ಬದಿಯಡ್ಕ: ಒಂದು ಪ್ರದೇಶದ ಸಂಸ್ಕೃತಿಯು ಭಾಷೆಯನ್ನವಲಂಬಿಸಿ ಇರುತ್ತದೆ. ಹಾಗಾಗಿ ಭಾಷೆಯನ್ನು ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯ. ನಮ್ಮ ಮಣ್ಣಿನ ಮೂಲ ಕೃಷಿ ಸಂಸ್ಕೃತಿ ಆಧಾರಿತವಾದಂತಹ ಬಲೀಂದ್ರ ಹಬ್ಬದಂತಹ ಆಚರಣೆಗಳು ಓಣಂ ಆಚರಣೆಯೆದುರು ನಶಿಸದಂತೆ ಕಾಪಾಡಿಕೊಳ್ಳಬೇಕು ಎಂದು ಶ್ರೀ ಸುಂದರ ಬಾರಡ್ಕ ಹೇಳಿದರು. ಅವರು ಬದಿಯಡ್ಕದ ರಂಗಸಿರಿ ಸಾಂಸ್ಕ್ರತಿಕ ವೇದಿಕೆಯು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆಸುತ್ತಿರುವ ಗ್ರಾಮಪರ್ಯಟನೆಯ 2ನೇ ಕಾರ್ಯಕ್ರಮದಲ್ಲಿ ಕಾಸರಗೋಡಿನ ಸಾಂಸ್ಕ್ರತಿಕ ಸವಾಲುಗಳು ಎಂಬ ವಿಷಯದಲ್ಲಿ ವಿಚಾರಮಂಡನೆ ಮಾಡಿದರು. ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಕಾರ್ಯಕ್ರಮವು ಜರಗಿತು. ಸಭಾಕಾರ್ಯಕ್ರಮದಲ್ಲಿ ಲೇಖಕ, ಕನ್ನಡಪರ ಹೋರಾಟಗಾರ, ಮುಳ್ಳೇರಿಯದ ಹಿರಿಯ ನಾಗರಿಕ ವೇದಿಕೆಯ ನಿಕಟಪೂರ್ವ ಕಾರ್ಯದರ್ಶಿಯಾದ ಶ್ರೀ ಕೆ.ಯಂ. ಗೋಪಾಲಕೃಷ್ಣ ಭಟ್ ಅವರಿಗೆ ಗೌರವಾರ್ಪಣೆ ನಡೆಸಲಾಯಿತು. ಗೌರವ ಸ್ವೀಕರಿಸಿ ಮಾತಾಡಿದ ಶ್ರೀ ಕೆ.ಯಂ. ಗೋಪಾಲಕೃಷ್ಣ ಭಟ್ ಅವರು ರಂಗಸಿರಿ ಸಂಸ್ಥೆಯು ಇನ್ನಷ್ಟು ಬಲಗೊಂಡು ಇಂತಹ ಇನ್ನೂ ಅನೇಕ ಮಾದರಿ ಕಾರ್ಯಗಳನ್ನು ಮಾಡುವಂತಾಗಲಿ. ಸಂಸ್ಥೆಯ ಈ ಕಾರ್ಯಗಳು ಅನುಸರಣೀಯ ಎಂದರು. ಶ್ರೀಮತಿ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸಿದ್ದರು.
ರಂಗಸಿರಿಯ ನೂತನ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು. ಬಳಿಕ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ರಂಗಸಿರಿಯ ಶಾಸ್ತ್ರೀಯ ಸಂಗೀತ ಶಿಕ್ಷಕಿ ಸಂಗೀತ ವಿದುಷಿ ಗೀತಾ ಸಾರಡ್ಕ ಅವರ ನಿರ್ದೇಶನದಲ್ಲಿ ರಂಗಸಿರಿ ಸಾಂಸ್ಕ್ರತಿಕ ವೇದಿಕೆಯ ಶಾಸ್ತ್ರೀಯ ಸಂಗೀತ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ನಡೆಯಿತು. ಪಕ್ಕ ವಾದ್ಯಗಳಲ್ಲಿ ದೀಪ್ತಿ ಕಂಬಾರು, ಅನ್ವಿತಾ ತಲ್ಪನಾಜೆ, ಸುಮೇಧಾ ಕಲ್ಲಕಟ್ಟ, ಶಾಶ್ವತ್ ಕಂಬಾರು ಸಹಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ