ಸಾಧನೆ ಎನ್ನುವುದು ಬೆಲೆ ಕಟ್ಟಲಾಗದ ಮಾಣಿಕ್ಯ. ಅಲ್ಲಿ ತನಕ ಕೈ ಚಾಚಬೇಕಾದರೆ ಗುರಿಯ ಪಾತ್ರ ಮುಖ್ಯ ಅದನ್ನು ನಡೆಸುವ ಹಸ್ತ ಬೇಕು. ಅದುವೇ ಅಮ್ಮ. ಹೌದು, ಕಣ್ಣಿಗೆ ಕಾಣುವ ದೇವರು ಅಮ್ಮನೇ ಅಲ್ಲವೇ? ಈ ಪುಟ್ಟ ಕಂದಗೆ ಸರ್ವಸ್ವ ಅಮ್ಮನೇ. ಕೀರ್ತಿ ಪತಾಕೆ, ಈ ಧೀರ ಕಂದನ ಹೆಗಲೇರಿದ್ದ ಛಲವೊಂದಿದ್ದರೆ ಫಲ ತಾನಾಗಿ ಬಳಿ ಬಂದು ನಿಲ್ಲುವುದು ಎಂಬಂತೆ ಈ ಪೋರಿ ಅಮೋಘ ಸಾಧನೆ ಜಗದ ಕೀರ್ತಿಗೆ ಭಾಜನಳಾಗಿದ್ದಾಳೆ. ಸಾಧನೆ ಎನ್ನುವುದು ಅಷ್ಟು ಸುಲಭದಲ್ಲಿ ಸಿಗುವುದಿಲ್ಲ ಪರಿಶ್ರಮ ಪಟ್ಟು ಕಷ್ಟಗಳ ಮೆಟ್ಟಿ ನಿಂತು ಅಮೂಲ್ಯ ಕೊಡುಗೆ ಪಡೆಯಬೇಕು ಅದಕ್ಕಾಗಿ ಗುರುವೂ ಬೇಕು ಗುರಿಯುಬೇಕು. ಇದೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತಾಯಿಯೇ ಮೊದಲ ಗುರು ಎಂಬಂತೆ ಅಪೂರ್ವಳ ಎಲ್ಲಾ ಸಾಧನೆಗೆ ತಾಯಿಯೇ ಸ್ಫೂರ್ತಿ. ತಾಯಿಯ ಸಹಕಾರ ಪ್ರೋತ್ಸಾಹದಿಂದ ಯಾವುದೇ ಬೇರೆ ಗುರುಗಳಿಲ್ಲದೆ ಕೇವಲ ಯೂಟ್ಯೂಬ್ ನೋಡಿ ನೃತ್ಯ ಅಭಿನಯವನ್ನು ಕಲಿತಿದ್ದಾಳೆ. ಮೊದಲು ಶಾಲೆಯಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಳು. ನಂತರ ಬೇರೆ ಬೇರೆ ಸ್ಪರ್ಧೆಗಳಲ್ಲಿ ಅಂದರೆ ನೃತ್ಯ ನಾಟಕ ಛದ್ಮವೇಷ ಯೋಗ ಚಿತ್ರಕಲೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ.
ಕೋವಿಡ್ ಸಮಯದಲ್ಲೂ ಈ ಪ್ರತಿಭೆ ಕೈಕಟ್ಟಿ ಕೂರದೆ ಅನೇಕ ಆನ್ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಅದರಲ್ಲಿ ಜೆಸಿಐ ಅವರ ನಡೆಸಿದ ಆನ್ಲೈನ್ ಡ್ಯಾನ್ಸ್ ಕಾಂಪಿಟೇಶನ್ ನಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಕೇವಲ ಪ್ರಶಸ್ತಿ ಗಳಿಸುವುದಲ್ಲದೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈಕೆ ಗೆದ್ದಿರುವ ಮೊತ್ತವನ್ನು ಅಂಗವಿಕಲ ಮಕ್ಕಳಿಗೆ ನೀಡುತ್ತಾಳೆ. ಹೀಗೆ ಅನೇಕ ಬಾರಿಗೆ ಪ್ರಶಸ್ತಿಯ ಮೊತ್ತವನ್ನು ಅನೇಕ ಬಡವರಿಗೆ ನೀಡಿರುತ್ತಾಳೆ. ಆಧುನಿಕ ಯುಗದಲ್ಲಿ ಮಾನವೀಯ ಮೌಲ್ಯ ಮರೆಯಾಗುವ ಸಂದರ್ಭದಲ್ಲಿ ನೈತಿಕ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಪಸರಿಸುವ ಈ ಪುಟ್ಟ ವಯಸ್ಸಿನ ಪ್ರಬುದ್ಧ ಮನಸ್ಸಿನ ಬಾಲೆ ಸಮಾಜಕ್ಕೆ ಮಾದರಿಯಾಗಿದ್ದಾಳೆ.
ಉಡುಪಿ ಡಿಸ್ಟ್ರಿಕ್ಟ್ ಲೆವೆಲ್ ನ ಡ್ಯಾನ್ಸ್ ಕಾಂಪಿಟೇಷನ್ ನಲ್ಲಿ ಆಯ್ಕೆಯಾಗಿರುತ್ತಾಳೆ. ಕಲಾತ್ಮಕ ಜಗತ್ತು ಆಯೋಜನೆಯ ಮುದ್ದು ಮಕ್ಕಳ ಪೋಟೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಟ್ರೋಫಿ ತನ್ನದಾಗಿಸಿ ಕೊಂಡಿದ್ದಾಳೆ. ಸ್ವದೇಶಿ ತಂಡ ನಡೆಸಿರುವ ಭಜನಾ ಸ್ಪರ್ಧೆಯಲ್ಲಿ ಕೂಡ ಬಹುಮಾನ ಜೊತೆಗೆ ಎಲ್ಲರ ಪ್ರಶಂಸೆಯನ್ನು ಪಡೆದಿರುತ್ತಾಳೆ. ಹಾಗೆಯೇ ಡ್ರಾಮಾ ಜೂನಿಯರ್ ಎರಡನೇ ಸುತ್ತಿನವರೆಗೂ ಆಯ್ಕೆಯಾಗಿರುತ್ತಾಳೆ. ಪ್ರಸ್ತುತ ಕಿಡ್ ಮಾಡೆಲ್ ಆಗಿರುವ ಇವಳು ಇನ್ನಷ್ಟು ನೃತ್ಯ ಅಭಿನಯ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಕನಸನ್ನು ಹೊಂದಿರುತ್ತಾಳೆ.
ಇವರೆಲ್ಲ ಕನಸಿಗೆ ತಂದೆ ತಾಯಿ, ಅಜ್ಜ ಅಜ್ಜಿ ಮತ್ತು ಹಿತೈಷಿಗಳ ಪ್ರೋತ್ಸಾಹವಿದೆ. ಸಾಧಿಸಬೇಕೆಂಬ ಛಲವೇ ಇವಳ ದೊಡ್ಡ ಅಸ್ತ್ರ. ಸೋಲು ಗೆಲುವನ್ನು ಸಮವಾಗಿ ತೆಗೆದುಕೊಂಡು ಎಲ್ಲದರಲ್ಲೂ ಭಾಗವಹಿಸಿ ಜೊತೆಗೆ ಸಾಮಾಜಿಕ ಕಳಕಳಿಯನ್ನು ಕೂಡ ಹೊಂದಿಕೊಂಡು ಸಾಧನೆ ಮಾಡುವ ಅಂತ ಸಾಗುತ್ತಿದ್ದಾಳೆ. ಪ್ರಶಸ್ತಿಗಳ ಮಹಾಪೂರದ ತನ್ನದಾಗಿಸಿಕೊಂಡ ಈ ಮುಗ್ಧ ಮಗಳು ಊರಿನ ಜಾಗದ ಕೀರ್ತಿಗೆ ಜನರ ಪ್ರೀತಿ ಪಡೆದಿದ್ದಾಳೆ. ಸೋಲು ಗೆಲುವನ್ನು ಸಮವಾಗಿ ತೆಗೆದುಕೊಂಡರೆ ಮಾತ್ರ ಮುಂದಿನ ಪಯಣ ಸುಗಮ. ಹಿರಿಯರ ಹಾರೈಕೆ, ಕಿರಿಯರ ಪ್ರೀತಿ, ದೇವರ ಕೃಪೆ ಈ ಕಂದನ ಮೇಲಿದ್ದು ಇನ್ನೂ ಎತ್ತರಕ್ಕೆ ಬೆಳೆದು ಕಲಾ ಆರಾಧಕಿಯಾಗಿ ಕಲಾ ಮಾತೆಯ ಮಡಿಲಲ್ಲಿ ಇನ್ನಷ್ಟು ಸಾಧನೆಯ ಗರಿಮೆ ಇವಳ ಮುಡಿಗೇರಲಿ ಅನ್ನೋದೇ ನಮ್ಮೆಲ್ಲರ ಆಶಯ.
ಪುಟಾಣಿ ಅಪೂರ್ವಳ ತಂದೆ ಅಶೋಕ್ ಕಾರ್ಕಳ ಸಮೀಪದ ಮಾಳ ಮೂಲದವರು. ಸ್ವಂತ ಬಿಸಿನೆಸ್ ನಡೆಸುತ್ತಿದ್ದಾರೆ. ತಾಯಿ ಅಕ್ಷತ ಬ್ಯೂಟೀಶಿಯನ್. ಅಪೂರ್ವ ಕಾರ್ಕಳದ ಕ್ರೈಸ್ಟ್ ಕಿಂಗ್ ಇಂಗ್ಲಿಷ್ ಮೀಡಿಯಮ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
- ನಾಗೇಶ್ ಬೆಳ್ಳಾರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ