ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ ಶ್ರೀ ಕೃಷ್ಣಾರ್ಪಣ ಕೃತಿ ಲೋಕಾರ್ಪಣೆ
ಬೆಂಗಳೂರು: 90 ನೇ ವಸಂತದ ಸಂಭ್ರಮದಲ್ಲಿರುವ ದೊಡ್ಡಬಳ್ಳಾಪುರ ರಸ್ತೆಯ ರಾಜನಕುಂಟೆ ಸಮೀಪದ ಕಾಕೋಳು ಕ್ಷೇತ್ರದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಬ್ರಹ್ಮರಥೋತ್ಸವದ ಪ್ರಯುಕ್ತ ಇಲ್ಲಿನ ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ಹಲವು ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಅವರು ಮಾತನಾಡುತ್ತಾ, ನಿಷ್ಕಾಮ ಭಕ್ತಿಯಿಂದ ಮಾಡುವ ಸೇವೆಗೆ ಭಗವಂತನು ಬೇಗ ಒಲಿಯುವ. ಕಲಿಯುಗದಲ್ಲಿ ಶ್ರೀ ಕೃಷ್ಣನ ಉಪಾಸನೆಯಿಂದ ನಮ್ಮ ದುರಿತಗಳು ದೂರವಾಗುವುದು. ಶ್ರೀಪಾದರಾಜರಿಂದ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲನ ಸೇವೆ ಮಾಡುವುದರಿಂದ ಚತುರ್ವಿಧ ಪುರುಷಾರ್ಥಗಳು ದೊರಕುವುದು, ಶ್ರೀ ವ್ಯಾಸತೀರ್ಥರಿಂದ ಸ್ಥಾಪಿತ ಕಂಬದ ಆಂಜನೇಯ ಸ್ವಾಮಿಯ ದರ್ಶನ ಇಹ ಪರಗಳಿಗೆ ಸಾಧನ. ಇಂತಹ ದಿವ್ಯ ಸನ್ನಿಧಾನದಲ್ಲಿ ಕಾಕೋಳು ಗ್ರಾಮಸ್ಥರು 9 ದಶಕಗಳಿಂದ ಅವಿಚ್ಛಿನ್ನವಾಗಿ ನಡೆಸಿಕೊಂಡು ಬರುತ್ತಿರುವ ಬ್ರಹ್ಮರಥೋತ್ಸವವು ಎಲ್ಲರಿಗೂ ಮಾದರಿ ಎಂದರು.
ಭಗವಂತನಿಗೆ ಅತ್ಯಂತ ಪ್ರಿಯವಾದ ಪುಷ್ಪಾರ್ಚನೆ ಗಳಲ್ಲಿ ಜ್ಞಾನ ಪುಷ್ಪ ಅರ್ಚನೆ ವಿಶೇಷ. ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರ ಶ್ರೀ ಕೃಷ್ಣಾರ್ಪಣ ಪುಸ್ತಕದ ಮೂಲಕ ಅಂತಹ ಜ್ಞಾನ ದಾಸೋಹ ಈ ಸಂದರ್ಭದಲ್ಲಿ ನಡೆದಿರುವುದು ಅಭಿನಂದನೀಯ ಎಂದು ತಿಳಿಸಿದರು.
ಟಿಟಿಡಿ ಎಸ್ವಿಬಿಸಿ ಚಾನೆಲ್ ನಿರ್ದೇಶಕ ಡಿಪಿ ಅನಂತ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಉಡುಪಿಯ ಓಂ ಪ್ರಕಾಶ ಭಟ್ಟ ನಡೆಸಿಕೊಟ್ಟರು.
ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಮುರಳಿ ಕಾಕೋಳು ಪ್ರಾಸ್ತಾವಿಕ ನುಡಿಗಳನಾಡಿ, ಗ್ರಾಮೀಣ ಪ್ರದೇಶದಲ್ಲಿ ಧರ್ಮ ಸಂಸ್ಕೃತಿಯ ರಕ್ಷಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕಾಕೋಳು ವೇಣುಗೋಪಾಲಸ್ವಾಮಿ ದೇವಸ್ಥಾನದ ಕಾರ್ಯಯೋಜನೆಗಳಿಗೆ ಭಕ್ತ ಜನರ ಸಹಕಾರ ಅಪಾರ ಎಂದು ತಿಳಿಸಿದರು.
ಗ್ರಂಥ ದಾಸೋಹ ಸೇವಾ ಕೈಂಕರ್ಯ ಮಾಡಿದ ಪಾಂಚಜನ್ಯ ಪ್ರತಿಷ್ಠಾನದ ಟ್ರಸ್ಟಿ ವಿ ಆರ್ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ