ದೀನಬಂಧು ಎಂಬ ದುರಂತ ಅನಿಲ ಸ್ಥಾವರ!

Upayuktha
0

ಸಾಂದರ್ಭಿಕ ಚಿತ್ರ


ನಮ್ಮ ಮನೆಯಲ್ಲಿ 1976ನೇ ಇಸವಿಯಲ್ಲಿ ಎಣ್ಣೆಯಲ್ಲಿ ತೇಲುವ ಕಬ್ಬಿಣದ ಡ್ರಮ್ ಮಾದರಿಯ ಗೋಬರ್ ಅನಿಲ ಸ್ಥಾವರವನ್ನು ತಂದೆಯವರು ರಚಿಸಿದ್ದರು. ಕಾಲಾಘಾತಕ್ಕೆ ಸಿಲುಕಿ ಸಿಮೆಂಟ್ ರಚನೆಯಲ್ಲಾಗುವ ತೊಂದರೆಗಳಿಗಾಗಿ ಇಷ್ಟು ವರ್ಷಗಳಲ್ಲಿ ಮೂರು ಬಾರಿ ಸೆಗಣಿಯನ್ನು ಖಾಲಿ ಮಾಡಬೇಕಾಗಿ ಬಂದಿತ್ತು. ಕಬ್ಬಿಣದ ಡ್ರಮ್ ಎತ್ತುವುದಕ್ಕಾಗಿ ಚೈನ್ ಪುಲ್ಲಿ, ಸೆಗಣಿ ನೀರು ಖಾಲಿ ಮಾಡುವುದಕ್ಕಾಗಿ ಸ್ಲರಿ ಪಂಪು ಎಲ್ಲಾ ವ್ಯವಸ್ಥೆಗಳು ಇವೆ. ಕೆಲಸದ ಒತ್ತಡ ಕಿರಿಕಿರಿ ಸಮಸ್ಯೆಗಳನ್ನು ಬಿಟ್ಟರೆ ಸೆಗಣಿ ಖಾಲಿ ಮಾಡುವುದು ಕಷ್ಟದಾಯಕವಲ್ಲ. 47 ವರ್ಷದ ಸ್ಥಾವರ ಇಂದೂ ನಮ್ಮ ಎಲ್ಲಾ ಅಗತ್ಯತೆಗಳನ್ನು ಪೂರೈಸುತ್ತಿದೆ.


ಈಗ್ಗೆ ಹತ್ತು ವರ್ಷಗಳ ಹಿಂದೆ ಗೋಬರ್ ಗ್ಯಾಸ್ ಕೈ ಕೊಟ್ಟರೆ, ಧಾರಾಳ ಸೆಗಣಿ ಇರುವಾಗ ಇನ್ನೊಂದು ಚಿಕ್ಕದಾದ ಮಾದರಿಯನ್ನು ಕೈಗೊಂಡಲ್ಲಿ ಉಪಕಾರ ಎಂದು ನನ್ನಾಕೆಗೆ ಹೊಳೆಯಿತು. ಅದರ ಪರಿಣಾಮ ಆಗ ಜೋರಾಗಿ ಪ್ರಚಾರದಲ್ಲಿರುವ ದೀನಬಂಧು ಮಾದರಿಯನ್ನು ನೂತನವಾಗಿ ಅಳವಡಿಸಿದೆ. ಕಳ್ಳಗಿಂಡಿಯನ್ನು ಹೊಕ್ಕ ಹೈದರನ ಸೈನಿಕರಂತೆ ಒಳ ಹೋಗುವಾಗ ಮುಂದಕ್ಕಿದು ಸಮಸ್ಯೆ ಆಗಬಹುದು ಎಂದು ಆಗಲೇ ಮನಸ್ಸಿಗೆ ಅನ್ನಿಸಿತ್ತು. ಹತ್ತು ವರ್ಷದಿಂದೀಚೆಗೆ ಅನಿಲವನ್ನು ಹೊರಹಾಕುತ್ತಿತ್ತು.


ಕಳೆದ ಎರಡು ತಿಂಗಳಿಂದ ಅನಿಲ ಹೊರ ಬರದೇ ಒಳಗೇನೋ ತೊಂದರೆ ಇದೆ ಎಂಬುದನ್ನು  ತೋರ್ಪಡಿಸಿತು. ದುರಸ್ತಿಗಾಗಿ ಸಗಣಿ ಖಾಲಿ ಮಾಡುವ ಕಾಲ ಕೂಡಿಬರಲು ಎರಡು ತಿಂಗಳೇ ಮುಂದೆ ಹೋಯಿತು. ಅಂತೂ ಸ್ಲರಿ ಪಂಪು ಇಳಿಸಿ ಅರ್ಧಾಂಶದಷ್ಟು ಸಗಣಿ ನೀರನ್ನು ಖಾಲಿ ಮಾಡಿದ ಮೇಲೆ ಪಂಪು ವ್ಯವಸ್ಥೆಗೆ ಸಿಗದ ಉಳಿದದ್ದನ್ನು ತೆಗೆಯಲು ಮನುಷ್ಯ ಸಹಾಯ ಅನಿವಾರ್ಯವಾಯಿತು. ಅಂದೇ ಊಹಿಸಿದ್ದ ಕಷ್ಟದ ಅರಿವು ಈಗ ನನಗಾಯ್ತು. ಯಾವ ಉದ್ದದ ಸಾಧನವನ್ನು ಒಳಹೊಗ್ಗಿಸಲು ಕಷ್ಟ, ಮನುಷ್ಯ ಒಳ ಹೋಗುವುದು ಇನ್ನೂ ಕಷ್ಟ, ಒಳ ಹೋದರೆ ಪ್ರಾಣವಾಯುವಿನ ಕೊರತೆಯಾದರೆ ಎಂಬ ಚಿಂತೆಯ ಕಷ್ಟ, ಸೆಗಣಿಯ ಮುಗ್ಗು ವಾಸನೆಯ ಉಸಿರಾಟದ ಕಷ್ಟ, ಗಾಳಿಯ ಚಲನೆ ಇಲ್ಲದೆ ಶರೀರದಲ್ಲಿ ಉಂಟಾಗುವ ಬಿಸಿಯ ಕಷ್ಟ, ಒಂದಿಂಚು ಅಲುಗಾಡಿದರೂ ಮೈ ಕೈಗೆ ಸಗಣಿ ಮೆತ್ತಿಕೊಳ್ಳುವ ಕಷ್ಟ. ಯಬ್ಬೊ, ನೋಡಿದಾಗ, ಅನುಭವಿಸಿದಾಗ ಇನ್ನೆಂದೂ ಇದಕ್ಕೆ ಸಗಣಿಯನ್ನು ಹಾಕಲಾರೆ ಎಂಬ ದೃಢ ನಿಶ್ಚಯಕ್ಕೆ ಬಂದು ಸೆಗಣಿಯ ಹೊರಕೋಣೆಗೆ ಸಿಮೆಂಟು ಹಲಿಗೆಯನ್ನಿಟ್ಟು ಮಣ್ಣು ತುಂಬುವ ನಿಶ್ಚಯಕ್ಕೆ ಬಂದಿದ್ದೇನೆ.


ಯಾರಾದರೂ ಗೊಬ್ಬರದ ಅನಿಲ ಸ್ಥಾವರವನ್ನು ನೂತನವಾಗಿ ಅಳವಡಿಸುತ್ತಿದ್ದರೆ ಯಾವ ಕಾರಣಕ್ಕೂ ದೀನಬಂಧು ಬೇಡ. ಖರ್ಚು ಸ್ವಲ್ಪ ಕಡಿಮೆ ಎಂದು ಅಳವಡಿಸಿದರೆ ಮುಂದೊಂದು ದಿನ ಪೇಚಿಗೆ ಸಿಲುಕುವುದಂತು ಸ್ಪಷ್ಟ.


ನ್ಯೂನತೆಗಳ ಬಗ್ಗೆ ಈ ರೀತಿ ಪಟ್ಟಿ ಮಾಡಬಹುದು.

1) ಒಳ ಹೋಗುವುದು ಹೊರಬರುವುದು ಅತ್ಯಂತ ಸಮಸ್ಯಾತ್ಮಕ. ಪ್ರಚಾರಿಸಿದ ಯಾರಿಗೂ ಸೆಗಣಿ ಖಾಲಿ ಮಾಡಿದ ಅನುಭವ ಇಲ್ಲದೇ ಇರುವುದೇ ಜಾಸ್ತಿ ಇರಬಹುದು

2) ಅನಿಲಸಂಗ್ರಹ ಎಷ್ಟು ಏನು ಎಂಬ ಯಾವ ಅನುಭವ ಹೊರನೋಟಕ್ಕೆ ಗೊತ್ತಾಗುವುದಿಲ್ಲ. ಇನ್ನೇನು ಒಲೆಯಲ್ಲಿಟ್ಟ ಸಾಂಬಾರು ಕುದಿಯಲು ಆರಂಭವಾಗುತ್ತದೆ ಎನ್ನುವಾಗ ಅನಿಲ ಖಾಲಿಯಾಗುವಾಗಲೇ ಅರಿವಿಗೆ ಬರುವುದು.

3) ಅನಿಲ ತುಂಬಿರುವಾಗ ಬೆಂಕಿಯ ಜ್ವಾಲೆ ವಿಪರೀತ ಒತ್ತಡದಿಂದ ಉರಿಯುವುದು ಮತ್ತು ಕಡಿಮೆಯಾದಂತೆ ಉರಿಯುವಿಕೆ ನಿಧಾನವಾಗುವುದು. (ಸಮತೋಲನ ಇಲ್ಲದೆ ಇರುವುದು)

ಮನೆ ಮನೆಯಲ್ಲೂ ಗೋವಿರಲಿ. ಗೊಬ್ಬರದ ಅನಿಲ ಸ್ಥಾವರವಿರಲಿ. ಸ್ವಾವಲಂಬನೆಯ ಪ್ರತೀಕವಿರಲಿ. ಆದರೆ ಅದು ಏರಿಳಿಯುವ ಮಾದರಿಯಲ್ಲಿರಲಿ.

-ಎ.ಪಿ. ಸದಾಶಿವ ಮರಿಕೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top