ಉನ್ನತ ಶಿಕ್ಷಣದ ಪಠ್ಯಪುಸ್ತಕಗಳು ಶೀಘ್ರದಲ್ಲೇ ಕನ್ನಡ ಭಾಷೆಯಲ್ಲಿ ಲಭ್ಯ: ಥಾವರ್ ಚಂದ್ ಗೆಹ್ಲೋಟ್

Upayuktha
0

ಮಂಗಳೂರು ವಿವಿಯ 41ನೇ ಘಟಿಕೋತ್ಸವ: 115 ಮಂದಿಗೆ ಪಿ.ಹೆಚ್.ಡಿ, 55 ಚಿನ್ನದ ಪದಕ, 57 ನಗದು ಬಹುಮಾನ ವಿತರಣೆ | ಪ್ರಥಮ ರ‍್ಯಾಂಕ್ ಪಡೆದ 71 ಮಂದಿಗೆ ಪ್ರಮಾಣಪತ್ರ ಪ್ರದಾನ 


ಮಂಗಳೂರು: ದೇಶದಲ್ಲೇ ಮೊದಲ ಬಾರಿಗೆ, ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ಆದಷ್ಟು ಬೇಗನೆ ಕನ್ನಡದಲ್ಲಿ ತರುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳೀಯ ಭಾಷೆಯಲ್ಲೇ ಕಲಿತು ದೇಶದ ಅಭಿವೃದ್ಧಿಗೆ ವೇಗ ತುಂಬುವುದು ಇದರ ಉದ್ದೇಶ, ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.


ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಬುಧವಾರ ನಡೆದ 41ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಂಗಳವಾರ ನಡೆದ ಎಲ್ಲಾ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಹಾಗೂ ತಜ್ಞರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳೀಯ ಭಾಷಾ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುವ ನೂತನ ರಾಷ್ಟೀಯ ಶಿಕ್ಷಣ ನೀತಿ 2020 ನ್ನು ದೇಶದಲ್ಲಿ ಕರ್ನಾಟಕ ಜಾರಿ ಮಾಡಿರುವುದು ಸಂತೋಷದ ವಿಚಾರ, ಎಂದರು.


“ಆತ್ಮನಿರ್ಭರ ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿ ಮಾಡಲು, ಆರ್ಥಿಕವಾಗಿ ಜಾಗತಿಕವಾಗಿ ಮುಂಚಾಣಿಗೆ ತರಲು ಯುವಜನರ ಪಾತ್ರ ಅಗತ್ಯ. ಸ್ವಾತಂತ್ರ್ಯದ ಅಮೃತಕಾಲ ನಮಗೆ ಕರ್ತವ್ಯದ ಕಾಲವಾಗಬೇಕು. ನಮ್ಮ ಜಲ, ವಾಯು, ಕಾಡಿನ ಸಂರಕ್ಷತೆ ಈಗಿನ ತುರ್ತು ಅಗತ್ಯ. ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದುಕೊಂಡು, ಒಬ್ಬರಿಗೊಬ್ಬರು ಹೆಗಲಾಗುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು,” ಎಂದು ಅವರು ಅಭಿಪ್ರಾಯಪಟ್ಟರು.


ಘಟಿಕೋತ್ಸವ ಭಾಷಣ ಮಾಡಿದ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್‌ನ ನಿರ್ದೇಶಕ ಪ್ರೊ. ಎಸ್.ಸಿ. ಶರ್ಮ, ವಿಶ್ವವಿದ್ಯಾನಿಲಯ ಶಿಕ್ಷಣದ ಪರಿಕಲ್ಪನೆ ನಾವು ಅರ್ಥಮಾಡಿಕೊಳ್ಳಬೇಕು ಎಂಬುದು ರಾಷ್ಟೀಯ ಶಿಕ್ಷಣ ನೀತಿಯ ಆಶಯ. ಅದು ನಮ್ಮ ಬಹುಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಪರಿಸರದೆಡೆಗೆ ಸ್ವಾರ್ಥರಹಿತ ಕಾಳಜಿ ನಮ್ಮಲ್ಲಿ ಬೆಳೆಯಬೇಕು. ಮಾನವೀಯ ಗುಣ ಮತ್ತು ಮಾನವಿಕ ಶಾಸ್ತ್ರದ ಅಧ್ಯಯನ ಇದಕ್ಕೆ ಅಗತ್ಯ. ನಮ್ಮಪ್ರಾಚೀನ ಜ್ಞಾನದ ಅರಿವು, ನಮ್ಮ ಸಂಸ್ಕೃತಿಯ ಶ್ರೀಮಂತಿಯ ಉಳಿವು, ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಒಳ್ಳೆಯ ಅಂಶಗಳ ತಿಳಿವು ಬೇಕಾಗಿದೆ. ನಮ್ಮ ಅಧ್ಯಯನ ಪ್ರಾಯೋಗಿಕ ವಾಗಿರರಬೇಕು, ಹೊರ ಪ್ರಪಂಚವನ್ನು ಹೆಚ್ಚು ಅರಿಯುವಂತಿರಬೇಕು ಎಂದರು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ವಿಶ್ವವಿದ್ಯಾನಿಲಯದ ಸಾಧನೆ- ಗುರಿಗಳನ್ನು ವಿವರಿಸಿ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ ಕೆ, ಕುಲಸಚಿವ (ಪರೀಕ್ಷಾಂಗ) ಪ್ರೊ. ರಾಜು ಕೃಷ್ಣ ಚಲನ್ನವರ್, ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿಧ ನಿಖಾಯಗಳ ಡೀನ್‌ಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು. ಪ್ರಾಧ್ಯಾಪಕರುಗಳಾದ ಡಾ. ಧನಂಜಯ ಕುಂಬ್ಳೆ ಮತ್ತು ಪ್ರೀತಿ ಕೀರ್ತಿ ಡಿʼಸೋಜ ಕಾರ್ಯಕ್ರಮ ನಿರೂಪಿಸಿದರು.


ಈ ಬಾರಿ 7 ಮಂದಿ ವಿದೇಶಿಗರೂ ಸೇರಿದಂತೆ 115 ಮಂದಿಗೆ ಪಿ.ಹೆಚ್.ಡಿ ಪದವಿ ಪ್ರದಾನ ಮಾಡಲಾಯಿತು. 55 ಮಂದಿಗೆ ಚಿನ್ನದ ಪದಕ, 57 ನಗದು ಬಹುಮಾನ ವಿತರಿಸಲಾಯಿತು. 199 ಮಂದಿ ರ‍್ಯಾಂಕ್‌ ವಿಜೇತರಲ್ಲಿ ಪ್ರಥಮ ರ‍್ಯಾಂಕ್ ಪಡೆದ 71 ಮಂದಿಗೆ ರಾಜ್ಯಪಾಲರು ರ‍್ಯಾಂಕ್ ಪ್ರಮಾಣ ಪತ್ರ ನೀಡಿದರು. ಶೈಕ್ಷಣಿಕ ವರ್ಷ 2021-22 ರಲ್ಲಿ ಶೇಕಡಾ 82.72 ಫಲಿತಾಂಶ ದಾಖಲಾಗಿದೆ.


ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್:



ಮಂಗಳೂರು ವಿವಿಯ 41 ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು. ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಮಾಡಿದ ಸಾಧನೆಗಾಗಿ ಮಂಗಳೂರಿನ ಕಣಚೂರ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಜಿ ಯು.ಕೆ.ಮೋನು, ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಗಾಗಿ ಉದ್ಯಮಿ ಜಿ ರಾಮಕೃಷ್ಣ ಆಚಾರ್ ಹಾಗೂ ಶಿಕ್ಷಣ ಮತ್ತು ಸಮಾಜಸೇವೆಗಾಗಿ ರಾಜ್ಯೋತ್ಸವ ಪುರಸ್ಕಾರ ಪುರಸ್ಕೃತ ಪ್ರೊ.ಎಂ.ಬಿ. ಪುರಾಣಿಕ್ ಅವರು ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪದವಿ ಪಡೆದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top