ಪರ್ಲಾಣಿ: ಶ್ರೀ ಧ.ಮಂ. ಕಾಲೇಜು, ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರವನ್ನು ದ.ಕ.ಜಿ.ಪಂ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಮಾರ್ಚ್ 30ಕ್ಕೆ ಆರಂಭವಾದ ಶಿಬಿರವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಳಗೊಂಡಿತ್ತು.
ಶಿಬಿರದ ಕೊನೆಯ ದಿನ, ಏಪ್ರಿಲ್ 5ರ ಬುಧವಾರದಂದು ಬೆಳಿಗ್ಗೆ 11:30ಕ್ಕೆ ಸಮಾರೋಪ ಸಮಾರಂಭ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಧ.ಮಂ ಕಾಲೇಜು, ಉಜಿರೆಯ ಉಪ ಪ್ರಾಂಶುಪಾಲರಾದ ಪ್ರೊ. ಶಾಂತಿ ಪ್ರಕಾಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಇವರು "ಜಾಣ್ಮೆ ಇದ್ದರೆ ಸಾಲದು ತಾಳ್ಮೆಯು ಇರಬೇಕು. ಮಾನವನಾಗಿ ಬೆಳೆಯಲು ಪರೋಪಕಾರ ಮುಖ್ಯ. ರಾಷ್ಟ್ರೀಯ ಸೇವಾ ಯೋಜನೆಯು ಸ್ವಯಂಸೇವಕರಿಗೆ ಸಹಬಾಳ್ವೆ, ಶಿಸ್ತು, ಸಮಯಪ್ರಜ್ಞೆಯನ್ನು ಕಲಿಸಿಕೊಡುತ್ತದೆ. ಕೌಶಲ್ಯವಿದ್ದರೆ ಸಾಲದು ಮಾನವೀಯತೆ ಮುಖ್ಯ. ಸ್ವಯಂಸೇವಕರು ತಮ್ಮ ಕಾರ್ಯಗಳಿಂದ ಇತರರಿಗೆ ಮಾದರಿಯಾಗಿದ್ದಾರೆ" ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳ್ತಂಗಡಿಯ ಬ್ಲಾಕ್ ಶಿಕ್ಷಣ ಅಧಿಕಾರಿ ಎಚ್.ಎಸ್ ವಿರೂಪಾಕ್ಷಪ್ಪ ಅವರು ಸ್ವಯಂಸೇವಕರು ತಯಾರಿಸಿದ ಭಿತ್ತಿಪತ್ರವನ್ನು ಅನಾವರಣಗೊಳಿಸಿ ಮಾತನಾಡಿದರು. ಎನ್ಎಸ್ಎಸ್ ನ 'ನನಗಲ್ಲ ನಿನಗೆ' ಎಂಬ ಧ್ಯೇಯ ವಾಕ್ಯದಡಿಯಲ್ಲಿ ಶಿಬಿರವು ಸಂಪೂರ್ಣವಾಗಿ ಸಫಲವಾಗಿದೆ. ಹೇಗೆ ಗಡಿಯಲ್ಲಿ ಸೈನಿಕರು ಸದಾ ಸನ್ನದ್ಧರಾಗಿರುತ್ತಾರೋ,ಹಾಗೆಯೇ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಸೇವೆಗೆ ಸದಾ ಸಿದ್ದರಿರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರ್ಲಾಣಿ ಶಾಲೆಯ ಮುಖ್ಯೋಪಾಧ್ಯರಾದ ತಮ್ಮಯ್ಯ.ಬಿ ಅವರು ಮಾತನಾಡಿ, 'ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಶಿಸ್ತಿನ ಸಿಪಾಯಿಗಳು. ಶಾಲೆಗೆ ಬೇಕಾದ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡಿದ್ದಾರೆ' ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಧ. ಮಂ. ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಪಿ. ಎನ್ ಉದಯಚಂದ್ರ, ಪರ್ಲಾಣಿಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ಶಾಂತಿ ಡಿ'ಸೋಜ, ಹಾಲು ಉತ್ಪಾದಕರ ಸಹಕಾರ ಸಂಘ ಚಾರ್ಮಡಿಯ ಅಧ್ಯಕ್ಷರಾದ ಕೇಶವ, ಪ್ರಶಾಂತ್ ಕುಮಾರ್, ಸಿ.ಆರ್.ಪಿ, ಸಾ.ಶಿ. ಇಲಾಖೆ, ಚಾರ್ಮಾಡಿ ರವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮಿ ನಾರಾಯಣ ಕೆ.ಎಸ್ ಬಂದಿದ್ದ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಗೈದರು. ಪ್ರೊ. ದೀಪ ಆರ್. ಪಿ, ಯೋಜನಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಯಂ ಸೇವಕಿ ಸಿಂಚನ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ