ಯುವ ಸಮುದಾಯದ ಸಮಾಜಮುಖಿ ಯೋಚನೆಗಳ ಫಲವಾಗಿ ಹುಟ್ಟಿದ ಸಂಸ್ಥೆ ಈ "ಭರವಸೆ". ಸಂಸ್ಥೆಯು ಕಳೆದ ಎರಡೂವರೆ ವರ್ಷಗಳಿಂದ ತನ್ನ ಅತ್ಯುತ್ತಮ ಕಾರ್ಯಗಳ ಮೂಲಕ ಸಮಾಜಕ್ಕೆ ವಿಶೇಷ ರೀತಿಯ ಪ್ರೇರಣೆಯಾಗಿ ಅದರ ಜೊತೆಗೆ ಸಮಾಜದ ಶ್ಲಾಘನೆಗೂ ಸಹ ಪಾತ್ರವಾಗಿದೆ. ತಮ್ಮ ಕಾರ್ಯಗಳ ಮೂಲಕ ಹಲವಾರು ಯುವಕ ಯುವತಿಯರ ತನ್ನೆಡೆಗೆ ಸೆಳೆದು ಅವರಲ್ಲಿ ಸಾಮಾಜಿಕ ಬಾಧ್ಯತೆಯನ್ನು ಹುಟ್ಟು ಹಾಕಿದೆ. ತಮ್ಮ ಬಿಡುವಿನ ವಾರಾಂತ್ಯದಲ್ಲಿ ತಮ್ಮ ದುಡಿಮೆಯ ಹಣದಲ್ಲಿ ಸಮಾಜದಿಂದ ಸಾಕಷ್ಟು ಪಡೆದ ನಾವು ಮರಳಿ ಸಮಾಜಕ್ಕೆ ಮತ್ತೇನಾದರೂ ನೀಡಬೇಕು, ಬಡ ವರ್ಗಕ್ಕೆ ತಮ್ಮಿಂದಾದ ಸಹಕಾರ ಒದಗಿಸಬೇಕು ಎಂಬ ಆಸೆ ಹೊತ್ತು ಸಮಾಜ ಡೊಂಕುಗಳು ಸಮಾಜದ ಭಾಗವಾದ ನಮ್ಮ ನಿರ್ಲಕ್ಷದಿಂದ ಆಗಿವೆಯೇ ಹೊರತು ಬೇರಾವುದರಿಂದಲೂ ಅಲ್ಲ ಎಂಬ ವಿವೇಕ ಜನರಲ್ಲಿ ಮುಖ್ಯವಾಗಿ ಯುವಕರಲ್ಲಿ ಹುಟ್ಟು ಹಾಕಲು ಮೊದಲಿಗೆ ಮೂರ್ನಾಲ್ಕು ಜನರಿಂದ ಪ್ರಾರಂಭವಾಗಿ ಇಂದು ನೂರಾರು ಸ್ವಯಂ ಸೇವಕರನ್ನು ಭರವಸೆ ತಂಡ ಹೊಂದಿದೆ. ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಗಳೂರು, ಬಿಜಾಪುರ ಹೇಗೆ ಹಲವೆಡೆ ತನ್ನ ಕಾರ್ಯವೈಖರಿಯ ಮೂಲಕ ಗುರುತಿಸಿಕೊಂಡಿದೆ.
ಖಾಸಗಿ ವಲಯದಲ್ಲಿ ತಮ್ಮ ವೃತ್ತಿಗಳನ್ನು ರೂಪಿಸಿಕೊಂಡು ತಮ್ಮ ವಾರಾಂತ್ಯವನ್ನು ಸಮಾಜಕ್ಕೆ ಹಲವು ಬಗೆಗಳಲಿ ಬಳುವಳಿಯಾಗಿ ನೀಡಿದೆ. ಯಾವುದೇ ದಾನಿಗಳ ಸಹಕಾರವಿಲ್ಲದೆ, ರಾಜಕೀಯ ಪಕ್ಷಗಳ ಕೃಪಾಪೋಷಿತವಲ್ಲದೆ ತಮ್ಮ ಸ್ವಂತ ದುಡಿಮೆಯ ಮೂಲಕ ತಮ್ಮ ಮಿತಿಯಲ್ಲಿ ಸಮಾಜದ ನೊಂದ ವರ್ಗಕ್ಕೆ ಭರವಸೆಯ ಬೆಳಕಾಗಿದೆ.
"ಭರವಸೆಯ ಬುತ್ತಿ" ಎಂಬ ಆಶಯದೊಂದಿಗೆ ಪ್ರತಿ ರವಿವಾರದಂದು ನೂರಾರು ನಿರ್ಗತಿಕರಿಗೆ ಬಡವರಿಗೆ ಆಹಾರ ವ್ಯವಸ್ಥೆ ಮಾಡುತ್ತಿದೆ. ಇದುವರೆಗೆ ಸಾವಿರಾರು ಬುತ್ತಿಗಳ ಬಡವರ ಬಳಿ ಹೊಯ್ದು ಅವರ ಒಂದೊತ್ತಿನ ಊಟದ ಭರವಸೆಯಿದೆ ಹೊರ ಹೊಮ್ಮಿದೆ. ಹಾಗೂ wall ಆಫ್ hope ಎಂಬ ವಿನೂತನವಾದ ಕಾರ್ಯಕ್ರಮ ಹುಟ್ಟು ಹಾಕಿ ಬೆಂಗಳೂರಿನ ವಿಜಯನಗರ ಹೋಟೆಲ್ ಒಂದರಲ್ಲಿ ಹಸಿದ ಜೀವಕ್ಕೆ ಉಚಿತವಾಗಿ ಊಟ ತಲುಪಿಸುವ ವ್ಯವಸ್ಥೆ ಹುಟ್ಟು ಹಾಕಿದೆ.
"ಭರವಸೆಯ ಹಸಿರು" ಎಂಬ ಆಶಯದೊಂದಿಗೆ ನಾಗರಿಕರಿಗೆ ಉಚಿತವಾಗಿ ಸಸಿಗಳ ವಿತರಣೆ ಮಾಡಲು ಪ್ರಾರಂಭಿಸಿ ಈ ವರೆಗೂ ಸಾವಿರಕ್ಕೂ ಹೆಚ್ಚು ಗಿಡಗಳನ್ನು ವಿವಿಧ ಕಾರ್ಯಕ್ರಮಗಳ ಸಮಯದಲ್ಲಿ ವಿತರಿಸಿದೆ, ಬೀಜದ ಉಂಡೆಗಳ ವಿತರಣೆ ಹಾಗೂ ಚಾರಣ ಗಳನ್ನೂ ಆಯೋಜಿಸಿ ಚಾರಣಿಗರಗೆ ಬೀಜದ ಉಂಡೆಗಳನ್ನು ತಮ್ಮ ಚಾರಣ ಅಥವಾ ಪ್ರವಾಸದೊಂದಿಗೆ ಹೊಯ್ಯಲ್ಲು ಅರಿವು ಮೂಡಿಸುತ್ತಿದೆ. ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಪರಿಸರದ ಕಾಳಜಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅನಾಥಾಶ್ರಮ ವೃದ್ಧಾಶ್ರಮಗಳಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುತ್ತಿದೆ. ಜೊತೆಗೆ ಯಾವುದೇ ಹಬ್ಬವಾದರೂ ಸರಿ ಆ ಹಬ್ಬಗಳನ್ನು ಅನಾಥಾಶ್ರಮದ ಮಕ್ಕಳೊಂದಿಗೆ ಆಚರಿಸಿ ಆ ಮಕ್ಕಳಿಗೆ ಅನಾಥ ಪ್ರಜ್ಞೆ ಬಾರದಂತೆ ನೋಡಿ ಕೊಳ್ಳುವ ಜೊತೆಗೆ ಅವರಿಗೆ ದಿನ ನಿತ್ಯದ ಅಗತ್ಯ ಪೂರೈಸಿಕೊಳ್ಳಲು ನೆರವಾಗುತ್ತಿದೆ. ಕೊಳಗೇರಿ ಮಕ್ಕಳ ಶಿಕ್ಷಣಕ್ಕೇ ಹೊತ್ತು ನೀಡಿ ಅವರಿರುವ ಜಾಗಗಳಿಗೆ ಹೋಗಿ ಅವರೊಂದಿಗೆ ಕೂಡಿ ಆಡಿ ನಲಿದು ನಂತರ ಅವರಿಗೆ ವಾರಾಂತ್ಯದ ತರಗತಿಗಳನ್ನು ಯೋಜಿಸುತ್ತಿದೆ. ಅಂತೆಯೆ ಬೆಂಗಳೂರಿನ ಮುದ್ದನ ಪಾಳ್ಯ ಹಾಗೂ ಮಲ್ಲೇಶ್ವರಂನ ಸ್ಯಾಂಕಿ ಕೆರೆಯ ಬದಿಯ ಗುಡಿಸಲು ನಿವಾಸಿಗಳ ಮಕ್ಕಳಿಗೆ ತರಗತಿಗಳನ್ನು ನೆಡೆಸಿ, ಅವರ ಬೇಕು ಬೇಡಗಳನ್ನು ಅರಿತು ಅವರಿಗೆ ಕಲಿಕೆಯ ಭರವಸೆಯನ್ನು ಬಿತ್ತಿದೆ.
ವೃದ್ಧ ಬೀದಿ ಬದಿ ವ್ಯಾಪಾರಿಗಳಿಗೆ ಆರೋಗ್ಯ ತಪಾಸಣೆ ಹಾಗೂ ನಿಮ್ಮ ಸ್ವಾವಲಂಬನೆಗೆ ನಮ್ಮ ಸಲಾಂ ಎಂದು ಪ್ರತಿ ತ್ರೈಮಾಸಿಕಕ್ಕೊಮ್ಮೆ ಅವರಿಗೆ ಉಚಿತ ವಸ್ತ್ರ, ಸ್ವೆಟರ್- ಹೀಗೆ ಹಲವು ಬಗೆಯ ನೆರವು ನೀಡುತ್ತಿದೆ, ಸ್ವಚ್ಛತಾ ಕಾರ್ಯಕ್ರಮಗಳನ್ನು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಹಾಗೂ ಐತಿಹಾಸಿಕವಾಗಿ ಪ್ರಾಮುಕ್ಯತೆ ಪಡೆದ ಸ್ಥಳಗಳಲ್ಲಿ ನಡೆಸುತ್ತ ಬಂದಿದೆ. ಸ್ತನ ಕ್ಯಾನ್ಸರ್ ಬಗೆಗಿನ ವಿಶೇಷ ವಿಚಾರ ವಿನಿಮಯ ಸಭೆಗಳನ್ನು ಕಾಲೇಜು ಮಟ್ಟಗಳಲ್ಲಿ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಗರದ ಪ್ರಮುಖ ಕಾಲೇಜುಗಳಲ್ಲಿ ಈ ವರೆಗೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಶಿಬಿರಗಳ ಲಾಭ ದೊರೆತಿದೆ, ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ನಗರ ಸಂಚಾರಿ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಕಾರ್ಯಕ್ರಮಗಳ ರೂಪಿಸಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಪ್ಲಾಸ್ಟಿಕ್ ಮುಕ್ತ ಸಮಾಜದ ಬಗ್ಗೆ ಮೂಡಿಸಲು ಕೇರಳದಿಂದ ತೆಂಗಿನ ಗರಿಯ ಸ್ಟ್ರಾ ಗಳನ್ನು ತರಿಸಿ ನಗರದ ತಂಪು ಪಾನೀಯ ವ್ಯಾಪಾರಿಗಳಿಗೆ, ಎಳೆನೀರು ವ್ಯಾಪಾರಿಗಳಿಗೆ ಉಚಿತವಾಗಿ ವಿತರಿಸಿ ಪ್ಲಾಸ್ಥಿಕ್ ಬಳಕೆಯ ನಿಯಂತ್ರಣದ ಉಪಯೋಗಗಳ ಮನದಟ್ಟು ಮಾಡಿಕೊಟ್ಟಿದೆ. ಜೊತೆ ಜೊತೆಗೆ ಬೆಂಗಳೂರು ಮಾತ್ರವಲ್ಲದೆ ಮಂಗಳೂರು ಹಾಗೂ ಬಿಜಾಪುರದಂತಹ ಜಿಲ್ಲೆಗಳಲ್ಲಿನ ಕೆಲವು ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಭರವಸೆ ತಂಡವು ಸಹಕಾರಿಯಾಗಿದೆ.
ಸರ್ಕಾರಿ ಶಾಲೆಗಳ ಸುಧಾರಣೆಗೆ ಶಾಲೆಗಳಿಗೆ ಬಣ್ಣ ತುಂಬುವುದು, ಸ್ವಚ್ಛತೆ, ವಿದ್ಯಾರ್ಥಿಗಳಿಗೆ ಪುಸ್ತಕಗಳ ಹಂಚುವುದು, ಶಾಲೆಗಳಿಗೆ ಬೋರ್ಡ್ ಹಾಗೂ ಇತರೆ ಅಗತ್ಯವಸ್ತುಗಳ ನೀಡುವುದಷ್ಟೇ ಅಲ್ಲದೆ ಮಕ್ಕಳಿಗೆ ಕೆರಿಯರ್ ಪ್ರೋಗ್ರಾಂ ಶಿಬಿರಗಳ ಆಯೋಜಿಸಿ ಶಾಲೆಯ ನಂತರ ದಿನಗಳಲ್ಲಿ ಅವರು ಸಾಧಿಸ ಬಹುದಾದ ವಿಷಯಗಳ ಮನದಟ್ಟು ಮಾಡಿ ಕೊಡುತ್ತಿದ್ದಾರೆ. ಇಷ್ಟೆಲ್ಲಾ ಕಾರ್ಯಗಳು ಸದ್ದಿಲ್ಲದೆ ವರ್ಷಗಳಿಂದ ನಡೆಯುತ್ತ ಬಂದಿದೆ. ವಿಶೇಷವೆಂದರೆ ಈ ತಂಡಕ್ಕೆ ಹೊರಗಿನ ಯಾವ ಸಹಾಯವೂ ಇಲ್ಲ ಯಾವುದೇ ದಾನಿಗಳಿಲ್ಲದೆ ಯಾರ ರಾಜಕೀಯ ವ್ಯಕ್ತಿಗಳ ಸಹಕಾರವಿಲ್ಲದೆ ತಮ್ಮ ವೃತ್ತಿಗಳಲ್ಲಿ ಗಳಿಸಿದ ಸಂಪಾದನೆಯ ಹಣದ ಒಂದು ಭಾಗವನ್ನು ಸಮಾಜಕ್ಕೆ ಮುಡಿಪಿಟ್ಟು ಆ ಹಣದಲ್ಲಿ ಈ ಎಲ್ಲ ಕಾರ್ಯಕ್ರಮಗಳ ನಡೆಸುತ್ತ ಬಂದಿದೆ.
ತಂಡದ ಸಂಸ್ಥಾಪಕರು ಹಾಗೂ ಅಧ್ಯಕರೂ ಆದ ಸುನೀಲ್ ಗೌಡ ಹಾಗೂ ಅವರ ಸ್ನೇಹಿತರಾದ ಮಂಜೇಶ್, ಪೂಜಾ ರಂಗನಾಥ್, ಹರ್ಷಿತಾ, ಸಂಜಯ್, ಜ್ಯೋತಿ, ವೆಂಕಟೇಶ್ ಯಾದವ್, ಮನೀಶ್, ಪವಿತ್ರ, ವೆಂಕಟೇಶ್ ಶೆಟ್ಟಿ, ಚರಣ್, ಯೋಗೇಶ್, ಹರ್ಷವರ್ಧಿನಿ, ದಿವ್ಯ, ಶಮತ, ಸಾಯಿ ಆಶ್ರಿತ, ಪೃಥ್ವಿ, ಪ್ರಣವ್ ಮುಂತಾದವರು ಪ್ರಮುಖ ಭೂಮಿಕೆಯಲ್ಲಿ ತಂಡವನ್ನು ನಡೆಸುತ್ತಿದ್ದಾರೆ. ವಾರಾಂತ್ಯಗಳನ್ನು ಈ ರೀತಿಯಲ್ಲೂ ಸಹ ಕಳೆಯಬಹುದು ಎಂಬುದಕ್ಕೆ ಈ ತಂಡ ಮಾದರಿಯಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ