ಬದಿಯಡ್ಕ: ಕನ್ನಡದ ಉಳಿವು ಕನ್ನಡದ ಬಳಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲಿದೆ. ನಿರಂತರ ಉತ್ತಮವಾದಂತಹ ಕಾರ್ಯಕ್ರಮಗಳನ್ನು ಕನ್ನಡಿಗರು ಒಗ್ಗೂಡಿ ನಡೆಸಿಕೊಡಬೇಕು. ಭಾಷೆ ಉಳಿಯಬೇಕಾದರೆ ಅದನ್ನು ಆಡುವ ಭಾಷಾ ಸಂಸ್ಕೃತಿಯನ್ನು ತಿಳಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ರಂಗಸಿರಿ ವೇದಿಕೆಯಿಂದ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂಬುದಾಗಿ ನೃತ್ಯವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರು ನುಡಿದರು.
ಅವರು ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲ ಇಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದಲ್ಲಿ ನಡೆದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ 'ಗ್ರಾಮ ಪರ್ಯಟನೆ' ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಭಾಷಣ ಮಾಡುತ್ತಿದ್ದರು.
ಸಭೆಯ ಅಧ್ಯಕ್ಷತೆಯನ್ನು ರಂಗಸಿರಿ ವೇದಿಕೆಯ ಅಧ್ಯಕ್ಷರಾದ ಪ್ರಭಾವತಿ ಕೆದಿಲಾಯ ಪುಂಡೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ವಾರ್ಡ್ ಸದಸ್ಯರಾದ ಶ್ಯಾಮ್ ಪ್ರಸಾದ್ ಮಾನ್ಯ ಮತ್ತು ಯಕ್ಷಗಾನ ಅರ್ಥಧಾರಿ ಲಕ್ಷ್ಮಣ ಪ್ರಭು ಕರಿಂಬಿಲ ಆಗಮಿಸಿದ್ದರು.
ಡಾ ಸ್ನೇಹ ಪ್ರಕಾಶ್ ಪೆರ್ಮಖ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದರು .ಸಂಗೀತ ವಿದುಷಿ ಗೀತಾ ಸಾರಡ್ಕ ಧನ್ಯವಾದ ಸಮರ್ಪಿಸಿದರು. ರಂಗಸಿರಿ ವೇದಿಕೆಯ ಕಾರ್ಯದರ್ಶಿ ಡಾ. ಶ್ರೀಶ ಕುಮಾರ್ ಪಂಜಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ವಿಚಾರಗೋಷ್ಠಿಯಲ್ಲಿ ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿ ಕುರಿತು ಪ್ರಬಂಧವನ್ನು ಶಂಕರ್ ಸಾರಡ್ಕ ಮಂಡಿಸಿದರು. ಗಡಿನಾಡ ವಿದ್ಯಾರ್ಥಿಗಳ ಮೇಲೆ ಯಕ್ಷಗಾನದ ಪ್ರಭಾವ ಈ ಕುರಿತು ಅಭಿಜ್ಞಾ ಬೊಳುಂಬು ಪ್ರಬಂಧ ಮಂಡಿಸಿದರು. ಮಲಾರ್ ಜಯರಾಮ ರೈ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸುಜಾತಾ ಮಾಣಿಮೂಲೆ ಗೋಷ್ಠಿಯನ್ನು ನಿರೂಪಿಸಿದರು. ಯುವ ಕವಿಗಳು ಕವಿತಾವಾಚನ ನಡೆಸಿಕೊಟ್ಟರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ತಾಳಮದ್ದಳೆ 'ಅಗ್ರ ಪೂಜೆ' ಹಿರಿಯ ಮತ್ತು ಕಿರಿಯ ಕಲಾವಿದರ ಕೂಡುವಿಕೆಯಿಂದ ನಡೆಯಿತು.
ವರದಿ: ಶಂಕರ ಸಾರಡ್ಕ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


