ಬದುಕೊಂದು ವಿಸ್ಮಯಗಳಿಂದ ಕೂಡಿದ ಮಾಯಾಜಾಲ. ಈ ಮಾಯಾ ಲೋಕದಲ್ಲಿ ಕನಸು ಕಾಣುವುದು ಸಹಜ. ಕಂಡ ಕನಸುಗಳೆಲ್ಲ ನನಸಾಗಲು ಸಾಧ್ಯವಿಲ್ಲ. ಕನಸುಗಳು ವ್ಯಕ್ತಿಯ ಮನಸ್ಸನ್ನು ಅವಲಂಬಿಸಿರುತ್ತದೆ. ಪರಿಶುದ್ಧವಾದ ಮನಸ್ಸಿನಲ್ಲಿ ಸುಂದರವಾದ ಕನಸು ಮೂಡಿದರೆ, ಕೆಟ್ಟ ಯೋಚನೆಗಳ ಮನದಲ್ಲಿ ಸಮಾಜವನ್ನು ಹಾಳು ಮಾಡುವ, ಇನ್ನೊಬ್ಬರಿಗೆ ತೊಂದರೆ ಕೊಡುವ ಕನಸುಗಳು ಮೂಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಬೀಳುವ ಕನಸು ನಮ್ಮ ಮುಂದಿನ ಬದುಕನ್ನು ನಿರ್ಧರಿಸುತ್ತದೆ. ಈ ದೇಶದ ಪ್ರಗತಿ ಅಥವಾ ನಾಶವನ್ನು ತಿಳಿಸುತ್ತದೆ. ಒಬ್ಬ ದೇಶ ಪ್ರೇಮಿಯಲ್ಲಿ ಇರಬೇಕಾದ ಕನಸೆಂದರೆ, ಅದು ದೇಶದ ಪ್ರಗತಿಯ ಬಗ್ಗೆ.
ನಾವು ಒಂದು ಸುಂದರ ಕನಸು ಕಂಡಾಗ, ಅದು ನಮ್ಮನ್ನು ಸದೃಢರನ್ನಾಗಿಸುತ್ತದೆ. ಕೆಲವೊಮ್ಮೆ ನಾವಂದುಕೊಂಡಂತೆ ನಡೆಯುವುದಿಲ್ಲ. ಆಗ ಬದುಕು ಮುಗಿಯಿತೆಂಬ ಯೋಚನೆ ಮಾಡಬಾರದು. ಈ ಜೀವನವನ್ನು ಸುಂದರವಾಗಿಸಲು ನೂರಾರು ದಾರಿಗಳಿವೆ. ಯಾವುದೋ ಒಂದು ದಾರಿಯಲ್ಲಿ ಮುಳ್ಳಿದೆ ಎಂದು ತಿಳಿದು ನಿಲ್ಲಬಾರದು. ಯಾವುದಾದರೊಂದು ದಾರಿಯಲ್ಲಿ ಚಲಿಸಿ, ನಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸಬೇಕು. ಕನಸು ಕಾಣುವವನು ಮಹಾತ್ಮನಲ್ಲ. ಕಂಡ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಾನಲ್ಲ, ಅವನು ಮಹಾತ್ಮರಲ್ಲಿ ಮಹಾತ್ಮ. ಬದುಕಲ್ಲಿ ಬಂದ ಕೆಲವೊಂದು ಕೆಟ್ಟ ಸನ್ನಿವೇಶಗಳು ನಮ್ಮ ಮನಸ್ಸನ್ನು ಛಿದ್ರಗೊಳಿಸಬಹುದು. ಆದರೆ ಅದು ಎಂದಿಗೂ ಶಾಶ್ವತವಲ್ಲ. ಕತ್ತಲೆ ಕಳೆದು ಹೇಗೆ ಬೆಳಕು ಹರಿಯುತ್ತದೆಯೋ ಹಾಗೆಯೇ ನೋವು ಕಳೆದು ಸಂತೋಷ ಬರುವ ಕ್ಷಣಗಳು ಮುಂದೆ ಇದೆ ಎಂದು ಯೋಚಿಸಬೇಕು. ನಮ್ಮ ಜೀವನದಲ್ಲಿ ಭರವಸೆಯೊಂದಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು. ಅದನ್ನೇ ಕಳೆದುಕೊಂಡರೆ ಜಗತ್ತೇಕೆ, ನಮ್ಮನ್ನೇ ನಾವು ಕಳೆದುಕೊಳ್ಳಬಹುದು.
ಜೀವನದ ದೋಣಿ ಸಾಗುವಾಗ ಎದುರಾಗುವ ಅಡೆತಡೆಗಳನ್ನು ಧೈರ್ಯದಿಂದ ಎದುರಿಸಬೇಕು. ನಾವು ತೆಗೆದುಕೊಳ್ಳುವ ನಿರ್ಧಾರದಲ್ಲಿ ನಮ್ಮ ಭವಿಷ್ಯ ನಿಂತಿದೆ. ನಮ್ಮ ಧೈರ್ಯಕ್ಕೆ ನೋವನ್ನು ಅಳಿಸಿ ಹಾಕುವಷ್ಟು ಶಕ್ತಿ ಇದೆ. ಜೀವನದಲ್ಲಿ ಹಲವಾರು ಸಂಕಷ್ಟಗಳು, ನೋವು- ನಲಿವುಗಳು ಬರುತ್ತಿರುತ್ತವೆ. ನೋವು ಬಂದಾಗ ತುಂಬಾ ಕುಗ್ಗುವುದು, ಸಂತೋಷ ಆದಾಗ ಅಧಿಕವಾಗಿ ಹಿಗ್ಗುವುದು ಮಾಡಬಾರದು. ಸುಖ- ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮ ನಮ್ಮದಾಗಬೇಕು. ಖುಷಿಯ ದಿನಗಳು ಬಂದಾಗ ಇದು ಎಂದಿಗೂ ಶಾಶ್ವತವಲ್ಲ ಎಂದು, ದುಃಖ ಆದಾಗಲೂ ಇದು ಕೂಡ ಯಾವತ್ತೂ ನಮ್ಮೊಂದಿಗೆ ಇರುವುದಿಲ್ಲ ಎಂಬ ಭರವಸೆ ನಮ್ಮಲ್ಲಿರಬೇಕು. ಕೆಲವೊಂದು ಕೆಟ್ಟ ಘಟನೆಗಳು ನಮ್ಮ ಜೀವನದಲ್ಲಿ ನಡೆದಿರಬಹುದು. ಆ ಕ್ಷಣ ಆ ಘಟನೆ ಸಂಭವಿಸುವುದನ್ನು ನಮ್ಮಿಂದ ತಪ್ಪಿಸಲು ಸಾಧ್ಯವಿಲ್ಲ. ಆದರೆ ಮುಂದೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಬಹುದು. ನಮ್ಮ ಜೀವನದಲ್ಲಿ ಹಲವಾರು ಸ್ನೇಹಿತರು ಸಿಕ್ಕಿರಬಹುದು. ಆ ಗೆಳೆಯ-ಗೆಳತಿಯರ ಮೂಲಕ ನಾವು ಕೆಲವೊಂದು ವಿಚಾರಗಳನ್ನು ತೋಡಿಕೊಂಡು, ನಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು. ಅವರ ಕೆಲವು ಅನುಭವಗಳನ್ನು ನಮ್ಮೊಂದಿಗೆ ಹಂಚಿದಾಗ ನಮಗೂ ಒಂದು ಭರವಸೆ ಮೂಡೀತು. ನಮ್ಮ ಕನಸಿನತ್ತ ಒಂದು ಪಯಣ ಆರಂಭಿಸುವ. ಈ ಜಗತ್ತಲ್ಲಿ ಶ್ರಮ ಪಡದೆ ಯಶಸ್ಸು ಗಳಿಸಿದವರು ಯಾರೂ ಇಲ್ಲ.
-ಸಂಶೀನ
ಪ್ರಥಮ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ