ಯಕ್ಷಗಾನ ಸಾಹಿತ್ಯವನ್ನು ಪದ್ಯ, ತಾಳ, ರಾಗ, ಲಯ ಮತ್ತು ಭಾವ ಬದ್ಧವಾಗಿ ಹಾಡಿ ಪ್ರದರ್ಶನಕ್ಕೆ ಪ್ರಧಾನ ಕಾರಣನಾಗುವವನೇ ಭಾಗವತ. ಅವನು ಭಗವಂತನ ಕತೆಗಳನ್ನು ರಂಗಕ್ಕೆ ತಂದು ತೋರಿಸುವವನೂ ಹೌದು. ಆಟ ಅಥವಾ ತಾಳಮದ್ದಳೆಯಲ್ಲಿ ಭಾಗವತನು ಮುಖ್ಯ ನಿರೂಪಕನೂ, ನಿರ್ದೇಶಕನೂ ಆಗಿರುತ್ತಾನೆ. ಕಲಾವಿದರ ತಂಡಕ್ಕೆ ಅವನೇ ನಾಯಕ, ಸೂತ್ರಧಾರ ಇಂತಹ ಒಬ್ಬರು ನಾಯಕ, ಸೂತ್ರಧಾರ ಪದ್ಯಾಣ ಗೋವಿಂದ ಭಟ್.
ಮಾಂಬಾಡಿ ಸುಬ್ರಮಣ್ಯ ಭಟ್ ಇವರು ಯಕ್ಷಗಾನದ ಗುರುಗಳು. ಗಣಪತಿ ಭಟ್ ಹಾಗೂ ಅದಿತಿ ಅಮ್ಮ ಪದ್ಯಾಣ ಗೋವಿಂದ ಭಟ್ ಇವರ ತಂದೆ-ತಾಯಿ.
ವೀರ ರಸ ಪ್ರಧಾನದ ಎಲ್ಲಾ ಪ್ರಸಂಗಗಳು ಹಾಗೂ ಬೆಳಗಿನ ಜಾವದ ಯಕ್ಷಗಾನದ ರಾಗಗಳನ್ನು ವಿಶೇಷವಾಗಿ ಇಷ್ಟಪಡುವ ಇವರಿಗೆ ಕಡತೋಕ, ಪುತ್ತಿಗೆ, ಕುರಿಯ, ಪೂಂಜ ನೆಚ್ಚಿನ ಭಾಗವತರು. ನಿಡ್ಲೆ ನರಸಿಂಹ ಭಟ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕನಾರಾಯಣ ಭಟ್, ಮಿಜಾರು ಮೋಹನ ಶೆಟ್ಟಿಗಾರ್ ಇನ್ನೂ ಅನೇಕರು ಪದ್ಯಾಣ ಗೋವಿಂದ ಭಟ್ ಇವರ ನೆಚ್ಚಿನ ಕಲಾವಿದರು.
ಯಕ್ಷಗಾನದ ಇಂದಿನ ಸ್ಥಿತಿ ಉತ್ತಮವಾಗಿದೆ. ಆದರೆ ಬೇಸರವಿದೆ, ಅವಕಾಶಗಳು ವಿಪುಲವಾಗಿದ್ದರೂ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಬಹಳ ಬೇಸರವಿದೆ ಎನ್ನುತ್ತಾರೆ. ಇಂದು ಪ್ರಜ್ಞಾವಂತ ಪ್ರೇಕ್ಷಕರ ಪ್ರಮಾಣ ತುಂಬಾ ಕಡಿಮೆ. ಇಂದಿನ ಪ್ರೇಕ್ಷಕರು ತಮ್ಮ ಇಷ್ಟದ ಕಲಾವಿದರ ಪಾಲ್ಗೊಳ್ಳುವಿಕೆಯಿಂದ ನಡೆಯುವ ಯಕ್ಷಗಾನವನ್ನು ನೋಡುತ್ತಾರೆಯೇ ಹೊರತು ವಸ್ತುನಿಷ್ಠರಾಗಿಲ್ಲ ಎಂಬುದು ಇಂದಿನ ಕಾಲಗಟ್ಟದ ಯಕ್ಷಗಾನ ಪ್ರೇಕ್ಷಕರ ಬಗೆಗಿನ ಇವರ ಅಭಿಪ್ರಾಯ.
ಹಲವು ಸನ್ಮಾನ ಹಾಗೂ ಪ್ರಶಸ್ತಿಗಳನ್ನು ಪಡೆದಿರುವ ಪದ್ಯಾಣ ಇವರಿಗೆ ಯಕ್ಷಗಾನದ ಹೊರತಾಗಿ ಓದುವುದು, ಕ್ರಿಕೆಟ್ ಇತರೇ ಹವ್ಯಾಸಗಳು. ಇದಲ್ಲದೆ, ಯಾರಿಗೇ ಆದರೂ ಯಾವುದೇ ರೀತಿಯ ಸಹಾಯಕ್ಕೆ ಮುಂದಾಗುವುದು ಇವರ ವಿಶೇಷ ಗುಣ.
ಇವರು ಕಳೆದ 30 ವರ್ಷಗಳಿಂದ ಕಟೀಲು ಮೇಳದಲ್ಲಿ ಭಾಗವತರಾಗಿ ತಿರುಗಾಟ ಮಾಡುತ್ತಿದ್ದಾರೆ. ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾಗಿದ್ದ ಕಲ್ಲಾಡಿ ವಿಠಲ ಶೆಟ್ಟಿ, ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಮೇಳದ ಸಹ ಕಲಾವಿದರ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುವುದು ಇವರ ಸೌಜನ್ಯದ ಮಾತುಗಳು. ಇವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬುದು ಕಲಾಭಿಮಾನಿಗಳೆಲ್ಲರ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ