ಮಂಗಳೂರು: ಶಿಕ್ಷಣ ಒಂದು ಸಾಮಾಜಿಕ ಪರಿವರ್ತನೆಯ ಸಾಧನ. ಶಿಕ್ಷಣ ಕೇವಲ ಜನರನ್ನು ಕೇವಲ ಅಕ್ಷರಸ್ಥರನ್ನಾಗಿ ಮಾಡಿದರೆ ಸಾಲದು, ಅವರನ್ನು ವಿದ್ಯಾವಂತರನ್ನಾಗಿಸಬೇಕು. ಮೌಲ್ಯಗಳಿಂದ ಕೂಡಿದ ಮನುಷ್ಯರನ್ನು ಸೃಷ್ಟಿಸಬೇಕು, ಎಂದು ನಿಟ್ಟೆ ವಿಶ್ವವಿದ್ಯಾನಿಲಯದ (ಡೀಮ್ಡ್) ಬಯೋ ಇನ್ಫರ್ಮ್ಯಾಟಿಕ್ಸ್ನ ಸಹ ಪ್ರಾಧ್ಯಾಪಕ ಡಾ. ಶ್ಯಾಮ್ಪ್ರಸಾದ್ ರಾವ್ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗವು ಮಂಗಳಾ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ಫೆಸ್ಟ್: ಬಯೋಸಿನರ್ಜಿ:2023ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಪುಲವಾದ ಮಾಹಿತಿ ಬೆರಳತುದಿಯಲ್ಲಿ ಲಭ್ಯವಿದೆ, ಆದರೆ ಜ್ಞಾನ ಕಾಣೆಯಾಗಿದೆ. ವೈವಿಧ್ಯಮಯ ವಿಷಯಗಳು ಮತ್ತು ವಿಭಾಗಗಳು ಅಸ್ತಿತ್ವದಲ್ಲಿವೆ, ಆದರೆ ಸಿನರ್ಜಿ ಇರುವುದಿಲ್ಲ. ಇಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ, ಎಂದರು.
ಕಾರ್ಯಕ್ರಮದ ಸಂಯೋಜಕ ಪ್ರೊ. ಪ್ರಶಾಂತ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಬಯೋಸಿನರ್ಜಿ 2023 ಪದವಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಲು ಒಂದು ಸುವರ್ಣವೇದಿಕೆಯಾಗಿದೆ. ಸಿನರ್ಜಿ ಇರುವಲ್ಲಿ ಯಶಸ್ಸು ಇರುತ್ತದೆ. ಸಿನರ್ಜಿ ಎನ್ನುವುದು ವೈಯಕ್ತಿಕ ಪರಿಣಾಮಗಳ ಮೊತ್ತಕ್ಕಿಂತ ಹೆಚ್ಚಿನ ಸಂಯೋಜಿತ ಪರಿಣಾಮವನ್ನು ಉಂಟುಮಾಡಲು ವಿವಿಧ ವಸ್ತುಗಳ, ವ್ಯಕ್ತಿಗಳ ಅವರ ಕೌಶಲ್ಯಗಳ ಸಮನ್ವಯವಾಗಿದೆ, ಎಂದರು.
ವಿಭಾಗದ ಅಧ್ಯಕ್ಷೆ ಪ್ರೊ. ಚಂದ್ರಾ ಎಂ. ಅವರು ಜೀವವಿಜ್ಞಾನ ವಿಭಾಗದ ಸ್ಥೂಲಪರಿಚಯ ಮತ್ತು ವಿಭಾಗದಿಂದ ನೀಡುವ ಜೀವವಿಜ್ಞಾನ, ಜೈವಿಕತಂತ್ರಜ್ಞಾನ, ಪರಿಸರವಿಜ್ಞಾನ, ಸೂಕ್ಷ್ಮಜೀವವಿಜ್ಞಾನ, ಆಹಾರವಿಜ್ಞಾನ ಮತ್ತು ಪೋಷಣೆ ಒಟ್ಟು ಐದು ಸ್ನಾತಕೋತ್ತರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಕಲ್ಯಾಣನಿರ್ದೇಶನಾಲಯದ ನಿರ್ದೇಶಕ ಪ್ರೊ. ಪರಮೇಶ್ವರ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ, ಹೊರಾಂಗಣ ಕಲಿಕೆ ವಿದ್ಯಾರ್ಥಿಗಳಿಗೆ ಅಂತರ್ಗತ ಕಲಿಕೆ ಮತ್ತು ಭಾವನಾತ್ಮಕ ಅಂಶಗಳ ಬೆಳವಣಿಗೆಗೆ ಸಹಕರಿಸುತ್ತದೆ, ಎಂದರು.
ಪ್ರತೀಕ್ಷಾ ವೇಣುಗೋಪಾಲ್ ಮತ್ತು ಪ್ರಾರ್ಥನಾ ಉದ್ಘಾಟನೆ ಮತ್ತು ಸಮಾರೋಪದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಅನುಷಾ ವಿವಿಧ ಸ್ಪರ್ಧೆಗಳ ವಿವರ ನೀಡಿದರು. ಸ್ನಾತಕೋತ್ತರ ಬಯೋಟೆಕ್ನಾಲಜಿಯ ಸಂಯೋಜಕಿ ಪ್ರೊ. ಮೋನಿಕಾ ಸದಾನಂದ, ಸ್ನಾತಕೋತ್ತರ ಪರಿಸರ ವಿಜ್ಞಾನದ ಸಂಯೋಜಕಿ ಪ್ರೊ. ತಾರವತಿ ಎನ್. ಸಿ., ಕಾರ್ಯಕ್ರಮ ಸಂಯೋಜಕಿ ಡಾ.ಲವೀನಾಕೆ.ಬಿ., ಖಜಾಂಚಿ ಡಾ.ನನ್ನುಶಫಕತುಲ, ಸೌರವ್, ಜೀವನ್ ಮತ್ತು ಶ್ರೀಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು. ಅಂತಿಮವಾಗಿ, ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸ್ಪರ್ಧೆ- ಬಹುಮಾನ:
ಜೆನೆಸಿಸ್ (ಐಸ್ಬ್ರೇಕರ್), ಬಯೋ-ಬ್ಲಿಟ್ಜ್ (ನಿಧಿ ಹುಡುಕಾಟ), ವೈಜ್ಞಾನಿಕಚಿಕ್ (ವಿಜ್ಞಾನ ಫ್ಯಾಷನ್), ಜ್ವಾಲೆಯಿಲ್ಲದಹಬ್ಬ (ಬೆಂಕಿ ಇಲ್ಲದೆ ಅಡುಗೆ), ಬುದ್ದಿಮತ್ತೆ (ಜೈವಿಕ ರಸಪ್ರಶ್ನೆ), ಸಿನಿ-ಸೈನ್ಸ್ (ವೀಡಿಯೋಗ್ರಫಿ), ಇನ್ನೋವೇಶನ್ ಸ್ವೇಷನ್ (ವಿಜ್ಞಾನ ಮಾದರಿ), ಇಂಪಲ್ಸ್ (ಸೆಮಿನಾರ್ ಪ್ರಸ್ತುತಿ), ಕ್ರೋಮ್ಯಾಟಿಕ್ಕನ್ ವರ್ಜೆನ್ಸ್ (ರಂಗೋಲಿ) ಮತ್ತು ಥಿಂಕ್ಟ್ ಯ್ಯಾಂಕ್ (ಉತ್ಪನ್ನ ಬಿಡುಗಡೆ), ವಿಸ್ತಾರಾ (ಪೋಸ್ಟರ್ ಪ್ರಸ್ತುತಿ) ನಂತಹ ವಿಶಿಷ್ಟರೀತಿಯ ಸ್ಪರ್ಧೆಗಳನ್ನು ನಡೆಸಲಾಯಿತು.
ವಿವಿಧ ಕಾಲೇಜುಗಳಿಂದ 250 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಂಗಳೂರಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ & ಮ್ಯಾನೇಜ್ಮೆಂಟ್ ಸಮಗ್ರ ಚಾಂಪಿಯನ್ಶಿಪ್ ಮತ್ತು ಉಜಿರೆಯ ಎಸ್ಡಿಎಂ ಕಾಲೇಜು ರನ್ನರ್ ಅಪ್ ಪ್ರಶಸ್ತಿಗಳಿಸಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


