ಶ್ರೀಮತಿ ಗಂಗಾ ಪಾದೇಕಲ್ ಅವರಿಗೆ ನಿರಂಜನ ಪ್ರಶಸ್ತಿ

Upayuktha
0



ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇದರ ಶಿವರಾಮ ಕಾರಂತ ಅಧ್ಯಯನ ಕೇಂದ್ರದಿಂದ ಕೊಡಮಾಡುವ ನಿರಂಜನ ಪ್ರಶಸ್ತಿಗೆ ಈ ವರ್ಷ ಕತೆಗಾರರು, ಕಾದಂಬರಿಕಾರರಾದ ಶ್ರೀಮತಿ ಗಂಗಾ ಪಾದೇಕಲ್ ಆಯ್ಕೆಯಾಗಿದ್ದಾರೆ.


ಪ್ರಶಸ್ತಿಯು 15 ಸಾವಿರ ರೂ. ಮತ್ತು ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯರು ತಿಳಿಸಿದ್ದಾರೆ.


ಪರಿಚಯ:

ಶ್ರೀಮತಿ ಗಂಗಾ ಪಾದೇಕಲ್ ಅವರು ಸೆಪ್ಟಂಬರ್ 01, 1948ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ಗಂಗಾರತ್ನ. ಮುಳಿಯ ಕೇಶವ ಭಟ್ಟ ಹಾಗೂ ಸರಸ್ವತಿ ಅಮ್ಮ ಇವರ ತಂದೆ ತಾಯಿ. ಏಳನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಗಂಗಾರತ್ನ ಅವರು ಹದಿನಾರನೆ ವಯಸ್ಸಿನಲ್ಲಿ ಪಾದೇಕಲ್ಲು ಗೋವಿಂದ ಭಟ್ಟರನ್ನು ವಿವಾಹವಾದರು. ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದಾರೆ. ತಮ್ಮ 34 ನೆಯ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು. ತಮ್ಮ ಸಾಹಿತ್ಯಕ ಕೊಡುಗೆಗಳ ಮೂಲಕ ನಾಡಿನಾದ್ಯಂತ ಹೆಸರನ್ನು ಗಳಿಸಿದರು. 


ಪುಲಪೇಡಿ ಮತ್ತು ಇತರ ಕತೆಗಳು, ಹೆಜ್ಜೆ ಮೂಡದ ಹಾದಿಯಲ್ಲಿ, ಹೊಸಹೆಜ್ಜೆ, ವಾಸ್ತವ, ಕ್ಷಮಯಾಧರಿತ್ರಿ, ನೆಲೆ ತಪ್ಪಿದ ಹಕ್ಕಿ, ಮನ್ನಣೆಯ ದಾಹ, ಈ ಪ್ರಜಾರಾಜ್ಯದಲ್ಲಿ, ಸಂಕ್ರಮಣ, ಚಿನ್ನದ ಸೂಜಿ ಇವರ ಕಥಾಸಂಕಲನಗಳು. ಹೊನ್ನಳ್ಳಿಯಲ್ಲೊಮ್ಮೆ, ಸೆರೆಯಿಂದ ಹೊರಗೆ, ಪಯಣದ ಹಾದಿಯಲ್ಲಿ, ಮೌನರಾಗಗಳು, ಅದೃಷ್ಟ ರೇಖೆ, ಕನಕಾಂಬರಿ, ಸೆರಗಿನ ಕೆಂಡ, ಇನ್ನೊಂದು ಅಧ್ಯಾಯ, ಬಂಗಾರದ ಜಿಂಕೆ ಹಿಂದೆ, ಇವರ ಕಾದಂಬರಿಗಳು. ಆಯ್ದ ಕತೆಗಳು, ಪ್ರತಿಬಿಂಬ, ಮುಳಿಯ ಮೂಕಾಂಬಿಕೆ, ಏರ್ಯ ಚಂದ್ರಭಾಗಿ ರೈ ಇವರ ಸಂಪಾದಿತ ಕೃತಿಗಳು. 


ಇವರ ಸೆರೆಯಿಂದ ಹೊರಗೆ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಇನ್ನೊಂದು ಅಧ್ಯಾಯ ಕಾದಂಬರಿಗೆ ವನಿತಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ, ಶ್ರೀಮತಿ ಕೃಷ್ಣಬಾಯಿ ದತ್ತಿನಿಧಿ ಪ್ರಶಸ್ತಿ, ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಪುಲಪೇಡಿ ಕತೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ ದೊರಕಿದೆ.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter




Post a Comment

0 Comments
Post a Comment (0)
To Top