ಮಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಈ ಬಾರಿ ರಾಜ್ಯದ ಜನತೆ ಪಕ್ಷವನ್ನು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ತರಲಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಜೆ. ಕೃಷ್ಣ ಪಾಲೆಮಾರ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳು ಎಲ್ಲರಿಗೂ ಉಪಯುಕ್ತವಾಗಿವೆ. ನಮ್ಮ ಶಾಸಕರು ಅತಿ ಹೆಚ್ಚಿನ ಪ್ರಮಾಣದ ಅನುದಾನಗಳನ್ನು ತಂದು ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅನುದಾನಗಳ ಸಮರ್ಪಕ ಬಳಕೆಯಾಗಿದ್ದು, ಅದರ ಲಾಭಗಳು ಜನಸಾಮಾನ್ಯರಿಗೆ ಸಿಗುವಂತಾಗಿದೆ. ಹೀಗಾಗಿ ಮನೆ ಮನೆಗೆ ತೆರಳಿ ಜನರ ಬೆಂಬಲ ಯಾಚಿಸಲು ನಮಗೆ ಯಾವುದೇ ಅಳುಕು, ಹಿಂಜರಿಕೆ ಇಲ್ಲ. ನಮ್ಮ ಸಾಧನೆಗಳನ್ನು ಜನರ ಮುಂದಿಟ್ಟು ಮತಯಾಚಿಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸವಲತ್ತುಗಳನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಜನತೆಗೆ ತಲುಪಿಸಲು ಪುನರಾಯ್ಕೆಯನ್ನು ಬಯಸುತ್ತಿದ್ದೇವೆ. ಜನರು ಬಿಜೆಪಿಗೆ ಸಂಪೂರ್ಣ ಆಶೀರ್ವಾದ ಮಾಡುವ ಭರವಸೆ ನಮಗಿದೆ ಎಂದು ಪಾಲೆಮಾರ್ ನುಡಿದರು.
ಹಿಂದೆ ನಾನು ಸಚಿವನಾಗಿದ್ದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮಂಗಳೂರು ನಗರಕ್ಕೆ ನೀಡಿದ 200 ಕೋಟಿ ರೂ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ಆರಂಭಿಸಲಾಯಿತು. ನಂತರದ ಅವಧಿಯಲ್ಲಿ ಶಾಸಕರಾದ ಡಿ. ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಬಂದಿರುವ ಸಾವಿರಾರು ಕೋಟಿ ರೂ,.ಗಳ ಅನುದಾನಗಳು ಸಮರ್ಪಕ ಬಳಕೆಯಾಗಿವೆ. ಅವರ ಒಳ್ಳೆಯ ಕೆಲಸಗಳಿಗೆ ಜನತೆ ಬೆಂಬಲಿಸುತ್ತಾರೆ ಎಂದು ಕೃಷ್ಣ ಪಾಲೆಮಾರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಪ್ರಾಮಾಣಿಕತೆಗೆ, ಬೆಲೆ ಕೊಟ್ಟು ಎಲ್ಲ ಎಂಟೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಪಾಲೆಮಾರ್ ವಿನಂತಿಸಿದರು.
ಪಕ್ಷದಲ್ಲಿ ನಿಮ್ಮನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನವೇನಾದರೂ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ಹಾಗೇನಾದರೂ ಇದ್ದರೆ ನಾನು ನಿಮ್ಮ ಮುಂದೆ ಈ ರೀತಿ ಬಂದು ಕುಳಿತುಕೊಳ್ಳಲು ಸಾಧ್ಯವಿತ್ತೆ? ಎಂದು ಕೃಷ್ಣ ಪಾಲೆಮಾರ್ ನಗುವಿನೊಂದಿಗೆ ಮರುಪ್ರಶ್ನೆ ಹಾಕಿದರು.
40% ಕಮಿಷನ್ ಸರಕಾರ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರಶ್ನಿಸಿದಾಗ, ಆರೋಪಗಳನ್ನು ಯಾರ ಮೇಲೆ ಯಾರು ಬೇಕಾದರೂ ಮಾಡಬಹುದು. ಆದರೆ ಸಾಕ್ಷ್ಯಾಧಾರಗಳ ಸಮೇತ ಸಾಬೀತುಪಡಿಸಬೇಕು ಅಷ್ಟೆ. ಸುಮ್ಮನೆ ಆರೋಪ ಮಾಡುವುದರಲ್ಲಿ ಹುರುಳಿಲ್ಲ ಎಂದು ಪಾಲೆಮಾರ್ ಉತ್ತರಿಸಿದರು.
ವಾಸ್ತವದಲ್ಲಿ ಯಾವುದೇ ಕಾಮಗಾರಿ ಗುತ್ತಿಗೆಯಾದರೂ ಶೇ 18ರಷ್ಟು ಜಿಎಸ್ಟಿ ಮತ್ತು ಇತರ ತೆರಿಗೆಗಳು ಸೇರಿ ಶೇ 24ರಷ್ಟು ಮೊತ್ತವನ್ನು ಸರಕಾರಕ್ಕೇ ಮರಳಿಸಬೇಕಾಗುತ್ತದೆ. ಇದು ಲಂಚವಲ್ಲ. ಇದನ್ನು ಲಂಚ, ಭ್ರಷ್ಟಾಚಾರವೆಂದು ಕಾಂಗ್ರೆಸ್ನವರು ಕರೆದರೆ ಅದು ಮೂರ್ಖತನ. ಶೇ 85ರ ಕಮಿಷನ್ ನುಂಗುತ್ತಿದ್ದ ಕಾಂಗ್ರೆಸ್ಗೆ ಸರಕಾರದ ತೆರಿಗೆ ಕೂಡ ಲಂಚದಂತೆ ಕಾಣುತ್ತದೆ. ಆದ್ದರಿಂದ ಕಾಂಗ್ರೆಸ್ ಆರೋಪಗಳು ಸಂಪೂರ್ಣ ನಿರಾಧಾರ.
-ಜೆ ಕೃಷ್ಣ ಪಾಲೆಮಾರ್
ಮಾಜಿ ಸಚಿವರು
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ವಕ್ತಾರ ಜಗದೀಶ್ ಶೇಣವ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಮತ್ತು ಬಿಜೆಪಿ ಮುಖಂಡರಾದ ಸಂಜಯ್ ಪ್ರಭು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ