ಬೆಳ್ತಂಗಡಿ: ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಅರಿವು ಮೂಡಿಸುವ ಅಂಗವಾಗಿ ತಾಲ್ಲೂಕು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲ್ಲೂಕು ಆಡಳಿತ, ಬೆಳ್ತಂಗಡಿ ನೇತ್ರತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಸಹಯೋಗದೊಂದಿಗೆ ಭಾನುವಾರ (ಮೇ 7) ವಿಶೇಷ ಕಾಲ್ನಡಿಗೆ ಜಾಥಾ ಮತ್ತು ಬೀದಿ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 9:30ಕ್ಕೆ ಸರಿಯಾಗಿ ಸಂತೆಕಟ್ಟೆ ಅಯ್ಯಪ್ಪ ಗುಡಿಯ ಮುಂಭಾಗದಿಂದ ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ನಡೆದು, ನಂತರ ಮತದಾನದ ಮಹತ್ವದ ಕುರಿತು ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಜಾಥಾವನ್ನು ಉದ್ಘಾಟಿಸಿದ ತಾಲ್ಲೂಕು ಕಾ.ನಿ. ಚುನಾವಣಾ ಅಧಿಕಾರಿಗಳಾದ ಕುಸುಮಾಧರ್ ಮಾತನಾಡಿ, ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಆಶಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ ಮತದಾನದ ಅರಿವಿನ ಬಗ್ಗೆ, ಸಾರ್ವಜನಿಕರ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಸಂತೆಕಟ್ಟೆ ಅಯ್ಯಪ್ಪ ಗುಡಿಯಿಂದ ಎನ್.ಆರ್.ಎಲ್.ಎಂ ಸಂಜೀವಿನಿ ಮಹಿಳಾ ಒಕ್ಕೂಟದ ತಂಡದ ಚಂಡೆ ನಾದದೊಂದಿಗೆ ಆರಂಭವಾದ ಜಾಥಾವು, ಬೆಳ್ತಂಗಡಿ ಮುಖ್ಯ ಬಸ್ ನಿಲ್ದಾಣದವರೆಗೂ ಘೋಷಣೆಗಳ ಮೊರೆತದೊಂದಿಗೆ, ಸಾರ್ವಜನಿಕರ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆಯ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು "ಚುನಾವಣೆ ನಾವೇ ಹೊಣೆ- ನಮ್ಮ ನಡೆ ಮತಗಟ್ಟೆಯ ಕಡೆ" ಎಂಬ ಶೀರ್ಷಿಕೆ ಅಡಿಯಲ್ಲಿ ಬೀದಿ ನಾಟಕವನ್ನು ಬೆಳ್ತಂಗಡಿ ಮುಖ್ಯ ಬಸ್ ನಿಲ್ದಾಣದಲ್ಲಿ ನೆರೆದಿದ್ದ ಸಾರ್ವಜನಿಕರ ಮುಂದೆ ಪ್ರದರ್ಶಿಸಿದರು.
ನಾಟಕದಲ್ಲಿ ಮತದಾನದ ಉದ್ದೇಶ, ಮಹತ್ವದ ಬಗ್ಗೆ ವಿಭಿನ್ನವಾದ ಸನ್ನಿವೇಶಗಳನ್ನು ಸೃಷ್ಟಿಸಿ, ಮತದಾನಕ್ಕೆ ಕನಿಷ್ಠ ಅರ್ಹತೆ, ಮತ ಚಲಾವಣೆಗೆ ಬೇಕಾದ ದಾಖಲೆಗಳು, ನೋಟಾ ಆಯ್ಕೆ, ಒಂದೊಂದು ಮತವು ಎಷ್ಟು ಅಮೂಲ್ಯವಾದದ್ದು, ದೇಶ ಕಟ್ಟುವ ಸಲುವಾಗಿ ಸಮರ್ಥ ಅಭ್ಯರ್ಥಿಯ ಆಯ್ಕೆಯ ಅಗತ್ಯವನ್ನು ತಿಳಿಯಪಡಿಸಿದರು. ಸ್ವಯಂಸೇವಕರ ಈ ಬೀದಿ ನಾಟಕ ಪ್ರದರ್ಶನ ಸ್ಥಳದಲ್ಲಿದ್ದ ಸಭಿಕರ ಮನಮುಟ್ಟಿತು ಹಾಗೂ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ಪ್ರಶಾಂತ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಟರಾಜ್, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗ, ಸಂಜೀವಿನಿ ಒಕ್ಕೂಟದ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ.ಎಸ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ