ಕೃತಕವಾದ ತಂಪಿನಿಂದ ಆದಷ್ಟು ದೂರವಿರೋಣ

Upayuktha
3 minute read
0


 ಯಸ್ಮಾನ್ನೋದ್ವಿಜತೇ ಲೋಕಃ

 ಲೋಕಾನ್ನೋದ್ವಿಜತೇ  ಚ ಯಃ ||

 ಹರ್ಷಾಮರ್ಷ ಭಯೋದ್ವೇಗೈ:

ಮುಕ್ತೋ ಯಃ ಸ ಚ ಮೇ ಪ್ರಿಯ: ||12- 15||


ಯಾರಿಂದಾಗಿ ಲೋಕಕ್ಕೆ ಕೆಡುಕಿಲ್ಲವೋ ಯಾರಿಗೆ ಲೋಕದಿಂದ ಯಾವ ಕೆಡುಕೂ ಇಲ್ಲವೋ ಮತ್ತು ಹರ್ಷ, ಕೋಪ, ಭಯ ಉದ್ವೇಗಗಳಿಂದ ಯಾವನು ಮುಕ್ತನೋ ಅಂತಹ ಭಕ್ತನು ನನಗೆ ಪ್ರಿಯನು ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾನೆ.


ಬಾಳಿನ ಚಕ್ರದ ಅರಿವಾದ ಮೇಲೆ ಯಾರನ್ನೂ ಮೆಚ್ಚಿಸಲೋಸುಗ ಕಾರ್ಯ ಮಾಡಲಾಗುವುದಿಲ್ಲ ಅಥವಾ ಮಾಡಲೇಬೇಕೆಂದಿಲ್ಲ. ಅಂತಹ  ಹಂಬಲವೂ ಆತ್ಮನಿಗಿರುವುದಿಲ್ಲ. ಯಶದ ಹಾದಿ ಅದು ಬಲು ದುರ್ಗಮವೇ ಆಗಿರುವುದು. ತುಂಬಾ ಸುಲಭವಾಗಿ ಜಯಶಾಲಿಗಳಾಗಿದ್ದಾರೆ ಎಂದಾದರೆ ಅದು ನ್ಯಾಯಮಾರ್ಗದ ಮುಖಾಂತರದಿಂದಲೇ ಎಂದು ಹೇಳಲು  ಸಾಧ್ಯವಿಲ್ಲ. ಇನ್ನೊಬ್ಬರನ್ನು ವಂಚಿಸಿ ಅಥವಾ ಕಿತ್ತುಕೊಂಡು ಅವರಿಗೆ ಆಗಬೇಕಾದುದನ್ನು ನೀಡದೆ ತಾನೇ ಸ್ವಾಹ ಮಾಡುತ್ತಾ ಇರುವವರಿಗೆ ಬದುಕು ಕ್ಷಣಮಾತ್ರದಲ್ಲಿ ಸುಖ ಸಂತೋಷ ನೀಡಿದಂತೆನಿಸಬಹುದು. ಆದರೆ ದಾರಿಯ ತುಂಬ ಕರ್ಮದ  ಲೇಪನ ಹೆಚ್ಚುತ್ತಿರುತ್ತದೆ. ನೀರಿನ ನಳ್ಳಿಯಲ್ಲಿ ನೀರು ಬಲು ಕಡಿಮೆ ಬರುತ್ತಿದೆಯಾದರೆ ಅದಕ್ಕೆ ಟ್ಯಾಂಕಿನಲ್ಲಿ ನೀರಿಲ್ಲವೆಂದೇ ಅರ್ಥವಲ್ಲ. ಆ ನೀರು ಬರುವ ಮಾರ್ಗ, ವೇಗ, ಎತ್ತರ ಅಂತೆಯೇ  ಪೈಪುಗಳ ಗಾತ್ರ ಶುದ್ಧತೆಯನ್ನು ಅವಲಂಬಿಸಿರುತ್ತದೆ. ಆಗ ನೀರಿದ್ದಾಗಲೂ ನಳ್ಳಿಯಲ್ಲಿ ಬಲು ಕಡಿಮೆ ಅಥವಾ ಬಿಂದು ಬಿಂದುವಾಗಿ ಬರುವ ಪ್ರಸಂಗವೇ ಹೆಚ್ಚು. ಅಂತೆಯೇ ಈ ದೇಹಕ್ಕೆ ಹೊಡೆತ ಅಥವಾ ಏಳುಬೀಳುಗಳು ನಮ್ಮೊಳಗೆ ನಮ್ಮನ್ನು ಹೆಚ್ಚು ಹೆಚ್ಚು ಶುದ್ಧೀಕರಿಸುತ್ತಾ ಸಂಚರಿಸುತ್ತವೆ. ಅದಕ್ಕಾಗಿ ಹೆದರಿ ಕುಬ್ಜರಾಗಬಾರದು.


ಒಂದೆರಡು ದಿನ ಎದ್ದು,  ಅದನ್ನೇ ರೂಡಿ ಮಾಡಿಕೊಳ್ಳುತ್ತಾ ಹೋದರೆ ಮನವು ಜಡತ್ವವನ್ನು ಹೊಂದಲಾರದು. ಮನಸ್ಸಿನ ಜಡತ್ವ ಶರೀರಕ್ಕೆ ಬಲು ಅಪಾಯಕಾರಿಯಾಗಿದೆ. ಹಾಗಾಗಿ ಮನವನ್ನು ನಿರಂತರವಾಗಿ ಒಳ್ಳೊಳ್ಳೆಯ ಕಾರ್ಯಗಳಿಗೆ ಪ್ರೇರಕ ಶಕ್ತಿಯನ್ನಾಗಿಸುವಂತೆ ರೂಪಿಸಿಕೊಳ್ಳಬೇಕು. ಮನದಲ್ಲಿ ದಿಟ್ಟ ನಿರ್ಧಾರ ಬಂದಾಗ ಅದನ್ನು ಅವಲೋಕಿಸಿ ಅದರ ಒಳಿತು ಕೆಡುಕುಗಳ ಬಗ್ಗೆ ಉದ್ದುದ್ದ ಯೋಚನೆ ಮೂಡುವಂತೆ ಮಾಡುತ್ತಿರುತ್ತದೆ. ಕೊನೆಗೆ ಅದು ಒಗ್ಗರಣೆ ಸೊಪ್ಪಿನಂತೆ ಊಟದ ಎಲೆಯಲ್ಲಿ ಮೂಲೆಗುಂಪಾಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಸಿಹಿಯಾದ ಭಕ್ಷ್ಯಗಳನ್ನು ಹೆಚ್ಚು ತಿಂದು ಮುಖವರ್ಜಿಸುವ ಭಾವಗಳು ಬರಬಹುದು. ಹಾಗೆಂದು ತಕ್ಕಮಟ್ಟಿನ ಸಿಹಿಯನ್ನು ತಿನ್ನದೇ ಇದ್ದರೆ ಸಹಜವಾದ ಆರೋಗ್ಯಕ್ಕೆ ಕುತ್ತು ಬರಬಹುದು. ಯಾವುದೂ  ತೀರಾ ಅನಿವಾರ್ಯವಲ್ಲವೋ ಅದನ್ನು ಮುಂದೂಡುವುದೇ ಸೂಕ್ತ.


ಹಬ್ಬ ಹೇಳಿ ಕೇಳಿ ಬರುವಂತಹುದ್ದಲ್ಲ. ಪರಂಪರಾನುಗತವಾಗಿ ಪೀಳಿಗೆಯಿಂದ ಪೀಳಿಗೆಗೆ ಸಂಪ್ರದಾಯಬದ್ಧವಾಗಿ ಮುಂದುವರಿಯುವ ಹಬ್ಬಗಳು ಕೆಲವು. ಅವುಗಳಲ್ಲಿ ಶ್ರೇಷ್ಠ ವಿಷು  ಪರ್ವ ಆಗಿದೆ. ಜೀವನದಲ್ಲಿ ಆಗುಹೋಗುಗಳು ನಮಗರಿವಿಲ್ಲದಂತೆ ಬಂದು ಹೋಗುತ್ತಿರುತ್ತವೆ.  ಸುಮ್ಮನೆ ಕಾಲ ಕಳೆದರೂ ಸನ್ನಿವೇಶಗಳು ಕಾಲ ಕಳೆಯುತ್ತಿರುವಂತೆಯೇ ಬದಲಾಗುತ್ತಿರುತ್ತವೆ. ಕಾಲಕ್ಕೆ ಸುಮ್ಮನೆ ಕುಳಿತು ಅಭ್ಯಾಸವೇ ಇಲ್ಲ. ಯೋಚನೆಗಳ ತಿರುವು ನಿಲ್ಲಿಸಿಕೊಂಡಲ್ಲಿಂದ ಬದಲಾಗುತ್ತಿರುವಂತೆ ಹಲವು ಅದ್ಭುತ ಕಾರ್ಯಗಳು ಅನೇಕೋಪಾದಿಯಲ್ಲಿ ಮಿಂಚಿನಂತೆ ಹೊಳೆದು ಸಾಗಿಯಾಗಿರುತ್ತವೆ. ತಿರಸ್ಕರಿಸಿ ಸುಮ್ಮನೆ ಕುಳಿತಾಗ ಕೊಂಚ ನಿರಾಳವಾಗಬಹುದು. ಆದರೆ ತದನಂತರ ಅದೇ ಪುನರಪಿ ಮನಸ್ಸನ್ನು ಚುಚ್ಚುತ್ತಾ ಇರಲೂಬಹುದು. ಅವಕಾಶಗಳು ಬರುವಾಗಲೇ ಮನದ ಬಾಗಿಲನ್ನು ಸದಾ ತೆರೆದಿರಿಸಬೇಕು. ಯಾರಿಗೆ ಗೊತ್ತು?  ವಸಂತ ಕಾಲದ ಹೂವು ಹಣ್ಣುಗಳು ತುಂಬಾ ಫಲಿತವಾಗಿರುತ್ತವೆಯೆಂದು. ಯಾವುದೇ ಹವೆಯ ವಾತಾವರಣವು ಕೆಲವೊಮ್ಮೆ ಉತ್ತಮ ಫಲಿತವನ್ನು ನೀಡುತ್ತದೆ. ಹಾಗಾಗಿ ಹುಟ್ಟಿದ ಮಾತ್ರಕ್ಕೆ ಮರು ಹುಟ್ಟು ಇರಬಹುದೆಂದು ಭಾವಿಸುವುದು ಒಳಿತಲ್ಲ. ಸತ್ಕಾರ್ಯ,  ಸತ್ಕರ್ಮಗಳು ಜೀವನದ ಒಂದು ಭಾಗವಾಗಿ ಮಾತ್ರ ಸಾಗುತ್ತಿರುತ್ತವೆ. ಉಳಿದ ಭಾಗಕ್ಕೆ ನಮ್ಮ ಪ್ರಯತ್ನ ಸದಾ ಮೀಸಲಾಗಿರಬೇಕು. ಸೃಜನಶೀಲ  ಸಾಹಿತ್ಯಾತ್ಮಕ  ಕಾರ್ಯಕ್ರಮಗಳು ಮನುಷ್ಯರನ್ನು ಸದಾ ಕ್ರಿಯಾಶೀಲರನ್ನಾಗಿಸುತ್ತವೆ.


ಅಸೂಯೆ ಎಂಬ ಪದ ನೇರವಾಗಿ ಯಾರನ್ನೂ ಹೊಂಚು ಹಾಕುವುದಿಲ್ಲ. ಪರೋಕ್ಷವಾಗಿ ಅದರ ಗುಣಾವಗುಣಗಳು ಎಲ್ಲಿಂದ ಎಲ್ಲಿಗೋ ವಕ್ಕರಿಸಿ ಬಿಡುತ್ತವೆ. ಪ್ರಚಾರದ ಅಬ್ಬರಕ್ಕೆ ಸಿಲುಕಿ ಹಾಕಿಕೊಂಡವರು ಕೊನೆಗೆ ಏಳಲು ಆಗದೇ ಬೆಳೆಯಲು ಆಗದೇ ಹೈಬ್ರೀಡ್ ವಸ್ತುಗಳಂತಾಗುತ್ತಾರೆ. ಇಬ್ಬರ ನ್ಯಾಯ ಮೂರನೆಯವನಿಗೆ  ಆದಾಯವೆಂಬಂತೆ ಈಗಿನ ಪರಿಸ್ಥಿತಿಗಳು ಹೊಂದಾಣಿಕೆಯ ಸ್ಪರ್ಧೆಗಿಳಿಯುತ್ತಿವೆ. ವಿಚಾರಗಳ ಸ್ಪಷ್ಟ ಅರಿವು ಇತಿಮಿತಿಯಲ್ಲಿರಲು ಬದುಕು ಹಾವು ಏಣಿನಂತಾಗದೆ ಸರಳವಾಗಿರಬಹುದು.


ಹೋಗಬೇಕು ಅಂದುಕೊಂಡ ಕಡೆಗೆ ಹೋಗಲಾಗುವುದಿಲ್ಲ. ನಂತರ ಆ ವಿಚಾರವಾಗಿ ಅದನ್ನೇ ಎತ್ತಿ ಆಡುತ್ತ ಅನಪೇಕ್ಷಿತ ವಿಚಾರಗಳಿಗೆ ಮೂಲವಾಗಿ ಕೊನೆಗೆ ಒಂದು  ಅದ್ಭುತ ಸನ್ನಿವೇಶಗಳ ಹುಟ್ಟಿಗೂ ಅಥವಾ ಆಕಸ್ಮಿಕ ವ್ಯತಿರಿಕ್ತ ಪರಿಣಾಮಗಳಿಗೂ ಕಾರಣವಾಗಬಹುದು. ಹಾಗಾಗಿ ಮನಸ್ಸಿನ ಭಾವನೆಗಳನ್ನು ಸಮುದ್ರಮಥನ ಮಾಡಿದಂತೆ ನಮ್ಮೊಳಗೇ ಮಥಿಸುತ್ತಿರಬೇಕು. ಭಾವನೆಗಳನ್ನು ಹೊರಗೆ ಎಲ್ಲೂ ವ್ಯಕ್ತಪಡಿಸಬಾರದು. ಆಗ ಅದಕ್ಕೆ  ರೆಕ್ಕೆ ಪುಕ್ಕಗಳು ಸೇರಲ್ಪಟ್ಟು ದೊಡ್ಡ ಪರ್ವತವೇ ಆಗಬಹುದು. ಇಲ್ಲವೇ ಆಳವಾದ ಕಂದಕವೂ ಆಗಬಹುದು. ಹಾಗಾಗಿ ಯಾವುದೇ ವಿಷಯವಾಗಿರಲಿ ಅದನ್ನು ನಮ್ಮೊಳಗೆ ಮೊದಲು ಮಥಿಸಿ, ಪರಿಶುದ್ಧವಾದ ಬೆಣ್ಣಿಯನ್ನು ಮಜ್ಜಿಗೆಯಿಂದ ಹೊರ ತೆಗೆದಂತೆ ಶ್ರೇಷ್ಠ ವಿಷಯವು ಹೊರಬರಲು ಸಾಧ್ಯವಾಗಬಹುದು. ಹೇಗೆ ತಾಯಿಯು ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಮಗುವನ್ನು ಸುರಕ್ಷಿತವಾಗಿ ಹೊತ್ತು ಆಮೇಲೆ ಪರಿಪೂರ್ಣವಾದ ಮಗುವನ್ನು ಹೆರುತ್ತಾಳೋ ಹಾಗೆ. ಆಗಲೇ ನಮ್ಮಲಿನ ಆತ್ಮವಿಶ್ವಾಸವು ಇಮ್ಮಡಿಯಾಗುತ್ತದೆ. ಬದುಕಿನ ಕಪೋಲಕಲ್ಪಿತ ವಿಷಯಗಳು ಬಿರುಗಾಳಿಯಂತೆ ಕೆಲವು ಕಡೆ ಅತಿಯಾದ ಧೂಳೆನ್ನೆಬ್ಬಿಸಿ ಹೊರಟು  ಹೋಗಲೂಬಹುದು ಅಥವಾ ಸಕಾಲಿಕ ಮಳೆಯನ್ನು ತಂದು ವಾತಾವರಣವನ್ನು ತಂಪು ಮಾಡಬಹುದು.


ಪ್ರಕೃತಿಯ ವಿರುದ್ಧ ಹೋಗುವ ಸಾಹಸ ಎಂದಿಗೂ ಮಾಡಬಾರದು. ಬದುಕನ್ನು ಲೀಲಾಜಾಲವಾಗಿ ಅನುಭವಿಸಲು ದುಗುಡವನ್ನು ಕಡಿಮೆ ಮಾಡುವುದುತ್ತಮ. ಅನಿಯಂತ್ರಿತ ಬದುಕಿಗೆ ಸಾಗರದಷ್ಟು ಸೀಮೋಲಂಘನದ ಅವಕಾಶಗಳು ಬರುವಂತೆ ಮನಸ್ಸನ್ನು ಉಲ್ಲಸಿತವಾಗಿಡಬೇಕು. ಅದಕ್ಕಾಗಿಯೇ ಈ ಪ್ರಕೃತಿಯ ಮಡಿಲಲ್ಲಿ ಹೊಸ ವರ್ಷವೆಂಬ ಆಚರಣೆಯನ್ನು ಪ್ರತಿ ವರ್ಷವೂ ಮಾಡುತ್ತಾ ಒಳಿತಿನ ಸಂಕಲ್ಪವನ್ನು ನಿತ್ಯದ ಪಯಣವನ್ನಾಗಿಸೋಣ. ಪ್ರಕೃತಿ ನಮಗೆ ಹೇಗೆ ಆಸರೆಯಾಗಿದೆಯೋ ಹಾಗೆಯೇ ಪ್ರಕೃತಿಗೂ ನಾವು ಕೊಂಚ ಆಸರೆಯನ್ನು ನೀಡುವುದು ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಅನುಕೂಲವಾಗುವ ಕಡೆಗೆ ಗಿಡ ಮರಗಳನ್ನು ಬೆಳೆಸಿ ತಂಪಾಗುವಂತೆ ನೋಡಿಕೊಳ್ಳೋಣ. ಕೃತಕವಾದ ತಂಪಿನಿಂದ ಆದಷ್ಟು ದೂರವಿರೋಣ.


- ಮಲ್ಲಿಕಾ ಜೆ ರೈ





ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


إرسال تعليق

0 تعليقات
إرسال تعليق (0)
To Top