ಕಾರ್ಕಳ: ವೇದಮೂಲವಾದ ನಮ್ಮ ಎಲ್ಲಾ ಕಲಾಪ್ರಕಾರಗಳಲ್ಲಿ ನಾಟಕವೂ ಕೂಡಾ ಒಂದಾಗಿದ್ದು ವೇದಗಳಲ್ಲಿ ನಾಟಕದ ಬೀಜರೂಪದ ಅನೇಕ ಘಟನೆಗಳನ್ನು ಮತ್ತು ಕಥೆಗಳನ್ನು ಗಮನಿಸಬಹುದಾಗಿದ್ದು ಸಂಸ್ಕೃತ ನಾಟಕ ಪರಂಪರೆಯಲ್ಲಿರುವ ಕ್ರಾಂತಿಕಾರಕ ಹೆಜ್ಜೆಗಳನ್ನು ಕೂಡಾ ಗುರುತಿಸಬಹುದಾಗಿದೆ ಎಂಬುದಾಗಿ ಖ್ಯಾತ ಸಂಸ್ಕೃತ ವಿದ್ವಾಂಸರು ಹಾಗೂ ಉಪನ್ಯಾಸಕರೂ ಆಗಿರುವ ಶ್ರೀ ಜಿ.ಪಿ.ಪ್ರಭಾಕರ್ ತುಮರಿಯವರು ಇಲ್ಲಿ ಮತಾನಾಡುತ್ತಾ ತಿಳಿಸಿದರು. ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಮತ್ತು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ಸಂಸ್ಕೃತ ನಾಟಕಗಳು ಮತ್ತು ಆಧುನಿಕ ರಂಗಭೂಮಿ -ಹೊಸ ಸಾಧ್ಯತೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಭಾಸ, ಕಾಳಿದಾಸ ಮುಂತಾದ ಅನೇಕ ಕವಿಗಳು ರಚಿಸಿದ ಸಂಸ್ಕೃತ ನಾಟಕಗಳು ರಂಗದಲ್ಲಿ ಯಶಸ್ವಿಯಾಗಿದ್ದು ಭಕ್ತಿ ಚಳವಳಿಯ ಕಾಲಘಟ್ಟದಲ್ಲಿಯೂ ಸಂಸ್ಕೃತ ನಾಟಕಗಳು ಮತ್ತು ಕಾವ್ಯ ಪರಂಪರೆ ಬೆಳೆದು ಬಂದವು. ಕನ್ನಡ ಮತ್ತು ಸಂಸ್ಕೃತದ ಉತ್ತಮ ಭಾಂದವ್ಯದಿಂದಾಗಿ ಅನೇಕ ಕಂಪೆನಿ ನಾಟಕಗಳಲ್ಲಿಯೂ ಸಂಸ್ಕೃತದಿಂದ ಅನುವಾದಿತ ನಾಟಕಗಳು ಕೆಲವು ಮಾರ್ಪಾಡುಗಳೊಂದಿಗೆ ವೃತ್ತಿ ರಂಗಭೂಮಿಯಲ್ಲಿ ಯಶಸ್ವಿಯಾಗಿವೆ ಎಂದರು. ಭರತನ ನಾಟ್ಯ ಶಾಸ್ತ್ರದಲ್ಲಿ ನಾಟಕದ ಬಗ್ಗೆಯು ಉಲ್ಲೇಖವಿದ್ದು ಅದನ್ನವರು ಸೋದಾಹರಣವಾಗಿ ವಿವರಿಸಿದರು.
ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ, ಅ.ಭಾ.ಸಾ.ಪ.ಕಾರ್ಕಳ ತಾಲೂಕಿನ ಗೌರವಾಧ್ಯಕ್ಷರಾದ ಶ್ರೀ ನಿತ್ಯಾನಂದ ಪೈ, ಉಪಾಧ್ಯಕ್ಷರಾದ ಕ್ಯಾ. ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಗೀತಾ ಮಲ್ಯ ಅವರು ಪ್ರಾರ್ಥಿಸಿದರು. ಶ್ರೀಮತಿ ವೀಣಾ ರಾಜೇಶ್ ಉಪನ್ಯಾಸಕರನ್ನು ಪರಿಚಯಿಸಿದರು. ಸತೀಶ್ ಕುಮಾರ್ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ