ಧರ್ಮಸ್ಥಳದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ನವಜೀವನ ಸಮಾವೇಶ
• ಧರ್ಮಸ್ಥಳದಲ್ಲಿ ಬುಧವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನವಜೀವನ ಸಮಾವೇಶವನ್ನು ಉದ್ಘಾಟಿಸಿದರು.
• ರಾಜ್ಯಪಾಲರು ವ್ಯಸನಮುಕ್ತರಿಗೆ ಗುರುತಿನ ಚೀಟಿ ವಿತರಿಸಿದರು.
• ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು.
ಉಜಿರೆ: ಮದ್ಯ ವ್ಯಸನದ ಚಟಕ್ಕೆ ಬಲಿಯಾಗುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕುಟುಂಬದಆರ್ಥಿಕ ಸ್ಥಿತಿ ಹದಗೆಡುತ್ತದೆ. ಕುಟುಂಬದೊಳಗೆ ಪ್ರೀತಿ-ವಿಶ್ವಾಸ ಕಡಿಮೆಯಾಗಿ ಮಾನವೀಯ ಸಂಬಂಧಗಳು ಕೆಟ್ಟು ವ್ಯಕ್ತಿತ್ವವೇ ನಾಶವಾಗುತ್ತದೆ. ಆದುದರಿಂದ ವ್ಯಸನ ಮುಕ್ತ ಮನೆ, ಸಮಾಜ ಹಾಗೂ ತನ್ಮೂಲಕ ಆರೋಗ್ಯಪೂರ್ಣ ರಾಷ್ಟ್ರ ನಿರ್ಮಾಣವಾಗಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಮಾಡುತ್ತಿರುವ ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣ ಶ್ರೇಷ್ಠವಾದ ಪುಣ್ಯದ ಕಾಯಕವಾಗಿದೆ ಎಂದುಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರು ಬುಧವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ “ನವಜೀವನ ಸಮಾವೇಶ”ವನ್ನು ಉದ್ಘಾಟಿಸಿ ಮಾತನಾಡಿದರು.
“ಎಲ್ಲರಿಗೂ ನಮಸ್ಕಾರ, ತಮಗೆಲ್ಲರಿಗೂ ಹಾರ್ದಿಕ ಅಭಿನಂದನೆಗಳು” ಎಂದು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ರಾಜ್ಯಪಾಲರು, ಎಂಟು ಶತಮಾನಗಳ ಭವ್ಯಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳವು ಇಂದು ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತುಔಷಧ ದಾನ ಎಂಬ ಚತುರ್ವಿಧ ದಾನಗಳಿಂದ ವಿಶ್ವವಿಖ್ಯಾತವಾಗಿದೆ. ಹೆಗ್ಗಡೆಯವರು ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಸೇವೆಯನ್ನುಅವರು ಶ್ಲಾಘಿಸಿ ಅಭಿನಂದಿಸಿದರು. ವಿಶೇಷವಾಗಿ ಮಹಿಳಾ ಸಬಲೀಕರಣ ಹಾಗೂ ಉಚಿತ ಆರೋಗ್ಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾನು ಕೇಂದ್ರ ಸಚಿವನಾಗಿದ್ದಾಗ ವ್ಯಸನಮುಕ್ತ ಸಮಾಜ ರೂಪಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೆ. ಮದ್ಯ ಉತ್ಪಾದನೆ, ಮಾರಾಟ ಹಾಗೂ ವ್ಯಸನ ತಡೆಗಟ್ಟಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಮದ್ಯ ವ್ಯಸನಮುಕ್ತರು ತಮ್ಮ ಪರಿಸರದವರೂ ಮದ್ಯಪಾನಕ್ಕೆ ಬಲಿಯಾಗದಂತೆ ತಡೆಯಬೇಕು. ಯುವಜನತೆ ಮದ್ಯಪಾನದ ಚಟಕ್ಕೆ ಬಲಿಯಾಗದಂತೆ ಅರಿವು, ಜಾಗೃತಿ ಮೂಡಿಸಬೇಕು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿಇಂದು ಭಾರತ “ವಿಶ್ವಗುರು”ವಿನ ಮಾನ್ಯತೆಗೆ ಪಾತ್ರವಾಗಿದೆ. ವ್ಯಸನಮುಕ್ತ ರಾಷ್ಟ್ರವಾಗಿ ಆರೋಗ್ಯಪೂರ್ಣ ಸಮಾಜ ರೂಪಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ವ್ಯಸನಮುಕ್ತ ಭಾರತ ನಿರ್ಮಾಣದ ಮೂಲಕ ಎಲ್ಲರ ಭಾಗ್ಯದ ಬಾಗಿಲು ತೆರೆದು ಸರ್ವರೂ ಸುಖ-ಶಾಂತಿ, ನೆಮ್ಮದಿಯ ಜೀವನದೊಂದಿಗೆ ಲೋಕ ಕಲ್ಯಾಣವಾಗಲಿ ಎಂದು ಅವರು ಹಾರೈಸಿದರು.
ವ್ಯಸನಮುಕ್ತರು ಪರಿಶುದ್ಧರಾದ ಪವಿತ್ರಾತ್ಮರು: ಡಿ. ವೀರೇಂದ್ರ ಹೆಗ್ಗಡೆ
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದುಶ್ಚಟ ಇರುವವರೆಲ್ಲ ದುಷ್ಟರು. ಮದ್ಯಪಾನದಿಂದ ವ್ಯಕ್ತಿತ್ವದ ಸರ್ವನಾಶವಾಗಿ ಗೌರವಯುತ ಜೀವನ ಸಾಧ್ಯವಾಗುವುದಿಲ್ಲ. ಮದ್ಯವ್ಯಸನ ಮುಕ್ತರು ಪರಿಶುದ್ಧರಾದ ಪವಿತ್ರಾತ್ಮರಾಗಿದ್ದೀರಿ. ಇಂದು ದೇವರ ದರ್ಶನದಿಂದ ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ಅನುಗ್ರಹ ನಿಮಗೆ ದೊರಕಿದೆ ಎಂದು ವ್ಯಸನ ಮುಕ್ತರನ್ನು ಅಭಿನಂದಿಸಿದರು.
ಮಹಿಳೆಯರು ಸಂತೋಷ ಮತ್ತು ನೆಮ್ಮದಿಯಿಂದ ಇದ್ದರೆ ಮನೆಯಲ್ಲಿ, ಸಮಾಜದಲ್ಲಿ ಹಾಗೂ ದೇಶದಲ್ಲಿ ಸುಖ-ಶಾಂತಿ ನೆಮ್ಮದಿ ಇರುತ್ತದೆ.
ವ್ಯಸನಮುಕ್ತರು ದೃಢ ಸಂಕಲ್ಪದಿಂದ ಪ್ರಜ್ಞಾವಂತ ನಾಗರಿಕರಾಗಿ ಎಲ್ಲಾ ದುರ್ಗುಣಗಳ ನಾಶ ಮಾಡಿ ಸದಾಚಾರ ಸಂಪನ್ನರಾಗಿ ಸಮಾಜದ ಸಭ್ಯ, ಸುಸಂಸ್ಕøತ ನಾಗರಿಕರಾಗಬೇಕು ಎಂದು ಅವರು ಸಲಹೆ ನೀಡಿದರು.
ಮನೆಯೇ ಮಂದಿರವಾಗಲಿ: ಹೇಮಾವತಿ ವೀ. ಹೆಗ್ಗಡೆ: ಶುಭಾಶಂಸನೆ ಮಾಡಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಮನುಷ್ಯ ದೃಢಸಂಕಲ್ಪದೊಂದಿಗೆ ಯಾವುದೇ ವಿಕಲ್ಪಗಳಿಗೆ ಬಲಿಯಾಗದೆ ಸಾರ್ಥಕಜೀವನ ನಡೆಸಬೇಕು. ಯಾವುದೇ ಔಷಧಿ ಇಲ್ಲದೆ, 8 ದಿನಗಳ ಮದ್ಯವರ್ಜನ ಶಿಬಿರದಲ್ಲಿ ಮನಪರಿವರ್ತನೆ ಮೂಲಕ ವ್ಯಸನ ಮುಕ್ತರಾದವರು ಮರುಜನ್ಮ ಪಡೆದಂತೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಗೌರವದಿಂದ ಶಾಂತಿಯುತ ಜೀವನ ಮಾಡಬೇಕು. ಆಗ ಮನೆಯೇ ಮಂದಿರವಾಗುತ್ತದೆ. ಮದ್ಯಪಾನದಿಂದ ಧನಹಾನಿ, ಮಾನಹಾನಿ ಮತ್ತು ಪ್ರಾಣಹಾನಿ ಮೊದಲಾದ ದುರಂತಗಳು ಸಂಭವಿಸುತ್ತವೆ ಎಂದು ಅವರು ಎಚ್ಚರಿಕೆ ನೀಡಿದರು.
ವ್ಯಸನಮುಕ್ತರ ಪರವಾಗಿ ತೀರ್ಥಹಳ್ಳಿಯ ಮಂಜುನಾಥ್ ಧನ್ಯತಾ ಭಾವದಿಂದ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಡಾ. ವಿರೂಪಾಕ್ಷ ದೇವರಮನೆ ಬರೆದ “ನಿನಗೆ ನೀನೆ ಗೆಳೆಯ” ಪುಸ್ತಕವನ್ನು ಹೇಮಾವತಿ ವೀ. ಹೆಗ್ಗಡೆ ಲೋಕಾರ್ಪಣೆ ಮಾಡಿದರು.
ಮಂಗಳೂರಿನ ಖ್ಯಾತ ಸಮಾಜಸೇವಕ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಥೋಮಸ್ ಸ್ಕರಿಯಾ ಅವರಿಗೆ “ಜನಜಾಗೃತಿ ಜೀವಮಾನ ಸಾಧನಾ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು.
ವ್ಯಸನಮುಕ್ತ ಸಾಧಕರಿಗೆ “ಜಾಗೃತಿ ಅಣ್ಣ” ಮತ್ತು “ಜಾಗೃತಿ ಮಿತ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿ. ಹರ್ಷೇಂದ್ರ ಕುಮಾರ್ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮೋನಪ್ಪಗೌಡ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವೀ. ಪಾಯಸ್ ಧನ್ಯವಾದವಿತ್ತರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ