ಮಂಗಳೂರು: ಸಂವಿಧಾನಶಿಲ್ಪಿ, ಭಾರತರತ್ನ. ಡಾ. ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆಚರಿಸಲಾಯಿತು. ಬಿಜೆಪಿಯ ವಿಭಾಗಗ ಮಾಧ್ಯಮ ಕೇಂದ್ರದಲ್ಲಿ ಈ ಸಂದರ್ಭದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ವಿನಯನೇತ್ರ ದಡ್ಡಲ್ಕಾಡು ಅವರು ಸಂಂವಿಧಾನಶಿಲ್ಪಿಗೆ ನಮನ ಸಲ್ಲಿಸಿ, ಅವರ ಗೌರವಾರ್ಥ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಕೈಗೊಂಡ ಹಲವು ಯೋಜನೆಗಳನ್ನು ಸ್ಮರಿಸಿಕೊಂಡರು.
ಬಾಬಾಸಾಹೇಬರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ, ರಾಷ್ಟ್ರಕ್ಕೆ ಸೇರಿದವರು. ಎಲ್ಲ ಪಕ್ಷಗಳಿಗೂ ಅವರ ಜನ್ಮ ಜಯಂತಿ ಆಚರಿಸಲು ಮುಕ್ತ ಅವಕಾಶವಿದೆ. ಬಾಬಾಸಾಹೇಬರನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಪಕ್ಷವು ಎನ್ಡಿಎ ಸರ್ಕಾರ ಮತ್ತು ಬಿಜೆಪಿ ಅಂಬೇಡ್ಕರ್ ಜಯಂತಿ ಆಚರಿಸುವುದನ್ನು ಟೀಕಿಸುವುದು ಎಷ್ಟು ಮಾತ್ರಕ್ಕೂ ಸಲ್ಲದು ಎಂದು ಅವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಿಷ್ಟು:
ಜಗತ್ತೇ ಗೌರವಿಸುವ ನಮ್ಮೆಲ್ಲರ ಹೆಮ್ಮೆಯ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿರುವುದು ಮತ್ತು ಜನಸಾಮಾನ್ಯರನ್ನು ಮುಟ್ಟಿರುವುದಕ್ಕೆ ಸಂವಿಧಾನಶಿಲ್ಪಿ ನೀಡಿದ ಸಂವಿಧಾನವೇ ಕಾರಣ ಎನ್ನುವುದು ಅಮೃತ ಮಹೋತ್ಸವ ಸಂದರ್ಭದಲ್ಲಿರುವ ನಮ್ಮ ನಾಡು ಅನುಭವಿಸಿದ ಸತ್ಯ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಹೋರಾಟಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳ ಮೂಲಕ ಶೋಷಿತ ವರ್ಗಕ್ಕೆ ನ್ಯಾಯ ನೀಡಿದ ಯುಗಪುರುಷ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶದ ಸಾಮಾಜಿಕ ಸಾಮರಸ್ಯಕ್ಕೆ ನೀಡಿದ ಅದ್ಭುತ ಕೊಡುಗೆಯನ್ನು ಅರ್ಥೈಸಿಕೊಂಡಿರುವ ಭಾರತೀಯ ಜನತಾ ಪಕ್ಷ ನಾಡಿನ ಸಮಸ್ತ ಜನತೆಯ ಪರವಾಗಿ ಕೃತಜ್ಞತೆಗಳೊಂದಿಗೆ ಪಂಚತೀರ್ಥ ಯೋಜನೆಯ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರರ ಜೀವನ ಸಂದೇಶವನ್ನು ಚಿರಸ್ಥಾಯಿಯಾಗುವಂತೆ ಮಾಡಿದೆ. ಮಧ್ಯಪ್ರದೇಶದ ಮೌ ನಲ್ಲಿರುವ ಅಂಬೇಡ್ಕರ್ ಜನ್ಮಸ್ಥಳ, ಲಂಡನ್ನಲ್ಲಿ ಅವರು ವಾಸ್ತವ್ಯ ಹೂಡಿದ ಕಟ್ಟಡ, ನಾಗಪುರದ ದೀಕ್ಷಾ ಭೂಮಿ, ದಿಲ್ಲಿಯಲ್ಲಿರುವ ಮಹಾಪರಿನಿರ್ವಾಣ ಸ್ಥಳ ಮತ್ತು ಮುಂಬಯಿಯ ಚೈತನ್ಯಭೂಮಿ- ಸ್ಥಳಗಳನ್ನು ಅಭಿವೃದ್ಧಿಪಡಿಸಿ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸುವುದು ಪಂಚತೀರ್ಥ ಯೋಜನೆಯ ಉದ್ದೇಶವಾಗಿದೆ ಎಂದು ವಿನಯನೇತ್ರ ವಿವರಿಸಿದರು.
ಕಾಂಗ್ರೆಸ್ ಪಕ್ಷವು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿ ಸರಿಯಾದ ಸ್ಥಾನಮಾನ ನೀಡದೆ, ಚುನಾವಣೆಯಲ್ಲಿ ಸೋಲಿಸಿ ಅವಮಾನಿಸಿದ್ದು ಇತಿಹಾಸ. ಅಂಬೇಡ್ಕರ್ ಅವರ ಚುನಾವಣೆಯಲ್ಲಿ ಎಲೆಕ್ಷನ್ ಏಜೆಂಟರಾಗಿ ಸಹಕರಿಸಿದವರು ಆರ್ಎಸ್ಎಸ್ನ ದತ್ತೋಪಂತ್ ಠೇಂಗಡಿ ಅವರು ಎನ್ನುವುದು ಉಲ್ಲೇಖನೀಯ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಗೌರವಿಸಿ, ಚುನಾವಣೆಯಲ್ಲಿ ಅವರ ವಿರುದ್ಧ ಅಭ್ಯರ್ಥಿಯನ್ನು ಹಾಕದೆ ಗೆಲ್ಲಿಸಿಕೊಡಬೇಕಾಗಿತ್ತು. ದುರದೃಷ್ಟವಶಾತ್ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಚುನಾವಣೆಯಲ್ಲಿ ಅಂಬೇಡ್ಕರ್ ಅವರ ಸೋಲನ್ನು ಖಚಿತಪಡಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರರನ್ನು ಚುನಾವಣೆಯಲ್ಲಿ ಸೋಲಿಸಿ ಅವರ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡದ ಕಾಂಗ್ರೆಸ್, ಅವರ ಹೆಸರನ್ನು ಕೇವಲ ಮತಬೇಟೆಗಾಗಿ ಉಪಯೋಗಿಸಿರುವುದು ಈ ದೇಶ ಕಂಡ ದೊಡ್ಡ ದುರಂ ಎಂದು ಅವರು ವಿಷಾದಿಸಿದರು.
ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಮತ್ತು ಡಾ ರಾಜೇಂದ್ರ ಪ್ರಸಾದ್ ಅವರು ನೆಹರುರವರ ಮೇಲೆ ಮೇಲುಗೈ ಸಾಧಿಸಿ ಡಾ. ಅಂಬೇಡ್ಕರ್ ಅವರನ್ನು 1947 ರಲ್ಲಿ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಹರು ಮತ್ತು ಡಾ ಅಂಬೇಡ್ಕರ್ ನಡುವೆ ಯಾವುದೇ ಪ್ರೀತಿ ಇರಲಿಲ್ಲ. ಅವರು ಹಿಂದೂ ಕೋಡ್ ಬಿಲ್ ಸೇರಿದಂತೆ ಅನೇಕ ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು. ಈ ಭಿನ್ನಾಭಿಪ್ರಾಯ ಅಂತಿಮವಾಗಿ ಅಂಬೇಡ್ಕರ್ ರವರು ಕೇಂದ್ರ ಸಚಿವ ಸಂಪುಟದಿಂದ ಹೊರಬರಲು ಕಾರಣವಾಯಿತು. ಅಂಬೇಡ್ಕರ್ ರವರು ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ. ನೀಡುವುದನ್ನು ವಿರೋಧಿಸಿದ್ದರು. ಎನ್ನುವುದು ಈ ಸಂದರ್ಭದಲ್ಲಿ ಉಲ್ಲೇಖನೀಯ ಎಂದು ಅವರು ತಿಳಿಸಿದರು.
ನ್ಯಾಶನಲ್ ಪ್ರಂಟ್ (ಬಿಜೆಪಿ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ) ಅಧಿಕಾರಕ್ಕೆ ಬಂದಾಗ ಮಾತ್ರ ಡಾ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಿದ್ದೇ ಹೊರತು ಮತ್ತು ಹಲವಾರು ದಶಕಗಳ ಅವಕಾಶವಾದಿ ಕಾಂಗ್ರೆಸ್ ಆಡಳಿತದಲ್ಲಿ ಅಲ್ಲ. ಅದೇ ರೀತಿ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಬಾಬಾಸಾಹೇಬರ ಭಾವಚಿತ್ರವನ್ನು ವಿಪಿ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಅನಾವರಣಗೊಳಿಸಲಾಗಿತ್ತು ಎಂಬುದನ್ನು ಕಾಂಗ್ರೆಸ್ ಗೆ ನೆನಪಿಸಬೇಕಾಗಿದೆ.
ವಂಶಾಡಳಿತ ರಾಜಕಾರಣಕ್ಕೆ ಮಣಿದಿರುವ ಕಾಂಗ್ರೆಸ್ಗಿಂತ ಭಿನ್ನವಾಗಿ, ಬಿಜೆಪಿ ದೀನದಲಿತ ಮತ್ತು ದುರ್ಬಲ ವರ್ಗಗಳ ರಾಜಕೀಯ ಉನ್ನತಿಗೆ ಮತ್ತು ಜಾತಿ ರಹಿತ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಲು ಬದ್ಧವಾಗಿದೆ.
ಬಿಜೆಪಿ ಸರ್ಕಾರವು ಮೊಬೈಲ್ ಪಾವತಿಗಾಗಿ ಅಭಿವೃದ್ಧಿಪಡಿಸಿದ ಮೊಬೈಲ್ ಆಪ್ಗೆ ಭೀಮ್ ಎಂದು ಹೆಸರಿಟ್ಟು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ. ಸಮಾಜದಲ್ಲಿ ಸಾಮರಸ್ಯ ಸ್ಥಾಪನೆ ಮಾಡಲು ಅಂಬೇಡ್ಕರ್ ಅವರು ನೀಡಿದ ಕೊಡುಗೆಗಾಗಿ ಕೃತಜ್ಞತೆಗಳೊಂದಿಗೆ ಈ ಮೊಬೈಲ್ ಅಪ್ಲಿಕೇಶನ್ಗೆ ಅಂಬೇಡ್ಕರ್ ಅವರ ಹೆಸರನ್ನು ಇರಿಸಿದೆ.
132ನೇ ಜನ್ಮ ಜಯಂತಿಯ ಈ ಶುಭ ಸಂದರ್ಭದಲ್ಲಿ ಈ ದೇಶ ಕಂಡ ಶ್ರೇಷ್ಠ ಶಿಕ್ಷಣ ತಜ್ಞ, ಸಂವಿಧಾನಶಿಲ್ಪಿ, ಅಪ್ರತಿಮ ಮೇಧಾವಿ, ಸಾಮಾಜಿಕ ಸಾಮರಸ್ಯದ ಹರಿಕಾರ, ದೀನ- ದಲಿತ- ಶೋಷಿತ ವರ್ಗಗಳ ಆಶಾ ಕಿರಣ, ಭಾರತ ರತ್ನ ಪುರಸ್ಕೃತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದಲ್ಲಿ ಸಾಮರಸ್ಯ ಮೂಡಿಸಿ ಭಾರತವನ್ನು ಜಗದ್ವಂದ್ಯ ಭಾರತವನ್ನಾಗಿ ಮಾಡುವಲ್ಲಿ ನಮ್ಮೆಲ್ಲರಿಗೂ ಪ್ರೇರಣೆ ನೀಡಲಿ ಎಂದು ಅವರು ನುಡಿದರು.
ಪತ್ರಿಕಾ ಗೋಷ್ಠಿಯಲ್ಲಿ, ದಿನೇಶ್ ಅಮ್ಟೂರು- ಎಸ್ಸಿ ಮೋರ್ಚಾ, ರಾಜ್ಯ ಕಾರ್ಯಕಾರಿಣಿ ಸದಸ್ಯರು; ರಾಘವ ಕಲ್ಮಂಜ- ಉಪಾಧ್ಯಕ್ಷರು, ಎಸ್ಸಿ ಮೋರ್ಚಾ, ದ.ಕ ಜಿಲ್ಲೆ; ವಿಠಲ್ ಮುಲ್ಕಿ- ಕಾರ್ಯದರ್ಶಿ, ಎಸ್.ಸಿ ಮೋರ್ಚಾ, ದ.ಕ ಜಿಲ್ಲೆ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ