿಕೆ ಓದುವುದು ಮರೆತುಹೋಗಿದೆ ಎಂದರೆ ಅತಿಶಯೋಕ್ತಿ ಏನಲ್ಲ.
ಮೊಬೈಲ್ ನಮ್ಮ ಸಂಬಂಧಗಳನ್ನು ನುಂಗಿ ಹಾಕಿದೆ: ಪೂಜೆ ಪುನಸ್ಕಾರಗಳು,ಮದುವೆ ಮುಂಜಿ ನಾಮಕರಣ ಮುಂತಾದ ಸಮಾರಂಭಗಳಲ್ಲಿ ಮನೆಯವರೆಲ್ಲರೂ ಒಟ್ಟಾಗಿ ಸೇರಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಒಬ್ಬರಿಗೊಬ್ಬರು ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರು. ಅಬ್ಬರದ ನಗು, ಹರಟೆ, ತಮಾಷೆ, ಹಾಸ್ಯ ನಗೆ ಚಾಟಿಕೆ ಮೇರೆ ಮುಟ್ಟುತ್ತಿದ್ದವು ಆದರೆ ಇಂದು ಎಲ್ಲರೂ ತಮ್ಮ ತಮ್ಮ ಉದ್ಯೋಗಗಳಲ್ಲಿ ಆಧುನಿಕ ಜೀವನ ಶೈಲಿಯು ಕಲಿಸಿರುವ ಪ್ರೈವೆಸಿ ಎಂಬ ವೈಯುಕ್ತಿಕತೆಯನ್ನು ವೈಭವೀಕರಿಸುವ ಮತ್ತು ತಾವು ಸದಾ ಬ್ಯುಸಿಯಾಗಿದ್ದೇವೆ ಎಂಬ ಭಾವದಲ್ಲಿ ಎಲ್ಲರಿಂದ ದೂರವಾಗುತ್ತಿದ್ದಾರೆ. ಹಲವಾರು ಜನ ತಮ್ಮ ತಮ್ಮ ಮೊಬೈಲ್ಗಳಲ್ಲಿ ಒಂದೆರಡಲ್ಲ, ಹಲವಾರು ಸೆಲ್ಫಿಗಳನ್ನು ತೆಗೆದು ತಮ್ಮ ಸ್ಟೇಟಸ್ ಗಳಲ್ಲಿ ಅಪ್ಲೋಡ್ ಮಾಡುತ್ತಾ ತಾವು ಕುಟುಂಬದೊಂದಿಗೆ ಇದ್ದೇವೆ ಎಂದು ಡೋಂಗಿ ಮಾಡುತ್ತಾರೆ. ಆದರೆ ವಾಸ್ತವವಾಗಿ ಅವರು ಆಧುನಿಕ ಜೀವನ ಶೈಲಿಯಲ್ಲಿ ಕಳೆದು ಹೋಗಿ ಬಂಧುಗಳ ಜೊತೆಗಿನ ಒಡನಾಟ ಮತ್ತು ಸುಮಧುರ ಬಾಂಧವ್ಯವನ್ನು ಕಳೆದುಕೊಂಡಿದ್ದಾರೆ.
ಒಂದು ಮನೆಯಲ್ಲಿ ಆಗ ಕೇವಲ ಒಂದೇ ಟೆಲಿಫೋನ್ ಇರುತ್ತಿದ್ದು ಸುತ್ತಲ 10 ಮನೆಗಳನ್ನು ಅದು ಬೆಸೆಯುತ್ತಿತ್ತು. ಆದರೆ ಇಂದು ಎಲ್ಲರ ಕೈಯಲ್ಲೂ ಒಂದೊಂದು ಮೊಬೈಲ್ ಇದ್ದು ಅದು ಎಲ್ಲರನ್ನೂ ದೂರ ಮಾಡುತ್ತಿದೆ. ಒಂದು ಹಾಲ್ನಲ್ಲಿ ಎಲ್ಲರೂ ಕುಳಿತಿದ್ದು ಅಲ್ಲಿ ನೀರವ ಮೌನ ತಾಂಡವವಾಡುತ್ತಿದೆ ಎಂದರೆ ಎಲ್ಲರೂ ತಮ್ಮ ತಮ್ಮ ಮೊಬೈಲ್ಗಳಲ್ಲಿ ಮುಳುಗಿದ್ದಾರೆ ಎಂದೇ ಅರ್ಥ.
ಮೊಬೈಲ್ ನಮ್ಮ ಸೌಂದರ್ಯ ವೀಕ್ಷಣೆಯನ್ನು ನುಂಗಿ ಹಾಕಿದೆ: ಎಲ್ಲಾದರೂ ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗ ಮೊದಲು ನಾವು ಸುಂದರ ನಿಸರ್ಗವನ್ನು ನೋಡಿ ಸಂತಸ ಪಡುತ್ತಿದ್ದೆವು. ಆದರೆ ಈಗ ಆ ಸ್ಥಳಗಳಲ್ಲಿ ನಮ್ಮ ಮೊಬೈಲ್ ಫೋನ್ ಗಳಲ್ಲಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದರಲ್ಲಿ ಕಾಲ ಕಳೆಯುತ್ತೇವೆಯೇ ಹೊರತು ಅಲ್ಲಿಯ ಸುಂದರ ಚಿತ್ರಣವನ್ನು ಕಣ್ತುಂಬ ತುಂಬಿಕೊಳ್ಳುವುದಿಲ್ಲ. ಅದ್ಭುತ ಪ್ರವಾಸಿ ತಾಣಗಳಿಗೆ ಹೋಗಿ ಆನಂದಿಸಿದ್ದೇವೆ ಎಂಬುದಕ್ಕಿಂತಲೂ ನಮಗೆ ಹೋಗಿದ್ದೇವೆ ಎಂಬುದನ್ನು ಇತರರಿಗೆ ತಿಳಿಯಪಡಿಸುವುದೇ ಮುಖ್ಯ ಎಂಬಂತೆ ವರ್ತಿಸುತ್ತಿದ್ದೇವೆ. ಇನ್ನು ರೆಸ್ಟೋರೆಂಟ್ ಗಳಲ್ಲಿಯೂ ಕೂಡ ಇದೇ ಕಥೆ. ದುಬಾರಿ ಹೋಟೆಲ್ಗಳಲ್ಲಿನ ಅತಿ ವಿಶಿಷ್ಟ ವಸ್ತುಗಳನ್ನು ತಿನ್ನುವ ಮುನ್ನ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು ಇತ್ತೀಚೆಗಿನ ಬಹುದೊಡ್ಡ ಶೋಕಿ. ಇದೆಲ್ಲವೂ ತಪ್ಪೆಂದು ಹೇಳುವುದಿಲ್ಲ. ಹವ್ಯಾಸವು ಚಟವಾಗಿ ಪರಿವರ್ತನೆಯಾಗಲು ಬಿಡಬಾರದು ಅಷ್ಟೇ. ನಮ್ಮದಲ್ಲದ ನಮ್ಮತನವನ್ನು ನಮ್ಮ ಮೇಲೆ ನಾವೇ ಹೇರಿಕೊಂಡು ನಾವಲ್ಲದ ನಮ್ಮನ್ನು ನಾವು ನೋಡಿಕೊಂಡು ಖುಷಿಪಡುವಾಗ ನಮ್ಮೊಳಗಿನ ಆತ್ಮ ನಮ್ಮ ಅಲ್ಪತನವನ್ನು ಕಂಡು ನಗಬಾರದಷ್ಟೇ!!
ಅಜ್ಜಿಯ ಮನೆಗೆ ಹೋದ ಮಕ್ಕಳು ವಿತ್ ಗ್ರಾಂಡ್ ಮಾ ಎಂದು ಸೆಲ್ಫಿ ಹಾಕಿ ಮತ್ತೆ ತಮ್ಮ ತಮ್ಮ ಮೊಬೈಲ್ಗಳಲ್ಲಿ ಮುಳುಗಿ ಹೋದರೆ ಅಜ್ಜಿ ವ್ಯತಿತಳಾಗಿ ಕುಳಿತಿದ್ದಳಂತೆ.
ಪ್ರಸಿದ್ಧ ಮನೋವಿಜ್ಞಾನಿ ಒಬ್ಬರು ಹೀಗೆ ಹೇಳಿದ್ದಾರೆ ಮೊಬೈಲ್ ನಮ್ಮ ಜೀವನದ ನೂರಾರು ವಿಷಯಗಳಲ್ಲಿ ಒಂದು ಮಾತ್ರ... ಆದರೆ ಜೀವನವೇ ಅಲ್ಲ.
ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳಲ್ಲಿ ಬಂಜೆತನ, ಹೊಟ್ಟೆಬಾಕತನ ತತ್ಪರಿಣಾಮವಾಗಿ ಅಧಿಕ ಬೊಜ್ಜು, ಕಣ್ಣಿನಲ್ಲಿಯ ತೇವಾಂಶ ಕಡಿಮೆಯಾಗುವುದರ ಪರಿಣಾಮವಾಗಿ ದೃಷ್ಟಿ ಹಾನಿಗಳು, ಮೊಬೈಲ್ ಅತಿಯಾದ ಬಳಕೆಯಿಂದ ಒಂದು ರೀತಿಯ ವಿಭ್ರಾಂತ ಸ್ಥಿತಿ ಹಿರಿಯರಲ್ಲಿ ಉಂಟಾದರೆ ಮಕ್ಕಳು ಮೊಬೈಲ್ನಲ್ಲಿನ ಕಾರ್ಟೂನ್ಗಳನ್ನು ನೋಡುತ್ತಾ ಊಟ ಮಾಡುವುದು ಮತ್ತು ಸಮಯ ಕಳೆಯುವುದು.
ಪರಿಹಾರ ತುಂಬಾ ಸುಲಭ:
* ದಿನಕ್ಕೆ ಇಂತಿಷ್ಟೇ ಸಮಯ ಮೊಬೈಲನ್ನು ಉಪಯೋಗಿಸುತ್ತೇವೆ ಎಂದು ನಮಗೆ ನಾವೇ ಸಮಯ ನಿಗದಿ ಮಾಡಿಕೊಂಡು ಅದರಂತೆಯೇ ನಡೆಯಬೇಕು.
* ಸಾಮಾಜಿಕ ಜಾಲತಾಣಗಳು ತಂದು ಹಾಕುವ ವಿಷಯಗಳು ನಮಗೆ ಬೇಕೇ ಬೇಡವೇ ಎಂಬುದರ ಸ್ಪಷ್ಟ ಅರಿವನ್ನು ಹೊಂದಿದ್ದು ಬೇಡವಾದ ಎಲ್ಲವನ್ನು ದೂರವಿಡುವುದು ಅತ್ಯಂತ ಸೂಕ್ತವಾದದ್ದು.
* ಅನವಶ್ಯಕವಾಗಿ ಮೊಬೈಲ್ನಲ್ಲಿ ಚಾಟ್ ಮಾಡುವುದಾಗಲಿ ಮಾತನಾಡುವುದಾಗಲಿ ಕಡಿಮೆ ಮಾಡಬೇಕು.
* ಮೊಬೈಲ್ ಕ್ರೈಂ ಅಥವಾ ಸೈಬರ್ ಕ್ರೈಂ ಗೆ ಒಳಗಾಗದಿರುವಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು.
* ಪ್ರತಿ ದಿನ ಇಂತಿಷ್ಟು ಸಮಯ ಮೊಬೈಲನ್ನು ಸೈಲೆಂಟ್ ಮೋಡ್ ಗೆ ಹಾಕಿ ಬಿಡಬೇಕು. ಅನವಶ್ಯಕವಾಗಿ ವಿಡಿಯೋಗಳನ್ನು, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಬಾರದು.
* ಅಂತಿಮವಾಗಿ ನಮ್ಮ ಮೊಬೈಲ್ಗೆ ಸ್ವಿಚ್ ಆಫ್ ಎಂಬ ಆಯ್ಕೆಯನ್ನು ನೀಡಿದ್ದು ನಮ್ಮ ಮನೋ ದೈಹಿಕ ವಿಶ್ರಾಂತಿಗಾಗಿ ಮೊಬೈಲಿಗೆ ಕೂಡ ವಿಶ್ರಾಂತಿ ಕೊಡಬೇಕು.
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ