ಪುತ್ತೂರು: ಕ್ಯಾಂಪ್ಕೋ ನಿಯಮಿತ ಮಂಗಳೂರು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ 5 ನೇ ಕೃಷಿ ಯಂತ್ರ ಮೇಳ 2023 ಮತ್ತು ಕನಸಿನ ಮನೆ ಕಾರ್ಯಕ್ರಮದ 2 ನೇ ದಿನ “ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ” ಕುರಿತು ವಿಚಾರಗೋಷ್ಠಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾಸರಗೋಡು ಐಎಪ್ಎಆರ್ ಮತ್ತು ಸಿಪಿಸಿಆರ್ಐ ಬೆಳೆ ಸಂರಕ್ಷಣಾ ವಿಭಾಗ ಮುಖ್ಯಸ್ಥರಾದ ಡಾ. ವಿನಾಯಕ ಹೆಗಡೆ ಮಾತನಾಡಿ, ಕರಾವಳಿಯಲ್ಲಿ ಅತಿಯಾಗಿ ಬೆಳೆಯುವ ಅಡಿಕೆ ಕೃಷಿಯಲ್ಲಿ ಕಂಡು ಬರುವ ಎಲೆ ಚುಕ್ಕೆ ರೋಗ, ಹಳದಿ ರೋಗ, ಕೊಳೆ ರೋಗ, ಹಿಂಗಾರ ಒಣಗುವಿಕೆ, ಬೇರು ಹುಳ ಮುಂತಾದ ರೋಗಗಳನ್ನು ನಿವಾರಿಸುವ ಕ್ರಮಗಳ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಮಾಹಿತಿ ನೀಡಿದರು.
ಅಡಿಕೆ ಕೃಷಿಗೆ ಒಂದು ಬಾರಿ ರೋಗ ತಗುಲಿದರೆ ಅದನ್ನು ನಿವಾರಿಸಲು ವರ್ಷಗಳೇ ಹಿಡಿಯುತ್ತವೆ. ಅಂತಹ ಸಂದರ್ಭದಲ್ಲಿ ನಾವು ಹೆಚ್ಚು ಗಮನ ಹರಿಸುವುದು ಅಗತ್ಯ. ಪೋಷಕಾಂಶಗಳ ನಿರ್ವಹಣೆ ಹಾಗೂ ನೀರಿನ ಸರಬರಾಜನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಟ್ಲದ ಸಿಪಿಸಿಆರ್ ಐ ಯ ಹಿರಿಯ ವಿಜ್ಞಾನಿ ಡಾ. ನಾಗರಾಜ್ ಎನ್ ಮಾತನಾಡಿ, ಭಾರತದಲ್ಲಿ ಅಡಿಕೆಗೆ ಒಂದು ಪೂಜನೀಯ ಸ್ಥಾನವಿದೆ. ಅದರಲ್ಲೂ ಕರ್ನಾಟಕ ಕೃಷಿಯಲ್ಲಿ ಅಡಿಕೆಯು ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮಂಗಳ ತಳಿಗೆ ಅತೀ ಹೆಚ್ಚು ಬೇಡಿಕೆ ಇದ್ದು ಇದು ಅತೀ ಶೀಘ್ರದಲ್ಲಿ ಫಸಲನ್ನು ನಿಡುವ ತಳಿಯಾಗಿದೆ. ಕೃಷಿ ಎಂಬುವುದು ಕೇವಲ ಆದಾಯಕ್ಕೆ ಸೀಮಿತವಲ್ಲ. ಅದರ ಪೋಷಣೆಯೂ ಅಷ್ಟೇ ಅಗತ್ಯ. ಹಾಗಾಗಿ ವರ್ಷಕ್ಕೊಮ್ಮೆ ಅದರ ಮಣ್ಣನ್ನು ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಹಾಗೂ ಕ್ಯಾಂಪ್ಕೋ ನಿಯಮಿತ ಮಂಗಳೂರಿನ ನಿರ್ದೇಶಕರಾದ ದಯಾನಂದ ಹೆಗಡೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾಂಬಿಕಾ ನಿರೂಪಿಸಿ ವಂದಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ