ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 59ನೇ ಜೆಪ್ಪು ವಾರ್ಡಿನ ಸೂಟರ್ಪೇಟೆ ಪ್ರದೇಶದ ಅಭಿವೃದ್ಧಿಗೆ 50 ಲಕ್ಷ ರೂ.ಗಳ ವಿಶೇಷ ಅನುದಾನದಲ್ಲಿ ಕಾಮಗಾರಿಗಳಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಇಂದು (ಫೆ.7) ಚಾಲನೆ ನೀಡಿದರು.
ಕೋಡ್ದಬ್ಬು ದೈವಸ್ಥಾನದ ಪರಿಸರದ ರಸ್ತೆ ಅಭಿವೃದ್ಧಿ, ಶಿಥಿಲಗೊಂಡಿರುವ ಗ್ರಂಥಾಲಯ, ಅಂಗನವಾಡಿ, ಮಹಿಳಾ ಮಂಡಲದ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಈ ಅನುದಾನ ಬಳಕೆಯಾಗಲಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.
ಪಾಲಿಕೆಯ 59ನೇ ವಾರ್ಡ್ ಸದಸ್ಯ ಭರತ್ ಕುಮಾರ್ ಅವರು ಇಲ್ಲಿನ ಸಮಸ್ಯೆಗಳನ್ನು ಮತ್ತು ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಕ್ಕೆ ತಂದಿದ್ದರು. ಅದರಂತೆ ರಾಜ್ಯ ಸರಕಾರದ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 50 ಲಕ್ಷ ರೂ ಮಂಜೂರಾಗಿದ್ದು ಈ ಅನುದಾನದಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತದೆ ಎಂದು ಶಾಸಕ ಕಾಮತ್ ಹೇಳಿದರು.
ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಗರಕ್ಕೆ ಬಂದಾಗ ನಗರದ ಅಬಿವೃದ್ಧಿ ಯೋಜನೆಗಳಿಗಾಗಿ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಕೂಡಲೇ ಯಡಿಯೂರಪ್ಪನವರು 125 ಕೋಟಿ ರೂ ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲ, ಹಣ ಬಿಡುಗಡೆಗೆ ಆದೇಶವನ್ನೂ ಕೊಟ್ಟಿದ್ದರು.
ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡ ಬಹಳ ಮುತುವರ್ಜಿ ವಹಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕರು ಸ್ಮರಿಸಿಕೊಂಡರು.
1.25 ಲಕ್ಷ ರೂ ವೆಚ್ದದಲ್ಲಿ ಜೆಪ್ಪು ಬಪ್ಪಾಲ್ನಲ್ಲಿ ಚರಂಡಿ ನಿರ್ಮಾಣ, 50 ಲಕ್ಷ ರೂ ವೆಚ್ದಲ್ಲಿ ಹೊಸ ಗ್ರಂಥಾಲಯ, ಅಂಗನವಾಡಿ, ಮಹಿಳಾ ಮಂಡಲ ಕಟ್ಟಡ ನಿರ್ಮಾಣ ನಡೆಯಲಿದೆ. ಈ ಪರಿಸರದ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ, ಮಹಿಳಾ ಮಂಡಲಕ್ಕೆ ಕಚೇರಿ ನಿರ್ಮಿಸಲಾಗುತ್ತಿದೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ಭರತ್ ಕುಮಾರ್ ಎಸ್, ಮಂಡಲದ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುರೇಖಾ ರಾವ್, ಬೂತ್ ಅಧ್ಯಕ್ಷರಾದ ದೇವಾನಂದ್ ಸನಿಲ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಜಿತ್ ಡಿಸಿಲ್ವ, ಮಂಡಲದ ಯುವ ಮೋರ್ಚಾ ಉಪಾಧ್ಯಕ್ಷರಾದ ಘನಶ್ಯಾಮ್ ಅತ್ತಾವರ್, ಶಕ್ತಿಕೇಂದ್ರ ಪ್ರಮುಖರಾದ ಪ್ರಕಾಶ್ ಕೊಟ್ಟಾರಿ, ಬೂತ್ ಅಧ್ಯಕ್ಷರಾದ ವಾಣಿಶ್ರೀ, ಪ್ರಮುಖರಾದ ನಾರಾಯಣ, ತಾರಮಾಣಿ, ಪದ್ಮಾಕರ್, ಶಿವಾನಂದ ರೈ, ಅಮಿತಾ ಕೆ, ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನೆ ಸೂಪರ್ ವೈಸರ್ ಅನುಪಮಾ.ಸಿ, ಅಂಗನವಾಡಿ ಶಿಕ್ಷಕಿ ವಸಂತಿ.ಕೆ , ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರಾದ ರಾಘವೇಂದ್ರ ಕೆ.ವಿ ಹಾಗೂ ಸಿಬ್ಬಂದಿಗಳಾದ ಮಮತಾ ರೈ, ಸವಿತಾ, ಬಿ. ವಿಶುಕುಮಾರ್ ಹಾಗೂ ಸುಮಿತ್ರಾ ಇವರು ಹಾಜರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


