ಒಂದು ಕಾಲದಲ್ಲಿ ರಾಜರ ಆಳ್ವಿಕೆ ಇತ್ತು. ರಾಜರ ಮನೋಭಾವಕ್ಕನುಗುಣವಾಗಿ ಪ್ರಜೆಗಳಿಗೆ ಸುಭಿಕ್ಷವೋ ದುರ್ಭಿಕ್ಷವೋ ಪ್ರಾಪ್ತವಾಗುತ್ತಿತ್ತು. ಪ್ರಜೆಗಳೆನಿಸಿದವರು ಇದನ್ನು ಸಮ್ಮತಿ ಇದ್ದರೂ ಇಲ್ಲದಿದ್ದರೂ ಯಾವುದೇ ಪ್ರತಿರೋಧವಿಲ್ಲದೆ ಒಪ್ಪಿಕೊಳ್ಳಬೇಕಾಗುತ್ತಿತ್ತು. ಆದರೆ 1947 ರಲ್ಲಿ ಬ್ರಿಟಿಷರು ಹೊರ ದಬ್ಬಲ್ಪಟ್ಟ ಮೇಲೆ ಭಾರತೀಯರು ಸ್ವತಂತ್ರರಾಗಿ ಒಪ್ಪಿಕೊಂಡದ್ದು ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯನ್ನು. ಹಿಂದೆ ರಾಜರ ಆಡಳಿತಗಳನ್ನು ಚರಿತ್ರೆಯಲ್ಲಿ ಓದಿ ಮಾತ್ರ ತಿಳಿದಿರುವುದೇ ಹೊರತು ಸ್ವಯಂ ಅನುಭವಿಸಿ ಗೊತ್ತಿಲ್ಲ. ಶ್ರೀರಾಮಚಂದ್ರನಂಥವರ ಚರಿತ್ರೆಯೂ ಇದೆ, ಹಿಟ್ಲರನಂಥವರ ಚರಿತ್ರೆಯೂ ಇದೆ. ಅಂದರೆ ರಾಜರ ಆಳ್ವಿಕೆಯೆಂಬ ವ್ಯವಸ್ಥೆಯ ಒಳಿತು ಕೆಡುಕೆಂಬ ಎರಡು ಆಯಾಮಗಳ ಪರಿಚಯ ನಮಗಾಗುತ್ತದೆ. ಚರಿತ್ರೆಯಲ್ಲಿ ಹಿಟ್ಲರ, ಔರಂಗಜೇಬನಂಥವರ ಅಥವಾ ಆತನ ಸಮೀಪಕ್ಕೆ ಬರುವವರ ಸಂಖ್ಯೆಯೇ ಹೆಚ್ಚಾಗಿ ಕಾಣಿಸುತ್ತದೆಯೇ ಹೊರತು ಶ್ರೀರಾಮಚಂದ್ರನನ್ನು ನೆನಪಿಸುವ ರಾಜರುಗಳ ಸಂಖ್ಯೆ ಬಹಳ ಕಡಿಮೆಯೇ. ಏನೇ ಇರಲಿ ಭಾರತೀಯರು ಬ್ರಿಟೀಷರು ಅನುಸರಿಸಿಕೊಂಡು ಬಂದಂಥ ಪ್ರಜಾಪ್ರಭುತ್ವವನ್ನು ಮೆಚ್ಚಿ ಅದನ್ನು ಅಳವಡಿಸಿಕೊಂದ್ದು ಸತ್ಯವೇ. ಮೂಲದ ಆಶಯದಂತೆ ಇದರಲ್ಲಿ ಸತ್ಯವೂ ಇದೆ, ಸೌಂದರ್ಯವೂ ಇದೆ, ಪ್ರಜೆಗಳ ಕ್ಷೇಮವೂ ಇದೆ, ರಾಜರೆಂಬ ದರ್ಪ ತೋರಿ ತೋಚಿದಂತೆ ರಾಜ್ಯಭಾರ ಮಾಡುವಂಥ ಪ್ರವೃತ್ತಿಗೆ ತಡೆಯೂ ಇದೆ. ಜನರಿಂದ ಜನರಿಗಾಗಿಯೇ ಜನರೇ ಮಾಡುವ ಆಡಳಿತ... ಆಹಾ ಎಷ್ಟೊಂದು ಸೊಗಸು. ದೇಶೋದ್ಧಾರಕ್ಕೆ ಇದಕ್ಕಿಂತ ಇನ್ನೇನು ಬೇಕು. ಹಾಗಾದರೆ ಇವತ್ತು ಪ್ರಜಾಪ್ರಭುತ್ವ ಇರುವಂಥ ದೇಶಗಳು ಎಲ್ಲವೂ ಸರಿಯಾಗಿದೆ ಎನ್ನುವಂತಿಲ್ಲ. ಯಾಕೆಂದರೆ ಯಾವುದೇ ವ್ಯವಸ್ಥೆಯಲ್ಲಿ ಧನಾತ್ಮಕ ವಿಷಯಗಳಿರುವಂತೆ ಋಣಾತ್ಮಕ ವಿಷಯಗಳೂ ಇರುತ್ತವೆ. ಪ್ರಗತಿಯನ್ನು ಬಯಸುವವರು ಋಣಾತ್ಮಕತೆಯನ್ನು ಬದಿಗಿಟ್ಟು ಧನಾತ್ಮಕತೆಯಿಂದ ಉತ್ಕರ್ಷವನ್ನು ಕಾಣಬೇಕು ಇದು ಜಾಣತನ.
ಇನ್ನು ನಮಗೆ ನಾಯಕ ಯಾರಾಗಬಹುದು.. ಆತನಲ್ಲಿ ಯಾವ ಗುಣಗಳಿರಬೇಕು.. ದೇಶೋದ್ಧಾರದ ವಿಚಾರಗಳೆಷ್ಟಿರಬೇಕು.. ಜನಪ್ರಿಯ ಕೆಲಸ ಮಾಡುವನೋ ಅಥವಾ ಜನಹಿತ ಕೆಲಸ ಮಾಡುವನೋ.. ಸ್ವಜನ ಪಕ್ಷಪಾತಿಯೋ.. ಭಯೋತ್ಪಾದಕನೋ.. ಅಹಂಕಾರಿಯೋ.. ಜ್ಞಾನಿಯೋ.. ಎಂದು ಮುಂತಾಗಿ ತಿಳಿದುಕೊಳ್ಳಬೇಕು. ಇವೆಲ್ಲ ಪ್ರಶ್ನೆಗಳಿಗೆ ನಾಯಕನಾದವನಲ್ಲಿ ಸಮರ್ಪಕವಾದ ಉತ್ತರಗಳಿದ್ದಾಗ ನಿಜವಾಗಿಯೂ ಆತ ತಕ್ಕ ವ್ಯಕ್ತಿಯಾಗುತ್ತಾನೆ ಅಂತೆಯೇ ಸಮರ್ಥ ರಾಜಕಾರಣಿಯೂ ಆಗುತ್ತಾನೆ. ಆತನನ್ನು ನಾವು ಮತದಾನದ ಮೂಲಕ ಆರಿಸಿದಾಗ ನಿಜವಾಗಿಯೂ ಪ್ರಜಾಪ್ರಭುತ್ವಕ್ಕೆ ಒಂದು ಸೌಂದರ್ಯ ಪ್ರಾಪ್ತಿ ಆಗುತ್ತದೆ. ಆದರೆ ಇವತ್ತು ಆ ರೀತಿ ಇದೆಯೇ ಎಂದಾಗ ಉತ್ತರ ಸಮಾಧಾನಕರವಲ್ಲ. ಒಂದಷ್ಟು ಜನ ಅಭ್ಯರ್ಥಿಗಳು ಒಂದಷ್ಟು ಪಕ್ಷಗಳ ಅಡಿಯಲ್ಲಿ ರಾಜ್ಯಭಾರ ಮಾಡುವೆವೆಂದು ಮತಭಿಕ್ಷೆ ಬೇಡಿ ನಿಂತಿರುತ್ತಾರೆ. ಮತದಾರ ಅಭ್ಯರ್ಥಿಗಳ ಯೋಗ್ಯತೆಯನ್ನು ತಿಳಿದೋ ತಿಳಿಯದೆಯೋ ಮತದಾನ ಮಾಡುತ್ತಾನೆ. ಹೆಚ್ಚು ಮತ ಗಳಿಸಿದವನು ವಿಜಯಿಯಾಗುತ್ತಾನೆ. ಅಲ್ಲಿಗೆ ಆ ಪ್ರಕ್ರಿಯೆ ಮುಗಿದಂತೆ. ವಿಜಯಿಯಾದವನು ತಾನೇ ಯೋಗ್ಯನೆಂದೆಣಿಸಿದರೆ ಸೋತವನು ತಾನು ಅಯೋಗ್ಯನೆಂದೆಣಿಸಬಹುದು. ಮತದಾರನು ತನ್ನ ಮತವನ್ನು ತನ್ನ ಅಭಿಮಾನಿಗೆ ನೀಡಿದರೂ ಮುಂದೆ ವಿಜಯಿಯಾದವನೇ ಅಭಿಮಾನಿಗೂ ಅಭಿಮಾನ ಇಲ್ಲದವನಿಗೂ ನಾಯಕನಾಗುತ್ತಾನೆ. ಮತದಾನದ ನಂತರ ಪಕ್ಷಗಳು ದೇಶೋದ್ಧಾರಕ್ಕೆ ಒತ್ತು ಕೊಡಬೇಕೇ ಹೊರತು ದ್ವೇಷ ರಾಜಕೀಯಕ್ಕಲ್ಲವೆನ್ನುವುದೂ ವಾಸ್ತವ. ಹಾಗಾದರೆ ಇಲ್ಲಿ ವಿಜಯಿಯಾದವನು ನಿಜವಾಗಿಯೂ ಅರ್ಹನೇ ಆಗಿರುವನೋ ಎಂದಾಗ ಒಂದು ದೃಷ್ಟಿಯಿಂದ ಹೌದು ಎಂದರೆ ಇನ್ನೊಂದು ದೃಷ್ಟಿಯಿಂದ ಅನರ್ಹರನ್ನೂ ಅರ್ಹನಾಗಿಸುವಂಥ ಕೆಲವಾರು ಪ್ರಕ್ರಿಯೆಗಳು ಅಲ್ಲಿ ನಡೆಯುವುದೂ ಇವೆ. ಹಾಗಾದಾಗ ಈ ಪ್ರಜಾಪ್ರಭುತ್ವ ಎನ್ನುವಂಥದ್ದು ಕೂಡ ಪರಿಪೂರ್ಣವಾದಂಥದ್ದು ಹೌದಾದರೂ ಅದರೊಳಗೂ ಅಪಸವ್ಯಗಳು ಸಾಕಷ್ಟಿವೆ ಎನ್ನುವಂಥದ್ದೂ ಸತ್ಯವೇ ಆಗಿದೆ.
ಒಂದು ಸಣ್ಣ ಕಾಲ್ಪನಿಕ ವಿಚಾರಧಾರೆ...
ಒಂದು ಸ್ಪರ್ಧೆ.. ಅದರಲ್ಲೊಂದು ಸರಳವಾದ ಪ್ರಶ್ನೆ ಅದಕ್ಕೆ ಹತ್ತು ಸಿದ್ಧ ಉತ್ತರಗಳು. ಒಂದಷ್ಟು ಜನ ಉತ್ತರ ಹೇಳುವಂಥವರು. ಅದರಲ್ಲಿ ಒಂದೋ ಎರಡೋ ಉತ್ತರಗಳು ಸರಿಯಾಗಿರುವಂಥದ್ದಾದರೆ ಉಳಿದವು ಯಾವುದೇ ಸಂಬಂಧವಿಲ್ಲದವು. ಇಲ್ಲಿ ನಿಯಮವೆಂದರೆ ಕೊಟ್ಟಂಥ ಉತ್ತರ ಸರಿಯೋ ತಪ್ಪೋ ಎಂಬುದಲ್ಲ. ಬದಲಾಗಿ ಯಾವ ಉತ್ತರಕ್ಕೆ ಹೆಚ್ಚು ಅಂಕಗಳು ದೊರೆಯುತ್ತವೋ ಆ ಉತ್ತರ ಸರಿ. ಕೇಳಿದ ಪ್ರಶ್ನೆಗೆ ಒಂದು ನಿರ್ದಿಷ್ಟ ಅವಧಿವರಿಗೆ ಅದೇ ಉತ್ತರ. ಉತ್ತರ ಕೊಟ್ಟಂಥವರಿಗೆ ಅದ್ಭುತ ಬಹುಮಾನಗಳು... ಇದಿಷ್ಟು ಆಟ. ಇಲ್ಲಿ ಒಂದೊಂದು ಉತ್ತರಕ್ಕೆ ಒಂದಷ್ಟು ಜನ ಅಭಿಮಾನಿಗಳಿರುತ್ತಾರೆ. ಎಲ್ಲರಿಗೂ ಬಹುಮಾನದ ಮೇಲೆ ಕಣ್ಣು ಅದಕ್ಕಾಗಿ ಏನೇನೋ ಸರ್ಕಸ್ಗಳು. ಸರಿ ದಾರಿಗಳು ಪ್ರಬಲವಿಲ್ಲದಿದ್ದರೆ, ವಾಮ ಮಾರ್ಗಗಳು. ಯಾರಿಗೆ ಯಾವ ಉತ್ತರ ಸರಿ ಎನಿಸುವುದೋ ಆ ಉತ್ತರವನ್ನೇ ಹೆಚ್ಚು ಜನರು ಕೊಡಬೇಕೆಂಬ ಆಮಿಷಗಳು. ಕೆಲವೆಡೆ ಒತ್ತಡಗಳು, ಕೆಲವೆಡೆ ಹಣದ ಬಟವಾಡೆ, ಕೆಲವೆಡೆ ಮನಸ್ಸು ಪರಿವರ್ತನೆ ಮಾಡುವಂಥ ಉಡುಗೋರೆಗಳ ವಿತರಣೆ... ಹೀಗೆ ಉತ್ತರಕ್ಕಾಗಿ ನಾನಾ ಮಾರ್ಗಗಳ ಶೋಧನೆ.
ಇಲ್ಲಿ ಪ್ರಶ್ನೆಗೆ ಸರಿಯಾದ ಉತ್ತರ ಹೇಳುವಂಥ ಒಂದು ಪ್ರಜ್ಞಾವಂತ ವರ್ಗವಿರುತ್ತದೆ. ಆದರೆ ಅವರ ಸಂಖ್ಯೆ ಬಹಳ ಕಡಿಮೆ. ಬಹುಮಾನ ಬಾರದಿದ್ದರೂ ಪರವಾಗಿಲ್ಲ ತಪ್ಪು ಉತ್ತರ ಕೊಡಲಾರೆ ಎನ್ನುವ ಧೋರಣೆ ಇವರದ್ದು. ಆದ್ದರಿಂದ ಯಾವಾಗಲೂ ಕೇಳುವ ಪ್ರಶ್ನೆಗೆ ಸರಿ ಉತ್ತರ ಸಿಗುವುದೇ ಇಲ್ಲ. ಆದರೆ ಕೆಲವೊಂದು ಉತ್ತರಗಳು ಪ್ರಶ್ನೆಗೆ ಹತ್ತಿರವಾಗಿರುವುದರಿಂದ ಸ್ವಲ್ಪ ಮಟ್ಟಿನ ನ್ಯಾಯ ಒದಗಿದಂತೆಯೇ. ಹೆಚ್ಚಿನ ವೇಳೆ ಪ್ರಶ್ನೆಗೂ ಉತ್ತರಕ್ಕೂ ಸಂಬಂಧವೇ ಇರದಂಥವು ಹೆಚ್ಚು ಜನರ ಆಯ್ಕೆ ಎಂಬ ಒಂದೇ ಕಾರಣಕ್ಕೆ ಬಹುಮಾನ ಪಡೆದು ಮೆರೆಯುವ ಈ ಒಂದು ಆಟವೇ ಇಂದಿನ ರಾಜಕೀಯ ಎನ್ನಬಹುದು. ಅಲ್ಲವೇ ಮತ್ತೆ ರಾಜಕಾರಣಿ ಆಗಬೇಕು, ದೇಶ ಸೇವೆ ಮಾಡಬೇಕು, ಹೆಸರು ಹಣ ಗಳಿಸಬೇಕೆಂಬ ವಿಚಾರಕ್ಕೆ ಒಳಗಾಗಿ ಅದಕ್ಕಾಗಿ ಮಾಡಬಾರದ, ಕೇಳಬಾರದ, ನೋಡಬಾರದ ಅಪಸವ್ಯಗಳನ್ನೆಲ್ಲ ಮಾಡಿ ವಿಜಯಿಯಾದಾಗ ಅದು ತನ್ನ ಉತ್ತಮ ರಾಜಕಾರಣಕ್ಕೆ ಸಿಕ್ಕ ಗೌರವ ಅಥವಾ ವಿಜಯ ಎಂಬ ಹೊರಕವಚವನ್ನು ಪ್ರಜೆಗಳಿಗೆ ಅನಾವರಣ ಮಾಡಿದಾಗ, ಒಳಗಿನ ಹೂರಣವನ್ನು ಮರೆಮಾಚಿದಾಗ ಒಂದು ನಿರ್ದಿಷ್ಟ ಕಾಲದವರೆಗೆ ಆತ ಪ್ರಶ್ನಾತೀತ ಮಾತ್ರವಲ್ಲ ಏನನ್ನು ಮಾಡಲೂ ಸಾಮರ್ಥ್ಯವಿರುವಂಥ ವ್ಯಕ್ತಿಯಾಗುತ್ತಾನೆ. ಮಾತ್ರವಲ್ಲ ಆತ ವಿ.ಐ.ಪಿ. ಅಥವಾ ವಿ.ವಿ.ಐ.ಪಿ. ಎಂದು ಗುರುತಿಸಲ್ಪಡುತ್ತಾನೆ. ಕೆಲವೊಮ್ಮೆ ಉತ್ತರ ತಪ್ಪಾದರೂ ಬಾಧೆ ಇರುವುದಿಲ್ಲ. (ಹೇಗೆಂದರೆ ಸೌರ ಮಂಡಲದಲ್ಲಿ ಎಷ್ಟು ಗ್ರಹಗಳಿವೆ ಎಂಬ ಪ್ರಶ್ನೆಗೆ ಉತ್ತರದಲ್ಲಿ ಒಂದೆರಡು ಗ್ರಹಗಳು ಹೆಚ್ಚಾದರೂ ಕಡಿಮೆಯಾದರೂ ಬದುಕಿಗೇನೂ ಭಂಗವಿರದಂತೆ) ಅಂತೆಯೇ ಕೆಲವೊಮ್ಮೆ ರಾಜಕಾರಣಿಗಳು ಯಾವ ಪಕ್ಷದವರಾದರೂ ಉಪಕಾರವೂ ಇಲ್ಲ ಉಪದ್ರವವೂ ಇಲ್ಲ ಎನ್ನುವಂತೆ ನಿಷ್ಕ್ರಿಯರಾಗಿರುತ್ತಾರೆ. ಇದು ಸಲ್ಲದು. ಬದಲಾಗಿ ಉತ್ತರವೂ ಸರಿಯಾಗಿರಬೇಕು ಅಂತೆಯೇ ಇನ್ನೊಬ್ಬರಿಗೆ ವಾಸ್ತವದ ಅರಿವಿನ ಜತೆಗೆ ಸತ್ಯವನ್ನು ತಿಳಿಸುವಂತಿರಬೇಕು ಉದಾಹರಣೆಗೆ ಸೌರಮಂಡಲದಲ್ಲಿ ಇಂತಿಷ್ಟೇ ಗ್ರಹಗಳು ಉಪಗ್ರಹಗಳು ಇವೆ ಎಂಬ ನಿಖರವಾದ ಮಾಹಿತಿಯಂತೆ. ಏನೇ ಇರಲಿ ಉದ್ದೇಶ ಪೂರ್ವಕವೋ, ಕಾಕತಾಳೀಯವೋ, ಆಮಿಷಕ್ಕೊಳಗಾಗಿಯೋ ಏನೋ ಒಂದು ಉತ್ತರ ಸಿಕ್ಕಿದೆ. ಬಂದಂಥ ಉತ್ತರ ಸರಿಯೋ ತಪ್ಪೊ ಅದು ಹೇಗೂ ಇರಲಿ, ಆದರೆ ಲೋಕಕ್ಕೆ ಕ್ಷೇಮವುಂಟಾಗುವಲ್ಲಿ ಪರ್ಯಾವಸಾನವಾಗಲಿ... ಜೈ ಕರ್ನಾಟಕ
- ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ