ಕಾಂಗ್ರೆಸ್‌ನ ಈಡೇರಿಸಲಾಗದ ಭರವಸೆಗಳು ಮತದಾರರ ದಾರಿ ತಪ್ಪಿಸುವ ಯತ್ನ: ಸಿಎ ಶಾಂತಾರಾಮ ಶೆಟ್ಟಿ

Upayuktha
0

ಮಂಗಳೂರು: ಈಡೇರಿಸಲು ಅಸಾಧ್ಯವಾದ ಉಚಿತ ಭರವಸೆಗಳು, ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಮತದಾರರ ದಿಕ್ಕುತಪ್ಪಿಸಲು ಹತಾಶ ಪ್ರಯತ್ನ ಮಾಡಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಿ.ಎ ಶಾಂತಾರಾಮ ಶೆಟ್ಟಿ ಹೇಳಿದರು.


ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಭರವಸೆಗಳು ಹೇಗೆ ಅಸಾಧ್ಯ ಎಂಬುದನ್ನು ಅಂಕಿ-ಅಂಶಗಳ ಸಮೇತ ವಿವರಿಸಿದರು.

ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಈಡೇರಿಸಬೇಕಾದರೆ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 63,000 ಕೋಟಿ ಹೆಚ್ಚುವರಿ ಹೊರೆ ಬೀಳುತ್ತದೆ. ಬಜೆಟ್‌ ಗಾತ್ರದಲ್ಲಿ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಲು ಸಾಧ್ಯವೆ ಎಂಬ ಪ್ರಶ್ನೆ ಮೂಡುತ್ತದೆ. ಸಾಮಾನ್ಯವಾಗಿ ಬಜೆಟ್‌ನಲ್ಲಿ ಶೇ 3ರಷ್ಟು ವಿತ್ತೀಯ ಕೊರತೆ ಇದ್ದರೆ ಅದು ಸಮರ್ಥನೀಯ. ಕಾಂಗ್ರೆಸ್‌ ಭರವಸೆಗಳನ್ನು ಈಡೇರಿಸುವಾಗ ಈ ಕೊರತೆಯ ಪ್ರಮಾಣ ಶೇ 5.2ಕ್ಕೆ ಏರುತ್ತದೆ. ಆದರೆ ಬಿಜೆಪಿ ವಾಗ್ದಾನಗಳನ್ನು ಈಡೇರಿಸುವಾಗ ವಿತ್ತೀಯ ಕೊರತೆ ಪ್ರಮಾಣ ಶೇ. 2.69ಕ್ಕೆ ನಿಲುಗಡೆಯಾಗುತ್ತದೆ. ಒಂದು ವೇಳೆ ಕಾಂಗ್ರೆಸ್‌ ಭರವಸೆಗಳನ್ನು ಈಡೇರಿಸಬೇಕಾದರೆ ಸಾಲ ಪಡೆಯಬೇಕು ಅಥವಾ ಪೆಟ್ರೋಲ್ ಬೆಲೆ ದುಪ್ಪಟ್ಟು ಮಾಡಬೇಕು ಮತ್ತು ಮದ್ರಾಂಕ ಶುಲ್ಕವನ್ನು ಶೇ 20ರಷ್ಟು ಏರಿಸಬೇಕಾಗುತ್ತದೆ. ಮೂಲಭೂತ ಬಂಡವಾಳ ವೆಚ್ಚವನ್ನು ಕಡಿತಗೊಳಿಸಿ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಮತ್ತೆ ಹೆಚ್ಚಿನ ಹೊರೆ ಬೀಳುವುದು ಜನಸಾಮಾನ್ಯರಿಗೇ ಎಂದು ಶಾಂತಾರಾಮ ಶೆಟ್ಟಿ ವಿವರಿಸಿದರು.

ಕಳೆದ ಬಾರಿ ಕರ್ನಾಟಕದಲ್ಲಿ ಅತ್ಯಧಿಕ ಜಿಎಸ್‌ಟಿ ಸಂಗ್ರಹವಾಗಿದೆ. 3 ಲಕ್ಷ ಕೋಟಿ ರೂ ಗಾತ್ರದ ಬಜೆಟ್‌ನಲ್ಲಿ 2.26 ಕೋಟಿ ರೂ ಕಂದಾಯ ಸಂಗ್ರಹಣೆಯಿದೆ. ಬಜೆಟ್‌ನ ಹೆಚ್ಚುವರಿ ತೋರಿಸಿ ಎಲ್ಲವನ್ನು ಕವರ್ ಮಾಡುವ ಮೂಲಕ ಬಿಜೆಪಿ ತನ್ನ ಭರವಸೆಗಳನ್ನು ಸಿದ್ಧಪಡಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಅಂತಹ ಪ್ರಯತ್ನಗಳನ್ನು ನಿಲ್ಲಿಸಿ ಎಂದು ಅವರು ಆಗ್ರಹಿಸಿದರು.


ಛತ್ತೀಸ್‌ಗಢ, ರಾಜಸ್ಥಾನ, ಹಿಮಾಚಲ ಪ್ರದೇಶಲ್ಲಿ ಕಾಂಗ್ರೆಸ್‌ಗೆ ಈ ರೀತಿಯ ಭರವಸೆ ಈಡೇರಿಸಲು ಆಗಿಲ್ಲ. ದಿಲ್ಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಸರಕಾರ ಕೂಡ ಈಡೇರಿಸಲಾಗದ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಳಿಕ ನಿಭಾಯಿಸಲಾಗದೆ ಮಾತಿಗೆ ತಪ್ಪಿದೆ. ಅಧಿಕಾರಕ್ಕಾಗಿ ಸುಳ್ಳು ಭರವಸೆ ನೀಡಬಾರದು.


ಸರಕಾರದ ಆದಾಯ ಶೇ 60ರಷ್ಟು ತೆರಿಗೆಯಿಂದ ಬರುತ್ತದೆ. 22 ಶೇಕಡಾ ಮದ್ಯ ಮಾರಾಟದಿಂದ ಬರುತ್ತದೆ. 11% ನೋಂದಣಿಯಿಂದ, 7% ವಾಹನಗಳ ನೋಂದಣಿಯಿಂದ ಬರುತ್ತದೆ. ತೆರಿಗೆಗಳಿಂದ ಬರುವ ಈ ಆದಾಯವನ್ನೇ ಸರಕಾರ ಖರ್ಚು ಮಾಡುತ್ತದೆ. ಮೂಲ ಸೌಕರ್ಯಗಳಿಗಾಗಿ ಅಗತ್ಯವಿರುವ ಹೆಚ್ಚಿನ ಮೊತ್ತಕ್ಕಾಗಿ ಸಾಲ ಪಡೆಯುತ್ತದೆ.


ಅಸಾಧ್ಯ ಭರವಸೆಗಳು, ಒಡೆದಾಳುವ ನೀತಿಯೇ ಕಾಂಗ್ರೆಸ್ ಬಂಡವಾಳ:

ಬಹುಸಂಖ್ಯಾತ ಹಿಂದೂಗಳಿಗೆ ನೀಡಿರುವ ಶೇ 4ರ ಮೀಸಲಾತಿಯನ್ನು ರದ್ದುಮಾಡಿ ಮುಸ್ಲಿಮರಿಗೆ ಕೊಡುತ್ತೇವೆ ಎನ್ನುವುದು, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸುವುದು, ಬಜರಂಗದಳ ನಿಷೇಧ ಪ್ರಸ್ತಾಪ- ಹೀಗೆ ಸಂಪೂರ್ಣವಾಗಿ ಕಾಂಗ್ರೆಸ್ ಬಹುಸಂಕ್ಯಾತ ಹಿಂದೂ ವಿರೋಧಿ ನೀತಿಯನ್ನೇ ಅನುಸರಿಸುತ್ತಿದೆ ಎಂಬುದು ಸುಸ್ಪಷ್ಟವಾಗಿದೆ. ಒಡೆದು ಆಳುವ ನೀತಿಯನ್ನು ನೋಡುವಾಗ ಕಾಂಗ್ರೆಸ್ ಚುನಾವಣೆಯನ್ನು ಭಾರತದಲ್ಲಿ ಎದುರಿಸುತ್ತಿದೆಯೋ ಅಥವಾ ಬೇರೆ ಯಾವುದಾದರೂ ದೇಶದಲ್ಲೋ ಎಂಬ ಸಂದೇಹ ಬರುತ್ತದೆ ಎಂದು ಶಾಂತಾರಾಮ ಶೆಟ್ಟಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ  ರಾಜ್ಯ ವಕ್ತಾರ, ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಆರ್ಧಿಕ ಪ್ರಕೋಷ್ಠದ ಸದಸ್ಯ ಡಾ. ರಾಜೇಶ್ ರಾವ್, ಉದ್ಯಮಿ ಯೋಗೀಶ್ ಪೈ, ಸಿಎ ಯಶಸ್ವಿನಿ, ಸಿಎ ಅಮಿತ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top