ಬೆಂಗಳೂರು: ಕರ್ನಾಟಕದಲ್ಲಿ ಶಾಸ್ತ್ರೀಯ ನೃತ್ಯ ಕ್ಷೇತ್ರ ಬಹಳ ಶ್ರೀಮಂತವಾಗಿ ಬೆಳೆಯುತ್ತಿದೆ. ನಮ್ಮ ಯುವ ಕಲಾವಿದರು ಬಹಳ ಬದ್ಧತೆಯಿಂದ ಕಾರ್ಯೋನ್ಮುಖರಾಗಿರುವುದು ಇದಕ್ಕೆ ಕಾರಣ. ಆ ಹಿನ್ನೆಲೆಯಲ್ಲಿ ಸೋಮಶೇಖರ್ ಚೂಡಾನಾಥ್ ಮತ್ತು ಸೌಮ್ಯ ಸೋಮಶೇಖರ್ ದಂಪತಿ ಕೂಡ, ತಮ್ಮ ನಿರಂತರ ಸ್ಕೂಲ್ ಆಫ್ ಡಾನ್ಸ್ ಮೂಲಕ ಹಲವಾರು ಪ್ರತಿಭಾವಂತರನ್ನು ತಯಾರು ಮಾಡುವ ಜವಾಬ್ದಾರಿಯನ್ನು ಬಹಳ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಮೊನ್ನೆ ತಮ್ಮ ನೃತ್ಯ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಪ್ರದರ್ಶನವನ್ನು ‘ನೃತ್ಯಸಂಭ್ರಮ’ ಶೀರ್ಷಿಕೆಯಲ್ಲಿ ಆಯೋಜನೆ ಮಾಡಿದ್ದರು.
ಸೋಮಶೇಖರ್-ಸೌಮ್ಯ ದಂಪತಿಗಳು ಭರತನಾಟ್ಯ ಮತ್ತು ಕಥಕ್ ಎರಡೂ ನೃತ್ಯ ಶೈಲಿಗಳಲ್ಲಿ ಬಹಳ ಪ್ರತಿಭಾವಂತರು. ದೇಶ-ವಿದೇಶಗಳಲ್ಲಿ ನಿರಂತರ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. ತಮ್ಮ ನೃತ್ಯ ಶಾಲೆಯಲ್ಲಿ ತಾವು ಪ್ರತಿನಿಧಿಸುವ ಎರಡೂ ಶೈಲಿಗಳಲ್ಲಿ ನೂರಾರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಹಾಗಾಗಿ ಅಂದಿನ ಪ್ರದರ್ಶನದಲ್ಲಿ ಎರಡೂ ಪದ್ಧತಿಗಳಲ್ಲಿ ಮಕ್ಕಳು ಬಹಳ ಸುಂದರ ಪ್ರದರ್ಶನವನ್ನು ನೀಡಿದರು.
ಕಾರ್ಯಕ್ರಮವನ್ನು ಚಕ್ರವಾಕ ರಾಗದಲ್ಲಿ ಸಂಯೋಜನೆಗೊಂಡಿರುವ ಪುಷ್ಪಾಂಜಲಿ ಮತ್ತು ಗಜಾನನ ಯುತಂ ಕೀರ್ತನೆಯೊಂದಿಗೆ ಆರಂಭಿಸಲಾಯಿತು. ಕಲಾವಿದರು ಬಹಳ ಉತ್ಸಾಹದಿಂದ ನರ್ತಿಸಿದರು. ಕರಾರುವಕ್ಕಾದ ಪದಚಲನೆ, ಖಚಿತವಾದ ಹಸ್ತವಿನ್ಯಾಸಗಳಿಂದ ತಮಗಾಗಿರುವ ಪಾಠಾಂತರವನ್ನು ಪ್ರದರ್ಶಿಸಿದರು. ಭರತನಾಟ್ಯ ಶೈಲಿಯ ಈ ಪ್ರಸ್ತುತಿಯ ನಂತರ ಕಲಾವಿದರು ಕಥಕ್ಶೈಲಿಯಲ್ಲಿ ‘ಗಂಗಣಪತೇ’ ನರ್ತಿಸಿದರು. ಕಥಕ್ಶೈಲಿಯ ಸುಂದರ ವಿನ್ಯಾಸಗಳ, ಕವಿತಾ ಮಾದರಿಯ ಈ ಪ್ರಸ್ತುತಿ ನೋಡುಗರಿಗೆ ಮುದ ನೀಡಿತು. ಮುಂದುವರಿದು ನೃತ್ಯ ಶಾಲೆಗೆ ಈಗಷ್ಟೇ ಪ್ರವೇಶ ಪಡೆದಿರುವ ಪುಟ್ಟಪುಟ್ಟ ಮಕ್ಕಳು ‘ಅಸಂಯುತಹಸ್ತ’ ಪ್ರದರ್ಶಿಸುವ ಮೂಲಕ, ನೃತ್ಯ ಶಾಲೆಯ ಕಲಿಕಾ ವಿಧಾನದ ಮಾರ್ಗವನ್ನು ಪರಿಚಯಿಸಿದರು.
ಕರ್ನಾಟಕ ಸಂಗೀತ ಪಿತಾಮಹರೆನಿಸಿರುವ ಪುರಂದರ ದಾಸರು ಸಂಗೀತ ಕಲಿಕೆಗೆ ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸಿ, ಸರಳೆವರಸೆಯ ಸ್ವರ ವಿನ್ಯಾಸಗಳು, ಲಂಬೋದರಲ ಕುಮಿಕರ ಮತ್ತು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಪಿಳ್ಳಾರಿ ಗೀತೆಗಳನ್ನು ಬಹಳ ಸುಂದರವಾಗಿ ಪ್ರದರ್ಶಿಸಿದ ಮತ್ತೊಂದು ಪುಟಾಣಿಗಳ ತಂಡ, ನೋಡುಗರಲ್ಲಿ ಭರವಸೆಯನ್ನು ತುಂಬಿತು. ಮುಂದುವರಿದು ಮತ್ತೊಂದು ತಂಡ ‘ಆಂಗಿಕಂಭುವನಂಯಸ್ಯ’ ಧ್ಯಾನ ಶ್ಲೋಕಕ್ಕೆ ಅಭಿನಯವನ್ನು ಪ್ರದರ್ಶಿಸಿತು.
ಒಂದು ರೀತಿಯಲ್ಲಿ ಅಂದಿನ ಪ್ರದರ್ಶನದ ಕೇಂದ್ರ ಕೃತಿಯಾಗಿ ಶುದ್ಧ ಸಾವೇರಿ ರಾಗದಲ್ಲಿ ಜಯದೇವ ಕವಿಯದ ಶಾವತಾರ ಕೃತಿಯನ್ನು ಆರಿಸಿಕೊಳ್ಳಲಾಗಿತ್ತು. ಪ್ರತಿ ಅವತಾರದ ವಿಸ್ತೃತ ವರ್ಣನೆಯನ್ನು ಮಕ್ಕಳು ಸುಂದರವಾಗಿ ನಿರೂಪಿಸಿದರು. ಮಕ್ಕಳ ಗ್ರಹಿಕೆಗೆ ಹೊಂದುವಂತೆ ಬಹಳ ಕುಶಲತೆಯಿಂದ ಈ ಭಾಗಕ್ಕೆ ಸೋಮು-ಸೌಮ್ಯ ದಂಪತಿ ನೃತ್ಯ ಸಂಯೋಜನೆ ಮಾಡಿದ್ದರು. ಆದಿ ಶಂಕರಾಚಾರ್ಯರ ಶಿವಷಡಕ್ಷರಿ ಸ್ತೋತ್ರದ ಪ್ರಸ್ತುತಿಯೂ ಬಹಳ ಭಕ್ತಿ ಪೂರ್ಣವಾಗಿ ನಿರೂಪಿತವಾಯಿತು.
ಕನ್ನಡದಲ್ಲಿ ದಶಕಗಳಿಂದ ಓದುಗರ ಮೆಚ್ಚುಗೆಗೆ ಪಾತ್ರವಾಗಿರುವ ಹಲವು ಬಾಲ ಪದ್ಯಗಳಿವೆ. ಅವುಗಳಲ್ಲಿ ಒಂದು ‘ಧರಣಿಮಂಡಲ ಮಧ್ಯದೊಳಗೆ’. ಈ ಪದ್ಯವನ್ನು ಗುರು ದಂಪತಿಗಳು ಬಹಳ ಸುಂದರವಾಗಿ ನೃತ್ಯಕ್ಕೆ ಅಳವಡಿಸಿದ್ದರು. ಪಾತ್ರಗಳಿಗನುಗುಣವಾಗಿ ಆಹಾರ್ಯವನ್ನು ಧರಿಸಿ ಮಕ್ಕಳು ಸಂಭ್ರಮದಿಂದ ನರ್ತಿಸಿದರು. ರೇವತಿ ರಾಗದಲ್ಲಿ ದಯಾನಂದ ಸರಸ್ವತಿಗಳ ‘ಭೋಶಂಭೋ’ ಕೃತಿ ಕೂಡ ಅಚ್ಚುಕಟ್ಟಾಗಿ ಪ್ರದರ್ಶಿಸಲ್ಪಟ್ಟಿತು.
ಕಥಕ್ ಶೈಲಿಯ ‘ಗೀತ ತರವಟ್’ ಪ್ರಸುತ್ತಿಯಲ್ಲಿ ಕಲಾವಿದರು ಆ ಶೈಲಿಯ ಸೊಬಗು, ಲಯವಿನ್ಯಾಸ, ಜುಗಲ್ಬಂದಿ ಕಲ್ಪನೆ ಎಲ್ಲವನ್ನೂ ಸೊಗಸಾಗಿ ಸಾದರಪಡಿಸಿದರು. ಕಾವಡಿ ಚಿಂಡು ಪ್ರಸ್ತುತಿಯೂ ಸುಂದರವಾಗಿತ್ತು. ರಾಷ್ಟ್ರಕವಿ ಕುವೆಂಪು ಅವರ ಭೈರವನಾರಿ ಕವನವನ್ನು ದೃಶ್ಯ ಶ್ರೀಮಂತಿಕೆಯಲ್ಲಿ ಕಲಾವಿದರು ಸಾದರಪಡಿಸಿದರು. ವಲ್ಲಬಾಚಾರ್ಯರ ಮಧುರಾಷ್ಟಕವನ್ನು ಕಥಕ್ ಶೈಲಿಯಲ್ಲಿ ನರ್ತಿಸುವ ಮೂಲಕ ಅಂದಿನ ಪ್ರದರ್ಶನವನ್ನು ಸಂಪನ್ನಗೊಳಿಸಲಾಯಿತು.
ಸುಮಾರು ಎಂಭತ್ತಕ್ಕೂ ಹೆಚ್ಚು ಕಲಾವಿದರು ಅಂದಿನ ಪ್ರಸ್ತುತಿಯ ಭಾಗವಾಗಿ, ನೃತ್ಯ ಶಾಲೆಯೊಂದರ ವಾರ್ಷಿಕೋತ್ಸವ ಹೇಗಿರಬೇಕು ಎಂಬುದಕ್ಕೆ ಮಾದರಿಯಾಯಿತು.
ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ ರೇವಾ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರಾದ ಡಾ. ಬೀನಾ ಹಾಗೂ ಅನಂತ್ ನಾಗರಾಜ್ ಮತ್ತು ಚೈತ್ರ ಅನಂತ್ ದಂಪತಿಗಳು, ಪ್ರದರ್ಶನವನ್ನು ಮೆಚ್ಚಿಕೊಂಡದ್ದಲ್ಲದೆ, ಎಲ್ಲ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ವಿತರಿಸಿ, ಸೋಶೇಖರ್-ಸೌಮ್ಯ ದಂಪತಿಗಳ ಬದ್ಧತೆಯನ್ನು ಶ್ಲಾಘಿಸಿದರು.
-ಸುಗ್ಗನಹಳ್ಳಿ ಷಡಕ್ಷರಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ