ಆಡಳಿತ ಚುಕ್ಕಾಣಿ- ನಿರೀಕ್ಷೆಯಲಿ ಮತದಾರರು

Upayuktha
0



ಬಾಯಾರಿದ ಇಳೆಯು ಮಳೆಯ ಬರುವಿಕೆಗಾಗಿ ಕಾದಂತೆ ರಾಜಕೀಯವಾಗಿ ಹಸಿದು ಚುನಾವಣೆಯೆಂಬ ಮಳೆಯಿಂದ ತಂಪಾಗುವುದೆಂಬ ನಿರೀಕ್ಷೆಯಿಂದ ನಾವು ಕಾಯುತ್ತಿದ್ದೇವೆ. ಅಬ್ಬರದ ಚುನಾವಣಾ ಪ್ರಚಾರ ನಡೆಯುತ್ತಿದೆ. ಜನರೆಲ್ಲ ಹಿಂದಿನ ಸರ್ಕಾರಗಳಿಗಿಂತ ಉತ್ತಮವಾದ ಸರ್ಕಾರವನ್ನು ರಚನೆ ಮಾಡಬೇಕೆಂಬ ಹುಮ್ಮಸ್ಸಿನಿಂದ ತಮ್ಮ ಮತವನ್ನು ತಮ್ಮ ತಮ್ಮ ನಾಯಕರಿಗೆ ಹಾಕುತ್ತಾರೆ. ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೇವೆಯೇ ಎಂಬ ನಿರೀಕ್ಷೆ, ಉತ್ತಮ ಸಮಾಜದ ಸರ್ಕಾರದ ಹರಿಕಾರರಾಗಿ ಯಾವ ನಾಯಕರು ಬರಬಹದೆಂಬ ಕಳವಳ ಮತದಾರರಿಗೆ. ಹೆಸರೆ ಹೇಳುವಂತಹ ಕಲಿಯುಗದಲ್ಲಿ ಭರವಸೆಯ ನಿರೀಕ್ಷೆಯು ಸುಳ್ಳಾಗಬಹುದೆ? ಜಳ್ಳಾಗಬಹುದೆ? ಹತ್ತು ಹಲವಾರು ಯೋಚನೆಗಳು ಜನರಲ್ಲಿ. ಯಜಮಾನಿಕೆಯ ಪಟ್ಟವನ್ನು ಹೊರುವವರು ಯಾರು? ಎಂಬ ಗೊಂದಲ ಜನರಲ್ಲಿ.


ಚುನಾವಣೆಯು ಮುಗಿದ ಮೇಲೆ ಆಡಳಿತದ ಚುಕ್ಕಾಣಿಯನ್ನು ಯಾರಾದರೂ ಒಬ್ಬರು ಹಿಡಿಯಲೇಬೇಕು. ಅದರ ಕುರಿತು ರಾಜಕೀಯ ರಂಗದಲ್ಲಿ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿರುತ್ತದೆ. ಮತದಾರರಾದ ನಾವು ನಮ್ಮ ಕರ್ತವ್ಯಗಳನ್ನು ಮಾಡಿ ಸುಮ್ಮನಿದ್ದರಾಗದು. ಪ್ರಜಾಪ್ರಬುತ್ವ ತತ್ವಗಳನ್ನು ಪ್ರಾಮಾಣಿಕವಾಗಿ ಪಾಲನೆ  ಮಾಡುವಂತೆ ನೋಡಿಕೊಳ್ಳುವುದು ಕೂಡ ನಮ್ಮ ಕೆಲಸವಾಗಿದೆ. ಆದರೆ ಹೇಗೆ? ಬಹುಮತವನ್ನು ಪಡೆದಿರುವ ಪಕ್ಷದ ಪೈಕಿ ಹಿರಿಯ ನಾಯಕರು ಮತ್ತು ಇತರರು ಸೇರಿ ಮಾತುಕತೆಗಳನ್ನು ಮಾಡುವರು. ತಮ್ಮ ಇಚ್ಛೆಯನ್ನು ರಾಜ್ಯಪಾಲರ ಮುಂದೆ ಇಡುವರು. ರಾಜ್ಯಪಾಲರು ಉಳಿದಂತೆ ಎಲ್ಲ ಕಾನೂನು ರೀತಿಯಲ್ಲಿ ಬಹುಮತವನ್ನು ಪಡೆದು  ಸರಿಯಾಗಿರುವ ರಾಜಕೀಯ ಪಕ್ಷಕ್ಕೆ ಸರ್ಕಾರವನ್ನು ಮಾಡಲು ಅವಕಾಶವನ್ನು ನೀಡುವರು. ತನ್ಮೂಲಕ ಯಾರು ಅಧಿಕಾರವನ್ನು ಹಿಡಿಯಬೇಕೆಂದು ನಿರ್ಧಾರವನ್ನು ತೆಗೆದುಕೊಳ್ಳುವರು. ಇಂಥಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ನಾವು ನಾಯಕನನ್ನು ಆರಿಸುವ ಕ್ರಿಯೆಯನ್ನು ಸರಿಯಾಗಿ ಮಾಡಿದ್ದಾದರೆ ಮುಂದಿನ ಕೆಲಸಗಳು ಪ್ರಾಮಾಣಿಕವಾಗಿ ಆಗುತ್ತದೆ. ಆದರೆ ನಾವು ನಮ್ಮ ಆಯ್ಕೆಯಲ್ಲಿಯೇ ತಪ್ಪನ್ನು ಮಾಡಿದರೆ ಉತ್ತಮವಾದ ಫಲಿತಾಂಶವನ್ನು ತರುವಲ್ಲಿ ವಿಫಲರಾಗುತ್ತೇವೆ. ಯಾಕಂದರೆ ಉತ್ತಮವಾದ ಬೀಜವನ್ನು ಬಿತ್ತಿದರೆ ಮಾತ್ರ ಉತ್ತಮವಾದ ಫಸಲನ್ನು ಪಡೆಯಲು ಸಾಧ್ಯವಲ್ಲವೆ? ಇದು ಕೂಡ ಹಾಗೆ.


ತೊಟ್ಟಿಲು ತೂಗುವ ಕೈ ದೇಶವನ್ನಾಳೀತು ಎಂಬ ಮಾತನ್ನು ನಮ್ಮ ಅನೇಕ ನಾಯಕಿಯರು ನಿಜವನ್ನಾಗಿಸಿದ್ದಾರೆ. ಅಂತೆಯೆ ಇಂದು ಚುನಾವಣೆಯಲ್ಲಿಯೂ ಕೂಡ ಅನೇಕ ಮಹಿಳಾ ಅಭ್ಯರ್ಥಿಗಳು ನಿಂತಿದ್ದಾರೆ. ಅವರಲ್ಲನೇಕರು ಆರಿಸಿಯೂ ಬರುತ್ತಾರೆ. ಅಂಥವರಿಗೆ ದೇಶದ ಆಡಳಿತದಲ್ಲಿ ಕೆಲವೊಂದು ಸ್ಥಾನಗಳನ್ನಾದರೂ ನೀಡಬೇಕು, ಆಗ ದೇಶವು ಸುಭಿಕ್ಷೆ ಮತ್ತು ಸುರಕ್ಷತೆಯ ಉತ್ತುಂಗಕ್ಕೇರುವುದರಲ್ಲಿ ಎರಡು ಮಾತಿಲ್ಲ. ಕಾರಣವೆಂದರೆ ಮಹಿಳೆಯರ ಬಹತೇಕ ಸಮಸ್ಯೆಗಳ ಅರಿವು ಅವರಿಗಿರುವುದರಿಂದ ಅವುಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಇದರಿಂದ ಪ್ರಗತಿಯ ಬಹುಭಾಗವನ್ನು ನಾವು ಸಾಧಿಸಿದಂತೆ. ಒಂದು ಮನೆಯು ಚೆನ್ನಾಗಿ ನಡೆಯುತ್ತಿದೆಯೆಂದಾದರೆ ಆ  ಮನೆಯ ಸ್ತ್ರೀಯು ಬಹಳ ಮುತುವರ್ಜಿಯನ್ನು ಮನೆಯ ಬಗ್ಗೆ ಹೊಂದಿರುತ್ತಾಳೆಂದೇ ಅರ್ಥ. ಹಾಗೆ ಸರ್ಕಾರಗಳಲ್ಲಿಯೂ ಕೂಡ. ಆದರೆ ಇಂದಿನ ರಾಜಕೀಯ ಚದುರಂಗದಾಟದಲ್ಲಿ ಯಾರು ಚುಕ್ಕಾಣಿಯನ್ನು ಹಿಡಿಯುವರೆಂದು ಕಾದು ನೋಡಬೇಕಿದೆ. ಮತದಾರರು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾದರೆ ತಮ್ಮ ನಾಡಿನ ಭವಿಷ್ಯವನ್ನು ಲಕ್ಷದಲ್ಲಿಟ್ಟುಕೊಳ್ಳುವುದು ಅತೀ ಮುಖ್ಯ. ಆದ್ದರಿಂದ ನಮ್ಮ ನಾಯಕರ ಆಯ್ಕೆ ಮಾಡುವಾಗ ಯೋಚಿಸಿ ಮಾಡುವುದೊಳಿತು. ಆಗ ಗಾಂಧೀಜಿಯವರು ಕಂಡ ರಾಮ ರಾಜ್ಯದ ಕನಸನ್ನು ನಾವು ಸಾಧಿಸಬಹುದೇನೋ? 


- ಸರಸ್ವತಿ ಹೆಗಡೆ 

ವಕೀಲರು, ಶಿರಸಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top