ಉಜಿರೆ: ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸ್ವಯಂಸೇವಕರಿಗೆ ಗಣರಾಜ್ಯೋತ್ಸವದ ಕರ್ತವ್ಯ ಪಥದಲ್ಲಿ ನಡೆಯುವ ಪಥಸಂಚಲನದ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸ್ವಯಂಸೇವಕರಾದ ಧನುಷ್ ಕೆ.ಪಿ ಹಾಗೂ ಹಿರಿಯ ಎನ್.ಸಿ.ಸಿ ಕೆಡೆಟ್ ಅಖಿಲೇಶ್ ಸುವರ್ಣ ಅವರು ರಾಷ್ಟ್ರಮಟ್ಟದ ಪಥಸಂಚಲನದ ಮಹತ್ವ, ಗಾಂಭೀರ್ಯತೆ, ಹಾಗೂ ಆಯ್ಕೆಯ ವಿಧಿವಿಧಾನಗಳನ್ನು ವಿವರಿಸಿದರು. ಇವರೀರ್ವರೂ ದಿಲ್ಲಿಯಲ್ಲಿ ಗಣರಾಜ್ಯೋತ್ಸವದ ಪಥಸಂಚಲನ ದಲ್ಲಿ ಭಾಗವಹಿಸಿದವರಾಗಿದ್ದಾರೆ.
ಎನ್.ಸಿ.ಸಿ ಯ ಹಿರಿಯ ಕೆಡೆಟ್ ಅಖಿಲೇಶ್ ಸುವರ್ಣರವರು ಮಾತನಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲು ಮಾಡಬೇಕಾದ ವ್ಯಾಯಾಮ, ಮೈಕಟ್ಟು ಸಂರಕ್ಷಣೆ, ಆಹಾರ ಸೇವನೆ ಇವೇ ಮುಂತಾದ ದೈಹಿಕ ಅರ್ಹತೆಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. “ಹೇಗೆ ಪಾರ್ಥಸಾರಥಿಯಾಗಿ ಶ್ರೀಕೃಷ್ಣನು ಯುಧ್ಧ ಮಾಡದೆಯೇ ಕುರುಕ್ಷೇತ್ರವನ್ನು ಗೆಲ್ಲುವುದಕ್ಕೆ ಅರ್ಜುನನಿಗೆ ಸಹಕರಿಸಿದನೋ ಹಾಗೆಯೇ ಹಿರಿಯರಾದ ನಾವು ನಿಮಗೆ ಸಲಹೆಯ ಮೂಲಕ ನಿಮ್ಮ ಕನಸನ್ನು ನನಸು ಮಾಡಬಹುದು” ಎಂದರು.
ನಂತರ ಹಿರಿಯ ಸ್ವಯಂಸೇವಕರಾದ ಧನುಶ್ ಕೆ.ಪಿ ಯವರು ಮೊದಲು ರಾಷ್ಟ್ರೀಯ ಸೇವಾ ಯೋಜನೆಯ ಕಿರು ಪರಿಚಯ ಮಾಡಿ, ಆಯ್ಕೆ ಪ್ರಕ್ರಿಯೆಯ ವಿಧಾನಗಳು, ಅವುಗಳ ತಯಾರಿಯ ಬಗ್ಗೆ ಹೇಳಿಕೊಟ್ಟರು. “ಎನ್.ಸಿ.ಸಿಯಲ್ಲಿ ಪಥಸಂಚಲನ ಎಷ್ಟು ಮುಖ್ಯವೋ, ಎನ್.ಎಸ್.ಎಸ್ ನಲ್ಲಿ ಪಥಸಂಚಲನದ ಜೊತೆಗೆ ಸಾಂಸ್ಕೃತಿಕ ವೈವಿಧ್ಯತೆಗಳ ಪರಿಚಯವೂ ಅಷ್ಟೇ ಮುಖ್ಯ, ಆದ್ದರಿಂದ ಪಥಸಂಚಲನದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆಯೂ ಹೆಚ್ಚಿನ ಗಮನ ಇರಬೇಕುʼ ಎಂದರು. ನಂತರ ತಮ್ಮ ತಯಾರಿ, ಆಯ್ಕೆ, ಕರ್ತವ್ಯ ಪಥದಲ್ಲಿ ಅದರ ಪಥಸಂಚಲನದ ಚಿತ್ರಗಳನ್ನು ಸ್ವಯಂಸೇವಕರಿಗೆ ತೋರಿಸಿ, ತಮ್ಮ ಅಂದಿನ ಅನುಭವಗಳನ್ನು ಹಂಚಿಕೊಂಡರು. ದಿಲ್ಲಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವುದಕ್ಕೆ ಮಾತ್ರವಲ್ಲ, 2 ವರ್ಷದ ನಂತರ ಒಳ್ಳೆಯ ನಾಗರಿಕನನ್ನು ಸಮಾಜಕ್ಕೆ ಕೊಡುವುದು ಎನ್.ಎಸ್. ಎಸ್ ನ ಮುಖ್ಯ ಉದ್ದೇಶವಾಗಿದೆ.” ಎಂದು ಅವರು ನುಡಿದರು.
ಕಾರ್ಯಕ್ರಮವನ್ನು ಸ್ವಯಂಸೇವಕಿಯಾದ ಮನು ಜೈನ್ ನಿರೂಪಿಸಿದರು. ಸ್ವಯಂಸೇವಕಿ ನಯನಾ ಅತಿಥಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ