ಮಂಗಳೂರು: ಕಾಯಕ ಸಿದ್ಧಾಂತಗಳನ್ನು ಧಾರ್ಮಿಕ ಹಿನ್ನೆಲೆಯಿಂದ ಜಾತೀಕರಣಗೊಳಿಸಿದವರ ವಿರುದ್ಧ ಹೋರಾಡಿದವರು ಅಂಬೇಡ್ಕರ್. ಅವರನ್ನು ಅರಿತುಕೊಂಡಾಗ ಮಾತ್ರ 'ಭಾರತʼ, ʼಭಾರತೀಯತೆʼ ಅರ್ಥವಾಗುತ್ತದೆ. ಇಲ್ಲವಾದರೆ ಭಾರತ ಪ್ರಯೋಗವನ್ನು ಒಪ್ಪದ, ಬೌದ್ಧಿಕ ಜ್ಞಾನವಿಲ್ಲದ ಸಂಪ್ರದಾಯವಾದಿಗಳ ದೇಶವಾಗಿ ಉಳಿಯುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಾ. ಬಿ ಆರ್ ಅಂಬೇಡ್ಕರ್ ಅವರ 132 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಅರ್ಥವಾದಾಗ ಮಾತ್ರ ದೇಶದ ನಿಜವಾದ ಬದಲಾವಣೆ ಸಾಧ್ಯ. ಗೌತಮ ಬುದ್ಧ, ಬಸವಣ್ಣ, ಅಂಬೇಡ್ಕರರ 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲುʼ ಎಂಬ ಕನಸು ನಿವಾಗುತ್ತದೆ. ನಿಜವಾದ ಧರ್ಮ ಸಮಸಂಸ್ಕೃತಿ, ಸಾಕ್ಷಾತ್ಕಾರದ ಕಡೆಗೆ ಕೊಂಡೊಯ್ಯುತ್ತದೆ. ಆದರೆ ಈಗ ಧರ್ಮ ಸೋತಿದೆ, ಜಾತಿ ಮಾತಾಡುತ್ತಿದೆ. ಜಾತಿ ಮಾತಾಡಿದರೆ ಪ್ರಜಾಪ್ರಭುತ್ವ ಸೋಲುತ್ತದೆ. ದೇಶದ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುವುದೇ ನಿಜವಾದ ರಾಷ್ಟ್ರೀಯತೆ. ಭ್ರಮೆಯಲ್ಲಿದ್ದು ನಾವು ಜೊತೆಗಿದ್ದೇವೆ ಎಂದು ತೋರಿಸಿಕೊಳ್ಳುವುದಲ್ಲ. ಕಾಲ್ಪನಿಕ ಜಗತ್ತನ್ನು ಬಿಟ್ಟು ಮಾತನಾಡಿಸುವುದನ್ನು, ಪ್ರಶ್ನಿಸುವುದನ್ನು ಸಂವಿಧಾನ ನಮಗೆ ಕಲಿಸಿದೆ ಎಂದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್ ಯಡಪಡಿತ್ತಾಯ, ಅಂಬೇಡ್ಕರ್ ತತ್ವ ಪಾಲನೆಯಲ್ಲಿ ನಮ್ಮ ನಡೆ ಮತ್ತು ನುಡಿಯಲ್ಲಿ ಸಾಮ್ಯತೆಯಿರಬೇಕು. ಸಂವಿಧಾನದ ಕುರಿತು ಮಾತನಾಡುವುದಲ್ಲ, ಅದರ ಜಾರಿಯೂ ಪರಿಣಾಮಕಾರಿಯಾಗಬೇಕು. ನಮ್ಮ ಮನಃಸ್ಥಿತಿ ಬದಲಾಗಿ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ. ಅಂಬೇಡ್ಕರ್ ಮತ್ತು ಅವರ ಕೃತಿಗಳು ಅಲಂಕಾರಿಕ ವಸ್ತುಗಳಾಗಬಾರದು ಎಂದರು.
ಕಾರ್ಯಕ್ರಮದ ಭಾಗವಾಗಿ ಬೆಂಗಳೂರಿನ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ (ರಿ.)ದ ಕಲಾವಿದರು "ಅಂಬೇಡ್ಕರ್ "ಸಾಮಾಜಿಕ ನಾಟಕವನ್ನು ಪ್ರಸ್ತುತಪಡಿಸಿದರು. ಸಭಾ ಕಾರ್ಯಕ್ರಮದ ಮೊದಲು ವಿಜ್ಞಾನ ಸಂಕೀರ್ಣದ ಬಳಿ ಇತ್ತೀಚೆಗೆ ಪ್ರತಿಷ್ಠಾಪಿಸಲಾದ ಡಾ. ಬಿ ಆರ್ ಅಂಬೇಡ್ಕರ್ ಅವರ ನೂತನ ಕಂಚಿನ ಪ್ರತಿಮೆಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿಕೆ, ಜಾತಿಯ ಕೂಪದಿಂದ ಜನರನ್ನು ಪಾರು ಮಾಡಿದ ಡಾ. ಬಿ ಆರ್ ಅಂಬೇಡ್ಕರ್ ಆಧುನಿಕ ಭಾರತದ ಕರ್ತೃಗಳಲ್ಲಿ ಒಬ್ಬರು ಎಂದು ಅಭಿಪ್ರಾಯಪಟ್ಟರು. ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಘಟಕದ ವಿಶೇಷಾಧಿಕಾರಿ ಡಾ. ನರಸಿಂಹಯ್ಯ ಎನ್ ಧನ್ಯವಾದ ಸಮರ್ಪಿಸಿದರು.
ಕುಲಸಚಿವ (ಪರೀಕ್ಷಾಂಗ) ಡಾ. ರಾಜು ಕೃಷ್ಣ ಚಲನ್ನವರ್, ಹಣಕಾಸು ಅಧಿಕಾರಿ ಪ್ರೊ. ವೈ ಸಂಗಪ್ಪ ಮೊದಲಾದವರು ಉಪಸ್ಥಿತರಿದ್ದರು. ಡಾ.ಯಶಸ್ವಿನಿ ಬಿ ಮತ್ತು ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತಿಯ ಬಳಿಕ…
ಜೂನ್ ಮೊದಲ ವಾರದಲ್ಲಿ ವಯೋನಿವೃತ್ತರಾಗಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, “ಇದು ನಿವೃತ್ತಿಯ ಮೊದಲು ನಾನು ಭಾಗವಹಿಸುತ್ತಿರುವ ಕೊನೆಯ ದೊಡ್ಡ ಮಟ್ಟದ ಕಾರ್ಯಕ್ರಮವಾಗಬಹುದು. ನಾನು ಕುಲಪತಿ ಸ್ಥಾನದಿಂದ ನಿವೃತ್ತನಾಗಲಿದ್ದೇನೆಯೇ ಹೊರತು, ಅನುಭವದಿಂದ ದೊರೆತ ಜ್ಞಾನದ ಸದ್ಭಳಕೆ, ಆತ್ಮಾವಲೋಕನ, ಸಮಾಜಮುಖಿ ಚಿಂತನೆ, ಕೆಲಸಗಳು ಉಸಿರಿರುವವರೆಗೂ ಮುಂದುವರಿಯಲಿವೆ” ಎಂದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ